ಸೋಲಿನ ಭಯ ಬೇಡ, 2 ಸ್ಥಾನದಿಂದ ಬಿಜೆಪಿ ಕಟ್ಟಿದ್ದೇನೆ: ಯಡಿಯೂರಪ್ಪ
ಬೆಂಗಳೂರು: ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದೆ. 135 ಸ್ಥಾನ ಕಾಂಗ್ರೆಸ್ ಪಾಲಾದರೆ, ಬಿಜೆಪಿ 66 ಸ್ಥಾನಕ್ಕೆ ತೃಪ್ತಿಪಟ್ಟಿದೆ. ಸೋಲಿನ ಅವಲೋಕನ ಮಾಡಿಕೊಳ್ಳಲು ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ವಿಶೇಷ ಸಭೆ ನಡೆಯಿತು. ಈ ವೇಳೆ ಯಡಿಯೂರಪ್ಪ ಬಿಜೆಪಿ ಕಟ್ಟಿದ ಅಂದಿನ ಕಷ್ಟದ ದಿನಗಳನ್ನ ನೆನೆದರು.
ಇನ್ನು ಈ ಸಭೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡುತ್ತಾ, ವಿಧಾನಸಭೆ ಚುನಾವಣೆ ಸೋಲಿನಿಂದ ಯಾರೂ ಹೆದರಬೇಡಿ. ರಾಜ್ಯದಲ್ಲಿ 2 ಸ್ಥಾನದಿಂದ ಇಲ್ಲಿಯವರೆಗೂ ಪಕ್ಷ ಕಟ್ಟಿ ಬೆಳೆಸಿದ್ದೇನೆ. ಈ ಹಿಂದೆ ವಿಧಾನಸಭೆಯಲ್ಲಿ ಬಿಜೆಪಿಯ ಇಬ್ಬರು ಶಾಸಕರು ಮಾತ್ರ ಇದ್ದೆವು. ಬಿಜೆಪಿ ಶಾಸಕರಾಗಿದ್ದ ವಸಂತ ಬಂಗೇರ ಅವರು ಪಕ್ಷ ಬಿಟ್ಟರು. ಆಗ ನಾನು ಒಬ್ಬನೇ ಸದನದಲ್ಲಿ ನಿಂತು ಹೋರಾಟ ಮಾಡಿದ್ದೇನೆ. ಸೋಲಿನ ಬಗ್ಗೆ ಚಿಂತೆ ಮಾಡದೆ, ಮುಂದಿನ ಗೆಲುವಿಗಾಗಿ ಪಣತೊಡಿ ಎಂದು ಬಿಜೆಪಿ ನಾಯಕರಿಗೆ ಧೈರ್ಯ ತುಂಬಿದ್ದಾರೆ (Karnataka Assembly Election Results 2023).

ಸೋಲನ್ನು ಬಿಡಿ, ಲೋಕಸಭೆಗೆ ರೆಡಿಯಾಗಿ!
ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಈಗ ಮತ್ತೆ ಮುನ್ನೆಲೆಗೆ ಬಂದು ಪಕ್ಷದ ನಾಯಕರನ್ನ ಸಮಾಧಾನ ಮಾಡುತ್ತಿದ್ದಾರೆ. ಸೋಲಿನ ಸುಳಿಯಲ್ಲಿ ಒದ್ದಾಡುತ್ತಿರುವ ಎಲ್ಲ ನಾಯಕರಿಗೂ ಗೆಲುವಿನ ಗುಟ್ಟು ಹೇಳುತ್ತಿದ್ದಾರೆ. ವಿಧಾನಸಭೆ ಸೋಲನ್ನ ಬಿಟ್ಟು, ಇದೀಗ ಮುಂಬರುವ ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿ. ನರೇಂದ್ರ ಮೋದಿ ಅವರ ಕಾರ್ಯಕ್ರಮಗಳನ್ನು ಮನೆಮನೆಗೂ ತಲುಪಿಸಿ. ಕೇಂದ್ರದಲ್ಲಿ ಬಿಜೆಪಿಯನ್ನ ಮತ್ತೊಮ್ಮೆ ಅಧಿಕಾರಕ್ಕೆ ತರೋಣ ಎಂದಿದ್ದಾರೆ ಬಿಎಸ್ವೈ. ಈ ಮೂಲಕ ಮಾಜಿ ಸಿಎಂ ಮತ್ತು ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ಪರಾಜಿತ ಅಭ್ಯರ್ಥಿಗಳಿಗೆ ಧೈರ್ಯ ತುಂಬಿದ್ದಾರೆ.
ಸೋಲಿನ ಕುರಿತು ಬಿಜೆಪಿ ಆತ್ಮಾವಲೋಕನ
ಕರ್ನಾಟಕ ಚುನಾವಣೆ ರಿಸಲ್ಟ್ ಹೊರಬಿದ್ದು 1 ತಿಂಗಳಾಗಿದೆ. ಈಗ ನೂತನ ಶಾಸಕರು ಮತ್ತು ಪರಾಜಿತ ಅಭ್ಯರ್ಥಿಗಳ ಅವಲೋಕನ ಸಭೆಯನ್ನ ಬಿಜೆಪಿ ನಾಯಕರು ಮಾಡಿದ್ದಾರೆ. ಅಲ್ಲದೆ ಮುಂದಿನ ಲೋಕಸಭೆ ಚುನಾವಣೆಗೆ ಮೈಕೊಡವಿ ಎದ್ದೇಳುವ ಸಂದೇಶ ನೀಡಿದ್ದಾರೆ. ಹೀಗೆ ನೂತನ ಸರ್ಕಾರದ ವಿರುದ್ಧ ಹೋರಾಟ ಸಂಘಟಿಸುವ ಬಗ್ಗೆ ಇದೇ ವೇಳೆ ಗಂಭೀರ ಚರ್ಚೆ ನಡೆದಿದೆ. ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಮ್ಮುಖದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಪರಾಜಿತ ಅಭ್ಯರ್ಥಿಗಳು ಬಿಜೆಪಿ ಸೋಲಿಗೆ ಕಾರಣ ಬಿಚ್ಚಿಟ್ಟಿದ್ದಾರೆ.

