DK Shivakumar Vs HDk : 'ನನ್ನ ಕುಟುಂಬದ ತಂಟೆಗೆ ನೀನು ಬಂದರೆ, ನಿನ್ನ ಕುಟುಂಬದ ತಂಟೆಗೆ ಇನ್ನೊಬ್ಬರು': ಡಿಕೆಶಿ ತಿರುಗೇಟು
ಬೆಂಗಳೂರು, ಆಗಸ್ಟ್ 28: ನಾನು ಅವರ ಕುಟುಂಬ ಹಾಗೂ ಸಹೋದರನ ಆಸ್ತಿ ಬಗ್ಗೆ ಅನೇಕ ಪ್ರಶ್ನೆ ಕೇಳಿದ್ದೆ. ಈವರೆಗೂ ಅವರು ಅದಕ್ಕೆ ಉತ್ತರ ನೀಡಿಲ್ಲ. ನನ್ನ ಕುಟುಂಬದ ಸುದ್ದಿಗೆ ಬರುತ್ತೀಯಾ ಎಂದೆಲ್ಲಾ ಅವರು ಕಿಡಿಕಾರಿದ್ದಾರೆ. ಅವರು ಕೂಡ ಯಾರ ಕುಟುಂಬದ ವಿಚಾರಕ್ಕೆ ಹೋಗಿದ್ದಾರೆ ಎಂಬುದನ್ನು ಹೇಳಬೇಕು. ಅವರು ಹೇಗೆ ಬೇರೆಯವರ ಕುಟುಂಬದ ವಿಚಾರಕ್ಕೆ ಹೋಗುತ್ತಾರೋ, ಅದೇ ರೀತಿ ಬೇರೆಯವರು ಅವರ ಕುಟುಂಬದ ವಿಚಾರಕ್ಕೆ ಹೋಗುತ್ತಾರೆ ಎಂದು ಕುಮಾರಸ್ವಾಮಿ ಗೆ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದರು.
ಅಕ್ರಮವಾಗಿ ಅದಿರು ಭೂಮಿ ಮಂಜೂರು ಪ್ರಕರಣದಲ್ಲಿ ನಾನು ಯಾರಿಗೂ ಶಿಫಾರಸ್ಸು ಮಾಡಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಸರಿ, ನೀವು ಯಾರಿಗೂ ಶಿಫಾರಸ್ಸು ಮಾಡಿಲ್ಲವಾದರೆ ಹಾಗೂ ನಿಮ್ಮ ಸಹಿಯನ್ನು ಬೇರೆಯವರು ನಕಲು ಮಾಡಿದ್ದರೆ ಈ ಬಗ್ಗೆ ನೀವು ಇದದುವರೆಗೂ ಯಾಕೆ ದೂರು ನೀಡಿಲ್ಲ? ಮುಖ್ಯಮಂತ್ರಿಗಳ ಬಳಿ ದೂರು ನೀಡಲು ಆಗದಿದ್ದರೆ ಯಾವುದಾದರೂ ಪೊಲೀಸ್ ಠಾಣೆಯಲ್ಲಾದರೂ ದೂರು ನೀಡಬಹುದಲ್ಲವೇ? ಮುಖ್ಯಮಂತ್ರಿ ಸ್ಥಾನದಲ್ಲಿ ಕೂತವರ ಸಹಿ ನಕಲು ಮಾಡಿದವರನ್ನು, ನಕಲು ಸಹಿ ಆಧಾರದ ಮೇಲೆ ಗಣಿಗೆ ಮಂಜೂರು ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳಬಹುದಲ್ಲವೇ? ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಅವರು ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಸಂಸ್ಥೆಗೆ ಗಣಿ ಮಂಜೂರು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಹಾಕಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಅವರು ತಮ್ಮ ಅಫಿಡವಿಟ್ ನಲ್ಲಿ ಈ ಜಮೀನನ್ನು ಶ್ರೀಸಾಯಿ ವೆಂಕಟೇಶ್ವರ ಮಿನರಲ್ಸ್ ಸಂಸ್ಥೆಗೆ ಮಂಜೂರು ಮಾಡಿರುವುದಾಗಿ ತಾವೇ ಒಪ್ಪಿಕೊಂಡಿದ್ದಾರೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2011ರಲ್ಲೇ ಎಫ್ಐಆರ್ ದಾಖಲಾಗಿದ್ದು, ಈ ಪ್ರಕರಣದ ತನಿಖೆ ಬಾಕಿ ಇದೆ ಎಂದು ಒಪ್ಪಿಕೊಂಡಿದ್ದಾರೆ. ಕುಮಾರಸ್ವಾಮಿ ಅವರೇ ಈ ಸಹಿ ನಿಮ್ಮದಲ್ಲವಾದರೆ, ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ಆ ಆದೇಶವನ್ನು ನೀವೇ ನೀಡಿರುವುದಾಗಿ ಒಪ್ಪಿಕೊಂಡಿರುವುದೇಕೆ? ಎಂದು ಪ್ರಶ್ನಿಸಿದರು.
