ಚುನಾವಣಾ ಆಯೋಗದಿಂದ ಆಘಾತ: ಅನರ್ಹ ಶಾಸಕರ ಮುಂದಿನ ದಾರಿಗಳೇನು?

Recommended Video

      ಅನರ್ಹ ಶಾಸಕರಿಗೆ ಶಾಕ್ ನೀಡಿದ ಚುನಾವಣಾ ಆಯೋಗ..?

      ನವದೆಹಲಿ, ಸೆಪ್ಟೆಂಬರ್ 21: ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವುದರಿಂದ ತಮ್ಮ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಾರದು ಎಂಬ ವಿಶ್ವಾಸದಲ್ಲಿದ್ದ ಅನರ್ಹ ಶಾಸಕರಿಗೆ ಚುನಾವಣಾ ಆಯೋಗ ಆಘಾತ ನೀಡಿದೆ.

      ತಮ್ಮ ಅನರ್ಹತೆಯ ವಿಚಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಈ ಸಮಯದಲ್ಲಿ ಚುನಾವಣೆ ನಡೆಯುವುದು ಸೂಕ್ತವಲ್ಲ. ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದ ಬಳಿಕ ಅದರ ಆಧಾರದಲ್ಲಿ ಉಪ ಚುನಾವಣೆ ಕುರಿತು ನಿರ್ಧಾರ ಪ್ರಕಟಿಸಲಿ ಎಂದು ಎಲ್ಲ ಅನರ್ಹ ಶಾಸಕರು ಮನವಿ ಮಾಡಿದ್ದರು. ಆದರೆ ಈ ಮನವಿಯನ್ನು ಚುನಾವಣಾ ಆಯೋಗ ಪುರಸ್ಕರಿಸಿಲ್ಲ. ಇಬ್ಬರು ಶಾಸಕರ ಮನವಿ ಮಾತ್ರ ಪರಿಗಣಿಸಲಾಗಿದೆ.

      ಈ ನಡುವೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರ ಮತ್ತು ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಮಾಡದೆ ಇರುವುದು ಅಚ್ಚರಿ ಮೂಡಿಸಿದೆ. ಇದರಿಂದ ಮಸ್ಕಿಯ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರದ ಎಂ. ಮುನಿರತ್ನ ನಾಯ್ಡು ಇಬ್ಬರು ನಿಟ್ಟುಸಿರುಬಿಡುವಂತಾಗಿದೆ. ಉಳಿದ 15 ಕ್ಷೇತ್ರಗಳಲ್ಲಿ ಅನರ್ಹಗೊಂಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಅನರ್ಹ ಶಾಸಕರಲ್ಲಿ ಆತಂಕ ಶುರುವಾಗಿದೆ.

      ಸೋಮವಾರ ಅರ್ಜಿ ವಿಚಾರಣೆ

      ಸೋಮವಾರ ಅರ್ಜಿ ವಿಚಾರಣೆ

      ತಮ್ಮನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬಂದಿಲ್ಲ. ಸೆ. 23ರಂದು (ಸೋಮವಾರ) ಅದು ವಿಚಾರಣೆಗೆ ಬರಲಿದೆ. ನಾಮಪತ್ರ ಸಲ್ಲಿಸುವ ದಿನ ಮುಗಿಯುವ ಮೊದಲೇ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿ ಆದೇಶ ನೀಡಿದರೆ ಮತ್ತು ಆ ತೀರ್ಪು ಅನರ್ಹ ಶಾಸಕರ ಪರವಾಗಿದ್ದರೆ ಅವರು ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಗಬಹುದು. ಆದರೆ ವಿಚಾರಣೆ ದೀರ್ಘ ಕಾಲ ತೆಗೆದುಕೊಂಡರೆ ಅನರ್ಹ ಶಾಸಕರು ಚುನಾವಣಾ ಅಖಾಡಕ್ಕೆ ಇಳಿಯಲು ತಯಾರಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಜತೆಗೆ ತಮ್ಮ ಪರವಾದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಕೂಡ ಅವರಿಗೆ ಕಷ್ಟವಾಗಲಿದೆ. ಮುಖ್ಯವಾಗಿ ಅವರ ಮೇಲೆ ಅನರ್ಹತೆಯ ತೂಗುಗತ್ತಿ ಇರುವುದರಿಂದ ಅವರ ಪರವಾದ ಅಭ್ಯರ್ಥಿಗಳಿಗೂ ಅದು ನಕಾರಾತ್ಮಕ ಪರಿಣಾಮ ಬೀರಲಿದೆ.

