ತಾಯಿ ಮಹತ್ವ ತಿಳಿಸಲು 'ಅವ್ವಾ' ನಿಬಂಧ ಸ್ಪರ್ಧೆ
ಹುಬ್ಬಳ್ಳಿ, ಡಿ. 8: ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರು ತಮ್ಮ ತಾಯಿಯ ಸ್ಮರಣಾರ್ಥ ಸ್ಥಾಪಿಸಿರುವ 'ಅವ್ವಾ ಸೇವಾ ಸಮಿತಿ' ವತಿಯಿಂದ ಬೆಳಗಾವಿ ಪ್ರಾದೇಶಿಕ ವ್ಯಾಪ್ತಿಯ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ತಾಯಿ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದ್ದಾರೆ.
ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರು ಈ ಕುರಿತು ಸೋಮವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. [ತಾಯಿ ಆಶೀರ್ವಾದ ಪಡೆದ ಮೋದಿ]
ಸ್ಪರ್ಧೆಯಲ್ಲಿ ಸುಮಾರು 25 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿ, ತಾಯಿ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ. ಈ ಕಾರ್ಯಕ್ರಮದ ಮೂಲಕ ಪ್ರತಿಯೊಬ್ಬರಿಗೂ ಜೀವನದಲ್ಲಿ ತಾಯಿಯ ಮಹತ್ವವನ್ನು ತಿಳಿಸುವ ಉದ್ದೇಶ ಹೊಂದಲಾಗಿದೆ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
49 ತಾಲೂಕುಗಳಲ್ಲಿ ಸ್ಪರ್ಧೆ: ಬೆಳಗಾವಿ ಪ್ರಾದೇಶಿಕ ವ್ಯಾಪ್ತಿಯಲ್ಲಿ ಬರುವ 49 ತಾಲೂಕುಗಳ 65 ಕೇಂದ್ರಗಳಲ್ಲಿ ಡಿ. 13 ಪ್ರಬಂಧ ಸ್ಪರ್ಧೆ ನಡೆಯಲಿದೆ. ಪ್ರತಿ ಶಾಲೆಯಿಂದ ಓರ್ವ ವಿದ್ಯಾರ್ಥಿ ಹಾಗೂ ಓರ್ವ ವಿದ್ಯಾರ್ಥಿನಿ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ತಿಳಿಸಿದ್ದಾರೆ. [ತಾಯಿ ಏನೆಂದು ಬಣ್ಣಿಸಲಿ ನಿನ್ನ]
ಪ್ರತಿ ತಾಲೂಕು ಮಟ್ಟದಲ್ಲಿ ಮೂರು ಉತ್ತಮ ಪ್ರಬಂಧಗಳಿಗೆ ಬಹುಮಾನ ನೀಡಲಾಗುವುದು. ಬಹುಮಾನವಾಗಿ ಪ್ರಥಮ ಸ್ಥಾನಕ್ಕೆ 1,000, ದ್ವಿತೀಯ 600 ಹಾಗೂ ತೃತೀಯ 400 ರೂ.ಗಳನ್ನು ನೀಡಲಾಗುವುದು.
ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಓರ್ವ ವಿದ್ಯಾರ್ಥಿಗೆ 5,000 ರೂ. ಬಹುಮಾನ ನೀಡಲಾಗುವುದು. ಇದೇ ತಿಂಗಳು 28ರಂದು ಹುಬ್ಬಳ್ಳಿಯಲ್ಲಿ ಆಯೋಜಿಸಿರುವ 'ಅವ್ವಾ ಪ್ರಶಸ್ತಿ ವಿತರಣೆ ಸಮಾರಂಭ'ದಲ್ಲಿ ಎಲ್ಲ ವಿಜೇತರಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.