ನಮ್ಮ ಮೆಟ್ರೋ ರೈಲಿಗೆ ಫೀಡರ್ ಸೇವೆಯಾಗಿ ಡಬಲ್ ಡೆಕ್ಕರ್ ಬಸ್, ಕೇಬಲ್ ಕಾರ್: ಇಲ್ಲಿದೆ ಮಾಹಿತಿ
ಬೆಂಗಳೂರು, ಡಿಸೆಂಬರ್ 06: ಬೆಂಗಳೂರಿನ ಟ್ರಾಪಿಕ್ ಮಾಡಲು ಹಲವು ರೀತಿಯಲ್ಲಿ ಸರ್ಕಾರ ಯತ್ನ ನಡೆಸಿದೆ. ಈ ಮೂಲಕ ಸಮೂಹ ಸಾರಿಗೆಯನ್ನು ಉತ್ತೇಜಿಸಲು ಚಿಂತನೆ ನಡೆಸಲಾಗಿದೆ.
ಬೆಂಗಳೂರಿನ ನಮ್ಮ ಮೆಟ್ರೋ ರೈಲಿಗೆ ಫೀಡರ್ ಸೇವೆಯಾಗಿ ಡಬಲ್ ಡೆಕ್ಕರ್ ಬಸ್, ಕೇಬಲ್ ಕಾರ್ ಹಾಗೂ ಟ್ಯಾಕ್ಸಿ ಬರಲಿದೆ.
ನಮ್ಮ ಮೆಟ್ರೋ ರೈಲಿಗೆ ಫೀಡರ್ ಸೇವೆಯನ್ನು ಒದಗಿಸಲು ಡಬಲ್ ಡೆಕ್ಕರ್ ಬಸ್, ಕೇಬಲ್ ಕಾರ್ ಹಾಗೂ ಟ್ಯಾಕ್ಸಿಗಳನ್ನು ನಿಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.

ನಿನ್ನೆ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಭೂಸಾರಿಗೆ ಸಚಿವ ನಿತೀನ್ ಗಡ್ಕರಿ ಜೊತೆ ಸಿಎಂ ಸಮಾಲೋಚನೆ ನಡೆಸಿದರು. ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಬಲ್ ಡೆಕ್ಕರ್ ಬಸ್, ಕೇಬಲ್ ಕಾರ್ ಹಾಗೂ ಟ್ಯಾಕ್ಸಿಗಳನ್ನು ನಿಯೋಜಿಸಲು ಚಿಂತನೆ ನಡೆಸಲಾಗಿದೆ. ಈ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ತಜ್ಞರ ತಂಡಗಳನ್ನು ನೇಮಿಸಲಾಗುವುದು. ಈ ಬಗ್ಗೆ ಸಮಾಲೋಚನೆ ಮಾಡಿದ್ದೇನೆ. ಬೆಂಗಳೂರು ಮಹಾನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಬೇಕಿದೆ. ಆ ನಿಟ್ಟಿನಲ್ಲಿ ಸಾಧ್ಯವಾದಷ್ಟು ಫ್ಲೈಓವರ್ಗಳನ್ನು ನಿರ್ಮಿಸಬೇಕೆಂದು ತೀರ್ಮಾನಿಸಲಾಯಿತು' ಎಂದು ತಿಳಿಸಿದರು.
ರಾಜ್ಯದ ನಾಲ್ಕು ನಗರಗಳಲ್ಲಿ ರಿಂಗ್ ರಸ್ತೆ ನಿರ್ಮಾಣ
ರಾಜ್ಯದ ನಾಲ್ಕು ನಗರಗಳಲ್ಲಿ ರಿಂಗ್ ರಸ್ತೆ ನಿರ್ಮಾಣ ಮಾಡಲು ತೀರ್ಮಾಣಿಸಲಾಗಿದೆ. ಗದಗ, ಕೊಪ್ಪಳ, ರಾಯಚೂರು ಹಾಗೂ ಶಿವಮೊಗ್ಗ ನಗರಗಳಲ್ಲಿ ರಿಂಗ್ ರಸ್ತೆಗಳನ್ನು ನಿರ್ಮಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಮಾಹಿತಿ ನೀಡಿದರು.