      ಚುನಾವಣಾ ಆಯೋಗಕ್ಕೆ ಮನವಿ ಮಾಡಲು ಅವಕಾಶ

      ಚುನಾವಣಾ ಆಯೋಗಕ್ಕೆ ಮನವಿ ಮಾಡಲು ಅವಕಾಶ

      ಅನರ್ಹತೆ ಎದುರಿಸುತ್ತಿರುವ ಶಾಸಕರಿಗೆ ಸದ್ಯ ಇರುವ ಮಾರ್ಗವೆಂದರೆ ಅನರ್ಹತೆಯ ವಿರುದ್ಧ ಸಲ್ಲಿಸಿರುವ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥವಾಗದೆ ಇರುವುದರಿಂದ ತಮಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಮನವಿ ಮಾಡುವುದು. ಒಂದು ವೇಳೆ ಅನರ್ಹತೆ ಅನ್ವಯವಾದರೆ ಅವರು ಆರು ವರ್ಷ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಸೆ. 23ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಸೆ. 30ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಹೀಗಾಗಿ ಈ ದಿನಾಂಕದ ಒಳಗೆ ತಮ್ಮ ಭವಿಷ್ಯ ಏನಾಗಲಿದೆ ಎನ್ನುವುದು ಅವರ ಕಳವಳ ಹೆಚ್ಚಿಸಿದೆ.

      ತಮಿಳುನಾಡು ಪ್ರಕರಣದ ಭಯ

      ತಮಿಳುನಾಡು ಪ್ರಕರಣದ ಭಯ

      2018ರಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ ಎಐಎಡಿಎಂಕೆಯ 18 ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದರು. ಈ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿತ್ತು. ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಸಂದರ್ಭದಲ್ಲಿ ಘೋಷಣೆಯಾದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಕೋರಿದ್ದ ಮನವಿಯನ್ನು ಪುರಸ್ಕರಿಸಿದ್ದ ಚುನಾವಣಾ ಆಯೋಗ ಅವರಿಗೆ ಕಣಕ್ಕಿಳಿಯಲು ಅನುಮತಿ ನೀಡಿತ್ತು. ಆದರೆ ಎಲ್ಲ ಶಾಸಕರೂ ಸೋಲು ಅನುಭವಿಸಿದ್ದರು. ಬಳಿಕ ಸುಪ್ರೀಂಕೋರ್ಟ್ ಕೂಡ ಅವರ ವಿರುದ್ಧದ ಆದೇಶವನ್ನು ಎತ್ತಿಹಿಡಿದಿತ್ತು.

      ಅನರ್ಹ ಶಾಸಕರಿಗೆ ತಮಿಳುನಾಡು ಪ್ರಕರಣವೂ ಭಯ ಉಂಟುಮಾಡಿದೆ. ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೋರಲು ಚುನಾವಣಾ ಆಯೋಗದ ಮುಂದೆ ಮನವಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ದೊರೆತರೆ ಗೆಲುವು ಸುಲಭವಲ್ಲ. ಒಂದು ವೇಳೆ ಗೆದ್ದರೂ ಸುಪ್ರೀಂಕೋರ್ಟ್ ಅನರ್ಹತೆಯನ್ನು ಎತ್ತಿಹಿಡಿದರೆ ಆ ಗೆಲುವು ಕೂಡ ಅನೂರ್ಜಿತಗೊಳ್ಳಲಿದೆ. ಹಾಗೆಯೇ ಆರು ವರ್ಷ ಚುನಾವಣಾ ಅಖಾಡದಿಂದ ನಿಷೇಧ ಎದುರಿಸುವುದು ಅನಿವಾರ್ಯ. ಜತೆಗೆ ಚುನಾವಣೆ ಮತ್ತು ನ್ಯಾಯಾಲಯದ ಹೋರಾಟ ಎರಡರಲ್ಲಿಯೂ ಅಪಾರ ಪ್ರಮಾಣದ ಹಣ ವ್ಯಯಿಸಬೇಕಾಗುತ್ತದೆ.

