ಉಪೇಂದ್ರ ಅವರ ಕೆಪಿಜೆಪಿಯ ಶಿಕ್ಷಣ ಪ್ರಣಾಳಿಕೆ ಪ್ರಕಟ
Recommended Video

ಬೆಂಗಳೂರು, ಜನವರಿ 26: ನಟ, ನಿರ್ದೇಶಕ ಉಪೇಂದ್ರ ಅವರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಶಿಕ್ಷಣ ಪ್ರಣಾಳಿಕೆಯನ್ನು ಪ್ರಕಟಿಸಲಾಗಿದೆ. 'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ'ದ ಪ್ರಣಾಳಿಕೆಯನ್ನು ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಸಂಭಾವ್ಯ ಪ್ರಣಾಳಿಕೆಯ ಭಾಗ -1ದಲ್ಲಿ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಿದೆ. ಜನ ಪ್ರತಿನಿಧಿಗಳ ಹಕ್ಕು, ಕರ್ತವ್ಯ, ಜವಾಬ್ದಾರಿ ಬಗ್ಗೆ, ಸರ್ಕಾರಕ್ಕೆ ತಂತ್ರಜ್ಞಾನದ ನೆರವು, ಇ-ವ್ಯವಸ್ಥೆ, ಸಾಮಾಜಿಕ ಜಾಲತಾಣಗಳಲ್ಲಿ ಆಡಳಿತದ ಬಗ್ಗೆ ಮಾಹಿತಿ ಇರಬೇಕು ಎಂದು ಹೇಳಲಾಗಿತ್ತು.
ಪಕ್ಷದ ಪ್ರಣಾಳಿಕೆ ಕುರಿತು ಸಾರ್ವಜನಿಕರು ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ಪಕ್ಷದ ಅಂತಿಮ ಹಾಗೂ ಅಧಿಕೃತ ಪ್ರಣಾಳಿಕೆಯ ಪೂರ್ಣ ಭಾಗವನ್ನು ಬಿಡುಗಡೆಗೊಳಿಸುತ್ತೇವೆ ಎಂದು ಉಪೇಂದ್ರ ಹೇಳಿದ್ದಾರೆ.
ಈಗ ಶಿಕ್ಷಣದ ಬಗ್ಗೆ ಸಂಭಾವ್ಯ ಪ್ರಣಾಳಿಕೆ(ಭಾಗ 3)ಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ಪ್ರಾಥಮಿಕ, ಮಾಧ್ಯಮಿಕ ಹಾಗೂ ಉನ್ನತ ಶಿಕ್ಷಣಕ್ಕೆ ಮೀಸಲಿಟ್ಟ 22,662 ಕೋಟಿ ರೂಪಾಯಿ ರಾಜ್ಯ ಬಜೆಟ್ ಆಧಾರದ ಮೇಲೆ ಈ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ.

ಪ್ರಜೆಗಳನ್ನೊಳಗೊಂಡ ಆಡಳಿತ
ಸಂಪೂರ್ಣ ಪಾರದರ್ಶಕ, ಸರಳ, ಹೊಣೆಗಾರಿಕೆಯುಳ್ಳ, ಮಿತವ್ಯಯೀ ಹಾಗೂ ಪ್ರಜೆಗಳನ್ನೊಳಗೊಂಡ ಆಡಳಿತ.
ಪ್ರಜೆಗಳ ನೇರ ಸಂಪರ್ಕಕ್ಕಾಗಿ, ಸರ್ಕಾರದಿಂದ ಸರ್ಕಾರದ್ದೇ ಆದ ಟೆಲಿವಿಜನ್ ಚಾನಲ್, ಪ್ರತಿಯೊಂದು ಇಲಾಖೆಗಳಲ್ಲಿ ಹಾಗೂ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಸಾಮಾಜಿಕ ಜಾಲತಾಣಗಳು (ಫೇಸ್ಬುಕ್, ಟ್ವಿಟರ್, ವೆಬ್ಸೈಟ್, ಯುಟ್ಯೂಬ್ ಚಾನಲ್) ಮತ್ತು ಮೊಬೈಲ್ ಅಪ್ಲಿಕೇಶನ್ಗಳನ್ನು ಪ್ರಾರಂಭಿಸಲಾಗುವುದು ಎಂದು ಉಪೇಂದ್ರ ಮತ್ತೊಮ್ಮೆ ಹೇಳಿದ್ದಾರೆ.

ಆನ್ಲೈನ್ ಕಲಿಕೆಗೆ ಅವಕಾಶ
* ಒಂದು ಮತ್ತು ಎರಡನೇ ತರಗತಿ ಶಾಲಾ ಮಕ್ಕಳಿಗೆ ಆಟಕ್ಕೆ ಒತ್ತು ನೀಡಲಾಗುವುದು, ಓದುವುದು, ಬರೆಯುವುದು ಇರುವುದಿಲ್ಲ.
* ಮೂರನೇ ತರಗತಿಯಿಂದ ಪುಸ್ತಕದ ಜತೆಗೆ ಟ್ಯಾಬ್ಲೆಟ್. ಸಾಮಾನ್ಯಜ್ಞಾನ, ವಿಜ್ಞಾನ, ಗಣಿತ ಕಲಿಕೆ ಹಾಗೂ ಸ್ಮಾರ್ಟ್ ಕ್ಲಾಸ್ಗೆ ಸಹಕಾರಿ. ಮನೆಯಲ್ಲಿಯೇ ಕಲಿಕೆ, ಮನೆಯಿಂದಲೇ ಆನ್ಲೈನ್ ಕಲಿಕೆಗೆ ಅವಕಾಶ.

ವೃತ್ತಿಪರ ಕೋರ್ಸ್ಗಳಿಗೆ ಅವಕಾಶ
* ಸರ್ಕಾರಿ ಶಾಲೆಗಳನ್ನು ಕೇಂದ್ರೀಯ ವಿದ್ಯಾಲಯದ ಮಾದರಿಯಲ್ಲಿ ಗುಣಮಟ್ಟ ಏರಿಸುವುದು.
* 10ನೇ ತರಗತಿ ಬಳಿಕ ಒಂದು ಅಥವಾ ಎರಡು ವರ್ಷ ವೃತ್ತಿಪರ ಕೋರ್ಸ್
* ಕನ್ನಡದಲ್ಲಿಯೇ ವೃತ್ತಿಪರ ಕೋರ್ಸ್ಗಳಿಗೆ ಅವಕಾಶ
* ಮೆರಿಟ್ ಆಧಾರದಲ್ಲಿ ಶೇ.10-15ರಷ್ಟು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

ಸರ್ಕಾರದಿಂದ ಟ್ಯಾಬ್ಲೆಟ್ ಗಳ ಖರೀದಿ
52 ಲಕ್ಷ ವಿದ್ಯಾರ್ಥಿಗಳಿಗೆ ಅಂದಾಜು 2,600 ಕೋಟಿ ರುಪಾಯಿ ವೆಚ್ಚದಲ್ಲಿ ಸರ್ಕಾರದಿಂದ ಟ್ಯಾಬ್ಲೆಟ್ ಗಳ ಖರೀದಿಗಾಗಿ ನೀಡಲಾಗುತ್ತದೆ.
6,7,8ನೇ ತರಗತಿ ಮಕ್ಕಳಿಗೆ ಕೌಶಲ್ಯ ಅಭಿವೃದ್ಧಿ ಶಿಕ್ಷಣ, ಬ್ಯಾಂಕಿಂಗ್, ಶಾಪಿಂಗ್, ಅಡಿಗೆ, ಕೃಷಿ, ಸಂಗೀತ, ಸಾಂಸ್ಕೃತಿಕ ಚಟುವಟಿಕೆ ಬಗ್ಗೆ ಹೇಳಿಕೊಡಲಾಗುವುದು.

