ಬಿಎಸ್ವೈ ವಿರುದ್ಧ ಸ್ಪರ್ಧಿಸಲಿದ್ದಾರೆ ಪ್ರಸನ್ನ ಕುಮಾರ್!
ಬೆಂಗಳೂರು. ಮಾ.12 : ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಸ್ಪರ್ಧಿಸುತ್ತೇನೆ ಎಂದು ಕೆಜೆಪಿ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಘೋಷಿಸಿದ್ದಾರೆ. ಇದರಿಂದ ಯಡಿಯೂರಪ್ಪ ವಿರುದ್ಧ ಮತ್ತೊಬ್ಬರು ಕಣಕ್ಕಿಳಿದಂತಾಗಿದೆ.
ರಾಮನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಪದ್ಮನಾಭ ಪ್ರಸನ್ನ ಕುಮಾರ್, ಯಡಿಯೂರಪ್ಪ ಒಬ್ಬ ಅವಕಾಶವಾದಿ ರಾಜಕಾರಣಿ ಎಂದು ಆರೋಪಿಸಿದರು. ತಮ್ಮ ಬೆಂಬಲಕ್ಕೆ ಬಂದಿದ್ದ ಮಾಜಿ ಸಚಿವ ಧನಂಜಯ್ ಕುಮಾರ್, ಸಂಸದ ಬಸವರಾಜು ಅವರನ್ನು ನಡು ನೀರಿನಲ್ಲಿ ಕೈ ಬಿಟ್ಟಿದ್ದಾರೆ ಎಂದು ದೂರಿದರು. [ಬಿಎಸ್ವೈ ಗೆದ್ದರೆ ತಲೆ ಬೋಳಿಸಿಕೊಂಡು ಪಾದಯಾತ್ರೆ!]
ಲೋಕಸಭೆ ಚುನಾವಣೆಯಲ್ಲಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇನೆ ಎಂದು ಕೆಜೆಪಿ ಮೊದಲೇ ಘೋಷಿಸಿತ್ತು. ತಾವು ಸ್ವತಃ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸುವುದಾಗಿ ಪ್ರಸನ್ನ ಕುಮಾರ್ ಹೇಳಿದರು. ರಾಜ್ಯದ 28 ಕ್ಷೇತ್ರಗಳಲ್ಲೂ ಕೆಜೆಪಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಅವರು ತಿಳಿಸಿದರು. [ಕರ್ನಾಟಕದ ಇತರ ಚುನಾವಣಾ ಸುದ್ದಿಗಳು]
ಯಡಿಯೂರಪ್ಪ ವಿರುದ್ಧ ಪ್ರಸನ್ನ ಕುಮಾರ್ ಸ್ಪರ್ಧೆ
ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಸ್ಪರ್ಧಿಸುವುದಾಗಿ ಕೆಜೆಪಿ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಹೇಳಿದ್ದಾರೆ. ರಾಜ್ಯದ 28 ಕ್ಷೇತ್ರಗಳಲ್ಲಿಯೂ ಕೆಜೆಪಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಅವರು ತಿಳಿಸಿದರು.
ದಾಖಲೆ ಇಲ್ಲದ ಹಣ ವಶ
ಸಮರ್ಪಕ ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 11.30 ಲಕ್ಷವನ್ನು ಕುಷ್ಟಗಿ ಪಟ್ಟಣದ ಚೆಕ್ ಪೋಸ್ಟ್ನಲ್ಲಿ ಮಂಗಳವಾರ ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಒಬ್ಬರನ್ನು ಬಂಧಿಸಲಾಗಿದೆ. ತಹಶೀಲ್ದಾರ್ ಎನ್.ಬಿ.ಪಾಟೀಲ, ಸರ್ಕಲ್ ಇನ್ಸ್ಪೆಕ್ಟರ್ ಆರ್.ಎಸ್. ಉಜ್ಜನಕೊಪ್ಪ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಈ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ವಿಜಾಪುರ ಮೂಲದ ಸುರೇಶ ತಡಲಗಿ ಎಂದು ಗುರುತಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಯಡಿಯೂರಪ್ಪ ಪತ್ರಕ್ಕೆ ಬೆಲೆ ಇಲ್ಲ
ಬಿಎಸ್ ಯಡಿಯೂರಪ್ಪ ಅವರು ಯಾವುದೇ ಷರತ್ತಿಲ್ಲದೆ ಬಿಜೆಪಿಗೆ ಮರಳಿದ್ದಾರೆ. ಕೆಜೆಪಿಯಿಂದ ಬಂದವರಿಗೆ ಏನೆಲ್ಲ ಹುದ್ದೆ ನೀಡಲಾಗಿದೆ ಎಂಬುದನ್ನು ಪಟ್ಟಿ ತೋರಿಸಿ ಯಡಿಯೂರಪ್ಪ ಅವರಿಗೆ ಮನದಟ್ಟು ಮಾಡಲಾಗಿದೆ. ಆದ್ದರಿಂದ ಅವರು ಪಕ್ಷದ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಬರೆದಿರುವ ಪತ್ರಕ್ಕೆ ಮಹತ್ವವಿಲ್ಲ ಎಂದು ಮಂಗಳೂರಿನಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಬಿಎಸ್ಆರ್ ವಿಲೀನ ಅನಿವಾರ್ಯ
ಬಿಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡುವುದು ಅನಿವಾರ್ಯವಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಬಿಎಸ್ಆರ್ ವಿಲೀನದಿಂದ ಬಿಜೆಪಿಗೆ ಲಾಭವಾಗಲಿದೆ. ಈ ಕುರಿತು ವರಿಷ್ಠರಿಗೂ ಮಾಹಿತಿ ನೀಡಲಾಗಿದೆ. ಮಾರ್ಚ್ 13ರಂದು ನವದೆಹಲಿಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಸಭೆಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಶೆಟ್ಟರ್ ತಿಳಿಸಿದ್ದಾರೆ.
ಮಂಜುಗೆ ಟಿಕೆಟ್ ನೀಡಿದ್ದಕ್ಕೆ ವಿರೋಧ
ಹಾಸನ ಕ್ಷೇತ್ರದಿಂದ ಅರಕಲಗೂಡು ಮಂಜು ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಕೆಪಿಸಿಸಿ ಸದಸ್ಯ ವಿನಯ್ ಗಾಂಧಿ ಹೈಕಮಾಂಡ್ ಗೆ ಪತ್ರ ಬರೆದಿದ್ದಾರೆ. ಅರಕಲಗೂಡು ಮಂಜು ಅವರು ದೇವೇಗೌಡರ ದೂರದ ಸಂಬಂಧಿ. ಕಳೆದ ಚುನಾವಣೆಯಲ್ಲೂ ದೇವೇಗೌಡರ ಪರವಾಗಿ ಕೆಲಸ ಮಾಡಿದ್ದರು. ಈ ಚುನಾವಣೆಯಲ್ಲಿ ಅವರಿಗೆ ಟಕೆಟ್ ನೀಡಿದ್ದೀರಿ. ಅವರು ಗೌಡರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆದ್ದರಿಂದ ಬೇರೆ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ವಿನಯ್ ಮನವಿ ಮಾಡಿದ್ದಾರೆ.
ಪಕ್ಷದ ಕಚೇರಿ ಕಾಯಲು ಸಿದ್ಧ
ಪಕ್ಷವೂ ಮಂತ್ರಿ, ಶಾಸಕ ಸ್ಥಾನ ತ್ಯಜಿಸಿ ಪಕ್ಷದ ಕಚೇರಿ ಕಾಯುವ ಕೆಲಸ ಮಾಡು ಎಂದು ಹೇಳಿದರೂ ಅದಕ್ಕೂ ನಾನು ಸಿದ್ಧನಿದ್ದೇನೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದ್ದಾರೆ. ಪಕ್ಷದ ವತಿಯಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸೂಚನೆ ನೀಡಿದ್ದು ನಿಜ. ಆದರೆ, ಪಕ್ಷದಲ್ಲಿ ನನಗಿಂತ ಸಮರ್ಥರು ಬಹಳಷ್ಟು ಜನರಿದ್ದಾರೆ ಅವರಿಗೆ ಅವಕಾಶ ಮಾಡಿಕೊಡಿ ಎಂದು ವರಿಷ್ಠರಿಗೆ ತಿಳಿಸಿದ್ದೇನೆ ಎಂದು ಆಂಜನೇಯ ಸ್ಪಷ್ಟಪಡಿಸಿದರು.