ಮಾಜಿ ಸಚಿವ ಕೆ. ಜೆ. ಜಾರ್ಜ್, ಕುಟುಂಬಸ್ಥರಿಗೆ ಇಡಿ ಸಮನ್ಸ್!
ಬೆಂಗಳೂರು, ಜನವರಿ 14 : ಮಾಜಿ ಸಚಿವ, ಕಾಂಗ್ರೆಸ್ ನಾಯಕ ಕೆ. ಜೆ. ಜಾರ್ಜ್ಗೆ ಸಂಕಷ್ಟ ಎದುರಾಗಿದೆ. ಜಾರಿ ನಿರ್ದೇಶನಾಲಯ ಜಾರ್ಜ್ ಮತ್ತು ಕುಟುಂಬ ಸದಸ್ಯರಿಗೆ ಸಮನ್ಸ್ ಜಾರಿಗೊಳಿಸಿದೆ. ವಿಚಾರಣೆಗೆ ಹಾಜರಾಗಬೇಕು ಎಂದು ಸೂಚನೆ ನೀಡಿದೆ.
ಮಂಗಳವಾರ ಜಾರಿ ನಿರ್ದೇಶನಾಲಯ ಕೆ. ಜೆ. ಜಾರ್ಜ್ ಮತ್ತು ಕುಟುಂಬ ಸದಸ್ಯರಿಗೆ ಸಮನ್ಸ್ ಜಾರಿಗೊಳಿಸಿದೆ. ಜನವರಿ 16ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಸೂಚನೆ ನೀಡಲಾಗಿದೆ. ಡಿ. ಕೆ. ಶಿವಕುಮಾರ್ ಬಳಿಕ ಮತ್ತೊಬ್ಬ ಕಾಂಗ್ರೆಸ್ ಪ್ರಭಾವಿ ನಾಯಕರಿಗೆ ಇಡಿ ಸಂಕಷ್ಟ ಎದುರಾಗಿದೆ.
ನವೆಂಬರ್ನಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಜಾರಿ ನಿರ್ದೇಶನಾಲಯಕ್ಕೆ ಕೆ. ಜೆ. ಜಾರ್ಜ್ ಮತ್ತು ಕುಟುಂಬ ಸದಸ್ಯರ ವಿರುದ್ಧ ದೂರು ನೀಡಿದ್ದರು. ಈ ದೂರಿನ ಅನ್ವಯ ಇಡಿ ಪ್ರಕರಣ ದಾಖಲು ಮಾಡಿಕೊಂಡಿತ್ತು.
ಕೆ. ಜೆ. ಜಾರ್ಜ್ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದಾಗ ದೇಶ ವಿದೇಶದಲ್ಲಿ ಭಾರಿ ಪ್ರಮಾಣದ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬುದು ದೂರಾಗಿತ್ತು. ಈಗ ಈ ಬಗ್ಗೆ ವಿಚಾರಣೆ ನಡೆಸಲು ಇಡಿ ಸಮನ್ಸ್ ನೀಡಿದೆ.

ಯಾರು-ಯಾರಿಗೆ ಸಮನ್ಸ್?
ಜಾರಿ ನಿರ್ದೇಶನಾಲಯ ಮಾಜಿ ಸಚಿವ ಕೆ. ಜೆ. ಜಾರ್ಜ್, ಜಾರ್ಜ್ ಪತ್ನಿ, ಪುತ್ರಿ ರೇನಿತಾ, ಪುತ್ರ ರಾಣಾಗೆ ಸಮನ್ಸ್ ನೀಡಿದೆ. ಜನವರಿ 16ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಸೂಚನೆ ನೀಡಲಾಗಿದೆ.

ವಿದೇಶದಲ್ಲಿ ಅಕ್ರಮ ಆಸ್ತಿ?
ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಜಾರಿ ನಿರ್ದೇಶನಾಲಯಕ್ಕೆ ಮಾಜಿ ಸಚಿವರ ವಿರುದ್ಧ ದೂರು ನೀಡಿದ್ದರು. ನ್ಯೂಯಾರ್ಕ್ನಲ್ಲಿರುವ ಆಸ್ತಿ ವಿವರಗಳನ್ನು ಉಲ್ಲೇಖಿಸಿದ್ದರು. ಕೆ. ಜೆ. ಜಾರ್ಜ್ ಪುತ್ರಿ ರೇನಿತಾ ಅಬ್ರಾಹಂ ಮತ್ತು ಅಳಿಯ ಕೆವಿನ್ ಅಬ್ರಾಹಂ ನ್ಯೂಯಾರ್ಕ್ನಲ್ಲಿ ವಾಸವಾಗಿದ್ದಾರೆ ಎಂದು ಹೇಳಿದ್ದರು.

ಲೋಕಾಯುಕ್ತರಿಂದ ಮಾಹಿತಿ ಸಂಗ್ರಹ
ಕೆ. ಜೆ. ಜಾರ್ಜ್ ಮತ್ತು ಕುಟುಂಬಸ್ಥರ ವಿಚಾರಣೆಗೆ ಮುಂದಾಗಿದ್ದ ಜಾರಿ ನಿರ್ದೇಶನಾಲಯ ಕೆ. ಜೆ. ಜಾರ್ಜ್ 1985 ರಿಂದ 2019ರ ತನಕ ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರಗಳನ್ನು ಪಡೆದುಕೊಂಡಿತ್ತು. ಇದನ್ನೇ ಮುಖ್ಯ ಆಧಾರವಾಗಿಟ್ಟುಕೊಂಡು ತನಿಖೆಯನ್ನು ಆರಂಭಿಸಲಾಗಿದೆ.

ವಿವರಣೆ ನೀಡಲು ಸಿದ್ಧ
ಇಡಿ ಪ್ರಕರಣ ದಾಖಲು ಮಾಡಿಕೊಂಡಾಗ ಪ್ರತಿಕ್ರಿಯೆ ನೀಡಿದ್ದ ಕೆ. ಜೆ. ಜಾರ್ಜ್, "ಚುನಾವಣಾ ಆಯೋಗ ಮತ್ತು ಲೋಕಾಯುಕ್ತದಲ್ಲಿ ನನ್ನ ಆಸ್ತಿಯನ್ನು ಘೋಷಿಸಿಕೊಂಡಿದ್ದೇನೆ. ಇಡಿ ಯಾವ ವಿವರಣೆ ಕೇಳಿದರೂ ಕೊಡುವೆ" ಎಂದು ಹೇಳಿದ್ದರು.












Click it and Unblock the Notifications