ಒಳಗೊಳಗೆ ಕುದಿಯುತ್ತಿರುವ ಯಡಿಯೂರಪ್ಪ ಅವರ ರೋಷಾಗ್ನಿ ಯಾವಾಗ ಸ್ಪೋಟಗೊಳ್ಳುತ್ತದೆಯೋ : ಸಿದ್ದರಾಮಯ್ಯ
ಯಡಿಯೂರಪ್ಪ ಅವರನ್ನ ಕಣ್ಣೀರು ಹಾಕಿಸಿ ಅಧಿಕಾರದಿಂದ ಕೆಳಗಿಳಿಸಿದರು ಎಂದು ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ದ ಟಾಕ್ ವಾರ್ ಶುರು ಮಾಡಿದ್ದಾರೆ.
ಬೆಳಗಾವಿ, ಮಾರ್ಚ್1: ರಾಜ್ಯ ಪ್ರಧಾನಿ ನರೇಂದ್ರ ಮೋದಿ ಭೇಟಿಯ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವನ್ನ ಹಾಡಿಹೊಗಳಿರುವ ವಿಚಾರ ರಾಜ್ಯರಾಜಕೀಯದಲ್ಲಿ ಹೆಚ್ಚು ಚರ್ಚೆಯಾಗುತ್ತಿದ್ದು, ಯಡಿಯೂರಪ್ಪ ಅವರನ್ನ ಕಣ್ಣೀರು ಹಾಕಿಸಿ ಅಧಿಕಾರದಿಂದ ಕೆಳಗಿಳಿಸಿದರು ಎಂದು ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ದ ಟಾಕ್ ವಾರ್ ಶುರು ಮಾಡಿದ್ದಾರೆ.
ಈ ಕುರಿತು ಬುಧವಾರ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿ, ಒಳಗೊಳಗೆ ಕುದಿಯುತ್ತಿರುವ ಯಡಿಯೂರಪ್ಪ ಅವರ ರೋಷಾಗ್ನಿ ಯಾವಾಗ ಸ್ಪೋಟಗೊಳ್ಳುತ್ತದೆಯೋ ಕಾದು ನೋಡೋಣ ಎಂದು ಹೇಳಿದ್ದಾರೆ.

ಇನ್ನೂ ಈ ವೇಳೆ 7 ನೇ ವೇತನ ಆಯೋಗದ ಕುರಿತು ಮಾತನಾಡಿದ ಅವರು, ಸುಳ್ಳು ಹೇಳಿ ಜನರ ಮೂಗಿಗೆ ತುಪ್ಪು ಸವರುವ ಕೆಲಸ ಬಸವರಾಜ ಬೊಮ್ಮಾಯಿ ಸರಕಾರ ಮಾಡುತ್ತಿದೆ. ನೀತಿ ಸಂಹಿತೆ ಜಾರಿಗೆ ಇನ್ನೂ ಸಮಯಾವಕಾಶ ಇದೆ. ಅದರೊಳಗೆ ಬೊಮ್ಮಾಯಿ ಏಳನೇ ವೇತನ ಜಾರಿಗೆ ತರಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.
ಏಳನೇ ವೇತನ ಮೂರು ತಿಂಗಳ ಹಿಂದೆಯೇ ಜಾರಿಯಾಗಬೇಕಿತ್ತು. ಅನುದಾನ ಇಡದೇ ಬಜೆಟ್ ಮಂಡಿಸಿ ಈಗ ಸಬೂಬು ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಈಗಲೂ ಕಾಲ ಮಿಂಚಿಲ್ಲ ನೀತಿ ಸಂಹಿತೆಗೆ ಇನ್ನೂ ಸಮಯಾವಕಾಶ ಇರುವುದರಿಂದ ತಕ್ಷಣ ಸರಕಾರಿ ನೌಕರರ ಸಂಘಟನೆಯೊಂದಿಗೆ ಚರ್ಚಿಸಿ ಏಳನೇ ವೇತನ ಆಯೋಗ ಜಾರಿಗೊಳಿಸಬೇಕು.
ಸರಕಾರಿ ನೌಕರರು ಮುಷ್ಕರ ಮುಂದುವರೆಸಿದರೆ ಆಡಳಿತ ಯಂತ್ರ ಕುಸಿಯುತ್ತದೆ. ಜನಸಾಮಾನ್ಯರು ಪರದಾಡಬೇಕಾಗುತ್ತದೆ. ಮಧ್ಯಂತರ ವರದಿ ವಿಷಯ ಪ್ರಸ್ತಾಪಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ಅದನ್ನ ಜನರ ಮುಂದಿಡಲಿ ಎಂದು ಒತ್ತಾಯಿಸಿದರು.