ಎಂಟಿಬಿ ನಾಗರಾಜ್ ಬೇಸರದ ಮಾತು?
ಇನ್ನು ಪರಾಜಿತ ಅಭ್ಯರ್ಥಿಗಳು ತಮ್ಮ ಸೋಲಿಗೆ ಕಾರಣ ಹಾಗೂ ಪಕ್ಷದ ಹಿನ್ನಡೆಗೆ ಕಾರಣ ಏನು ಅನ್ನೋದನ್ನ ತಿಳಿಸಿದ್ದಾರೆ. ಹಾಗೇ ಪಕ್ಷದ ನಾಯಕರು ಚುನಾವಣೆ ಸಂದರ್ಭದಲ್ಲಿ ಮಾಡಿದ್ದ ತಪ್ಪುಗಳ ಬಗ್ಗೆ ಮನವರಿಕೆ ಮಾಡಿಕೊಳ್ಳಲಾಯಿತು. ಹಾಗೇ ಮಾಜಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗ 3 ಬಾರಿ ಗೆದ್ದಿದ್ದೆ, ಬಿಜೆಪಿಗೆ ಬಂದು 2 ಬಾರಿ ಸೋತೆ. ಯಡಿಯೂರಪ್ಪ ಅವರ ಮಾತಿಗೆ ಗೌರವ ನೀಡಿ ನಾನು ಬಿಜೆಪಿ ಸೇರಿದ್ದೆ. ಬಿಜೆಪಿ ಸೇರಿದ ನಂತರ 2 ಬಾರಿ ಸ್ಪರ್ಧಿಸಿ 2 ಬಾರಿಯೂ ಸೋತಿದ್ದೇನೆ ಎಂದು ಬೇಸರ ಹೊರಹಾಕಿದ್ದಾರೆ ಎನ್ನಲಾಗಿದೆ.

ಒಟ್ನಲ್ಲಿ ಬಿಎಸ್ ಯಡಿಯೂರಪ್ಪ ಮತ್ತೊಮ್ಮೆ ಬಿಜೆಪಿ ಮುಖಂಡರಿಗೆ ಹಾಗೂ ಸೋತ BJP ಅಭ್ಯರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಮತ್ತೊಂದ್ಕಡೆ ಇಂತಹ ಸೋಲು ಎದುರಾಗಲು ಕಾರಣ ಏನು? ಎಂಬ ಬಗ್ಗೆಯೂ ಚರ್ಚೆ ನಡೆದಿದೆ. ಬರೋಬ್ಬರಿ 1 ತಿಂಗಳ ನಂತರ ರಾಜ್ಯ ಬಿಜೆಪಿ ಆತ್ಮಾವಲೋಕನ ಸಭೆ ನಡೆಸಿರೋದು ವಿಶೇಷ. ಹಾಗೇ ಈ ಮಧ್ಯೆ ಲೋಕಸಭೆ ಚುನಾವಣೆ ವೇಳೆಗೆ ಕಂಬ್ಯಾಕ್ ಮಾಡುವ ವಿಶ್ವಾಸದಲ್ಲಿ ಬಿಜೆಪಿ ನಾಯಕರು ಇದ್ದಾರೆ. ಹೀಗಾಗಿ ಈ ಸಭೆ ಸಾಕಷ್ಟು ಮಹತ್ವ ಕೂಡ ಪಡೆದುಕೊಂಡಿದೆ.












Click it and Unblock the Notifications