ಮಾನಸಿಕ ವೈದ್ಯ ಡಾ.ಅಶೋಕ್ ಪೈ ನಿಧನ
ಸ್ಕಾಟ್ಲೆಂಡ್, ಸೆಪ್ಟೆಂಬರ್ 30: ಕರ್ನಾಟಕ ಮಾನಸಿಕ ಪ್ರಾಧಿಕಾರದ ಅಧ್ಯಕ್ಷ ಡಾ.ಅಶೋಕ್ ಪೈ ಗುರುವಾರ ಮಧ್ಯರಾತ್ರಿ 12ಕ್ಕೆ (ಭಾರತೀಯ ಕಾಲಮಾನ) ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿಚಾರ ಸಂಕಿರಣಕ್ಕಾಗಿ ಪತ್ನಿ ರಜನಿ ಪೈ ಅವರ ಜತೆಗೆ ತೆರಳಿದ್ದರು.
ಹೃದಯಾಘಾತವಾದ ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅವರು ಕಾಡಿನ ಬೆಂಕಿ, ಉಷಾಕಿರಣದಂಥ ಸಿನಿಮಾಗಳನ್ನು ನಿರ್ಮಿಸಿದ್ದರು. ಶಿವಮೊಗ್ಗದಲ್ಲಿ ಅಶೋಕ್ ಪೈ ಅವರ ಮಾನಸ ಆಸ್ಪತ್ರೆ ಇದೆ. ಪೈ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವ ಸಂದಿದೆ.[ಮಂಗಳೂರಲ್ಲಿ ಜಾಗತಿಕ ಕೊಂಕಣಿ ಸಂಘಟನೆಗೆ ಚಾಲನೆ]
ಡಿಸೆಂಬರ್ 30, 1946ರಲ್ಲಿ ಜನಿಸಿದ ಅವರಿಗೆ ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಸಂದಿತ್ತು. ಅವರು ಕೆಲ ಪುಸ್ತಕಗಳನ್ನು ಬರೆದಿದ್ದರು. ಮಾನಸಿಕ ಆರೋಗ್ಯ ಸಮಸ್ಯೆ ಇರುವ ಮಕ್ಕಳಿಗಾಗಿ ಆಶಾಕಿರಣ ಎಂಬ ವಸತಿ ಶಾಲೆ ನಡೆಸುತ್ತಿದ್ದರು. ಮಾನಸಿಕ ಆರೋಗ್ಯ ಸಮಸ್ಯೆ ಇರುವವರಿಗೆ ತೆರೆದಿರುವ ವಸತಿ ಚಿಕಿತ್ಸಾಲಯ 'ಮಾನಸಧಾರಾ'ದ ಅಧ್ಯಕ್ಷರಾಗಿದ್ದರು.
ಡಾ.ಅಶೋಕ್ ಪೈ ಅವರು ಮಾನಸಿಕ ಆರೋಗ್ಯದ ವಿಷಯವನ್ನೇ ಮುಖ್ಯವಾಗಿಟ್ಟುಕೊಂಡು ಹಿಂದಿಯಲ್ಲೂ ಧಾರಾವಾಹಿಯೊಂದನ್ನು ನಿರ್ಮಿಸಿದ್ದರು. ಮಾನಸಿಕ ಆರೋಗ್ಯದ ಬಗ್ಗೆ ಇರುವ ಮೂಢನಂಬಿಕೆಗಳನ್ನು ಹೋಗಲಾಡಿಸುವುದಕ್ಕೆ ಹಲವಾರು ಪ್ರದರ್ಶನವನ್ನು ನೀಡಿದ್ದರು. ಮಾನಸಿಕ ಆರೋಗ್ಯದಲ್ಲಿ ಸ್ನಾತಕೋತ್ತರ ಶಿಕ್ಷಣ ಕೇಂದ್ರವನ್ನೂ ಸ್ಥಾಪಿಸಿದ್ದರು.