ಚುನಾವಣೆಗೆ ಇನ್ನೂ 18 ತಿಂಗಳು: ಶುರುವಾಯ್ತು ಸೋಲು ಗೆಲುವಿನ ವಾಕ್ಸಮರ
ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲು ಇನ್ನೂ ಒಂದೂವರೆ ವರ್ಷ ಬಾಕಿಯಿದೆ. ಆದರೆ ರಾಜಕೀಯ ನಾಯಕರು ಅವರು ಸೋಲ್ತಾರೆ, ಠೇವಣೆ ಕಳೆದುಕೊಳ್ಳುತ್ತಾರೆ ಎನ್ನುವ ವಾಕ್ಸಮರವನ್ನು ಈಗಲೇ ಆರಂಭಿಸಿದ್ದಾರೆ.
ಬೆಂಗಳೂರು, ಮಾ 4: ಅವಧಿಗೆ ಮುನ್ನ ಸಿದ್ದು ಸರಕಾರ ಪತನಗೊಳ್ಳದಿದ್ದರೆ, ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲು ಇನ್ನೂ ಒಂದೂವರೆ ವರ್ಷ ಬಾಕಿಯಿದೆ. ಆದರೆ ರಾಜಕೀಯ ನಾಯಕರು ಅವರು ಸೋಲ್ತಾರೆ, ಠೇವಣೆ ಕಳೆದುಕೊಳ್ಳುತ್ತಾರೆ ಎನ್ನುವ ವಾಕ್ಸಮರ ಈಗಲೇ ಆರಂಭಿಸಿದ್ದಾರೆ.
ಡೈರಿ, ಕಪ್ಪ, ಉಕ್ಕಿನ ಸೇತುವೆಯ ರಾಜಕೀಯದ ನಂತರ ಎರಡು ರಾಷ್ಟ್ರೀಯ ಪಕ್ಷಗಳ ಮುಖಂಡರ ವಾಕ್ಸಮರಗಳು ದಿನೇದಿನೇ ಹೊಸ ವಿವಾದ ಹುಟ್ಟು ಹಾಕುತ್ತಿದ್ದು, ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ನಾಯಕರ ಭವಿಷ್ಯವನ್ನು ಈಗಲೇ ಅಳೆಯಲಾರಂಭಿಸಿದ್ದಾರೆ. (ಸೀತೆ ಅಗ್ನಿಕುಂಡದಿಂದ ಹೊರಬಂದ್ಳು, ಆದ್ರೆ ರಾಜ್ಯ ಕಾಂಗ್ರೆಸ್ಸಿಗರು)
ರಾಯಚೂರಿನಲ್ಲಿ ಶನಿವಾರ (ಮಾ 4) ಮಾತನಾಡುತ್ತಿದ್ದ ಬಿಜೆಪಿ ನಾಯಕ ಸಿ ಟಿ ರವಿ, ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆಲ್ಲುವುದು ಹಾಗಿರಲಿ, ಠೇವಣಿ ಕಳೆದುಕೊಳ್ಳಲಿದ್ದಾರೆಂದು ಹೇಳಿದ್ದಾರೆ.

ಇತ್ತ ನಾಗಮಂಗಲದಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಮುಖಂಡ ಸುರೇಶ್ ಗೌಡ, ಜೆಡಿಎಸ್ ಸಖ್ಯ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿರುವ ಚೆಲುವರಾಯಸ್ವಾಮಿ ಮುಂದಿನ ಚುನಾವಣೆಯಲ್ಲಿ ಸೋಲುವುದು ಖಂಡಿತ. ಒಂದು ವೇಳೆ ಗೆದ್ದರೆ ನಾನು ರಾಜಕೀಯ ಸನ್ಯಾಸ ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ.
20 ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿರುವ ಚೆಲುವರಾಯಸ್ವಾಮಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ನಾನು ಪಕ್ಷ ತೊರೆಯುತ್ತೇನೆ. ಅವಕಾಶವಾದಿ ರಾಜಕಾರಣ ಮಾಡುತ್ತಿರುವ ಚೆಲುವರಾಯಸ್ವಾಮಿಗೆ ಮಾನ ಮರ್ಯಾದೆ ಅನ್ನೋದು ಇದೆಯಾ ಎಂದು ಸುರೇಶ್ ಗೌಡ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಗಳು ನನ್ನ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಅನ್ನುತ್ತಿದ್ದಾರೆ. ಹೋಗಲು ಅವರಿಗೆ ಏನು ಮಾನ ಉಳಿದಿದೆ ಎಂದು ಬಿಜೆಪಿ ಮುಖಂಡ ಸಿ ಟಿ ರವಿ, ಸಿದ್ದರಾಮಯ್ಯ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications