ಕಾಂಗ್ರೆಸ್ ಸರ್ಕಾರ: ದಿಕ್ಕಿಲ್ಲದ ಹಡಗಿನಂತೆ ಪ್ರಾಥಮಿಕ, ಪ್ರೌಢ ಶಿಕ್ಷಣ
ಬೆಂಗಳೂರು, ಮೇ 18: 'ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ದಿಕ್ಕಿಲ್ಲದ ಹಡಗಿನಂತೆ ಸಾಗಿದೆ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ಶನಿವಾರ ಬಿ. ವೈ. ವಿಜಯೇಂದ್ರ ಕಾಂಗ್ರೆಸ್ ಸರ್ಕಾರ ಶಿಕ್ಷಣ ಇಲಾಖೆಯನ್ನು ಕಡೆಗಣಿಸುತ್ತಿದೆ ಎಂದು ಆರೋಪ ಮಾಡಿದ್ದು, 'ಪ್ರಾಥಮಿಕ ಶಿಕ್ಷಣವೆಂದರೆ ಕೇವಲ ಅಕ್ಷರ ಕಲಿಕೆಯಲ್ಲ ನಾಳಿನ ಪ್ರಜೆಗಳ ಭವ್ಯ ಭವಿಷ್ಯ ರೂಪಿಸುವ ನೈಜ ಅಡಿಪಾಯ. ಒಂದು ಸರ್ಕಾರ ಶಿಕ್ಷಣವನ್ನು ಆಲಕ್ಷಿಸಿದರೆ ದೇಶದ ಭವಿಷ್ಯವನ್ನು ಗಂಡಾಂತರಕ್ಕೆ ತಳ್ಳುವ ನೀಚ ಪ್ರವೃತ್ತಿಯಾಗುತ್ತದೆ' ಎಂದು ಹೇಳಿದ್ದಾರೆ.

ಪೋಸ್ಟ್ನಲ್ಲಿ ಏನಿದೆ?: 'ಕಾಂಗ್ರೆಸ್ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಇಂತಹ ಪ್ರವೃತ್ತಿ ಮೇಳೈಸುತ್ತಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಶಿಕ್ಷಣ ಅರಾಜಕತೆಯತ್ತ ಸಾಗಿದೆ, ಇದನ್ನು ಮುಖ್ಯಮಂತ್ರಿಗಳು ಇಂದು ಒಪ್ಪಿಕೊಂಡು ಕೃಪಾಂಕ ನೀಡುವಷ್ಟು ತಳಮಟ್ಟಕ್ಕೆ ಕುಸಿದಿರುವ ಎಸ್ಎಸ್ಎಲ್ಸಿ ಪರೀಕ್ಷೆಯ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿ ಇಲಾಖೆಯ ದುಸ್ಥಿತಿಯ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ' ಎಂದು ತಿಳಿಸಿದ್ದಾರೆ.
'ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ದಿಕ್ಕಿಲ್ಲದ ಹಡಗಿನಂತೆ ಸಾಗಿದೆ ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಕನಸು ಕಂಡಿರುವ ಲಕ್ಷಾಂತರ ಪೋಷಕರ ಆತಂಕದ ಪ್ರಶ್ನೆಗಳಿಗೆ ಉತ್ತರಿಸುವವರಿಲ್ಲದೆ ಅವರ ವೇದನೆ ಅರಣ್ಯರೋಧನವಾಗಿದೆ' ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
'ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬದಿಗೆ ಸರಿಸುವ ವಿದ್ವತ್ತು ಪ್ರದರ್ಶಿಸಲು ಹೋಗಿ ನೈಜ ಶಿಕ್ಷಣ ವ್ಯವಸ್ಥೆಯನ್ನು ದಮನ ಮಾಡಲು ಹೊರಟ ಸರ್ಕಾರ 'ಚಾಲನೆಯ ಅನುಭವವಿಲ್ಲದ ಚಾಲಕನೊಬ್ಬ ವಾಹನ ಅಥವಾ ರೈಲು ಮುನ್ನಡೆಸಿದರೆ ಯಾವ ಸ್ಥಿತಿ ಉಂಟಾಗಬಹುದು' ಅಂತದ್ದೇ ಸ್ಥಿತಿ ಇಂದು ರಾಜ್ಯದ ಪ್ರಾಥಮಿಕ ಹಾಗೂ ಶಿಕ್ಷಣ ಇಲಾಖೆಗೆ ಒದಗಿ ಬಂದಿದೆ. 'ಮೇಟಿ ವಿದ್ಯೆಗೆ ರೈತ, ಅಕ್ಷರ ವಿದ್ಯೆಗೆ ವಿನಯವಂತನಿದ್ದರೆ ಕೃಷಿ-ಶಿಕ್ಷಣ ಎರಡೂ ಸಮೃದ್ಧವಾಗುತ್ತದೆ' ಎಂದು ತಿಳಿಸಿದ್ದಾರೆ.
