ತೆಲಂಗಾಣಕ್ಕೆ ಹೊರಟ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್- ಕನಕಪುರ ಬಂಡೆಗೆ ಹೊಸ ಟಾಸ್ಕ್
ಬೆಂಗಳೂರು, ಡಿಸೆಂಬರ್ 02: ತೆಲಂಗಾಣ ವಿಧಾನಸಭಾ ಎಕ್ಸಿಟ್ ಪೋಲ್ ಸಮೀಕ್ಷೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯಲಿದೆ ಎಂದು ತಿಳಿಸಿದ್ದು, ಶಾಸಕರನ್ನು ಹಿಡಿದಿಟ್ಟುಕೊಳ್ಳುಲು ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಕರ್ನಾಟಕ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತೆಲಂಗಾಣದತ್ತ ಮುಖ ಮಾಡಿದ್ದಾರೆ.
ಹೌದು, ತೆಲಂಗಾಣಕ್ಕೆ ತೆರಳುವ ಮುನ್ನ ಮಾಧ್ಯಮಗಳ ಜೊತೆಗೆ ಸದಾಶಿವನಗರದಲ್ಲಿ ಡಿ ಕೆ ಶಿವಕುಮಾರ್ ಮಾತನಾಡಿ,ಚುನಾವಣೆ ಕಾರಣ ತೆಲಂಗಾಣಕ್ಕೆ ಹೋಗುತ್ತಿದ್ದು, ಪಕ್ಷ ಏನು ಕೆಲಸ ನೀಡುತ್ತದೆಯೋ ಅದನ್ನು ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ತೆಲಂಗಾಣ ಚುನಾವಣೆ ಫಲಿತಾಂಶ ಬರುವ ಹಿನ್ನೆಲೆಯಲ್ಲಿ ತಾವು ತೆರಳುತ್ತೀರಾ ಎಂಬ ಪ್ರಶ್ನೆಗೆ ಪಕ್ಷ ಏನು ಕೆಲಸ ನೀಡುತ್ತದೆಯೋ ಅದನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.

ಇನ್ನೂ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ವಿಶ್ವಾಸ ನನಗಿದೆ. ಶಾಸಕರು ಎಲ್ಲೂ ಹೋಗುವುದಿಲ್ಲ. ಅವರನ್ನು ರಕ್ಷಣೆ ಮಾಡುವ ಅಗತ್ಯವಿಲ್ಲ. ಆ ಬಗ್ಗೆ ನನಗೆ ಇದುವರೆಗೂ ಯಾವುದೇ ಜವಾಬ್ದಾರಿ ನೀಡಿಲ್ಲ. ತೆಲಂಗಾಣ ಸೇರಿದಂತೆ ಕೆಲವು ಕಡೆ ನಮ್ಮ ಅಭ್ಯರ್ಥಿಗಳನ್ನು ಸಂಪರ್ಕಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ನಮ್ಮ ಪಕ್ಷದವರು ಸ್ಥಳೀಯ ಮಟ್ಟದಲ್ಲೇ ಇದನ್ನು ನಿಭಾಯಿಸುತ್ತಾರೆ ಎಂದು ಹೇಳಿದರು.
