ಅನಧಿಕೃತ ಒತ್ತುವರಿ ತೆರವಿಗೆ 100 ವರ್ಷ ಬೇಕೆ?- ಪಾಲಿಕೆಗೆ ಹೈಕೋರ್ಟ್ ಪ್ರಶ್ನೆ
ಬೆಂಗಳೂರು, ಜೂ.6: ನಗರದಲ್ಲಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ನೂರು ವರ್ಷಗಳು ಬೇಕೆ ಎಂದು ಹೈಕೋರ್ಟ್, ಬಿಬಿಎಂಪಿಗೆ ತರಾಟೆಗೆ ತೆಗೆದುಕೊಂಡಿದೆ.
ಬೆಂಗಳೂರು ನಗರದಲ್ಲಿನ ಅನಧಿಕೃತ ಕಟ್ಟಡಗಳ ತೆರವು ಕುರಿತು ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಪಿಐಎಲ್ ಅನ್ನು ಸಿಜೆ ರಿತುರಾಜ್ ಅವಸ್ಥಿ ಮತ್ತು ನ್ಯಾ. ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯಪೀಠ ವಿಚಾರಣೆ ನಡೆಸಿತು.
"ಇದೇ ವೇಳೆ ನ್ಯಾಯಾಲಯದ ಆದೇಶದ ಹೆಸರಿನಲ್ಲಿ ಬಿಬಿಎಂಪಿ ಜನರಿಗೆ ಅನಗತ್ಯವಾಗಿ ತೊಂದರೆ ನೀಡಬಾರದು, ನಿಯಮಗಳನ್ನು ಉಲ್ಲಂಘಿಸಿದ್ದರಷ್ಟೇ ಕ್ರಮ ಕೈಗೊಳ್ಳಬೇಕು, ಸಣ್ಣ ಪುಟ್ಟ ಉಲ್ಲಂಘನೆಗೆ ನಿಯಮಗಳಲ್ಲಿ ಅವಕಾಶವಿದ್ದರೆ ಅದಕ್ಕೆ ದಂಡ ಕಟ್ಟಿಸಿಕೊಂಡು ಅಂತಹ ಕಟ್ಟಡ ಸಕ್ರಮಗೊಳಿಸಲು ಕ್ರಮವನ್ನು ಕೈಗೊಳ್ಳಬೇಕು'' ಎಂದು ಸೂಚನೆ ನೀಡಿತು.

ಬಿಬಿಎಂಪಿ ಪರ ವಕೀಲರು, ಕಳೆದ ವಿಚಾರಣೆ ನಂತರ ಒತ್ತುವರಿ ತೆರವು ಕಾರ್ಯ ಕುರಿತು ಆಗಿರುವ ಪ್ರಗತಿಯ ವಿವರಗಳನ್ನು ಸಲ್ಲಿಸಿ, ಜ.1, 2016 ರಿಂದೀಚೆಗೆ ನಿರ್ಮಿಸಿರುವ ಅನಧಿಕೃತ ಕಟ್ಟಡಗಳ ಸರ್ವೆ ಮಾಡಲಾಗಿದ್ದು, ನಗರದ ಎಲ್ಲ 8 ವಲಯಗಳಲ್ಲಿ ಪ್ರತಿ ವಲಯದಲ್ಲೂ 400 ರಿಂದ 500 ಕಟ್ಟಡ ಗುರುತಿಸಲಾಗಿದೆ. ಕೆಲ ಕಟ್ಟಡಗಳನ್ನು ನೆಲಸಮ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಉಳಿದಂತೆ ನಕ್ಷೆ ಉಲ್ಲಂಘಿಸಿರುವ ಕಟ್ಟಡಗಳಿಗೆ ನೋಟಿಸ್ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದು, ಅದು ನಾನಾ ಹಂತಗಳಲ್ಲಿದೆ. ನಿಯಮದಂತೆ ಅವರಿಗೆ ಅಂತಿಮ ನೋಟಿಸ್ ನೀಡುವ ಕಾರ್ಯ ಸಹ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.
ಆ ಹಂತದಲ್ಲಿ ನ್ಯಾಯಪೀಠ, ಸಣ್ಣ ಉಲ್ಲಂಘನೆಗಳಾಗಿದ್ದರೆ ನಿಯಮದಂತೆ ದಂಡ ಕಟ್ಟಸಿಕೊಂಡು ಅವುಗಳನ್ನು ಸಕ್ರಮಗೊಳಿಸಬೇಕು, ರೈತ ಪ್ರಮಾಣದಲ್ಲಿ ಉಲ್ಲಂಘನೆ ಆಗಿದ್ದರೆ ಕಟ್ಟಡಗಳನ್ನು
ತೆರವುಗೊಳಿಸಬೇಕು. ಈವರೆಗೆ ಎಷ್ಟು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿದ್ದೀರಿ? ಎಷ್ಟು ಸಕ್ರಮಗೊಳಿಸಿದ್ದೀರಿ, ಎಷ್ಟು ಕಟ್ಟಡಗಳಿಂದ ದಂಡ ಸಂಗ್ರಹ ಮಾಡಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿತು.
ಜನರಿಗೆ ತೊಂದರೆ ನೀಡಲು ನಾವು ಆದೇಶಿಸಿಲ್ಲ. ಜನರು ದಿನವೂ ಪಾಲಿಕೆ ಸುತ್ತ ತಿರುಗುವ ಅಗತ್ಯವಿಲ್ಲ. ಕಾನೂನು ಪ್ರಕಾರ ಏನು ಇದೆಯೋ ಅದರಂತೆ ಕ್ರಮವನ್ನು ಕೈಗೊಳ್ಳಬೇಕು ಅಷ್ಟೇ? ಸಕ್ರಮಗೊಳಿಸಲು ಅವಕಾಶವಿದ್ದರೆ ಅದನ್ನು ಮಾಡಿಕೊಡಿ, ಇಲ್ಲವೇ ಕಟ್ಟಡ ತೆರವುಗೊಳಿಸಿ, ಸುಮ್ಮನೆ ಕಾಲಹರಣ ಮಾಡಬೇಡಿ ಎಂದು ಪಾಲಿಕೆಗೆ ಸೂಚಿಸಿತು.
ಅಕ್ರಮ-ಸಕ್ರಮ ಬಾಕಿ:ಆಗ ಪಾಲಿಕೆ ಪರ ವಕೀಲರು, ನಿಯಮ ಉಲ್ಲಂಘನೆ ಮಾಡಿದ ಅಕ್ರಮ ಕಟ್ಟಡಗಳನ್ನು ದಂಡ ಕಟ್ಟಿಸಿಕೊಂಡು ಸಕ್ರಮಗೊಳಿಸುವ ಅಕ್ರಮ-ಸಕ್ರಮ ಕಾಯಿದೆ ಸಿಂಧುತ್ವ ಪ್ರಶ್ನಿಸಿರುವ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ಬಾಕಿ ಇದೆ. ಹಾಗಾಗಿ ದಂಡ ಕಟ್ಟಿಸಿಕೊಂಡು ಸಕ್ರಮಗೊಳಿಸಲಾಗುತ್ತಿಲ್ಲ ಎಂದರು.
ಸಾಕಷ್ಟು ವಾದ ಆಲಿಸಿದ ಬಳಿಕ ನ್ಯಾಯಪೀಠ ಕೊನೆಗೆ ಎಷ್ಟು ಅನಧಿಕೃತ ಕಟ್ಟಡಗಳನ್ನು ನೆಲಸಮಕ್ಕೆ ಗುರುತಿಸಿದ್ದೀರಾ? ಎಷ್ಟು ನಕ್ಷೆ ಉಲ್ಲಂಘನೆ ಸಕ್ರಮಗೊಳಿಸಲು ಗುರುತಿಸಿದ್ದೀರಾ? ಎಂಬ ಬಗ್ಗೆ ಹತ್ತು ದಿನಗಳೊಳಗೆ ಸಮಗ್ರ ಮಾಹಿತಿಯನ್ನು ನೀಡುವಂತೆ ಪಾಲಿಕೆ ಪರ ವಕೀಲರಿಗೆ ಸೂಚನೆ ನೀಡಿ ವಿಚಾರಣೆಯನ್ನು ಜೂ. 20ಕ್ಕೆ ಮುಂದೂಡಿತು.












Click it and Unblock the Notifications