ಮಿಸ್ಟರ್ ಕುಮಾರಸ್ವಾಮಿ ನೀವು ಸಂವಿಧಾನದ ಹೆಸರಲ್ಲಿ ಪ್ರಮಾಣ ಸ್ವೀಕರಿಸಿ ಕೇಂದ್ರದ ಮಂತ್ರಿಯಾಗಿದ್ದೀರಿ. ಅಂದು ನ್ಯಾಯಾಲಯದ ಮುಂದೆ ಈ ಆದೇಶ ಮಾಡಿರುವುದು ನೀವೇ ಎಂದು ಹೇಳಿದ್ದು, ಇಂದು ಮಾಧ್ಯಮಗಳ ಮುಂದೆ ಅದು ನನ್ನ ಸಹಿಯೇ ಅಲ್ಲ ಎಂದು ಹೇಳುತ್ತಿದ್ದೀರ. ಕುಮಾರಸ್ವಾಮಿ ಅವರೇ ಅದು ನಿಮ್ಮ ಸಹಿ ಅಲ್ಲವಾದರೆ, ಈಗಲಾದರೂ ಅದರ ಬಗ್ಗೆ ದೂರು ನೀಡಿ. ನೀವು ದೊಡ್ಡ ಸರ್ಕಾರದ ಭಾಗವಾಗಿದ್ದೀರಿ. ಆದರೂ ಯಾಕೆ ದೂರು ನೀಡುತ್ತಿಲ್ಲ? ಎಂದು ತಿಳಿಸಿದರು.
"ಈ ಮಧ್ಯೆ ಸತ್ಯಕ್ಕೆ ಹೆಸರಾದ ನಮ್ಮ ರಾಷ್ಟ್ರದ ಉಕ್ಕು ಸಚಿವ ಕುಮಾರಸ್ವಾಮಿ ಅವರು ಮಾಧ್ಯಮಗಳಲ್ಲಿ 'ಅದು ತನ್ನ ಸಹಿಯೇ ಅಲ್ಲ' ಎಂದು ಹೇಳಿಕೆ ನೀಡಿರುವುದನ್ನು ನೋಡಿದೆ. ಕುಮಾರಸ್ವಾಮಿ ಅವರ ವಿರುದ್ಧದ ಪ್ರಕರಣದಲ್ಲಿ ಸುಮಾರು 10 ವರ್ಷ ತನಿಖೆ ನಡೆದಿದೆ. ಈ ಪ್ರಕರಣದಲ್ಲಿ ಜಾಮೀನು ಕೂಡ ಪಡೆದಿದ್ದೇನೆ ಎಂದು ಹೇಳಿರುವುದನ್ನೂ ಗಮನಿಸಿದ್ದೇನೆ ಎಂದು ಹೇಳಿದರು.
ಕುಮಾರಸ್ವಾಮಿ ಅವರು ಈ ನಕಲಿ ಸಹಿ ಬಗ್ಗೆ ಯಾವುದೇ ತನಿಖೆ ನಡೆಸಲಿ ಎಂದು ಹೇಳಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನಾವು ವಿಚಾರಣೆ ಮಾಡುವುದು ಬೇರೆ ವಿಚಾರ. ಆದರೆ ಅವರ ಸಹಿ ನಕಲು ಮಾಡಲಾಗಿದೆ ಎಂದು ಅವರೇ ಹೇಳುತ್ತಿದ್ದೀರಲ್ಲವೇ ಅವರು ಮೊದಲು ದೂರು ನೀಡಲಿ. ಅವರು ಮುಖ್ಯಮಂತ್ರಿಯಾಗಿದ್ದಾಗ ಹಾಕಲಾಗಿರುವುದು ಅವರ ಸಹಿ. ಹೀಗಾಗಿ ಅವರು ದೂರು ನೀಡಬೇಕು. ಈ ವಿಚಾರದಲ್ಲಿ ವಿಳಂಬವೇಕೆ? ಅವರು ಎಲ್ಲಿ ಬೇಕಾದರೂ ದೂರು ನೀಡಲಿ ಅಥವಾ ಆನ್ ಲೈನ್ ಮೂಲಕವಾದರೂ ದೂರು ನೀಡಲಿ. ನಾವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತೇವೆ.
ಈ ಸಹಿಯಿಂದ ಅಮಾಯಕ ಕುಮಾರಸ್ವಾಮಿ ಅವರು ನ್ಯಾಯಾಲಯದ ಮೆಟ್ಟಿಲು ಏರಬೇಕಾಗಿಬಂದಿದೆ. ಅವರಿಗೆ ಕಿರುಕುಳವಾಗಿದೆ. ಇಂತಹ ಅಮಾಯಕ ಕುಮಾರಸ್ವಾಮಿ ವಿರುದ್ಧ 2011ರಲ್ಲಿ ಯಡಿಯೂರಪ್ಪ ಅವರ ಸರ್ಕಾರ ಯಾಕೆ ದೂರು ದಾಖಲಿಸಿತ್ತೊ. ಹೀಗಾಗಿ ಈ ಸಹಿ ಬಗ್ಗೆ ಅವರು ದೂರು ನೀಡಬೇಕು ಎಂದು ಲೇವಡಿಯಾಗಿ ಪ್ರಶ್ನಿಸಿದರು.
ರಾಜ್ಯಪಾಲರ ಆದೇಶ ವಿರುದ್ಧ ಮುಖ್ಯಮಂತ್ರಿಗಳು ನ್ಯಾಯಾಲಯದ ಮೆಟ್ಟಿಲೇರಿರುವ, ಅವರಿಂದ ನ್ಯಾಯ ನಿರೀಕ್ಷಿಸಿ ಮತ್ತೆ ಮನವಿ ಸಲ್ಲಿಸುತ್ತಿದ್ದೀರ ಎಂದು ಕೇಳಿದಾಗ, "ತನ್ನಿಂದ ಅನ್ಯಾಯ ಆಗಬಾರದು ಎಂಬ ಬುದ್ಧಿಯನ್ನು ಭಗವಂತ ರಾಜ್ಯಪಾಲರಿಗೆ ಕರುಣಿಸಬಹುದು, ಆಮೂಲಕ ಅವರು ತಮ್ಮ ಆದೇಶವನ್ನು ಹಿಂಪಡೆಯಬಹುದು ಎಂದು ನಾವು ನಂಬಿದ್ದೇವೆ ಎಂದು ತಿಳಿಸಿದರು.












Click it and Unblock the Notifications