ಅನುಶ್ರೀ ಡ್ರಗ್ಸ್ ಕೇಸ್: ಯಾರದು ಮಾಜಿ ಸಿಎಂ? ಅದ್ಯಾರೇ ಇರಲಿ, ಕುಮಾರಣ್ಣ ನಿಮಗ್ಯಾಕೆ ಸಿಟ್ಟು?
ರಾಜ್ಯದ ಪ್ರಮುಖ ರಾಜಕೀಯ ಮುಖಂಡರನ್ನು, ಅದರಲ್ಲೂ ಪ್ರಮುಖವಾಗಿ ಸ್ಯಾಂಡಲ್ ವುಡ್ ಅನ್ನು ಬೆಚ್ಚಿಬೀಳಿಸುವಂತೆ ಮಾಡಿದ ಸೆಂಟ್ರಲ್ ಕ್ರೈಂ ಬ್ರಾಂಚ್ (ಸಿಸಿಬಿ) ಪೊಲೀಸರ ವಿಚಾರಣೆ, ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆಯಾ ಅಥವಾ ಉದ್ದೇಶಪೂರ್ವಕವಾಗಿ ಹಳ್ಳ ಹಿಡಿಸಲಾಗುತ್ತಿದೆಯಾ?
ಯಾಕೆಂದರೆ, ತನಿಖೆ ಆರಂಭ ಪಡೆದುಕೊಂಡ ರೀತಿ ನೋಡಿದರೆ ಅದ್ಯಾವೆಲ್ಲಾ ಪುಣ್ಯಾತ್ಮರ ಹೆಸರು ಹೊರಗೆ ಬರುತ್ತೋ ಎಂದು ಜನ ಸಾಮಾಜಿಕ ತಾಣದಲ್ಲಿ ಚರ್ಚೆ ಮಾಡಿದ್ದೇ ಮಾಡಿದ್ದು. ಆದರೆ, ನಟಿಯರಾದ ರಾಗಿಣಿ ಮತ್ತು ಸಂಜನಾ ಅವರ ಬಂಧನವಾದ ನಂತರ, ತನಿಖೆ ಕಾಟಾಚಾರಕ್ಕೆ ಸಾಗುತ್ತಿದೆಯಾ ಎಂದು ಜನಸಾಮಾನ್ಯರಿಗೆ ಸಂಶಯ ಬರಲು ಕಾರಣ ಇಲ್ಲದಿಲ್ಲ.
ವಿಚಾರಣೆಗೆ ಹಲವು ಸೆಲೆಬ್ರಿಟಿಗಳು, ಎಲ್ಲೋ ಒಂದೆರಡು ರಾಜಕೀಯ ಮುಖಂಡರ ಸುಪುತ್ರರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದನ್ನು ಬಿಟ್ಟರೆ, ಮೊನ್ನೆಮೊನ್ನೆ ನಿರೂಪಕಿ ಅನುಶ್ರೀ, ಮಂಗಳೂರು ಸಿಸಿಬಿ ಪೊಲೀಸರ ಮುಂದೆ ಹಾಜರಾಗಿದ್ದಿದ್ದೇ ಪ್ರಮುಖ ಬೆಳವಣಿಗೆ ಎಂದು ಹೇಳಬಹುದು.
ಆದರೆ, ಈ ಅನುಶ್ರೀಯ ಮೂರ್ನಾಲ್ಕು ಗಂಟೆಯ ವಿಚಾರಣೆಗೆ, ಮಾಧ್ಯಮ ಮತ್ತು ಸಾಮಾಜಿಕ ತಾಣದಲ್ಲಿ ಸಿಕ್ಕ ಮೈಲೇಜ್, ಡ್ರಗ್ಸ್ ವಿಚಾರಣೆಯ ಮೇಲೆ ಪ್ರಭಾವಿಗಳ ಒತ್ತಡ ಇದೆ ಎನ್ನುವ ಸಾರ್ವಜನಿಕ ವಲಯದಲ್ಲಿರುವ ನಂಬಿಕೆಗೆ ಇನ್ನಷ್ಟು ಇಂಬು ನೀಡುವಂತಿದೆ. ಕುಮಾರಣ್ಣ, ಸುಮ್ಮನೆ ಸಮಸ್ಯೆಯನ್ನು ಮೈಗೆಳೆದುಕೊಂಡರಾ?

