ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಸರ್ಕಾರ ಹೊಸ ಪ್ಲಾನ್ ಏನು? : ಈಶ್ವರ್ ಖಂಡ್ರೆ ಹೇಳಿದಿಷ್ಟು!
ಬೆಂಗಳೂರು, ಸೆಪ್ಟೆಂಬರ್ 08: ಡ್ರೋನ್ ಗಳು ಎಲ್ಲ ಕ್ಷೇತ್ರದಲ್ಲೂ ಕ್ರಾಂತಿಕಾರಿಯಾಗಿ ಪರಿಣಮಿಸುತ್ತಿದ್ದು, ಅರಣ್ಯ ಕಣ್ಗಾವಲಿಗೆ ಮತ್ತು ಮಾನವ-ವನ್ಯಜೀವಿ ಸಂಘರ್ಷ ನಿಗ್ರಹಕ್ಕೂ ಡ್ರೋನ್ ಸಹಕಾರಿ ಆಗಲಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.
ಈ ಕುರಿತು ಬೆಂಗಳೂರಿನಲ್ಲಿ ನಡೆದ ಸುಸ್ಥಿರತೆಗಾಗಿ ಡ್ರೋನ್ಸ್ ಶೃಂಗಸಭೆ 2023 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬದಲಾವಣೆ ಜಗದ ನಿಯಮ. ನಾವು ಆಧುನಿಕ ಯುಗದಲ್ಲಿ ಬದಲಾವಣೆಯ ಹಾದಿಯಲ್ಲಿ ನಡೆದಿದ್ದು, ಇಂದು ತಂತ್ರಜ್ಞಾನ ನಮ್ಮ ಬದುಕನ್ನು ಸುಗಮಗೊಳಿಸುತ್ತಿದೆ ಎಂದರು.

ಆಧುನಿಕತೆಯ, ತಂತ್ರಜ್ಞಾನದ ಹೆಸರಲ್ಲಿ ನಾವು ಪ್ರಕೃತಿ, ಪರಿಸರ ಮರೆಯಬಾರದು. ಹೀಗಾಗಿಯೇ ಪ್ರಕೃತಿಯೂ ಉಳಿಯಬೇಕು, ಜೀವನವೂ ಇರಬೇಕು, ಜೀವನೋಪಾಯವೂ ಇರಬೇಕು ಅದಕ್ಕಾಗಿಯೇ ಇಂದು ಜಗತ್ತು ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಿದೆ. ನಮ್ಮ ನಿರಂತರ ಪ್ರಗತಿ ಮತ್ತು ಅಸ್ತಿತ್ವಕ್ಕೆ ಅನೇಕ ಸವಾಲುಗಳಿವೆ. ಇಂದು ಜಗತ್ತು "ಹವಾಮಾನ ಬದಲಾವಣೆ", ಜಾಗತಿಕ ತಾಪಮಾನ ಏರಿಕೆಯಂತಹ ಸವಾಲು ಎದುರಿಸುತ್ತಿದೆ. ಇದಕ್ಕೆ ಪರಿಹಾರ ಹುಡುಕುತ್ತಿದ್ದೇವೆ. ಈ ಪ್ರಯತ್ನದಲ್ಲಿ ಡ್ರೋನ್ ತಂತ್ರಜ್ಞಾನದ ಬಳಕೆ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಕಾಡಿದ್ದರೆ ನಾಡು. ಹೀಗಾಗಿ ಅರಣ್ಯ ಸಂರಕ್ಷಣೆಯಲ್ಲಿ ಡ್ರೋನ್ ಗಳು ಮಹತ್ವದ ಪಾತ್ರ ವಹಿಸುತ್ತವೆ. ಸಂರಕ್ಷಿತ ಕಾನನದಲ್ಲಿನ ಕಾರ್ಯಚಟುವಟಿಕೆಯ ಮೇಲೆ ನಿಗಾ ಇಡಲು ಡ್ರೋನ್ ತಂತ್ರಜ್ಞಾನ ನೆರವಾಗುತ್ತದೆ ಎಂದು ಹೇಳಿದರು.
ಅರಣ್ಯ ಕಾವಲು ಪಡೆಯ ಸಿಬ್ಬಂದಿ, ಅರಣ್ಯದ ಒಳಗೆ ಪ್ರವೇಶಿಸಿ ಕಾವಲು ಕಾಯಲು ಕಷ್ಟವಾಗುತ್ತದೆ. ಜನ ಸಂಚಾರದಿಂದ ವನ್ಯಜೀವಿಗಳ ಸಂಚಾರಕ್ಕೂ ಅಡ್ಡಿಯಾಗುತ್ತದೆ. ಆದರೆ ಕಳ್ಳಬೇಟೆ ನಿಗ್ರಹಿಸಲು, ಕಾಡಿನಂಚಿನಲ್ಲಿ ನಾಡಿಗೆ ಬರುವ ವನ್ಯ ಜೀವಿಗಳ ಪತ್ತೆಗೆ, ಮಾನವ-ಕಾಡುಪ್ರಾಣಿಗಳ ಸಂಘರ್ಷ ನಿಯಂತ್ರಿಸಲು ಹಾಗೂ ಅರಣ್ಯ ಸಂರಕ್ಷಣೆಯ ಕಣ್ಗಾವಲಿಗೆ ಡ್ರೋನ್ ಗಳು ತುಂಬಾ ಪರಿಣಾಮಕಾರಿ ಸಾಧನವಾಗಲಿವೆ ಎಂದು ಹೇಳಿದರು.

ಸಕಾಲಿಕ ಮಾಹಿತಿ ಪಡೆಯಲು ಮತ್ತು ಕಾಡಿನಂಚಿನ ಜನರ ಜೀವವನ್ನು ಉಳಿಸಲು ಈ ತಂತ್ರಜ್ಞಾನ ನೆರವಾಗುತ್ತದೆ. ಇಂದು ನಾವು ಡ್ರೋನ್ ತಂತ್ರಜ್ಞಾನವನ್ನು ಸೀಮಿತ ಪ್ರಮಾಣದಲ್ಲಿ ಬಳಸುತ್ತಿದ್ದೇವೆ. ಆದರೆ, ಈ ತಂತ್ರಜ್ಞಾನದ ವಿಸ್ತೃತ ಬಳಕೆ ಮತ್ತು ವಿಶ್ವದರ್ಜೆಯ ವ್ಯವಸ್ಥೆಯ ಸ್ಥಾಪನೆ ಇಂದಿನ ಅಗತ್ಯವಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ರಾಜ್ಯದಲ್ಲಿ ಅರಣ್ಯ ನಿರ್ವಹಣೆಯ ವಿವಿಧ ಹಂತದಲ್ಲಿ ಡ್ರೋನ್ ಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ವಿಪುಲ ಅವಕಾಶವಿದೆ. ಆಧುನಿಕ ತಂತ್ರಜ್ಞಾನ ಬಳಸಲು ನುರಿತ ಕಾರ್ಯಪಡೆಯನ್ನು ಸಜ್ಜುಗೊಳಿಸಲಾಗುವುದು ಎಂದು ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಹೇಳಿದರು.












Click it and Unblock the Notifications