ED Raid: 'ಮುಡಾ' ಅಧಿಕಾರಿ, ಸಿಎಂ ಆಪ್ತರ ಮೇಲೆ 'ಇಡಿ ದಾಳಿ', ಮುಂದಿನ ಟಾರ್ಗೆಟ್ ಸಿದ್ದರಾಮಯ್ಯ!
ಬೆಂಗಳೂರು, ಅಕ್ಟೋಬರ್ 28: ರಾಜ್ಯದ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಳಿ ಬಂದ ಮುಡಾ ನಿವೇಶನ ಹಂಚಿಕೆ ಅಕ್ರಮ ಪ್ರಕರಣವು ಬಗೆದಷ್ಟು ವಿಶಾಲವಾಗುತ್ತಿದೆ. ದಿನೇ ದಿನೆ ತನಿಖೆ ಚುರುಕುಗೊಳ್ಳುತ್ತಿದೆ. ಇತ್ತ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬೆಂಗಳೂರು ಮೈಸೂರಿನಲ್ಲಿ ಏಕಕಾಲಕ್ಕೆ ವಿವಿಧೆಡೆ ದಾಳಿ ನಡೆಸಿದ್ದಾರೆ. ಇದರಲ್ಲೇನು ವಿಶೇಷತೆ ಅಂತೀರಾ, ದಾಳಿಗೆ ಒಳಗಾದವರ ಪೈಕಿ ಮುಡಾ ಅಧಿಕಾರಿಗಳೂ, ಸಿಎಂ ಸಿದ್ದರಾಮಯ್ಯ ಆಪ್ತರು ಇದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಕಷ್ಟ, ಆತಂಕ ಎದುರಾಗಿದೆ.
ಸಿಎಂ ಸಿದ್ದರಾಮಯ್ಯ ಆಪ್ತ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ರಾಕೇಶ್ ಪಾಪಣ್ಣ ಅವರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ತಡಕಾಡಿದ್ದಾರೆ. ಬೆಂಗಳೂರಿನ ಜೆಪಿ ನಗರದ ಬಿಲ್ಡರ್ ಆಗಿರುವ ಎನ್. ಮಂಜುನಾಥ್, ಮುಡಾ ಮಾಜಿ ಆಯುಕ್ತ ಬೆಂಗಳೂರು ನಿವಾಸಿ ನಟೇಶ್ ಅವರ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮುಡಾ ಕಚೇರಿ ಬಳಿಕ ಬೆಂಗಳೂರು-ಮೈಸೂರಿನ ಮೇಲೆ ಏಕಕಾಲಕ್ಕೆ ಹತ್ತಾರು ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದು ಸಿಎಂ ಸಿದ್ದರಾಮಯ್ಯ ಅವರ ನಿದ್ದೆಗೆಡಿಸಿದೆ. ಒಬ್ಬೊಬ್ಬರಾಗೇ ತಮ್ಮ ಆಪ್ತರು ಜಾರಿ ನಿರ್ದೇಶನಾಲಯ ಅಧಿಕಾರಿಗಳ ಬಲೆಗೆ ಬೀಳುತ್ತಿದ್ದಾರೆ ಎಂಬ ಆತಂಕ ಸಿಎಂ ಮನದಲ್ಲಿ ಮನೆ ಮಾಡಿದೆ.
ರಾಕೇಶ್ ಪಾಪಣ್ಣ ಅವರು ಮೈಸೂರಿನಲ್ಲಿ ಮುಡಾ ವ್ಯಾಪ್ತಿಯಲ್ಲಿ 50:50 ನಿಯಮದಲ್ಲಿ ನಿವೇಶನ ಪಡೆದಿದ್ದರು. ಇದರಲ್ಲಿ ಅಕ್ರಮದ ವಾಸನೆ ಬಂದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಕೈಗೆ ಸಿಕ್ಕ ದಾಖಲಾತಿ, ಆಸ್ತಿ ಪಾಸ್ತಿ, ಗಳಿಕೆ ಬಗ್ಗೆ ಒಂದಷ್ಟು ಮಾಹಿತಿಯನ್ನು ಕೇಳಿದ್ದಾರೆ. ಕೆಲ ಹೊತ್ತು ಪಾಪಣ್ಣರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಹೀಗೆ ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಮುಡಾ ಕಚೇರಿ, ಮಾಜಿ ಅಧಿಕಾರಿಗಳು, ಸಿಎಂ ಆಪ್ತರನ್ನು ಹೀಗೆ ಒಬ್ಬರನ್ನು ಬಿಡದೇ ಇಡಿ ದಾಳಿ ನಡೆಸಿದೆ. ಅಕ್ರಮದ ಬಗ್ಗೆ ಮಾಹಿತಿ ಕಲೆ ಹಾಕುವಲ್ಲಿ ನಿರತವಾಗಿದೆ. ಸದ್ಯ ಮುಡಾಗೆ ಸಂಬಂಧಿಸಿದ ಇಂದಿನ ಇಡಿ ದಾಳಿ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಇತ್ತೀಚೆಗಷ್ಟೇ ಮುಡಾ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು.
ED ಅಧಿಕಾರಿಗಳ ಮುಂದಿನ ಟಾರ್ಗೆಟ್ CM ಸಿದ್ದರಾಮಯ್ಯ?
ಇತ್ತೀಚೆಗೆ ಇಡಿ ಅಧಿಕಾರಿಗಳು ಆರ್ಟಿಐ ಕಾರ್ಯಕರ್ತ ಗಂಗರಾಜು ಅವರಿಗೆ ನೋಟಿಸ್ ಜಾರಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಅವರು ಅಧಿಕಾರಿಗಳು ಕೇಳುವ ಎಲ್ಲ ದಾಖಲೆ ನೀಡುವುದಾಗಿ ತಿಳಿಸಿದ್ದರು. ಇದೀಗ ವಿವಿಧೆಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದೆಲ್ಲ ಬೆಳವಣಿಗೆ ನೋಡಿದರೆ, ಸಿಎಂ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಬಹುತೇಕ ಖಚಿತ ಎಂಬಂತೆ ಭಾಸವಾಗುತ್ತಿದೆ.
ದಾಳಿ ವೇಳೆ ಪ್ರಮುಖ ದಾಖಲಾತಿಗಳನ್ನು ಕಲೆ ಹಾಕುತ್ತಿರುವ ಇಡಿ ಅಧಿಕಾರಿಗಳು ಸೂಕ್ತ ದಾಖಲೆ ಲಭ್ಯತೆ ಆಧಾರದಲ್ಲಿ ಮುಂದಿನ ದಾಳಿಯನ್ನು ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮಾಡುವ ಸಾಧ್ಯತೆಯು ಇದೆ ಎಂದು ಮೂಲಗಳು ಮಾಹಿತಿ ನೀಡಿವೆ. ಮತ್ತೊಂದೆಡೆ ಪ್ರಕರಣದ ತನಿಖೆ ನಡೆಸುತ್ತಿರುವ ಮೈಸೂರು ಲೋಕಾಯುಕ್ತ ವಿಚಾರಣೆ ನಡೆಸಿದ್ದರು.












Click it and Unblock the Notifications