ಮಂಗಳೂರು ಸಿಸಿಬಿ ಅಧಿಕಾರಿಗಳು
ಅನುಶ್ರೀಯನ್ನು ಮಂಗಳೂರು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ ವೇಳೆ, ಅವರ ಔಟ್ ಗೋಯಿಂಗ್ ಫೋನ್ ಲಿಸ್ಟ್ ನಲ್ಲಿ ಇದೆ ಎನ್ನಲಾಗುತ್ತಿರುವ ಪ್ರಭಾವೀ ರಾಜಕಾರಣಿಗಳ ಹೆಸರು ಸಾಕಷ್ಟು ಕುತೂಹಲಕ್ಕೀಡು ಮಾಡಿದೆ. ಈ ಕೇಸ್, ತನಿಖಾ ಹಂತದಲ್ಲಿರುವಾಗಲೇ, ಫೋನ್ ಲಿಸ್ಟ್ ಮಾಹಿತಿ ಮಾಧ್ಯಮಕ್ಕೆ ಸೋರಿಕೆಯಾಗಿದ್ದು ಹೇಗೆ ಎನ್ನುವುದು ಇಲ್ಲಿ ಸಹಜವಾಗಿ ಕಾಡುವ ಪ್ರಶ್ನೆ.

ಸಮಸ್ಯೆಯನ್ನು ತನ್ನ ಬುಡಕ್ಕೆ ಎಳೆದುಕೊಂಡ ಕುಮಾರಣ್ಣ
ಫೋನ್ ಲಿಸ್ಟ್ ನಲ್ಲಿ ಇದೆ ಎಂದು ಹೇಳಲಾಗುತ್ತಿರುವ ಪ್ರಭಾವಿಗಳು ಎಂದರೆ, ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಮಾಜಿ ಮುಖ್ಯಮಂತ್ರಿಗಳೊಬ್ಬರ ಮಗ ಮತ್ತು ರಾಷ್ಟ್ರೀಯ ಪಕ್ಷದ ಪ್ರಮುಖ ನಾಯಕರೊಬ್ಬರು. ಜೀವಂತವಾಗಿರುವ ರಾಜ್ಯದ ಮಾಜಿ ಮುಖ್ಯಂತ್ರಿಗಳ ಹೆಸರು ಹಲವರು ಇರುವಾಗ, ಎಚ್.ಡಿ.ಕುಮಾರಸ್ವಾಮಿ, ಖುದ್ದು ತಾವೇ ಮಾಧ್ಯಮಗಳ ವಿರುದ್ದ ಆಕ್ರೋಶ ಹೊರಹಾಕುವ ಮೂಲಕ, ಸಮಸ್ಯೆಯನ್ನು ತನ್ನ ಬುಡಕ್ಕೆ ಎಳೆದುಕೊಂಡಿದ್ದಾರೆ.

ಬೀದೀಲಿ ಹೋಗುತ್ತಿದ್ದ ವಿಷಯವನ್ನು ತನ್ನಡೆಗೆ ಎಳೆದುಕೊಂಡ ಕುಮಾರಣ್ಣ
ಫೋನ್ ಲಿಸ್ಟ್ ನಲ್ಲಿ ಪ್ರಭಾವೀಗಳ ಹೆಸರು ಇತ್ತು ಎನ್ನುವುದು ಯಾವುದೇ ಅಧಿಕೃತ ಮೂಲದ ವರದಿಯಲ್ಲ ಎನ್ನುವುದು ಗೊತ್ತಿದ್ದರೂ, ಕುಮಾರಸ್ವಾಮಿ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡದೇ ಇರಬಹುದಾಗಿತ್ತು. ಆದರೆ, ಕುಮಾರಣ್ಣ ಇದಕ್ಕೆ ಸ್ಪಷ್ಟನೆ ಕೊಡಲು ಹೋಗಿ, ಸುಮ್ಮನೇ ಬೀದೀಲಿ ಹೋಗುತ್ತಿದ್ದ ವಿಷಯವನ್ನು ಅನಾವಶ್ಯಕವಾಗಿ ತನ್ನಡೆಗೆ ಎಳೆದುಕೊಂಡರಾ ಎನ್ನುವ ಪ್ರಶ್ನೆಗೆ ಕುಮಾರಸ್ವಾಮಿ ಮಾತ್ರ ಉತ್ತರಿಸಬಲ್ಲರು.

