ಮೋದಿ ನರಹಂತಕ ಎಂದ ಸಿದ್ದುಗೆ ಆಯೋಗದ ಗುದ್ದು
ಬೆಂಗಳೂರು, ಏ. 11 : ನರೇಂದ್ರ ಮೋದಿ ಅವರನ್ನು ನರಹಂತಹ ಎಂದು ಟೀಕಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಕೇಂದ್ರ ಚುನಾವಣಾ ಆಯೋಗ ವಾಗ್ಧಂಡನೆ ವಿಧಿಸಿದೆ. ಹೇಳಿಕೆ ಬಗ್ಗೆ ಸಿಎಂ ನೀಡಿದ ಉತ್ತರವೂ ಸಮರ್ಪಕವಾಗಿಲ್ಲ ಎಂದು ಆಯೋಗ ಹೇಳಿದೆ.
ಮಾ.23ರಂದು ತಮ್ಮ ತವರು ಜಿಲ್ಲೆ ಮೈಸೂರಿನಲ್ಲಿ ಚುನಾವಣಾ ಪ್ರಚಾರ ನಡೆಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಪ್ರಧಾನಿ ಅಭ್ಯರ್ಥಿ "ನರೇಂದ್ರ ಮೋದಿ ಒಬ್ಬ ನರಹಂತಕ" ಎಂದು ಟೀಕಿಸಿದ್ದರು ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ದೂರು ಸ್ವೀಕರಿಸಿದ ರಾಜ್ಯ ಚುನಾವಣಾ ಆಯೋಗದ ಇದನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ರವಾನಿಸಿತ್ತು.

ಈ ಹೇಳಿಕೆ ಕುರಿತು ಮಾಹಿತಿ ಸ್ಪಷ್ಟನೆ ನೀಡುವಂತೆ ಕೋರಿ ಕೇಂದ್ರ ಚುನಾವಣಾ ಆಯೋಗ ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ನೋಟಿಸ್ ಗೆ ಸಿಎಂ ಕೆಲವು ದಿನಗಳ ಹಿಂದೆ ಉತ್ತರ ರವಾನಿಸಿದ್ದರು. ಆದರೆ, ನೀವು ನೀಡಿರುವ ಉತ್ತರ ಸಮರ್ಪಕವಾಗಿಲ್ಲ. ಪ್ರಮುಖ ಪಕ್ಷವೊಂದರ ನೇತಾರನ ವಿರುದ್ಧ ನೀವು ಬಳಸಿರುವ ಭಾಷೆ ಮತ್ತು ಅದಕ್ಕೆ ನೀಡಿರುವ ಸ್ಪಷ್ಟನೆಯನ್ನು ಒಪ್ಪಿಕೊಳ್ಳಲಾಗದು ಎಂದು ಚುನಾವಣಾ ಆಯೋಗ ಹೇಳಿದೆ.
ನರೇಂದ್ರ ಮೋದಿ ಅವರ ನೀತಿಗಳ ಬದಲಾಗಿ, ನೇರವಾಗಿ ವೈಯಕ್ತಿಕವಾಗಿ ಅವರನ್ನೇ ಟೀಕಿಸಲಾಗಿದೆ. ಆದ್ದರಿಂದ ನಿಮಗೆ ವಾಗ್ಧಂಡನೆ ವಿಧಿಸಲು ನಿರ್ಧರಿಸಲಾಗಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಎಚ್ಚರದಿಂದ ಇರುವಂತೆ ಸೂಚಿಸಲಾಗುತ್ತಿದೆ ಎಂದು ಚುನಾವಣಾ ಆಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದೆ. [ಬಳ್ಳಾರಿಯಲ್ಲಿ ರಾಜನಾಥ್ ಸಿಂಗ್ ಪ್ರಚಾರ]
ಸಿಎಂ ಸಿದ್ದರಾಮಯ್ಯ ಭಾಷೆಯ ಬಳಕೆಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಸಹ ಖಂಡಿಸಿದ್ದರು. ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ರಾಜನಾಥ್ ಸಿಂಗ್, ಸಿದ್ದರಾಮಯ್ಯ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದರು.












Click it and Unblock the Notifications