ಹನೂರು ಕೈತಪ್ಪಿದ ಬಳಿಕ ಸೋಮಣ್ಣನ ಕಥೆಯೇನು?
Recommended Video

ಬೆಂಗಳೂರು, ಏಪ್ರಿಲ್ 02 : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದ ಅನಂತಕುಮಾರ್, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಸೂಚನೆಯಂತೆ ನನ್ನ ಸಹೋದರಿ ಪರಿಮಳ ನಾಗಪ್ಪ ಅವರ ಕುಟುಂಬಕ್ಕೆ ಹನೂರು ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದೇನೆ ಎಂದು ಮಾಜಿ ಸಚಿವ,ವಿಧಾನ ಪರಿಷತ್ ಸದಸ್ಯ ವಿ ಸೋಮಣ್ಣ ಹೇಳಿದ್ದಾರೆ. ಆದರೆ, ಮುಂದಿನ ನಡೆಯೇನು? ಎಂಬುದು ಸ್ವತಃ ಅವರಿಗೂ ಸ್ಪಷ್ಟವಿಲ್ಲ.
ಚಾಮರಾಜನಗರದ ಹನೂರಿನಿಂದ ಸ್ಪರ್ಧಿಸುವ ಆಕಾಂಕ್ಷೆಯಿಂದ ಕಳೆದ ಹಲವು ತಿಂಗಳಿನಿಂದ ವಿ.ಸೋಮಣ್ಣ ಅವರು ತಮ್ಮ ಶಿಷ್ಯ ಶಿವಕುಮಾರ್ ಜೊತೆಗೂಡಿ ಒಳ್ಳೆ ಇಮೇಜ್ ಬೆಳೆಸಿಕೊಂಡಿದ್ದರು. ಈ ಬಾರಿ ಹನೂರು ಕ್ಷೇತ್ರದಿಂದ ಸೋಮಣ್ಣ ಸ್ಪರ್ಧಿಸುತ್ತಾರೆ ಎಂಬ ಮಾತು ಬಲವಾಗಿ ಕೇಳಿ ಬಂದಿತ್ತು. ಆದರೆ, ಈಗ ಹನೂರಿನಿಂದ ಪರಿಮಳ ನಾಗಪ್ಪ ಅವರ ಪುತ್ರ ಡಾ.ಪ್ರೀತನ್ ನಾಗಪ್ಪಗೆ ಟಿಕೆಟ್ ಖಚಿತವಾಗಿದೆ.
ಹನೂರು ಅಲ್ಲದೆ ಪಕ್ಕದ ಗುಂಡ್ಲುಪೇಟೆ ಮೇಲೂ ಸೋಮಣ್ಣ ಕಣ್ಣಿರಿಸಿದ್ದರು. ಇಲ್ಲಿ ತನಕ ಅಲ್ಲಿ ಸ್ಪರ್ಧಿಸಿ ಸೋತು ಸುಣ್ಣವಾಗಿರುವ ಸಿ.ಎಸ್.ನಿರಂಜನಕುಮಾರ್ ಈ ಬಾರಿಯಾದರೂ ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ, ಸೋಮಣ್ಣ ಅವರು ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆದರೆ, ನಿರಂಜನ್ ಗೆ ಬಹುತೇಕ ಟಿಕೆಟ್ ಖಚಿತವಾಗಿದ್ದು, ಸೋಮಣ್ಣ ಮತ್ತೊಂದು ಕ್ಷೇತ್ರದ ಬೇಟೆಯಲ್ಲಿ ತೊಡಗುವಂತೆ ಮಾಡಿದೆ.

ಪ್ರತಿಕ್ರಿಯೆ ನೀಡಿದ ಸೋಮಣ್ಣ
ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಆದರೆ, ನಾನು ಹನೂರಿನಲ್ಲಿ ನಿಲ್ಲೋಣ ಎಂದು ಯೋಚಿಸಿದ್ದೇನೆ. ಏನೇ ಆದರೂ ಟಿಕೆಟ್ ಬೇಕೇ ಬೇಕು. ಪರಿಷತ್ ಸದಸ್ಯ ನಾಗುವುದಕ್ಕೂ, ಶಾಸಕನಾಗುವುದಕ್ಕೂ ವ್ಯತ್ಯಾಸವಿದೆ ಎಂದಿದ್ದಾರೆ.

ಪರಿವರ್ತನಾ ಯಾತ್ರೆಯ ಬಳೀಕ
ಹನೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಗೆ ಹೋಗದಂತೆ ಜನರನ್ನು ತಡೆದ ಆರೋಪ ಸೋಮಣ್ಣ ಅವರ ಮೇಲಿದೆ. ಈ ಬಗ್ಗೆ ಶಿಷ್ಯ ಶಿವಕುಮಾರ್ ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, ಯಡಿಯೂರಪ್ಪ ಅವರು ಗರಂ ಆಗಿದ್ದು, ಸೋಮಣ್ಣ ಅವರಿಗೆ ಮುಳುವಾಯಿತು. ಬೇರೆ ಯಾರಿಗೇ ಟಿಕೆಟ್ ನೀಡಿದರೂ ಸೋಲು ನಿಶ್ಚಿತ ಎಂದು ಪರಿಮಳ ನಾಗಪ್ಪ ಅವರು ಹೇಳಿದ್ದು, ಶಾಪದಂತೆ ಯಡಿಯೂರಪ್ಪ ಅವರಿಗೆ ಎನಿಸಿರಬೇಕು, ಸೋಮಣ್ಣ ಅವರನ್ನು ಕರೆದು ಟಿಕೆಟ್ ಆಸೆ ಕೈಬಿಡುವಂತೆ ಬುದ್ಧಿವಾದ ಹೇಳಿಬಿಟ್ಟರು.

ಸೋಮಣ್ಣ ಎಲ್ಲಿಂದ ಸ್ಪರ್ಧಿಸುತ್ತಾರೆ
ಸೋಮಣ್ಣ ಎಲ್ಲಿಂದ ಸ್ಪರ್ಧಿಸುತ್ತಾರೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಪುತ್ರ ಅರುಣ್ಗೆ ಅರಸೀಕೆರೆಯಿಂದ ಸ್ಪರ್ಧಿಸುವಂತೆ ಯಡಿಯೂರಪ್ಪ ಸೂಚಿಸಿದ್ದ ಹಿನ್ನೆಲೆಯಲ್ಲಿ, ಅರಸೀಕೆರೆಯಲ್ಲಿ ಅರುಣ್ ಚುರುಕಾಗಿ ಕೆಲಸ ನಡೆಸುತ್ತಿದ್ದಾರೆ. ಆದರೆ, ಅರುಣ್ ಗೂ ಟಿಕೆಟ್ ಖಚಿತವಾಗಿಲ್ಲ. ಅಪ್ಪ ಹಾಗೂ ಮಗನಿಗೆ ಟಿಕೆಟ್ ಸಿಗದಿದ್ದರೆ ಅದಕ್ಕಿಂತ ದೊಡ್ಡ ಅಪಮಾನ ಬೇರೆ ಇಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನಂತ್ ಮೇಲೆ ಭರವಸೆ
ಕೇಂದ್ರ ನಾಯಕರನ್ನು ಓಲೈಸಿ ಟಿಕೆಟ್ ಕೊಡಿಸುತ್ತಾರೆ ಎಂಬ ಭರವಸೆಯಲ್ಲಿ ಸೋಮಣ್ಣ ಅವರು ಇದ್ದಾರೆ. ಆದರೆ, ಯಡಿಯೂರಪ್ಪ ಅಪ್ತ ಸೋಮಣ್ಣ ಅವರಿಗೆ ನೆರವಾಗುವುದರಿಂದ ಯಾವ ಲಾಭ ಎಂಬ ಚಿಂತೆ ಅನಂತ್ ಗೆ ಕಾಡಿದರೂ ಅಚ್ಚರಿಯೇನಿಲ್ಲ. ಒಟ್ಟಾರೆ, ಈ ಬಾರಿ ಗೋವಿಂದರಾಜನಗರದಲ್ಲಿ ಟಿಕೆಟ್ ಸಿಕ್ಕರೂ ಸೋಮಣ್ಣ ಅವರಿಗೆ ಗೆಲ್ಲುವ ನಿರೀಕ್ಷೆಯಿಲ್ಲ. ಬೇರೆ ಕಡೆ ಟಿಕೆಟ್ ಸಿಗುವ ಖಾತ್ರಿ ಇಲ್ಲ. ಸದ್ಯಕ್ಕೆ ಅತಂತ್ರ ಸ್ಥಿತಿಯಲ್ಲಿ ಸೋಮಣ್ಣ ಅವರ ಭವಿಷ್ಯವಿದೆ.












Click it and Unblock the Notifications