ಅವಧಿಗೆ ಮುನ್ನ ಕರ್ನಾಟಕದಲ್ಲಿ ಚುನಾವಣೆ : ಕಾಂಗ್ರೆಸ್ ಮಾಸ್ಟರ್ ಪ್ಲಾನ್
ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯ ಗೆಲುವು ಮತದಾರರ ಮನದಲ್ಲಿ ಇನ್ನೂ ಹಸಿರಾಗಿರುವಾಗಲೇ ಲಾಭವನ್ನು ಪಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ಧುರೀಣರು ಇಚ್ಛಿಸಿದರೆ ಇದರಲ್ಲಿ ತಪ್ಪೇನೂ ಇಲ್ಲ. ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಇದು ಸಕಾಲ.
ಬೆಂಗಳೂರು, ಏಪ್ರಿಲ್ 18 : ಕಬ್ಬಿಣ ಕಾದಿದೆ, ಬೇಕಾದ ರೀತಿಯಲ್ಲಿ ಬಡಿದು ಬೇಕಾದ ಆಕೃತಿ ರೂಪಿಸಿಕೊಳ್ಳಲು ಇದೇ ಸಕಾಲ ಎಂಬ ಸಂಗತಿಯನ್ನು ಅರಿತಿರುವ ಕರ್ನಾಟಕ ಕಾಂಗ್ರೆಸ್ ರಾಜ್ಯದಲ್ಲಿ ಬೇಗನೆ ವಿಧಾನಸಭೆ ಚುನಾವಣೆ ನಡೆಯುವಂಥ ಸನ್ನಿವೇಶ ಸೃಷ್ಟಿಸಿದರೆ ಅಚ್ಚರಿಯಿಲ್ಲ.
ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯ ಗೆಲುವು ಮತದಾರರ ಮನದಲ್ಲಿ ಇನ್ನೂ ಹಸಿರಾಗಿರುವಾಗಲೇ ಲಾಭವನ್ನು ಪಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ಧುರೀಣರು ಇಚ್ಛಿಸಿದರೆ ಇದರಲ್ಲಿ ತಪ್ಪೇನೂ ಇಲ್ಲ. ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಇದು ಕಾಂಗ್ರೆಸ್ಸಿಗೆ ಸಕಾಲ ಕೂಡ.
ಅನಿರೀಕ್ಷಿತ ಮತ್ತು ಆಘಾತಕರ ಸೋಲು ಕಂಡಿರುವ ಭಾರತೀಯ ಜನತಾ ಪಕ್ಷ ಈಗ ಕಲ್ಲು ಹೊಡೆಸಿಕೊಂಡ ಜೇನುಗೂಡಿನಂತಾಗಿದೆ. ನಾಯಕರು ಚಿಂತನಮಂಥನದಲ್ಲಿ ತೊಡಗಿದ್ದಾರೆ, ಸೋಲಿಗೆ ಕಾರಣವೇನಿರಬಹುದೆಂದು ಹುಡುಕುತ್ತಿದ್ದಾರೆ. ನಾಯಕರಲ್ಲಿಯೇ ಹಲವಾರು ಭಿನ್ನಾಭಿಪ್ರಾಯಗಳಿವೆ. [ಗಾಳಿಸುದ್ದಿ : 2018ರ ಚುನಾವಣೆಯಲ್ಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ!]
ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ, ಸೂಕ್ತ ತಂತ್ರಗಾರಿಕೆ ಹೂಡಲು ಮತ್ತು ಕರ್ನಾಟಕ ಬಜೆಪಿಯಲ್ಲಿರುವ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಬಿಜೆಪಿ ಹೈಕಮಾಂಡಿಗೆ ಸಮಯವಿಲ್ಲ. ಏಕೆಂದರೆ, ಗುಜರಾತ್ ಚುನಾವಣೆ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ. ಇಲ್ಲಿಗಿಂತ ಹೆಚ್ಚಾಗಿ ಅಲ್ಲಿನ ಬಗ್ಗೆ ತಲೆಕೆಡಿಸಿಕೊಳ್ಳಬೇಕಿದೆ.