ಹೋಮ್ ಸ್ಕೂಲ್ ವಿದ್ಯಾರ್ಥಿಗಳ ಮೌಲ್ಯಮಾಪನ.
ಆನ್ ಲೈನ್ ಸ್ಕೂಲ್ ಹಾಗೂ ಹೋಮ್ ಸ್ಕೂಲ್ ವಿದ್ಯಾರ್ಥಿಗಳ ಮೌಲ್ಯಮಾಪನ.
ಮೂಲವೇತನದೊಂದಿಗೆ ಪ್ರೋತ್ಸಾಹ ಧನ ಆಧಾರಿತ ಕಾರ್ಯಕ್ರಮಗಳನ್ನು ಪ್ರಾಥಮಿಕ ಹಾಗೂ ಪ್ರೌಢಶಾಲಾ ವಲಯಗಳಲ್ಲಿ ಜಾರಿಗೆ ತರಲಾಗುವುದು, ಕಾರ್ಯದಕ್ಷತೆಯ ಫಲಿತಾಂಶವನ್ನು ಸುಧಾರಿಸಲು ನಿರಂತರವಾಗಿ ಮೇಲ್ವಿಚಾಣೆ ನಡೆಸುತ್ತಿರಲಾಗುತ್ತದೆ.

ಹೊಸ ಶಿಕ್ಷಣ ವ್ಯವಸ್ಥೆಗಾಗಿ ತಂತ್ರಜ್ಞಾನ
ಹೊಸ ಶಿಕ್ಷಣ ವ್ಯವಸ್ಥೆಗಾಗಿ ತಂತ್ರಜ್ಞಾನ ಮತ್ತು ಬೋಧನಾ ವಿಧಾನವನ್ನು ಅಳವಡಿಸಿಕೊಳ್ಳಲು ಶಿಕ್ಷಕರಿಗೆ ಉತ್ತಮ ತರಬೇತಿ ಸರ್ಕಾರದ ವತಿಯಿಂದ ನೀಡಲಾಗುವುದು.
ಅರ್ಹತೆ ಆಧಾರದ ಮೇಲೆ ಮೀಸಲಾತಿ, ಮೆಟ್ರಿಕ್ ನಂತರ ಪ್ರತಿಶತದ ಆಧಾರದ ಮೇಲೆ ಅತ್ಯುತ್ತಮವಾಗಿ ತೇರ್ಗಡೆಯಾದ 15% ವಿದ್ಯಾರ್ಥಿಗಳಿಗೆ ಪಿಯುಸಿ ಗಳಲ್ಲಿ ಹಾಗೂ ಪ್ರೀ ಪ್ರೋಫೆಷನಲ್ ಕೋರ್ಸ್ ಗಳಲ್ಲಿ ಸರ್ಕಾರದ ವತಿಯಿಂದ ಸಂಪೂರ್ಣವಾಗಿ ಶಿಕ್ಷಣದ ಖರ್ಚುವೆಚ್ಚಗಳನ್ನು ನೀಡಲಾಗುವುದು.

ಶೇ 10ರಷ್ಟು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
ಸ್ನಾತಕೋತ್ತರ, ಮಾಸ್ಟರ್ಸ್ ಮುಂತಾದ ಉನ್ನತ ಶಿಕ್ಷಣ ಅಧ್ಯಯನಗಳನ್ನು ಮುಂದುವರಿಸಲು ಮೆರಿಟ್ ಆಧಾರದ ಮೇಲೆ ಶೇ 10ರಷ್ಟು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು.
ಡಿಪ್ಲೋಮಾ, ಐಟಿಐ, ಇಂಜಿನಿಯರಿಂಗ್, ಪದವಿ, ಸ್ನಾತಕೋತ್ತರ ಹಾಗೂ ಇತರ ಕೋರ್ಸ್ ಗಳ ವ್ಯಾಸಂಗದ ಅವಧಿ ಹಾಗೂ ಪಠ್ಯಕ್ರಮಗಳನ್ನು ಪ್ರಸ್ತುತ ತಂತ್ರಜ್ಞಾನವನ್ನು ಬೇಡಿಕೆಗೆ ಅನುಸಾರವಾಗಿ ಪರಿಷ್ಕರಿಸಲಾಗುವುದು.












Click it and Unblock the Notifications