ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ಬಿದ್ದಿದ್ದು ಕೆಜಿಗಟ್ಟಲೆ ತೂಕದ ಆಲಿಕಲ್ಲು
ಚಿಕ್ಕಬಳ್ಳಾಪುರದಲ್ಲಿ ಮಂಗಳವಾರ ಭರ್ಜರಿ ಮಳೆಯಾಗಿದೆ. ಅಗಲಗುರ್ಕಿಯಲ್ಲಿ ಕೆಜಿಗಟ್ಟಲೆ ತೂಗುವ ಆಲಿಕಲ್ಲು ಬಿದ್ದಿದ್ದು, ವಿವಿಧೆಡೆ ಬೆಳೆ ಹಾನಿಯಾಗಿ, ರೈತರು ಆರ್ಥಿಕ ನಷ್ಟ ಅನುಭವಿಸಿದ್ದಾರೆ
ಚಿಕ್ಕಬಳ್ಳಾಪುರ, ಮೇ 10: ಚಿಕ್ಕಬಳ್ಳಾಪುರ ನಗರವೂ ಸೇರಿದ ಹಾಗೆ ಸುತ್ತಮುತ್ತ ಮಂಗಳವಾರ ಸಕತ್ ಮಳೆಯಾಗಿದೆ. ಬಿರುಗಾಳಿ ಸಹಿತ ಮಳೆಗೆ ನಂದಿ, ಅಗಲಗುರ್ಕಿ ಸೇರಿದಂತೆ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ದ್ರಾಕ್ಷಿ, ದಪ್ಪ ಮೆಣಸಿನಕಾಯಿ ಮತ್ತಿತರ ಬೆಳೆಗಳು ಹಾನಿಯಾಗಿವೆ.
ಹಲವೆಡೆ ಮರಗಳು ಬಿದ್ದಿವೆ. ಅಗಲಗುರ್ಕಿ ಸುತ್ತ ದೊಡ್ಡ ಗಾತ್ರದ ಆಲಿಕಲ್ಲು ಬಿದ್ದು, ಬೆಳೆಗಳು- ಪಾಲಿಹೌಸ್ ಗಳಿಗೂ ಹಾನಿಯಾಗಿವೆ. ಈ ಮಧ್ಯೆ ಮಳೆ ಕಾರಣದಿಂದ ಚಿಕ್ಕಬಳ್ಳಾಪುರ ನಗರದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಯಿತು. ತಗ್ಗಿನ ಪ್ರದೇಶದಲ್ಲಿ ನೀರು ತುಂಬಿಕೊಂಡಿತು. ವಾಹನ ಸವಾರರು ಪಡಿಪಾಟಲು ಪಟ್ಟರು.[ಮೈಸೂರು: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಸಿಡಿಲಿಗೆ ಬಲಿ]
ಅಗಲಗುರ್ಕಿ ಗ್ರಾಮದ ನಾರಾಯಣಸ್ವಾಮಿ ಎಂಬುವರ ತೋಟದಲ್ಲಿ ಭಾರೀ ಗಾತ್ರದ ಅಲಿಕಲ್ಲುಗಳು ಬಿದ್ದಿವೆ. ಸರಿ ಸುಮಾರು 5 ರಿಂದ 10 ಕೆಜಿ ತೂಕದ ಆಲಿಕಲ್ಲುಗಳನ್ನ ಕಂಡ ಜನ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಭಾರೀ ಗುಡುಗು-ಮಿಂಚು ಸಹಿತ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಬಿದ್ದಿದ್ದು, ಈ ವೇಳೆ ಭಾರೀ ಗಾತ್ರದ ಆಲಿಕಲ್ಲುಗಳು ಕಂಡುಬಂದಿವೆ.
ಬರಗಾಲ ಹಾಗೂ ಚಿಕ್ಕಬಳ್ಳಾಪುರ ಎಂಬುದು ಜೋಡಿಪದಗಳಂತೆ ಆಗಿಹೋಗಿದೆ. ಆದರೆ ಈಗ ಅಕಾಲದಲ್ಲಿ ಮಳೆ ಬಿದ್ದು, ರೈತರು ಶ್ರಮಪಟ್ಟು ಬೆಳೆದ ಬೆಳೆ ಕೈಗೆ ಸಿಗದಂತಾಗಿದೆ.