ಹಾಗೆ ನೋಡಿದರೆ, ಎರಡು ಹೆಜ್ಜೆ ಹಿಂದೆ ತಳ್ಳಲ್ಪಟ್ಟಿರುವ ಭಾರತೀಯ ಜನತಾ ಪಕ್ಷ ಮತ್ತೆ ಒಗ್ಗೂಡಿ, ಮುಂಬರುವ ವಿಧಾನಸಭೆ ಚುನಾವಣೆಗೆ ಸೂಕ್ತವಾದ ಕಾರ್ಯತಂತ್ರ ರೂಪಿಸಲು ಸಾಕಷ್ಟು ಸಮಯವಿದೆ. ಈ ಸಮಯವನ್ನು ಬಳಸಿಕೊಂಡು ಬಿಜೆಪಿ ಮತ್ತೆ ಪುಟಿದೇಳಬಹುದು ಎಂಬುದು ಕಾಂಗ್ರೆಸ್ಸಿನ ಆತಂಕ. [ಸಿದ್ದರಾಮಯ್ಯಗೆ ಕೈಗೆ ಫುಲ್ ಪವರ್ : ದಿಗ್ವಿಜಯ್ ಸಿಂಗ್]
ದಿಕ್ಕೆಟ್ಟಿರುವ ಬಿಜೆಪಿಗೆ ಭಾರೀ ಆಘಾತ
ಈ ಸಮಯದಲ್ಲಿ ವಿಧಾನಸಭೆ ಚುನಾವಣೆಯನ್ನು ಮುಂಚೆಯೇ ಘೋಷಿಸಿಬಿಟ್ಟರೆ, ಮೊದಲೇ ದಿಕ್ಕೆಟ್ಟಿರುವ ಬಿಜೆಪಿಗೆ ಭಾರೀ ಆಘಾತವಾಗುವುದು ಖಚಿತ. ಗುಜರಾತ್ ಚುನಾವಣೆಯ ಸಂದರ್ಭದಲ್ಲಿಯೇ ಕರ್ನಾಟಕ ಚುನಾವಣೆಯನ್ನೂ ನಡೆಸಿಬಿಟ್ಟರೆ ಬಿಜೆಪಿ ಬೇಸ್ತುಬೀಳುವುದು ಖಚಿತ ಎಂಬುದು ಕಾಂಗ್ರೆಸ್ಸಿನ ಹುನ್ನಾರ. [ಕರ್ನಾಟಕದ ಜನತೆಯ ಮಿಡಿತ ಅರಿಯಲು ಅಮಿತ್ಗೆ ಏಕೆ ಸಾಧ್ಯವಾಗಿಲ್ಲ?]
ಕೇಂದ್ರ ಬಿಜೆಪಿ ಕಣ್ಣೆಲ್ಲ ಗುಜರಾತ್ ಮೇಲೆ
ಬಿಜೆಪಿ ಹೈಕಮಾಂಡ್ ತನ್ನ ಶಕ್ತಿ, ಬುದ್ಧಿವಂತಿಕೆಯನ್ನೆಲ್ಲ ಗುಜರಾತ್ ಚುನಾವಣೆಗೆ ವ್ಯಯಿಸಲಿದೆ. 182 ಸೀಟುಗಳಿರುವ ಗುಜರಾತ್ ವಿಧಾನಸಭೆಯಲ್ಲಿ ಕನಿಷ್ಠ 150 ಸೀಟುಗಳನ್ನು ಗೆಲ್ಲಬೇಕೆಂಬ ಯೋಜನೆಯನ್ನು ಬಿಜೆಪಿ ರೂಪಿಸಿದೆ. ಗುಜರಾತ್ ಇತಿಹಾಸದಲ್ಲಿ ಕಾಂಗ್ರೆಸ್ ಒಮ್ಮೆ ಮಾತ್ರ (1990) ಇಂಥ ಸಾಧನೆಯನ್ನು ಮಾಡಿದೆ.
ವಿರೋಧಿಗಳ ದೌರ್ಬಲ್ಯದ ಲಾಭ
ಇಲ್ಲಿ ಯಡಿಯೂರಪ್ಪ ಕೂಡ 224 ಸೀಟುಗಳಲ್ಲಿ 150 ಸೀಟುಗಳನ್ನು ಗೆಲ್ಲುವ ಕನಸು ಕಾಣುತ್ತಿದ್ದಾರೆ. ಉಪಚುನಾವಣೆ ಸೋಲಿನ ನಂತರವೂ ಅವರು ಅದನ್ನೇ ಬಡಬಡಿಸುತ್ತಿದ್ದಾರಾದರೂ ಆದಷ್ಟು ಬೇಗನೆ ಚುನಾವಣೆ ನಡೆಸಿದರೆ ಯಡಿಯೂರಪ್ಪನವರ ಕನಸು ಕೈಗೂಡುವುದು ಕಷ್ಟ ಎಂಬುದು ಕಾಂಗ್ರೆಸ್ಸಿಗೆ ಚೆನ್ನಾಗಿ ತಿಳಿದಿದೆ. ವಿರೋಧಿಗಳ ದೌರ್ಬಲ್ಯದ ಲಾಭ ಪಡೆಯಲು ಕಾಂಗ್ರೆಸ್ಸಿಗೆ ಇದು ಸಕಾಲ. [ಕಾಂಗ್ರೆಸ್ ಗೆಲುವಿಗೆ ಸೋಪಾನವಾದ 9 ಸಂಗತಿಗಳು]
ಏಕಾಂಗಿಯಾಗಿ ಬಿಎಸ್ವೈ ಗೆಲ್ಲುವುದು ಕಷ್ಟಕಷ್ಟ
ಅಲ್ಲದೆ, ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದೆ. ಏಕಾಂಗಿಯಾಗಿ ಅವರು ಚುನಾವಣೆ ಗೆಲ್ಲುವುದು ಕಷ್ಟ ಎಂಬುದು ಬಿಜೆಪಿ ಹೈಕಮಾಂಡಿಗೂ ಮನವರಿಕೆಯಾಗಿದೆ. ಅವರ ಕನಸು ನನಸಾಗಬೇಕಿದ್ದರೆ ಕೇಂದ್ರದ ಬೆಂಬಲ ಸರ್ವರೀತಿಯಿಂದಲೂ ಬೇಕೇಬೇಕು. ಅದು ಸಿಗುವುದು ಸದ್ಯಕ್ಕೆ ಕಷ್ಟ.
ಸಿದ್ದರಾಮಯ್ಯನವರ ಮಾಸ್ಟರ್ ಪ್ಲಾನ್
ಈ ಎಲ್ಲ ಸಂಭಾವ್ಯತೆ ಮತ್ತು ಲೆಕ್ಕಾಚಾರಗಳನ್ನು ಮನಗಂಡಿರುವ ಕಾಂಗ್ರೆಸ್ ನಾಯಕರು, ಒಳಗಿಂದೊಳಗೇ ಚುನಾವಣೆಯನ್ನು ಮೊದಲೇ ನಡೆಸುವಂತೆ ಮಾಡಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಡಿಸೆಂಬರ್ ತಿಂಗಳಿನಲ್ಲಿಯೇ ಚುನಾವಣೆ ನಡೆದರೆ ಹೆಚ್ಚಿನ ಲಾಭ ತಮಗೇ ಸಿಗುವುದು ಶತಸಿದ್ಧ ಎಂಬುದು ಸಿದ್ದರಾಮಯ್ಯನವರ ಮಾಸ್ಟರ್ ಪ್ಲಾನ್.
ಮೈತ್ರಿಕೂಟ ಅಲ್ಲಗಳೆದ ಕುಮಾರಸ್ವಾಮಿ
ಈ ನಡುವೆ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಬಹುದು ಎಂಬ ಸುದ್ದಿ ಹಬ್ಬಿತ್ತಾದರೂ, ಅದನ್ನು ಕುಮಾರಸ್ವಾಮಿ ಅವರು ಅಲ್ಲಗಳೆದಿದ್ದಾರೆ. ಯಾವುದೇ ಕಾರಣಕ್ಕೂ ರಾಷ್ಟ್ರೀಯ ಪಕ್ಷದೊಡನೆ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಅಂತಿಮ ಕ್ಷಣದಲ್ಲಿ ಏನು ಬೇಕಾದ್ದರೂ ಆಗಬಹುದು.
ಬಿಜೆಪಿಗೆ ಭಾರೀ ಹೊಡೆತ ಬೀಳಲಿದೆ
ಪರಿಸ್ಥಿತಿ ಹೀಗಿರುವಾಗ, ಉಪಚುನಾವಣೆ ಸಮಯದಲ್ಲಿ ಅಷ್ಟು ಕಾಣಿಸಿಕೊಳ್ಳದ ರೆಬೆಲ್ ಸ್ಟಾರ್ ಕೆಎಸ್ ಈಶ್ವರಪ್ಪ ಅವರು ಸದ್ದುಗದ್ದಲವಿಲ್ಲದೆ ರಾಯಣ್ಣ ಬ್ರಿಗೇಡ್ ಬಲಪಡಿಸಲು ತಮ್ಮನ್ನು ತೊಡಗಿಸಿಕೊಂಡರೂ ಅಚ್ಚರಿಯಿಲ್ಲ. ಹೀಗೇನಾದರೂ ಆದರೆ, ಬಿಜೆಪಿಗೆ ಭಾರೀ ಹೊಡೆತ ಬೀಳಲಿದೆ. ಇಂಥ ಸಮಯಕ್ಕಾಗಿ ಕಾದು ಕುಳಿತಿದೆ ಕಾಂಗ್ರೆಸ್.