Channapatna: ಡಿ.ಕೆ ಸುರೇಶ್ "ಆಚಾರವಿಲ್ಲದ ನಾಲಿಗೆ, ನಿನ್ನ ನೀಚಬುದ್ಧಿಯ ಬಿಡು ನಾಲಿಗೆ"
ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿರುವುದು ಗೊತ್ತಿರುವ ವಿಚಾರ. ಇದೀಗ ಕರ್ನಾಟಕದಲ್ಲಿ ಒಕ್ಕಲಿಗ ನಾಯಕರ ನಡುವೆಯೇ ವಾಕ್ಸಮರ ಮುಂದುವರಿದಿದೆ. ಮಾಜಿ ಸಂಸದ ಹಾಗೂ ಕಾಂಗ್ರೆಸ್ನ ಪ್ರಭಾವಿ ನಾಯಕ ಡಿ.ಕೆ ಸುರೇಶ್ ಅವರು ನೀಡಿರುವ ಹೇಳಿಕೆಗೆ ಜೆಡಿಎಸ್ ಕೆಂಡಾಮಂಡಲವಾಗಿದೆ.
ಡಿ.ಕೆ ಸುರೇಶ್ ಅವರೇ ನಿಮ್ಮದು ಆಚಾರವಿಲ್ಲದ ನಾಲಿಗೆ, ನಿನ್ನ ನೀಚಬುದ್ಧಿಯ ಬಿಡು ನಾಲಿಗೆ ಎನ್ನುವುದರಿಂದ ಪ್ರಾರಂಭಿಸಿ, ಡಿಕೆಸುನಾಲಿಗೆ
ಬರೀ... ಎನ್ನುವ ವರೆಗೆ ಜೆಡಿಎಸ್ ವಾಗ್ದಾಳಿ ನಡೆಸಿದೆ. ಡಿ.ಕೆ ಸುರೇಶ್ ಅವರು ಇಂದು ದೇವೇಗೌಡರು ಆಂಬ್ಯುಲೆನ್ಸ್ ನಲ್ಲಿ ಬಂದು ಪ್ರಚಾರ ಮಾಡುತ್ತಾರೆ ಎಂದು ಹೇಳಿದ್ದರು.

ಡಿ.ಕೆ ಸುರೇಶ್ ಅವರ ಈ ಹೇಳಿಕೆಗೆ ಜೆಡಿಎಸ್ ಪಕ್ಷದ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ದೇವೇಗೌಡ ಅವರ ಆರೋಗ್ಯದ ಅಪಹಾಸ್ಯ ಮಾಡಿರುವ ಡಿ.ಕೆ ಸುರೇಶ್ ಅವರೇ ನಿಮಗೆ ಚನ್ನಪಟ್ಟಣದ ಜನರೇ ಉತ್ತರಿಸಲಿದ್ದಾರೆ. ಎಚ್.ಡಿ. ದೇವೇಗೌಡರು ಅವರು ನಾಡಿಗೆ ನೀಡಿರುವ ಕೊಡುಗೆಗಳನ್ನು ಕಾಂಗ್ರೆಸ್ ಮರೆತಿರಬಹುದು. ರೈತನಾಯಕ, ನೀರಾವರಿಗಳ ಹರಿಕಾರರು, ಮಾಜಿ ಪ್ರಧಾನಿಗಳಾದ ಎಚ್.ಡಿ ದೇವೇಗೌಡ ಅವರು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ.
ಈ ಹಿಂದೆ ಚನ್ನಪಟ್ಟಣದ ವಿಟ್ಲೇನಹಳ್ಳಿ ಗೋಲಿಬಾರ್ ನಿಮ್ಮದೇ ಕಾಂಗ್ರೆಸ್ ಸರ್ಕಾರ ನಡೆಸಿತ್ತು. ಆಗಲೂ ದೇವೇಗೌಡರು ಚನ್ನಪಟ್ಟಣದಿಂದ ಬೆಂಗಳೂರಿನ ತನಕ ರೈತರಿಗೆ ನ್ಯಾಯ ಕೊಡಿಸಲು ಪಾದಯಾತ್ರೆ ಮಾಡಿದ್ದರು. ಇಳಿ ವಯಸ್ಸಿನಲ್ಲೂ ರಾಜ್ಯಸಭೆಯಲ್ಲಿ ರಾಜ್ಯದ ಹಲವು ಸಮಸ್ಯೆಗಳ ಕುರಿತು ಮತ್ತು ದೇಶದ ರೈತರ ಬಗ್ಗೆ ಧ್ವನಿ ಎತ್ತಿ ಮಾತನಾಡುವ ಅವರ ಬಗ್ಗೆ ಲಘುವಾಗಿ ಮಾತಾಡಿರುವ ನೀವು, 2 ಬಾರಿ ಸಂಸದರಾಗಿ ಲೋಕಸಭೆಯಲ್ಲಿ ನೀರಾವರಿ, ರೈತರು ಹಾಗೂ ನಾಡಿನ ಸಮಸ್ಯೆಗಳ ಬಗ್ಗೆ ಎಷ್ಟು ಮಾತನಾಡಿದ್ದೀರಿ ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ.
