ತಮ್ಮ ಡಿ.ಕೆ. ಸುರೇಶ್ ಹೇಳಿಕೆ ಒಪ್ಪದ ಅಣ್ಣ ಡಿ.ಕೆ. ಶಿವಕುಮಾರ್!
ದಕ್ಷಿಣ ಭಾರತ & ಉತ್ತರ ಭಾರತದ ಕುರಿತು ಹೇಳಿಕೆ ನೀಡುವಾಗ ಪ್ರತ್ಯೇಕ ರಾಷ್ಟ್ರದ ಬಗ್ಗೆ ಬೇಡಿಕೆ ಇಟ್ಟಿರುವ ಸಂಸದ ಡಿ.ಕೆ. ಸುರೇಶ್ ಅವರ ಹೇಳಿಕೆ ಸಂಚಲನ ಸೃಷ್ಟಿಸಿದೆ. ಕೇಂದ್ರ ಬಜೆಟ್ ವಿಚಾರವಾಗಿ ಮಾತನಾಡುವ ವೇಳೆ ಸಂಸದ ಡಿ.ಕೆ. ಸುರೇಶ್, ಕೇಂದ್ರ ಸರ್ಕಾರ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪ ಮಾಡಿದರು. ಅಲ್ಲದೆ ಉತ್ತರ ಭಾರತ ಮಾತ್ರ ಹೆಚ್ಚಿನ ಅನುದಾನ ಪಡೆಯುತ್ತಿದೆ ಎಂದರು. ಹೀಗಿದ್ದಾಗ ಪ್ರತ್ಯೇಕ ದೇಶ ಆಗುವ ಬಗ್ಗೆ ಕೂಡ ಭವಿಷ್ಯ ನುಡಿದರು. ಈ ಬಗ್ಗೆ ಡಿ.ಕೆ. ಶಿವಕುಮಾರ್ ಇದೀಗ ಪ್ರತಿಕ್ರಿಯಿಸಿದ್ದಾರೆ.
ಹೌದು, ಡಿ.ಕೆ. ಸುರೇಶ್ ಅವರು ಹೀಗೆ ಪ್ರತ್ಯೇಕ ರಾಷ್ಟ್ರದ ಬಗ್ಗೆ ಹೇಳಿಕೆ ನೀಡಿದ್ದು ದೇಶದ ಮಟ್ಟದಲ್ಲಿ ಸುದ್ದಿಯಾಗಿದೆ. ಹೀಗಿದ್ದಾಗ ಕರ್ನಾಟಕದ ಡಿಸಿಎಂ & ಸಂಸದ ಡಿ.ಕೆ. ಸುರೇಶ್ ಅವರ ಅಣ್ಣ ರಿಯಾಕ್ಷನ್ ಕೊಟ್ಟಿದ್ದಾರೆ.

ನಮ್ಮದು ಅಖಂಡ ಭಾರತ, ನಾನು ಪ್ರತ್ಯೇಕ ದೇಶ ಬೇಡಿಕೆ ಒಪ್ಪುವುದಿಲ್ಲ. ನಮ್ಮದು ಅಖಂಡ ಭಾರತ. ಹೀಗಾಗಿ ಅಖಂಡ ಭಾರತ ಇರಬೇಕು. ಆದರೆ ಡಿ.ಕೆ. ಸುರೇಶ್ ಅವರು ಹೇಳಿರುವುದು ಆ ಅರ್ಥದಲ್ಲಿ ಅಲ್ಲ ಎಂದರು. ಹೀಗೆ ತಮ್ಮ ಸಹೋದರನ ಹೇಳಿಕೆ ಬಗ್ಗೆ ಡಿ.ಕೆ.ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಡಿ.ಕೆ. ಸುರೇಶ್ ಹೇಳಿದ್ದು ಏನು?
ದೆಹಲಿಯಲ್ಲಿ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಂಸದ ಡಿ.ಕೆ. ಸುರೇಶ್ ಅವರು, ಇಂದಿನ ಬಜೆಟ್ನಲ್ಲಿ ಹೊಸತನ ಇಲ್ಲ. ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಆಗ್ತಿದೆ. ಹೀಗೆ ಅನ್ಯಾಯ ಆದ್ರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದಿದ್ದರು ಸಂಸದ ಡಿಕೆ ಸುರೇಶ್. ಕೇಂದ್ರ ಸರ್ಕಾರದ ವಿರುದ್ಧ ಈ ಮೂಲಕ ತೀವ್ರ ಆಕ್ರೋಶ ಹೊರಹಾಕಿದ್ದರು ಡಿ.ಕೆ. ಸುರೇಶ್.
ಈ ರೀತಿ ಡಿ.ಕೆ. ಸುರೇಶ್ ಅವರು ನೀಡಿರುವ ಹೇಳಿಕೆ ಇದೀಗ ಸಂಚಲನ ಸೃಷ್ಟಿ ಮಾಡಿದೆ. ಈ ಮೂಲಕ ವಿರೋಧ ಪಕ್ಷಗಳ ನಾಯಕರು ರಾಜಕೀಯದ ಅಸ್ತ್ರ ಮಾಡಿಕೊಳ್ಳುತ್ತಿದ್ದರೆ, ಸ್ವತಃ ಡಿ.ಕೆ. ಸುರೇಶ್ ಅವರ ಸಹೋದರ ಕೂಡ ಪ್ರತ್ಯೇಕ ರಾಷ್ಟ್ರದ ಮಾತನ್ನ ಒಪ್ಪಿಕೊಳ್ಳುತ್ತಿಲ್ಲ.

ಪ್ರವಾಸೋದ್ಯಮ ಅಭಿವೃದ್ಧಿಗೆ ಹಣ
ಅಷ್ಟಕ್ಕೂ ಇಂದು 2024ರ ಕೇಂದ್ರ ಬಜೆಟ್ ಮಂಡನೆ ಮಾಡಿದ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆ ಘೋಷಿಸಿದ್ದಾರೆ. ಅದರಲ್ಲೂ ಭಾರತದ ಲಕ್ಷದೀಪ್ ಅಭಿವೃದ್ಧಿಗೂ ಹೆಚ್ಚಿನ ಒತ್ತನ್ನ ನೀಡುವ ಬಗ್ಗೆ ತಿಳಿಸಲಾಗಿದೆ.
ಇದರ ಜೊತೆಗೆ ರಾಜ್ಯಗಳಲ್ಲಿ ಟೂರಿಸಂ ಅಭಿವೃದ್ಧಿಗು ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಅವರು ತಿಳಿಸಿದ್ದಾರೆ. ಅಲ್ಲದೆ ಈ ಬಜೆಟ್ನಲ್ಲಿ ಅತಿಹೆಚ್ಚು ಹಣವನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ಮೀಸಲು ಇಡಲಾಗಿದೆ.
ಒಟ್ನಲ್ಲಿ ಇನ್ನೇನು ಲೋಕಸಭೆ ಚುನಾವಣೆ ಹತ್ತಿರದಲ್ಲೇ ಇದ್ದು, ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟ ಚುನಾವಣೆಗೆ ಸಜ್ಜಾಗುತ್ತಿದೆ. ಹೀಗಿದ್ದಾಗಲೇ ಬಜೆಟ್ ಮಂಡನೆ ಮಾಡಲಾಗಿದೆ. ಈ ಬಜೆಟ್ ಬಗ್ಗೆ ಆಡಳಿತ ಪಕ್ಷದ ನಾಯಕರು ಹೆಮ್ಮೆ ವ್ಯಕ್ತಪಡಿಸಿದ್ದರೆ, ವಿರೋಧ ಪಕ್ಷ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications