ಮಂಡ್ಯದ ಬೆಳೆಗೆ ಕಾವೇರಿ ನೀರು ಬಿಡುವಂತೆ ಸದಾನಂದ ಗೌಡ ಪತ್ರ
ನವದೆಹಲಿ, ಜೂನ್ 20: ಮಳೆಯಿಲ್ಲದೆ ಬೆಳೆಗಳು ಒಣಗುತ್ತಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಮಂಡ್ಯಕ್ಕೆ ಹೆಚ್ಚುವರಿ ಎರಡು ಸಾವಿರ ಮಿಲಿಯನ್ ಕ್ಯೂಬಿಕ್ ಫೀಟ್ (ಟಿಎಂಸಿ) ನೀರು ಬಿಡುಗಡೆ ಮಾಡುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿವಿ ಸದಾನಂದ ಗೌಡ ಗುರುವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಮಸೂದ್ ಹುಸೇನ್ ಮತ್ತು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಶೆಖಾವತ್ ಅವರಿಗೆ ಪತ್ರ ಬರೆದಿದ್ದಾರೆ.
ಬೆಳೆ ನಷ್ಟವನ್ನು ತಗ್ಗಿಸಲು ಮತ್ತು ರೈತರ ಸಮಸ್ಯೆಗಳನ್ನು ನಿವಾರಿಸಲು ನೆರವಾಗುವಂತೆ ಮಂಡ್ಯದ ಸಂಸದೆ ಸುಮಲತಾ ಅಂಬರೀಷ್ ಅವರ ಮನವಿಯಂತೆ, ಕೆಆರ್ಎಸ್ ಅಣೆಕಟ್ಟೆಯಿಂದ ಹೆಚ್ಚುವರಿ ನೀರು ಬಿಡುಗಡೆಗೆ ಸದಾನಂದ ಗೌಡ ಕೋರಿದ್ದಾರೆ.
ಮೀಸಲು ಸರಬರಾಜಿನ ಜತೆಗೆ ಅಣೆಕಟ್ಟೆಯಲ್ಲಿ 80 ಅಡಿ ನೀರು ಲಭ್ಯವಿದೆ. ರೈತರ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಈ ಬಗ್ಗೆ ಪರಿಶೀಲನೆ ಮಾಡಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅವರು ಸಚಿವ ಶೆಖಾವತ್ ಮತ್ತು ಹುಸೇನ್ ಅವರನ್ನು ಕೋರಿದ್ದಾರೆ.
ಇಡೀ ಜಿಲ್ಲೆಯಲ್ಲಿ ಇತ್ತೀಚೆಗೆ ನೈಸರ್ಗಿಕ ಮಳೆ ಬೀಳದೆ ರೈತರು ತೀವ್ರ ನೀರಿನ ಕೊರತೆ ಅನುಭವಿಸುತ್ತಿದ್ದಾರೆ. ಹೀಗಾಗಿ ಕೆಆರ್ಎಸ್ ಜಲಾಶಯದಲ್ಲಿಂದ 2.40 ಟಿಎಂಸಿ ನೀರನ್ನು ಬಳಸಿಕೊಳ್ಳಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಕೃಷಿ ಭೂಮಿಗಳು ಒಣಗಿವೆ
ಮಂಡ್ಯ ಜಿಲ್ಲೆಯು ಕಾವೇರಿ ನದಿ ತೀರದಲ್ಲಿದ್ದು, ಭತ್ತ, ಕಬ್ಬು, ಜೋಳ, ಹತ್ತಿ, ರಾಗಿ, ಬಾಳೆ, ತೆಂಗು, ಧಾನ್ಯಗಳು ಮತ್ತು ತರಕಾರಿಗಳಂತಹ ಕೃಷಿ ಆದಾಯವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ ಎಂದು ವಿವರಿಸಿದ್ದಾರೆ. ರಾಜ್ಯದಲ್ಲಿ ಈ ಬಾರಿ ತೀವ್ರ ಮಳೆ ಕೊರತೆ ಉಂಟಾಗಿದೆ. ನೀರಾವರಿ ಸೌಲಭ್ಯಕ್ಕೆ ಕಾಲುವೆಗಳನ್ನು ಅವಲಂಬಿಸಿರುವ ಪ್ರದೇಶಗಳು ಒಣಗಿ ಹೋಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದ್ದಾರೆ.