ಬಿಎಸ್ವೈ ಸರಕಾರ
ಡ್ರಗ್ಸ್ ಹಗರಣ ಅಷ್ಟು ಸುಲಭವಾಗಿ ಮಟ್ಟಹಾಕಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ, ಬಿಎಸ್ವೈ ಸರಕಾರ ಇದನ್ನು ಕೈಗೆತ್ತಿಕೊಂಡು, ಅಪರಾಧಿಗಳು ಯಾರೇ ಇರಲಿ ಮಟ್ಟ ಹಾಕುತ್ತೇವೆ ಎನ್ನುವ ಹೇಳಿಕೆ, ಕುರುಕ್ಷೇತ್ರದಲ್ಲಿ ಉತ್ತರಕುಮಾರನ ಮಾತಿನಂತೆ ಎನ್ನುವುದು ಗೊತ್ತಾಗದೇ ಇರಲು ಜನರೇನು ದಡ್ಡರಾ ಎನ್ನುವ ಪ್ರಶ್ನೆ ಎದುರಾದರೆ, ಸರಕಾರದ ಯಾವ ಸಚಿವರೂ/ಅಧಿಕಾರಿಗಳೂ ಬೇಸರಿಸಿಕೊಳ್ಲಬಾರದು.

ಅದ್ಯಾರೇ ಇರಲಿ, ಕುಮಾರಣ್ಣ ನಿಮಗ್ಯಾಕೆ ಸಿಟ್ಟು?
ಮಾಧ್ಯಮದ ವರದಿಯನ್ನು ಉಲ್ಲೇಖಿಸಿ , ಮಾಜಿ ಮುಖ್ಯಮಂತ್ರಿಗಳಲ್ಲಿ ಈಗ ಜೀವಂತವಾಗಿದ್ದವರಲ್ಲಿ ಎಸ್.ಎಂ.ಕೃಷ್ಣ, ವೀರಪ್ಪ ಮೊಯ್ಲಿ, ಜಗದೀಶ್ ಶೆಟ್ಟರ್, ಸದಾನಂದ ಗೌಡ, ಸಿದ್ದರಾಮಯ್ಯ ಜೊತೆಗೆ ನಾನೂ ಇದ್ದೇನೆ. ಆದರೆ, ಎರಡು ಬಾರಿ ಸಿಎಂ ಆಗಿದ್ದವರು ಎಂದರೆ ಯಾರು? ಎಂದು ಕುಮಾರಣ್ಣ ಹೇಳುವ ಮೂಲಕ ಸಮಸ್ಯೆಯನ್ನು ಇನ್ನಷ್ಟು ಸಾರ್ವಜನಿಕ ಮಾಡಿದ್ದಾರೆ. ಒಟ್ಟಾರೆಯಾಗಿ, ಇದು ಕುಮಾರಸ್ವಾಮಿಯವರಿಗೆ ಬೇಡವಾದ ವಿಚಾರವಾಗಿತ್ತು. ಯಾವುದೇ ವಿಚಾರವನ್ನು ತೂಕವಾಗಿ ಮಾತನಾಡುವ ನೀವು, ಯಾಕೆ ಈ ಸಮಸ್ಯೆಯನ್ನು ದೊಡ್ದದು ಮಾಡಿಕೊಂಡರಿ ಮಿಸ್ಟರ್ ಕುಮಾರಣ್ಣ?












Click it and Unblock the Notifications