ಯಾರೇ ಒಪ್ಪಿದರು ಸಹ ಸುಧಾಕರ್ ಕಾಂಗ್ರೆಸ್ಗೆ ಬರಲು ಬಿಡಲ್ಲ : ಎನ್.ಎಚ್.ಶಿವಶಂಕರರೆಡ್ಡಿ
ಚಿಕ್ಕಬಳ್ಳಾಪುರ, ಆಗಸ್ಟ್ 20: ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಯಾರೂ ಏನೇ ಒಪ್ಪಿದರೂ ಸಹ ಸುಧಾಕರ್ ಕಾಂಗ್ರೆಸ್ ಬರುವುದಕ್ಕೆ ಬಿಡಲ್ಲ ಎಂದು ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿ, ಪಕ್ಷದಿಂದ ಎಲ್ಲವನ್ನೂ ಪಡೆದು ದ್ರೋಹ ಮಾಡಿ ಹೋದವರನ್ನು ಕಾಂಗ್ರೆಸ್ಗೆ ಸೇರಿಸುವುದಿಲ್ಲ. ಪಕ್ಷ ಬಿಟ್ಟು ಎಲ್ಲವನ್ನು ಅನುಭವಿಸಿ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಯಾರೂ ಏನೇ ಒಪ್ಪಿದರೂ ನಾನು ಇಂತಹ ಅವಕಾಶವಾದಿಯನ್ನು ಸೇರಿಸಿಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದರು.

ಇನ್ನೂ ಮಾಜಿ ಸಚಿವ ಡಾ ಕೆ ಸುಧಾಕರ್ ವಿರುದ್ದ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಎಲ್ಲವನ್ನು ಅನುಭವಿಸಿ ಹಾಳು ಮಾಡಿದ್ದಾರೆ. ಪಕ್ಷವನ್ನು ಹಾಳು ಮಾಡಿ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಕಾಲದಲ್ಲಿ ಎಲ್ಲ ಅನುಕೂಲವನ್ನು ಪಡೆದು ಪಕ್ಷ ದ್ರೋಹ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು. ಇನ್ನೂ ಕಾಂಗ್ರೆಸ್ ನಿಂದ ಬಿಜೆಪಿ ಪಕ್ಷಕ್ಕೆ ಹೋಗಿ
ಅಲ್ಲಿ ಬ್ಲಾಕ್ಮೇಲ್ ಮಾಡಿ ಏನೇನೋ ಪದವಿ ಪಡೆದು ಅನುಭವಿಸಿದ್ದಾರೆ. ಕೋಟ್ಯಂತರ ರೂ. ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಸುಧಾಕರ್ ಮಾಡಿರುವ ಹಗರಣದ ಕುರಿತು ಕಾಂಗ್ರೆಸ್ ಸರಕಾರವೇ ತನಿಖೆ ನಡೆಸುತ್ತಿದೆ. ಇಂತಹ ಅವಕಾಶವಾದಿಯನ್ನು ಯಾರೇ ಒಪ್ಪಿದರೂ ನಾನಂತೂ ಸೇರಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಕುಟುಕಿದರು.
2024 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಟಿಕೆಟ್ ಕೊಟ್ಟರೆ ನಾನು ಕೂಡಾ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಸಿದ್ಧನಿದ್ದೇನೆ. ಈಗಾಗಲೇ ಕ್ಷೇತ್ರದಲ್ಲಿ ವೀರಪ್ಪ ಮೊಯ್ಲಿ, ರಕ್ಷಾ ರಾಮಯ್ಯ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ನಾನು ಕೂಡಾ ಪ್ರಯತ್ನ ಮಾಡುತ್ತೇನೆ. ಹೈಕಮಾಂಡ್ ನವರು ಬೇರೆ ಬೇರೆ ವಿಚಾರಗಳ ಹಿನ್ನೆಲೆ ಅವಕಾಶ ಕೊಟ್ಟರೆ ಸ್ಪರ್ಧೆಗೆ ಸಿದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದರು.












Click it and Unblock the Notifications