ಡಬಲ್ ಎಂಜಿನ್ ಸರಕಾರದಿಂದ ಏನು ಅಭಿವೃದ್ದಿಯಾಗಿಲ್ಲ. ವಿದೇಶದಿಂದ ಕಪ್ಪು ಹಣವೂ ಬರಲಿಲ್ಲ. ವರ್ಷಕ್ಕೆ ಎರಡೂ ಕೋಟಿ ಉದ್ಯೋಗವೂ ಸಿಗಲಿಲ್ಲ ಎಂದು ಬಿಜೆಪಿ ಭರವಸೆಗಳ ವಿರುದ್ಧ ಹರಿಹಾಯ್ದರು.
ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಕಾಂಗ್ರೆಸ್ ಸರಿಯಾಗಿ ನಡೆದುಕೊಳ್ಳಲಿಲ್ಲ ಎಂದು ಮೋದಿ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿ, 'ಯಡಿಯೂರಪ್ಪ ನವರಿಗೆ ಏನಾಗಿತ್ತು. ಪಾಪ ಕಣ್ಣೀರು ಇಟ್ಟರು. ಇವರ ತಟ್ಟೆಯಲ್ಲಿ ನೊಣ ಬಿದಿದ್ದೆ. ಅದನ್ನು ಬಿಟ್ಟು ನಮ್ಮ ಪಕ್ಷದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ. ಜನರ ಸಮಸ್ಯೆ ಬಗೆ ಹರಿಸದ ನರೇಂದ್ರ ಮೋದಿ ಆರೋಗ್ಯ ಸದಾ ಚನ್ನಾಗಿರಲಿ. ಬಿಜೆಪಿಯವರು ಸಭೆ, ಸಮಾವೇಶ, ರ್ಯಾಲಿ ಏನೇ ಮಾಡಿದರೂ ಜನ ನಂಬುವುದಿಲ್ಲ. ಪರ್ಯಾಯ ಆಯ್ಕೆಯತ್ತ ಮುಖ ಮಾಡಿದ್ದಾರೆ ಎಂದುದ ಹೇಳಿದರು.
ಮೋದಿ ಅವರು ಬೆಳಗಾವಿಯಲ್ಲಿ ಬಂದು ರೋಡ್ ಶೋ ಮಾಡಿದ್ರು, ಬೆಳಗಾವಿಗೆ ಅವರು ಏನು ಕೊಟ್ಟಿದ್ದಾರೆ ಹೇಳಲಿ. ಮಹದಾಯಿ, ಕೃಷ್ಣ ಮೇಲ್ದಂಡೆ ಯೋಜನೆ ಬಗ್ಗೆ ಮಾತನಾಡಿದ್ರಾ? ದುಡ್ಡು ಕೊಟ್ಟು ಜನ ಕರೆದುಕೊಂಡು ಬಂದು ರೋಡ್ ಶೋ ಮಾಡಿದ್ರೆ ಬಡವರಿಗೇನು ಉಪಯೋಗ? ಕೊರೊನಾ ಬಂದಾಗ ಬೆಡ್, ಆಕ್ಸಿಜನ್ ಕೊಡಲಿಲ್ಲ ಇದರಿಂದ ಲಕ್ಷಾಂತರ ಜನ ಸತ್ತು ಹೋದರು. ಪ್ರವಾಹ ಬಂದಾಗ, ಕೊರೊನಾ ಬಂದಾಗ ರಾಜ್ಯಕ್ಕೆ ಬರದೆ ಈಗ ಚುನಾವಣೆ ಇದೆ ಎಂದು ವಾರಕ್ಕೊಮ್ಮೆ ಬರುತ್ತಿದ್ದಾರೆ.
ಇಲ್ಲಿನ ಗುತ್ತಿಗೆದಾರ ಸಂತೋಷ್ ಪಾಟೀಲ್ ಸತ್ತಿದ್ದು ಯಾಕೆ? ಕೆಲಸ ಮಾಡಿದ್ದರೂ 40% ಕಮಿಷನ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಈಶ್ವರಪ್ಪ ಅವರು ಬಿಲ್ ಹಣ ಕೊಡಲಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದರು. ರುಪ್ಸಾ ಸಂಸ್ಥೆಯವರು ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದಾರೆ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು 40% ಕಮಿಷನ್ ಆರೋಪ ಮಾಡಿದ್ದಾರೆ, ಒಬ್ಬ ಸ್ವಾಮೀಜಿಗಳು ಮಠಕ್ಕೆ ನೀಡುವ ಅನುದಾನದಲ್ಲೂ ಲಂಚ ಕೇಳುತ್ತಾರೆ ಎಂಬ ಆರೋಪ ಮಾಡಿದ್ರು, ಇಂಥಾ ಕೆಟ್ಟ ಸರ್ಕಾರ ಯಾವತ್ತಾದರೂ ಬಂದಿತ್ತಾ? ಏನಪ್ಪಾ ಬೊಮ್ಮಾಯಿ ಇದಕ್ಕಿಂತ ಸಾಕ್ಷಿ ಬೇಕ?












Click it and Unblock the Notifications