ಪ್ರಾಥಮಿಕ ಶಿಕ್ಷಣವೆಂದರೆ ಕೇವಲ ಅಕ್ಷರ ಕಲಿಕೆಯಲ್ಲ ನಾಳಿನ ಪ್ರಜೆಗಳ ಭವ್ಯ ಭವಿಷ್ಯ ರೂಪಿಸುವ ನೈಜ ಅಡಿಪಾಯ. ಒಂದು ಸರ್ಕಾರ ಶಿಕ್ಷಣವನ್ನು ಆಲಕ್ಷಿಸಿದರೆ ದೇಶದ ಭವಿಷ್ಯವನ್ನು ಗಂಡಾಂತರಕ್ಕೆ ತಳ್ಳುವ ನೀಚ ಪ್ರವೃತ್ತಿಯಾಗುತ್ತದೆ.
— Vijayendra Yediyurappa (Modi Ka Parivar) (@BYVijayendra) May 18, 2024
ಕಾಂಗ್ರೆಸ್ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಇಂತಹ ಪ್ರವೃತ್ತಿ ಮೇಳೈಸುತ್ತಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ…
'ಮಾನ್ಯ ಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ವಿವೇಕ ಬಳಸದೆ ವಿದ್ಯಾ ಇಲಾಖೆಯನ್ನು ವಿಧೇಯತೆ ಗೊತ್ತಿಲ್ಲದವರ ಕೈಗೆ ಒಪ್ಪಿಸಿದ್ದ ಕಾರಣಕ್ಕಾಗಿ ಇಂದು ಅವರೇ ಪಶ್ಚಾತಾಪ ಪಡುವಂತಹ ಪರಿಸ್ಥಿತಿ ಉದ್ಭವಿಸಿದೆ. ಈಗಲಾದರೂ ಈ ನಾಡನ್ನು ಹಾಗೂ ದೇಶವನ್ನು ಭವಿಷ್ಯತ್ತಿನಲ್ಲಿ ಕಟ್ಟುವ ಲಕ್ಷಾಂತರ ಮಕ್ಕಳ ಭವಿಷ್ಯವನ್ನು ಅಂಧಕಾರಕ್ಕೆ ತಳ್ಳಲ್ಪಡುತ್ತಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯನ್ನು ಸರಿ ದಾರಿಗೆ ತರುವ ಕಟ್ಟುನಿಟ್ಟಿನ ಕ್ರಮ ವಹಿಸಲಿ. ಶಿಕ್ಷಣ ಬದ್ಧತೆ ಇದ್ದವರ ಕೈಗೆ ಇಲಾಖೆಯ ಸಾರಥ್ಯ ವಹಿಸಿಕೊಡಲಿ ಎಂದು ಒತ್ತಾಯಿಸುವೆ' ಎಂದು ಆಗ್ರಹಿಸಿದ್ದಾರೆ.
ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಅಧಿಕಾರಿಗಳ ಅನೌಪಚಾರಿಕ ಸಭೆಯನ್ನು ನಡೆಸಿದ್ದರು. ಸಭೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಕೃಪಾಂಕ (ಗ್ರೇಸ್ ಮಾರ್ಕ್ಸ್) ನೀಡಿರುವುದಕ್ಕೆ ಮುಖ್ಯಮಂತ್ರಿಗಳು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.
ಮುಂದಿನ ವರ್ಷದಿಂದ ಕೃಪಾಂಕ ರದ್ದುಗೊಳಿಸುವಂತೆ ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಈ ವರ್ಷ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 10ನೇ ತರಗತಿಯ ಪರೀಕ್ಷೆಯಲ್ಲಿ 20 ಕೃಪಾಂಕಗಳನ್ನು ನೀಡಲಾಗಿತ್ತು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈ ಬಾರಿ ನಕಲು ತಡೆಯಲು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು ಸರಿ ಇದೆ. ಆದರೆ 20 ಕೃಪಾಂಕ ಕೊಟ್ಟಿದ್ದು ಸರಿಯೇ?, ಇಷ್ಟು ಅಂಕ ಕೊಡಲು ಸೂಚನೆ ನೀಡಿದವರು ಯಾರು? ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳನ್ನು ಮುಖ್ಯಮಂತ್ರಿಗಳು ಪ್ರಶ್ನೆಮಾಡಿದ್ದರು.












Click it and Unblock the Notifications