ಸಚಿವ ಸದಾನಂದಗೌಡ ಟ್ವೀಟ್
ಮಂಡ್ಯದ ಸಂಸದರಾದ ಸುಮಲತಾ ಅಂಬರೀಷ್ ಅವರು ಇಂದು ನನ್ನನ್ನು ಪಾರ್ಲಿಮೆಂಟಿನಲ್ಲಿ ಭೇಟಿಯಾಗಿ ಮತ್ತು ಕರ್ನಾಟಕ ಸರಕಾರದ ಮಾನ್ಯ ಸಣ್ಣ ನೀರಾವರಿ ಸಚಿವ ಸಿ ಎಸ್ ಪುಟ್ಟರಾಜು ಅವರು ವೈಯುಕ್ತಿಕವಾಗಿ ನನ್ನ ಬಳಿ ಮಾತನಾಡಿ ತಮ್ಮ ಮನವಿಯನ್ನು ಸಲ್ಲಿಸಿರುತ್ತಾರೆ. ಮಂಡ್ಯ ಜಿಲ್ಲೆಯ ರೈತರು ನೀರಿಲ್ಲದೆ ಸಂಕಷ್ಟದಲ್ಲಿದ್ದು ಬೆಳೆದು ನಿಂತ ಪೈರನ್ನು ಉಳಿಸಿಕೊಳ್ಳಲು ತಕ್ಷಣ 2 ಟಿಎಂಸಿ ನೀರನ್ನು ಕೆಆರ್ಎಸ್ನಿಂದ ಮಂಡ್ಯ ಜಿಲ್ಲೆಗೆ ಹರಿಸುವಂತೆ ಕೋರಿಕೊಂಡಿರುತ್ತಾರೆ. ಈ ಸಂಬಂಧ ನಾನು ಕಾವೇರಿ ಜಲ ನಿರ್ವಹಣಾ ಮಂಡಳಿ ಅಧ್ಯಕ್ಷ ಮಸೂದ್ ಹುಸೇನ್ ಮತ್ತು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಶೆಖಾವತ್ ಅವರಿಗೆ ಪತ್ರ ಬರೆದಿದ್ದು ಬೆಳೆಗೆ ನೀರು ಕೇಳುತ್ತಿರುವ ರೈತರ ಪರವಾಗಿ ನಿರ್ಧಾರ ತೆಗೆದುಕೊಂಡು 2 ಟಿಎಂಸಿ ನೀರು ಮಂಡ್ಯ ಜಿಲ್ಲೆಗೆ ಹರಿಸುವಂತೆ ಕೇಳಿಕೊಂಡಿರುತ್ತೇನೆ ಎಂದು ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.

ಮೋದಿಯೊಂದಿಗೆ ಎಚ್ಡಿಕೆ ಚರ್ಚೆ
ಇದಕ್ಕೂ ಮುನ್ನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ರಾಜಕೀಯ ಭಿನ್ನಾಭಿಪ್ರಾಯದ ನಡುವೆಯೇ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಶೇ 45ರಷ್ಟು ಮಳೆ ಕೊರತೆ ಉಂಟಾಗಿರುವುದರಿಂದ ಅತೀವ ಬರಕ್ಕೆ ತುತ್ತಾಗಿದ್ದು, ಕೇಂದ್ರದಿಂದ ನೆರವು ನೀಡುವಂತೆ ಮನವಿ ಮಾಡಿದ್ದರು.

156 ತಾಲ್ಲೂಕುಗಳು ಬರಪೀಡಿತ
ರಾಜ್ಯದಲ್ಲಿನ 30 ಜಿಲ್ಲೆಗಳ 156 ತಾಲ್ಲೂಕುಗಳು ಬರಪೀಡಿತ ಮತ್ತು 46 ತಾಲ್ಲೂಕುಗಳು ಭಾಗಶಃ ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಈ ಬಾರಿ ಬರದಿಂದಾಗಿ ಸುಮಾರು 20.40 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಹಾನಿಗೊಳಗಾಗಿದೆ. ರಾಜ್ಯ ಸರ್ಕಾರದ ವರದಿ ಪ್ರಕಾರ 19.46 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬೆಳೆ ನಷ್ಟ ಉಂಟಾಗಿದೆ.

2,064 ಕೋಟಿ ರೂ. ನೆರವಿಗೆ ಕೋರಿಕೆ
ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದ ರಾಜ್ಯ ಸರ್ಕಾರ, ರಬಿ ಅವಧಿಯಲ್ಲಿ ಬರದಿಂದಾಗಿ ಭಾರಿ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ಒದಗಿಸಲು 2,064 ಕೋಟಿ ರೂಪಾಯಿ ಹಣಕಾಸು ನೆರವು ಒದಗಿಸುವಂತೆ ಕೋರಿತ್ತು.












Click it and Unblock the Notifications