ರಾಜಸ್ಥಾನದಲ್ಲಿ ತೀವ್ರ ಸ್ಪರ್ಧೆ ಇರುವ ಮುನ್ಸೂಚನೆ ಸಿಕ್ಕಿದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ನನ್ನದೇ ಆದ ಅಭಿಪ್ರಾಯವಿದೆ. ಮತಯಂತ್ರದಲ್ಲಿರುವ ಮತದ ಮಾಹಿತಿ ನಿಮಗೂ ಗೊತ್ತಿಲ್ಲ, ನಮಗೂ ಗೊತ್ತಿಲ್ಲ. 48 ತಾಸುಗಳ ನಂತರ ಎಲ್ಲವೂ ಹೊರಬೀಳಲಿದೆ. ಈ ಸಮೀಕ್ಷೆಗಳು ಸುಮಾರು 10 ಸಾವಿರ ಮತದಾರರನ್ನು ಸಂಪರ್ಕಿಸಿ ಸಮೀಕ್ಷೆ ಮಾಡಲಾಗಿದೆ. ನಾವು ನಮ್ಮ ರಾಜ್ಯದಲ್ಲಿ ಪ್ರತಿ ಕ್ಷೇತ್ರದಲ್ಲಿ ಟಿಕೆಟ್ ನೀಡುವಾಗ 1 ಲಕ್ಷದಷ್ಟು ಜನರನ್ನು ಸಮೀಕ್ಷೆ ಮಾಡಿದ್ದೆವು. ತೆಲಂಗಾಣದಲ್ಲಿ ನಾನು 20 ಕ್ಷೇತ್ರ ಓಡಾಡಿದ್ದೇನೆ. ಬೇರೆ ಕ್ಷೇತ್ರಗಳಲ್ಲೂ ವರದಿ ಬಹಳ ಉತ್ತಮವಾಗಿದೆ ಎಂದು ತಿಳಿಸಿದರು.
ನೆರೆ ರಾಜ್ಯದ ನಾಯಕರು ನಮ್ಮ ರಾಜ್ಯದ ಚುನಾವಣೆಯಲ್ಲಿ ಕೆಲಸ ಮಾಡಿದ್ದರು. ನಮ್ಮ ನಾಯಕರು ಅಲ್ಲಿನ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಹೀಗಾಗಿ ನೆರೆ ರಾಜ್ಯದ ಚುನಾವಣೆಯಲ್ಲಿ ನಮಗೆ ನಮ್ಮದೇ ಆದ ಜವಾಬ್ದಾರಿ ಇರುತ್ತದೆ ಎಂದು ಶಿವಕುಮಾರ್ ಹೇಳಿದ್ದಾರೆ.
ನಿಮ್ಮ ಪಕ್ಷದ ಶಾಸಕರನ್ನು ಅನ್ಯ ಪಕ್ಷದವರು ಸಂಪರ್ಕ ಮಾಡುತ್ತಿದ್ದಾರಾ? ನಿಮ್ಮ ಶಾಸಕರು ಬೇರೆ ಪಕ್ಷಕ್ಕೆ ಹೋಗುವ ಭೀತಿ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ನಮ್ಮ ಯಾವುದೇ ಶಾಸಕರು ಬೇರೆ ಪಕ್ಷದ ಕಡೆ ಹೋಗುವುದಿಲ್ಲ. ಈ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ನಮ್ಮ ಅಭ್ಯರ್ಥಿಗಳು ತಮ್ಮನ್ನು ಸಂಪರ್ಕ ಮಾಡಿದವರ ಬಗ್ಗೆ ನಮಗೆ ಮಾಹಿತಿ ನೀಡಿದ್ದಾರೆ. ನಾವು ಕೂಡ ಜಾಗೃತರಾಗಿದ್ದೇವೆ ಎಂದರು.
ಇನ್ನೂ ನನ್ನ ಕ್ಷೇತ್ರದಲ್ಲಿ ಇಂದು ಜನ ಸಂಪರ್ಕ ಸಭೆ ಇಟ್ಟುಕೊಂಡಿದ್ದೇನೆ. ನನ್ನ ಜನರ ಅಹವಾಲು ಸ್ವೀಕರಿಸಲು ಹೋಗುತ್ತಿದ್ದೇನೆ. ನಂತರ 10 ದಿನಗಳ ಕಾಲ ಬೆಳಗಾವಿ ಅಧಿವೇಶನಕ್ಕೆ ಹೋಗಬೇಕಿದೆ. ಈ ಮಧ್ಯೆ ತೆಲಂಗಾಣಕ್ಕೆ ಹೋಗುತ್ತೇನೆ ಎಂದು ತಿಳಿಸಿದರು.












Click it and Unblock the Notifications