"ಹವಳ ಮಾತನಾಡುತೈತೆ, ಪತಿ ಪ್ರಾಣಕ್ಕೆ ಕಂಟಕ ಬರುತೈತೆ"
ಬಳ್ಳಾರಿ/ದಾವಣಗೆರೆ/ಚಿತ್ರದುರ್ಗ, ಜುಲೈ 5: ಗೃಹಿಣಿಯರ ಕೊರಳಲ್ಲಿರುವ ಮಾಂಗಲ್ಯದ ಕೆಂಪು ಹವಳ ಮಾತನಾಡುತ್ತಂತೆ, ಇದರಿಂದ ಅವರ ಪತಿಗೆ ಪ್ರಾಣಕಂಟಕವಾಗುತ್ತದೆಯಂತೆ..! ಇಂಥದೊಂದು ವಿಚಿತ್ರ ಗಾಳಿ ಸುದ್ದಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹಬ್ಬಿ ಆತಂಕ ಸೃಷ್ಟಿಸಿದೆ!
ಮಾಂಗಲ್ಯದಲ್ಲಿರುವ ಕೆಂಪು ಹವಳಗಳಿಗೆ ಮುಂದೊಂದು ದಿನ ಜೀವ ಬಂದು ಅವು ಮಾತನಾಡುತ್ತವೆ. ಅವು ಮಾತನಾಡಿದರೆ, ಗಂಡಂದಿರಿಗೆ ಸಾವು ಬರುತ್ತದೆ ಎಂಬ ಗಾಳಿ ಸುದ್ದಿಯನ್ನು ನಂಬಿದ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಪ್ರಾಂತ್ಯಗಳ ಮುತ್ತೈದೆಯರು ತಮ್ಮ ಮಾಂಗಲ್ಯಗಳಲ್ಲಿನ ಹವಳಗಳನ್ನು ಹೊರತೆಗೆದು ಕುಟ್ಟಿ ಪುಡಿ ಮಾಡಿದ್ದಾರೆ!
ಇಂಥ ಸುದ್ದಿಯನ್ನು ಹಬ್ಬಿಸಿದ್ದು ಯಾರೋ ಗೊತ್ತಿಲ್ಲ, ಆದರೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಮ್ಮ ಕೊರಳಲ್ಲಿರುವ ಮಾಂಗಲ್ಯವನ್ನು ಕಲ್ಲಿನ ಮೇಲಿಟ್ಟು, ಇನ್ನೊಂದು ಕಲ್ಲಿನಿಂದ ಅದರಲ್ಲಿರುವ ಕೆಂಪು ಹವಳವನ್ನು ಕುಟ್ಟಿ ಪುಡಿಪುಡಿ ಮಾಡುತ್ತಿರುವ ದೃಶ್ಯವಂತೂ ಕಂಡುಬಂತು.
ಸಂಬಂಧಿಕರಿಗೂ ಸುದ್ದಿ ಮುಟ್ಟಿಸಿಯಾಯ್ತು!
ಹವಳ ಮಾತನಾಡಿದರೆ ಪತಿ ಪ್ರಾಣಕ್ಕೆ ಗಂಡಾಂತರ ಎಂದು ತಮ್ಮೆಲ್ಲ ಸಂಬಂಧಿಕರಿಗೂ ಫೋನಾಯಿಸಿ, ಅವರೂ ಕೆಂಪು ಹವಳವನ್ನು ಕುಟ್ಟಿ ಪುಡಿ ಮಾಡುವಂತೆ ಮಾಡುತ್ತಿರುವ ಘಟನೆ ಉತ್ತರ ಕರ್ನಾಟಕದಾದ್ಯಂತ ನಡೆಯುತ್ತಿದೆ.
ನಿದ್ದೆಗೆಟ್ಟು ಹವಳ ಪುಡಿ ಮಾಡಿದ ಲಲನೆಯರು!
ಕೆಂಪುಹವಳದ ಆತಂಕದ ಸುದ್ದಿ ಹಬ್ಬುತ್ತಿದ್ದಂತೆಯೇ ರಾತ್ರಿ ಒಂದು ಗಂಟೆಯಿಂದಲೇ ನಿದ್ದೆಗೆಟ್ಟು ಹೆಂಗಸರು ತಾಳಿಯಲ್ಲಿದ್ದ ಕೆಂಪುಹವಳದ ಮಣಿಯನ್ನು ಕುಟ್ಟಿಪುಡಿಮಾಡಿದ್ದಾರೆ.
ಮುಂದೊಮ್ಮೆ ಬಳೆಯೂ ಮಾತನಾಡಬಹುದು!
ಈಗ ಹವಳ ಮಾತನಾಡಿದ ಹಾಗೆಯೇ, ಮುಂದೊಮ್ಮೆ ಬಳೆಯೂ ಮಾತನಾಡಬಹುದು, ಅದನ್ನೂ ಕುಟ್ಟಿ ಪುಡಿಮಾಡುತ್ತಾರಾ? ಭಾರತೀಯ ಸಂಪ್ರದಾಯದಲ್ಲಿ ಮುತ್ತೈದೆಯರು ತೊಡುವ ಮಾಂಗಲ್ಯ, ಬಳೆ, ಕಾಲುಂಗುರ ಎಲ್ಲಕ್ಕೂ ಒಂದೊಂದು ಅರ್ಥವಿದೆ. ಆದರೆ ಯಾವುದೋ ಮೂಢನಂಬಿಕೆಗೆ ಅವುಗಳನ್ನು ಪುಡಿ ಮಾಡಿ, ಅಗೌರವ ತೋರಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಯೂ ಏಳುತ್ತಿದೆ.
ಹವಳ ಮಾತನಾಡೀತು ಹೇಗೆ!
ಹವಳ ಮಾತನಾಡುವುದಕ್ಕೆ ಹೇಗೆ ಸಾಧ್ಯ? ಅಕಸ್ಮಾತ್ ಹವಳ ಕಾಕತಾಳೀಯ ಎಂಬಂತೆ ಸದ್ದು ಮಾಡಿದರೂ ಅದರಿಂದ ಪತಿಯ ಪ್ರಾಣಕ್ಕೆ ಕುತ್ತು ಬರುವುದಕ್ಕೆ ಹೇಗೆ ಸಾಧ್ಯ ಎಂಬುದು ಅರ್ಥವಾಗದ ವಿಚಿತ್ರ ಪ್ರಶ್ನೆಯಾಗಿಯೇ ಉಳಿದಿದೆ. ಏನೇ ಆದರೂ, ಕೆಂಪು ಹವಳಗಳಂತೂ ಲಲನೆಯರ ಆತಂಕದಿಂದ ಪುಡಿ ಪುಡಿಯಾಗಿರುವುದಂತೂ ಸತ್ಯ! ಒಟ್ಟಿನಲ್ಲಿ ಇಂಥವೆಲ್ಲ ಮೂಢ ನಂಬಿಕೆ ಎಂಬುದು ನಮ್ಮ ಜನರಿಗೆ ಅರ್ಥವಾಗಬೇಕಾದರೆ ಇನ್ನೆಷ್ಟು ಕಾಲ ಹಿಡಿದೀತೋ... ಆ ದೇವರೇ ಬಲ್ಲ!