ಚಿತ್ರಗಳು : ಮೇಕೆದಾಟುಗೆ ಸಚಿವ ಡಿ.ಕೆ.ಶಿವಕುಮಾರ್ ಭೇಟಿ
ಬೆಂಗಳೂರು, ಡಿಸೆಂಬರ್ 07 : 'ಮೇಕೆದಾಟು ಯೋಜನೆ ಪೂರ್ಣಗೊಂಡರೆ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು, ಜೊತೆಗೆ ಬೆಂಗಳೂರಿಗೆ 17 ಟಿಎಂಸಿ ನೀರು ಉಪಯೋಗಿಸಿಕೊಳ್ಳಲು ಅವಕಾಶ ಸಿಗಲಿದೆ' ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಮೇಕೆದಾಟು ಯೋಜನೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ಮತ್ತು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಶುಕ್ರವಾರ ಮೇಕೆದಾಟುಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.
ಮೇಕೆದಾಟು ಯೋಜನೆ : ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಹೇಳಿದ್ದೇನು?
ಮೇಕೆದಾಟು ಯೋಜನೆಗೆ ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿವೆ. ಕೇಂದ್ರ ಜಲ ಆಯೋಗ ಯೋಜನೆಗೆ ಒಪ್ಪಿಗೆ ನೀಡಿದ್ದು, ಯೋಜನೆಯ ವಿಸ್ತೃತ ವರದಿ ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ.
ಮೇಕೆದಾಟು : ತಮಿಳುನಾಡು ಬಳಿಕ ಯೋಜನೆಗೆ ಪುದುಚೇರಿ ವಿರೋಧ
'ಮೇಕೆದಾಟು ಯೋಜನೆಯಿಂದ ಶಿಂಷಾ ಜಲವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಶಿಂಷಾ ಬಳಿ ಒಂದೂವರೆ ಎಕರೆಯಷ್ಟು ಮಾತ್ರ ಭೂಮಿ ಮುಳುಗಡೆ ಆಗುವುದಿಲ್ಲ' ಎಂದು ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ಮೇಕೆದಾಟು ಯೋಜನೆಗೆ ತಮಿಳುನಾಡಿನ ವಿರೋಧವೇಕೆ?
5900 ಕೋಟಿ ಯೋಜನಾ ವೆಚ್ಚ
'ಮೇಕೆದಾಟು ಯೋಜನೆಗೆ 5900 ಕೋಟಿ ರೂ. ವೆಚ್ಚವಾಗಲಿದೆ. ಇದರಲ್ಲಿ 2 ಸಾವಿರ ಕೋಟಿ ರೂ. ಕೆಪಿಸಿಎಲ್ ಭರಿಸಿದರೆ ಉಳಿದ ಮೊತ್ತವನ್ನು ಜಲಸಂಪನ್ಮೂಲ ಇಲಾಖೆ ಭರಿಸಲಿದೆ. ಯೋಜನೆಗೆ ಯಾವುದೇ ಹಣಕಾಸಿನ ಅಭಾವವಿಲ್ಲ. ಸರ್ಕಾರದ ಬಳಿ ಯೋಜನೆಗೆ ಸಾಕಾರಗೊಳಿಸುವಷ್ಟು ಹಣವಿದೆ' ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
3 ರಿಂದ 4 ಹಳ್ಳಿಗಳು ಮುಳುಗಲಿವೆ
'ಮೇಕೆದಾಟು ಯೋಜನೆ ಜಾರಿಗೊಳಿಸಲು ಅತಿ ಕಡಿಮೆ ಭೂಮಿ ಸಾಕು. ಯೋಜನೆಯಿಂದ 4900 ಹೆಕ್ಟೇರ್ ಪ್ರದೇಶ ಮುಳುಗಡೆಯಾಗಲಿದೆ. ಇದರಲ್ಲಿ 4700 ಹೆಕ್ಟೇರ್ ಅರಣ್ಯ ಪ್ರದೇಶ ಮತ್ತು ಖಾಸಗಿ ಜಮೀನು ಸೇರಿದಂತೆ 200 ಹೆಕ್ಟೇರ್ ಕಂದಾಯ ಭೂಮಿ ಸೇರಿದೆ' ಎಂದು ಸಚಿವರು ವಿವರಣೆ ನೀಡಿದರು.
ರಾಜಕೀಯ ಒತ್ತಡ
'ರಾಜಕೀಯ ಒತ್ತಡದಿಂದಾಗಿ ತಮಿಳುನಾಡು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಆದರೆ, ಯೋಜನೆ ಕುರಿತು ಸಂಪೂರ್ಣ ಮಾಹಿತಿಯನ್ನು ನಾನು ರಾಜ್ಯದ ಜೊತೆ ಹಂಚಿಕೊಳ್ಳಲು ಸಿದ್ಧನಿದ್ದೇನೆ. ಈ ಯೋಜನೆಗೆ ತರಕಾರು ಮಾಡುವುದಿಲ್ಲ ಎಂಬ ವಿಶ್ವಾಸವಿದೆ. ಅಲ್ಲಿನ ಸರ್ಕಾರ ಇಲ್ಲಿಗೆ ಬಂದು ಪರಿಶೀಲನೆ ನಡೆಸಿದರೆ ಸ್ಥಳಕ್ಕೆ ಕರೆದುಕೊಂಡು ಹೋಗಿ ವಸ್ತುಸ್ಥಿತಿ ವಿವರಿಸಲು ನಾನು ಸಿದ್ಧ' ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
67 ಟಿಎಂಸಿ ನೀರು ಸಂಗ್ರಹ
'ಮೇಕೆದಾಟು ಯೋಜನೆಯ ಅನ್ವಯ 67 ಟಿಎಂಸಿ ಅಡಿ ನೀರನ್ನು ಸಂಗ್ರಹ ಮಾಡಲಾಗುತ್ತದೆ. ಕೇವಲ ವಿದ್ಯುತ್ ಮತ್ತು ಕುಡಿಯುವ ನೀರಿಗೆ ಮಾತ್ರ ನೀರನ್ನು ಬಳಕೆ ಮಾಡಲಾಗುತ್ತದೆ. ನೀರಾವರಿ ಉದ್ದೇಶಕ್ಕೆ ಬಳಕೆ ಮಾಡುವುದಿಲ್ಲ' ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ಪ್ರಾಥಮಿಕ ವರದಿ ಸಿದ್ಧ
'ಮೇಕೆದಾಟು ಯೋಜನೆಯ ಪ್ರಾಥಮಿಕ ವರದಿ ಸಿದ್ಧವಾಗಿದೆ. ಯಾವುದೇ ತೊಂದರೆ ಇಲ್ಲದೇ ನಡೆಯುವ ಯೋಜನೆ ಇದಾಗಿದೆ. ಸಮಗ್ರ ಪರಿಪೂರ್ಣ ವರದಿ ಸದ್ಯದಲ್ಲಿಯೇ ಕೇಂದ್ರಕ್ಕೆ ಸಲ್ಲಿಕೆ ಮಾಡಲಿದ್ದೇವೆ' ಎಂದು ಡಿ.ಕೆ.ಶಿವಕುಮಾರ್ ಹೇಳಿದರು.