ಈ ನಗರಗಳಲ್ಲಿ ಸಂಚಾರ ದಟ್ಟಣೆಯನ್ನು ತಗ್ಗಿಸಲು ತೀರ್ಮಾನಿಸಲಾಗಿದೆ. ರಿಂಗ್ ರಸ್ತೆಗಳ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಸಬೇಕಿದೆ. ಆದಷ್ಟು ಬೇಗನೇ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದರು.
ರಿಂಗ್ ರಸ್ತೆ ಕಾಮಗಾರಿಗಳ ಅರ್ಧ ಖರ್ಚನ್ನು ರಾಜ್ಯ ಸರ್ಕಾರ ಭರಿಸುತ್ತದೆ. ಇನ್ನರ್ಧ ಕೇಂದ್ರ ಸರ್ಕಾರ ನೀಡುತ್ತದೆ ಎಂದು ಹೇಳಿದರು.
ಈ ನೀತಿಯನ್ನು ಕೈಬಿಟ್ಟು ಜಲ್ಲಿ, ಕಲ್ಲು, ಸಿಮೆಂಟ್, ಮರಳಿನ ಮೇಲಿನ ಜಿಎಸ್ಟಿ ಹಾಗೂ ರಾಯಲ್ಟಿಗಳನ್ನು ತೆಗೆದುಹಾಕಲು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಬಳ್ಳಾರಿ ಹಾಗೂ ಹೊಸಪೇಟೆ ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದನ್ನು ಮತ್ತೆ ಪ್ರಾರಂಭಿಸಲಾಗುವುದು. ಹೊಸ ಗುತ್ತಿಗೆದಾರರಿಗೆ ವಹಿಸಲಾಗುವುದು. ಈ ಬಗ್ಗೆ ಪ್ರಕ್ರಿಯೆ ಆರಂಭಗೊಂಡಿದೆ. ಪೆಬ್ರುವರಿಯಿಂದ ಕೆಲಸ ಆರಂಭವಾಗಲಿದೆ ಎಂದೂ ಅವರು ಹೇಳಿದರು.
ರೈಲ್ವೆ ಹಳಿಗಳ ಮೇಲೆ ಹಾದು ಹೋಗುವ ರಸ್ತೆಗಳ ಬಳಿ ಟ್ರಾಪಿಕ್ ಉಂಟಾಗುತ್ತದೆ. ಇದು ಪ್ರಯಾಣಿಕರಿಗೆ ತೊಂದರೆ ನೀಡುತ್ತದೆ. ಈ ನಿಟ್ಟಿನಲ್ಲಿ ಹಳಿಗಳ ಮೇಲೆ ಫೈಓವರ್ ನಿರ್ಮಾಣ ಮಾಡಲು ಕೋರಲಾಗಿದೆ. ಒಂದು ಸಾವಿರ ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಡಲಾಗಿದೆ. ಇದಕ್ಕೆ ನಿತೀನ್ ಗಡ್ಕರಿ ಒಪ್ಪಿಕೊಂಡಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.

ಶಿರಾಡಿ ಘಾಟ್ ಬಳಿ ಸುರಂಗ ನಿರ್ಮಾಣ ಮಾಡಬೇಕಿದೆ. ಇದಕ್ಕೆ ಹಣ ನೀಡಲು ಕೇಂದ್ರ ಭೂಸಾರಿಗೆ ಸಚಿವರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಪೀಣ್ಯ ಬಳಿಯ ಫ್ಲೈ ಓವರ್ ದುರಸ್ತಿ
ತುಮಕೂರು ರಸ್ತೆಯಲ್ಲಿರುವ ಪೀಣ್ಯ ಹತ್ತಿರದ ಡಾ.ಶಿವಕುಮಾರಸ್ವಾಮಿ ಫ್ಲೈವರ್ ಅನ್ನು ಶೀಘ್ರದಲ್ಲಿಯೇ ದುರಸ್ತಿ ಮಾಡಲಾಗುವುದು ಎಂದು ಸಿಎಂ ಭರವಸೆ ನೀಡಿದರು. ಇದಕ್ಕೆ ನಿರ್ದಿಷ್ಟ ರೂಪ ನೀಡಲು ತಜ್ಞರಿಗೆ ತಿಳಿಸಲಾಗಿದೆ. ಆ ನಂತರ ದುರಸ್ತಿ ಕಾರ್ಯ ಆರಂಭಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಸಿಎಂ ಹೇಳಿದರು.












Click it and Unblock the Notifications