ರಾಜ್ಯದಲ್ಲಿ ಅಕ್ಕಿ ರೇಟು ಸೀದು ಹೋಗುತ್ತಿದೆ!
ಬೆಂಗಳೂರು, ಮೇ 14- ಕಳೆದೊಂದು ವಾರದಲ್ಲಿ ಅಕ್ಕಿ ಬೆಲೆ ರಾಜ್ಯದಲ್ಲಿ ಕೆಜಿಗೆ 10 ರೂಪಾಯಿಯಷ್ಟು ದಿಢೀರನೆ ಹೆಚ್ಚಾಗಿದೆ. ಅಕ್ಕಿ ರೇಟು ಕೇಳಿದರೆ ಜನಸಾಮಾನ್ಯರು ಹೊಟ್ಟೆಗೆ ಏನು ತಿನ್ನಬೇಕೋ ತಿಳಿಯದಾಗಿದೆ. ಸಿದ್ದರಾಮಯ್ಯನವರೇನೋ ತಾವು ಅಧಿಕಾರ ವಹಿಸಿಕೊಂಡ ಮೊದಲಾ ದಿನದಿಂದ ಅನ್ನ ಭಾಗ್ಯ ಕಲ್ಪಿಸಿ ಒಂದಷ್ಟು ಜನ ಭಾಗ್ಯವಂತರಾಗಿದ್ದಾರೆ. ಆದರೆ ಬೇರೆಯವರ ಪಾಡೇನು?
ಭತ್ತ ಹೆಚ್ಚಾಗಿ ಬೆಳೆಯುವ ರಾಜ್ಯದ ಅನೇಕ ಭಾಗಗಳಲ್ಲಿ ಅಕಾಲಿಕ ಮಳೆ ಸುರಿದು ಬೆಳೆ ಹಾನಿಯಾಗಿದೆ. ಇದರಿಂದ ಇಳುವರಿ ಕುಸಿಯಲಿದೆ ಎಂಬ ಆತಂಕ ಮನೆ ಮಾಡಿದೆ. ಇದರಿಂದ ಅಕ್ಕಿ ಬೆಲೆ ಹೆಚ್ಚಾಗಿದೆ ಎಂಬುದು ಒಂದು ಸಕಾರಣವಾದರೆ ಮತ್ತೊಂದು ಸರಕಾರದ ಮಹತ್ವಾಕಾಂಕ್ಷಿ ಅನ್ನ ಭಾಗ್ಯ ಯೋಜನೆಗೆ ಮತ್ತು ಪಡಿತರ ವಿತರಣೆಗೆ ಅಗತ್ಯವಿರುವ ಅಕ್ಕಿಯನ್ನು ಗಿರಣಿ ಮಾಲೀಕರಿಂದ ಲೆವಿ ರೂಪದಲ್ಲಿ ಸರಕಾರ ಅಕ್ಕಿ ಸಂಗ್ರಹಿಸುತ್ತಿದೆ. ಮಿಲ್ ಮಾಲೀಕರು ಆ ಹೊರೆಯನ್ನು ನೇರವಾಗಿ ಮುಕ್ತ ಮಾರುಕಟ್ಟೆಯಲ್ಲಿ ಗ್ರಾಹಕರ ಮೇಲೆ ಹೊರಿಸಿದ್ದಾರೆ. ಹಾಗಾಗಿ ಬೆಲೆ ಹೆಚ್ಚುತ್ತಿದೆ ಎಂಬ ಮಾತುಗಳೂ ಕೇಳಿಬಂದಿವೆ. (ಅನ್ನ ಭಾಗ್ಯ ಫಲಾನುಭವ: ಗಗನಕ್ಕೆ ಏರಲಿದೆ ಅಕ್ಕಿ ಬೆಲೆ)
ಆದರೆ ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಅಕ್ಕಿ ಬೆಲೆ 70-80 ರೂಪಾಯಿಗೆ ತಲುಪುವುದರಲ್ಲಿ ಅನುಮಾನವಿಲ್ಲವೆನ್ನುತ್ತಾರೆ ಯಶವಂತಪುರದ ಅಕ್ಕಿ ಮಂಡಿಯವರು. ಕಳೆದ ತಿಂಗಳು ಕ್ವಿಂಟಾಲಿಗೆ 3,800 ರೂ. ಇದ್ದ ಗಂಗಾವತಿ ಸೋನಾ ಈಗ 4,000 ರೂಗೆ ತಲುಪಿದೆ. ಡೈಮಂಡ್ ಸೋನಾ ಸೇರಿದಂತೆ ನಾನಾ ತಳಿಯ ಸೋನಾ ಅಕ್ಕಿಯ ಬೆಲೆಗಳು ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 3-4 ರೂ ಹೆಚ್ಚಾಗಿವೆ. (ಸಿಎಂ ಸಿದ್ದು ಅಕ್ಕಿ ಯೋಜನೆ ಚಿತ್ರಾನ್ನ; ಹಾಲೂ ಹುಳಿ!)
ಅಕ್ಕಿಯಲ್ಲಿ ಆಲಿಕಲ್ಲು:

ರಾಜ್ಯಕ್ಕೆ ಹೆಚ್ಚಾಗಿ ಅಕ್ಕಿ ಪೂರೈಕೆಯಾಗುವುದು ಕೊಪ್ಪಳ, ರಾಯಚೂರು, ದಾವಣಗೆರೆ ಜಿಲ್ಲೆಗಳಿಂದ. ಆದರೆ ಈ ಜಿಲ್ಲೆಗಳಲ್ಲಿ ಇತ್ತೀಚೆಗೆ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ಕೊಪ್ಪಳ ಮತ್ತು ರಾಯಚೂರು ಭಾಗದಲ್ಲಿ ಬೇಸಿಗೆ ಭತ್ತ ಶೇ. 40ಕ್ಕೂ ಹೆಚ್ಚು ಪ್ರಮಾಣದಲ್ಲಿ ಹಾನಿಗೀಡಾಗಿದೆ. ಮಳೆಯಲ್ಲಿ ತೋಯ್ದ ಭತ್ತದ ಗುಣಮಟ್ಟ ಹಾಳಾಗಿರುತ್ತದೆ. ಇಂತಹ ಭತ್ತವನ್ನು ಗೋದಾಮಿನಲ್ಲಿ ಸಂಗ್ರಹಿಸಿಡಲು ಬರುವುದಿಲ್ಲ ಹಾಗಾಗಿ ಈ ಭಾಗಗಳಲ್ಲಿ ಇಳುವರಿ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಇನ್ನು ಈಗ ಮದುವೆ, ಗೃಹಪ್ರವೇಶ ಮತ್ತಿತರ ಶುಭಕಾರ್ಯಗಳ ಸಮಯ. ಹಾಗಾಗಿ ಗುಣಮಟ್ಟದ ಅಕ್ಕಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಆದರೆ ಸರಬರಾಜು ಇಲ್ಲವಾಗಿದೆ. ಈ ಸಮಸ್ಯೆ/ ಸಂಕಷ್ಟಗಳ ಸಮ್ಮುಖದಲ್ಲಿ ಅಕ್ಕಿ ಬೆಲೆ ಸೀದು ಹೋಗುತ್ತಿದೆ!












Click it and Unblock the Notifications