"ಆಚಾರವಿಲ್ಲದ ನಾಲಿಗೆ, ನಿನ್ನ ನೀಚಬುದ್ಧಿಯ ಬಿಡು ನಾಲಿಗೆ"
— Janata Dal Secular (@JanataDal_S) October 28, 2024
ದೇವೇಗೌಡರು ಆಂಬ್ಯುಲೆನ್ಸ್ ನಲ್ಲಿ ಬಂದು ಪ್ರಚಾರ ಮಾಡುತ್ತಾರೆ ಎಂದು, ಅವರ ಆರೋಗ್ಯದ ಬಗ್ಗೆ ಅಪಹಾಸ್ಯ ಮಾಡಿರುವ @DKSureshINC , ನಿಮಗೆ ಚನ್ನಪಟ್ಟಣದ ಜನತೆ ಉತ್ತರಿಸುತ್ತಾರೆ.
ರೈತನಾಯಕ, ನೀರಾವರಿಗಳ ಹರಿಕಾರರು, ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ. ದೇವೇಗೌಡರು ನಾಡಿಗೆ… pic.twitter.com/HeVIhbcoeN
ಆತ್ಮಸಾಕ್ಷಿ ಪ್ರಶ್ನೆ ಮಾಡಿಕೊಳ್ಳಿ ಮಿಸ್ಟರ್: ಸೋಷಿಯಲ್ ಮೀಡಿಯಾದ ಜೆಡಿಎಸ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್ ಪಕ್ಷವು, ಡಿ.ಕೆ ಸುರೇಶ್ ಅವರನ್ನು ಇನ್ನಿಲ್ಲದಂತೆ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ ನಿಮ್ಮ ಆತ್ಮಸಾಕ್ಷಿಯನ್ನು ಪ್ರಶ್ನೆಮಾಡಿಕೊಳ್ಳಿ ಮಿಸ್ಟರ್ ಸುರೇಶ್ ಎಂದಿದೆ.
ದೇವೇಗೌಡರು ತಂದಿರುವ ನೀರಾವರಿ ಯೋಜನೆಗಳು, ಜಲಾಶಯಗಳ ನಿರ್ಮಾಣ ಕುರಿತು ಇಡೀ ದೇಶವೆ ಮೆಚ್ಚುಗೆ ವ್ಯಕ್ತಪಡಿಸುತ್ತದೆ. ರಾಜ್ಯದ ನದಿಗಳು - ನೀರಾವರಿ ಹೋರಾಟಗಳ ಬಗ್ಗೆ ಸಂಸತ್ತಿನಲ್ಲಿ ಈಗಲು ಮಾತಾನಾಡುತ್ತಲೇ ಇದ್ದಾರೆ ದೇವೇಗೌಡರು. ದೇವೇಗೌಡರ ಕುಟುಂಬದ ಬಗ್ಗೆ ಟೀಕಿಸುತ್ತಿರುವ ಕೃತಜ್ಞತೆ ಇಲ್ಲದ ಆ ಮಾಗಡಿ ಶಾಸಕ, ಮೊದಲ ಬಾರಿಗೆ ಜನಪ್ರತಿನಿಧಿಯಾಗಿದ್ದು ಯಾರ ಕೃಪೆಯಿಂದ ಎಂಬುದು ಜನತೆಗೆ ಗೊತ್ತಿದೆ ಎಂದು ತಿರುಗೇಟು ನೀಡಿದೆ.
ಇನ್ನು ರಾಷ್ಟ್ರೀಯ ಕಾಂಗ್ರೆಸ್ಗೂ ಇದನ್ನು ಟ್ಯಾಗ್ ಮಾಡಲಾಗಿದ್ದು, ಹಿರಿಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ರಾಜ್ಯ ಕಾಂಗ್ರೆಸ್ ನಾಯಕರಿಗೆ ಮೊದಲು ಕಲಿಸಲಿ ಎಂದು ಹೇಳಿದೆ. ಕರ್ನಾಟಕದ ಮೂರು ವಿಧಾನಸಭೆ ಉಪ ಚುನಾವಣೆಗಳಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯೂ ಹೈವೋಲ್ಟೇಜ್ ಕಣವಾಗಿದೆ. ಇದೀಗ ಕಾಂಗ್ರೆಸ್ ನಾಯಕ ಡಿ.ಕೆ ಸುರೇಶ್ ಅವರು ನೀಡಿರುವ ಹೇಳಿಕೆಯನ್ನೇ ಜೆಡಿಎಸ್ ಅಸ್ತ್ರವಾಗಿ ಬಳಸಿಕೊಂಡು ಕಾಂಗ್ರೆಸ್ಗೆ ತಿರುಗೇಟು ನೀಡುತ್ತಿದೆ.












Click it and Unblock the Notifications