      ಅನರ್ಹತೆ, ರಾಜೀನಾಮೆ, ಚುನಾವಣೆ ಗೊಂದಲ

      ಅನರ್ಹತೆ, ರಾಜೀನಾಮೆ, ಚುನಾವಣೆ ಗೊಂದಲ

      ಅನರ್ಹ ಶಾಸಕರು ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ರಾಜೀನಾಮೆ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದರು. ರಾಜೀನಾಮೆಯನ್ನು ಕೂಡಲೇ ಅಂಗೀಕರಿಸುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸೂಚಿಸುವಂತೆ ಕೋರಿದ್ದರು. ಅದಕ್ಕೆ ಸ್ಪೀಕರ್ ಆಕ್ಷೇಪ ವ್ಯಕ್ತಪಡಿಸಿದ್ದರು. ಸಂವಿಧಾನದ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲು ಸ್ಪೀಕರ್ ಅವರಿಗೆ ಅಧಿಕಾರ ಇದೆ ಎಂದು ಕೋರ್ಟ್ ಹೇಳಿತ್ತು. ಅದರ ಬೆನ್ನಲ್ಲೇ ಅನರ್ಹತೆಯ ಅಸ್ತ್ರವನ್ನು ಪ್ರಯೋಗಿಸಲಾಗಿತ್ತು. ರಾಜೀನಾಮೆ ಅಂಗೀಕಾರಕ್ಕೂ ಮುನ್ನ ಅವರನ್ನು ಅನರ್ಹರನ್ನಾಗಿ ಮಾಡಲಾಗಿತ್ತು.

      ಈಗ ಒಂದು ವೇಳೆ ಅನರ್ಹ ಶಾಸಕರ ಪರ ಸುಪ್ರೀಂಕೋರ್ಟ್ ಬೇಗನೆ ತೀರ್ಪು ನೀಡಿದರೆ ಅವರು ಶಾಸಕರಾಗಿ ಮುಂದುವರಿಯುತ್ತಾರೆಯೇ ಅಥವಾ ಅವರ ರಾಜೀನಾಮೆಯನ್ನು ಅಂಗೀಕೃತ ಎಂದು ಪರಿಗಣಿಸಿ ಅವರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗುತ್ತದೆಯೇ ಎಂಬ ಗೊಂದಲವಿದೆ. ರಾಜೀನಾಮೆ ಅಂಗೀಕಾರವಾಗಿರದೆ ಅನರ್ಹತೆಯ ತೀರ್ಮಾನ ಮಾತ್ರ ಪ್ರಕಟಿಸಿದ್ದರೆ ಅವರು ಶಾಸಕರಾಗಿಯೇ ಇರುತ್ತಾರೆ. ಆಗ ಚುನಾವಣೆ ನಡೆಸುವ ಪ್ರಮೇಯವೇ ಬರುವುದಿಲ್ಲ.

      ತಡೆಯಾಜ್ಞೆಗೆ ಮೊರೆ

      ತಡೆಯಾಜ್ಞೆಗೆ ಮೊರೆ

      ಚುನಾವಣಾ ಆಯೋಗ ಉಪ ಚುನಾವಣೆ ದಿನಾಂಕ ಪ್ರಕಟಿಸಿರುವುದನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್‌ಗೆ ಮತ್ತೊಂದು ಮನವಿ ಸಲ್ಲಿಸಬಹುದು. ತಮ್ಮ ಅನರ್ಹತೆಯ ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿದೆ. ಹೀಗಿರುವಾಗ ಚುನಾವಣೆ ಘೋಷಣೆ ಮಾಡಿರುವುದು ಸರಿಯಲ್ಲ. ಅದಕ್ಕೆ ತಡೆ ನೀಡಬೇಕು ಎಂದು ಕೋರಿ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

      ಪ್ರತಾಪ್ ಗೌಡ ಪಾಟೀಲ್

      ಪ್ರತಾಪ್ ಗೌಡ ಪಾಟೀಲ್

      ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ತಮ್ಮ ಕ್ಷೇತ್ರಕ್ಕೆ ಈಗ ಚುನಾವಣೆ ನಡೆಸುವುದು ಬೇಡ ಎಂದು ಮನವಿ ಮಾಡಿದ್ದೆವು. ಆದರೆ ಎರಡು ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆಸುತ್ತಿಲ್ಲ. ಉಳಿದೆಲ್ಲ ಕ್ಷೇತ್ರಗಳಿಗೆ ಉಪ ಚುನಾವಣೆ ಚುನಾವಣೆ ಘೋಷಿಸಿದ್ದಾರೆ. ಇದು ಹೇಗೆ ಎನ್ನುವುದು ಗೊತ್ತಿಲ್ಲ ಎಂದು ಮಸ್ಕಿಯ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ ವಿಧುರಾಶ್ವತ್ಥದಲ್ಲಿ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+