ಡಿ ಕೆ ಶಿವಕುಮಾರ್ ಮಂತ್ರಿ ಆಫರ್ ಕೊಟ್ಟಿದ್ದು ಯಾರಿಗೆ? ಸದನದಲ್ಲಿ ಬಹಿರಂಗ
ಬೆಂಗಳೂರು, ಮಾರ್ಚ್ 13: ಆಡಳಿತ ವೀಕೆಂದ್ರಿಕರಣ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಂಖ್ಯೆಯನ್ನು ಹೆಚ್ಚು ಮಾಡುವ ಉದ್ದೇಶದ 'ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024'ಕ್ಕೆ ವಿಧಾನ ಪರಿಷತ್ತಿನಲ್ಲಿ ಬುಧವಾರ ಅಂಗೀಕಾರವಾಗಿದೆ. ವಿಧಾನಸಭೆಯಲ್ಲಿ ಅಂಗೀಕೃತವಾದ ರೂಪದಲ್ಲಿರುವ ʼಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024ʼ ಅನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನ ಪರಿಷತ್ತಿನಲ್ಲಿ ಮಂಡಿಸಿ, ವಿಧೇಯಕದ ಉದ್ದೇಶವನ್ನು ವಿವರಿಸಿದ್ದಾರೆ.
ಈ ವೇಳೆ ಪರಿಷತ್ನಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್ ಅವರು, ಈ ವಿಧೇಯಕದಲ್ಲಿ ಉಸ್ತುವಾರಿ ಸಚಿವರು ಅಥವಾ ಬೇರೆ ನಾಮನಿರ್ದೇಶಿತರಿಗೆ ಉಪಾಧ್ಯಕ್ಷ ಸ್ಥಾನ ಎಂದು ಹೇಳಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದೀರಿ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಬೆಂಗಳೂರು ಉಸ್ತುವಾರಿಗೆ ಇಬ್ಬರು ಸಚಿವರನ್ನು ನೇಮಿಸಲಾಗಿತ್ತು. ಬೆಂಗಳೂರು ಉತ್ತರಕ್ಕೆ ಕಟ್ಟಾ ಸುಬ್ರಮಣ್ಯ ನಾಯ್ಡು, ದಕ್ಷಿಣಕ್ಕೆ ಆರ್.ಅಶೋಕ್ ಅವರನ್ನು ನೇಮಿಸಲಾಗಿತ್ತು. ಅಂತಹ ಪರಿಸ್ಥಿತಿ ಬಂದರೆ ಏನು ಮಾಡಬೇಕು? ಇನ್ನು ಕೆಲವೊಮ್ಮೆ ಬಿಜೆಪಿ ಸರ್ಕಾರ ರಚನೆಯಾಗಿ, ಬೆಂಗಳೂರಿನ ಎಲ್ಲಾ ಕ್ಷೇತ್ರಗಳಲ್ಲಿ ಶಾಸಕರು ಆಯ್ಕೆಯಾದರೆ, ಕಾಂಗ್ರೆಸ್ ಶಾಸಕರನ್ನು ಸಚಿವರನ್ನಾಗಿ ಮಾಡುವುದಿಲ್ಲ. ಆಗ ಬಿಜೆಪಿಯಿಂದಲೇ ಇರುವವರನ್ನು ಈ ಜವಾಬ್ದಾರಿ ನೀಡಬಹುದು. ಇಂತಹ ಪರಿಸ್ಥಿತಿಯಲ್ಲಿ ಶರವಣ, ಭೋಜೇಗೌಡರನ್ನು ಉಪಾಧ್ಯಕ್ಷರನ್ನಾಗಿ ಮಾಡಬಹುದು ಎಂದು ವಿವರಣೆ ನೀಡಿದರು.

ಆಗ ಜೆಡಿಎಸ್ ಸದಸ್ಯರಾದ ಶರವಣ ಅವರು ಶಿವನ ಬಾಯಿಂದ ಬಂದಿದೆ ಎಂದಮೇಲೆ ನಾನು ಸಚಿವನಾಗಬಹುದು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು "ರಾಜಕೀಯ ಎಂಬುದು ಸಾಧ್ಯತೆಗಳ ಕಲೆ. ನಾನು ನಿಮ್ಮನ್ನು ನಮ್ಮ ಪಕ್ಷಕ್ಕೆ ಬನ್ನಿ ಎಂದು ಕೇಳುತ್ತಿದ್ದೆ. ನೀವು ಬಂದಿದ್ದರೆ ಮಂತ್ರಿ ಮಾಡುತ್ತಿದ್ದೆ ಎಂದು ವಿಧಾನ ಪರಿಷತ್ನಲ್ಲಿ ಬಹಿರಂಗವಾಗಿ ಹೇಳಿದ್ದಾರೆ. ಸದಸ್ಯರಾದ ಗೋಪಿನಾಥ್ ಹಾಗೂ ನವೀನ್ ಅವರು ಕೊಟ್ಟ ಪ್ರಮುಖ ಸಲಹೆಗಳನ್ನು ಪರಿಗಣಿಸಿದ್ದೇವೆ. ನಾಗರಾಜ್ ಯಾದವ್ ಅವರು ಸಾರ್ವಜನಿಕ ಸಾರಿಗೆ ಬಗ್ಗೆ ಪ್ರಸ್ತಾಪ ಮಾಡಿದ್ದು, ಅದರ ಬಗ್ಗೆಯೂ ಗಮನ ಹರಿಸುತ್ತೇವೆ.
ಶಿವಕುಮಾರ್ ಅವರು ಕೆಲವು ಆತಂಕ ವ್ಯಕ್ತಪಡಿಸಿದ್ದಾರೆ. ನೀವು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ. ನಾವು ಛಿದ್ರ ಮಾಡುವುದಿಲ್ಲ. ಚುನಾಯಿತ ಸಮಿತಿಗೆ ಯಾವ ಅಧಿಕಾರ ನೀಡಬೇಕೋ ನೀಡಲಾಗುವುದು. ಅವರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಪಂಚಾಯ್ತಿಯಲ್ಲೂ ಮಾಡಲು ಸಾಧ್ಯವಿಲ್ಲ. ಉಮಾಶ್ರೀ ಅವರು ಮೀಸಲಾತಿ ವಿಚಾರ ಪ್ರಸ್ತಾಪ ಮಾಡಿದ್ದು, ಮೀಸಲಾತಿ ನೀಡಿದ್ದೇವೆ. ರಾಜಕೀಯವಾಗಿ ಮೀಸಲಾತಿಗೆ ನಾವು ಬದ್ಧವಾಗಿದ್ದೇವೆ. ಹಿಂದುಳಿದವರಿಗೆ ಮೀಸಲಾತಿ, ಮಹಿಳೆಯರಿಗೆ 50% ಮೀಸಲಾತಿ ನೀಡಲೇಬೇಕು. ಈ ವಿಚಾರವಾಗಿ ಗಮನಹರಿಸುತ್ತೇವೆ ಎಂದು ಭರವಸೆ ನೀಡಿದರು.
ಕೆಂಪೇಗೌಡರ ಗೋಪುರಗಳನ್ನು ಮೀರಿ ಬೆಂಗಳೂರು ಬೆಳೆದಿದೆ
ಇದಕ್ಕೂ ಮುನ್ನ ಮಸೂದೆ ಪ್ರಸ್ತಾವನೆ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಕೆಂಪೇಗೌಡರು ನಾಲ್ಕು ಗೋಪುರಗಳನ್ನು ನಿರ್ಮಿಸಿ ಬೆಂಗಳೂರನ್ನು ಕಟ್ಟಿದರು. 24 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಬೆಂಗಳೂರು ಹರಡಿಕೊಂಡಿತ್ತು. ಇಂದು 700 ಚದರ ಕಿ.ಮೀ. ವಿಸ್ತೀರ್ಣಕ್ಕೆ ಬೆಳೆದಿದೆ. ನಗರ ಬೆಳೆದಂತೆ ಆಡಳಿತಕ್ಕೆ ಸಮಸ್ಯೆ ಸವಾಲುಗಳು ಹೆಚ್ಚಾಗಿವೆ. ಇದಕ್ಕೆ ಪರಿಹಾರ ಹುಡುಕಬೇಕು, ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕು, ಪರಿಣಾಮಕಾರಿಯಾಗಿ ಆಡಳಿತ ನಡೆಯಬೇಕು. ಈ ಕಾರಣಕ್ಕೆ ಈ ವಿಧೇಯಕವನ್ನು ಪರಿಚಯಿಸಲಾಗಿದೆ ಎಂದು ತಿಳಿಸಿದರು. ಸ್ಥಳೀಯ ಸಂಸ್ಥೆಯಿಂದ ಬಂದಂತಹ ಅನೇಕ ಸದಸ್ಯರು ಪರಿಷತ್ತಿನಲ್ಲಿ ಇದ್ದಾರೆ. ವಿಧಾನಸಭೆಯಲ್ಲಿಯೂ ಅನೇಕ ಜನಪ್ರತಿನಿಧಿಗಳು ಸ್ಥಳೀಯ ಸಂಸ್ಥೆಗಳಿಂದ ಬೆಳೆದು ಈ ಹಂತಕ್ಕೆ ಬಂದಿದ್ದಾರೆ. ನೆಹರು, ರಾಜಗೋಪಾಲಚಾರಿ ಅವರು, ಬಿ.ಡಿ.ಜತ್ತಿ ಅವರು ಸ್ಥಳೀಯ ಸಂಸ್ಥೆಗಳಿಂದ ಬೆಳೆದವರು ಎಂದರು.
1970 ರಲ್ಲಿ ಇಂದಿರಾಗಾಂಧಿ ಅವರು ಸಮೀಕ್ಷೆ ಮಾಡಿಸುತ್ತಾರೆ. ಅದರ ಪ್ರಕಾರ ಶೇ.31 ರಷ್ಟು ಗ್ರಾಮೀಣ ಭಾಗದ ಜನರು ನಗರ ಭಾಗಕ್ಕೆ ವಲಸೆಯಾಗುತ್ತಿರುತ್ತಾರೆ. ಈಗ ಶೇ 39 ರಷ್ಟು ಜನಸಂಖ್ಯೆ ನಗರ ಹಾಗೂ ಅರೆ ನಗರ ಪ್ರದೇಶಗಳಿಗೆ ಬಂದು ನೆಲೆಸಿದೆ. ನಾನು ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ನಾನು ನಗರಾಭಿವೃದ್ದಿ ಸಚಿವನಾಗಿದ್ದಾಗ ನಗರದ ಜನಸಂಖ್ಯೆ 70 ಲಕ್ಷವಿತ್ತು. ಇಂದು 1.40 ಲಕ್ಷಕ್ಕೆ ಏರಿದೆ. ಬೊಮ್ಮನಹಳ್ಳಿ, ರಾಜರಾಜೇಶ್ವರಿ, ನಗರ ಸೇರಿದಂತೆ ಬೆಂಗಳೂರಿನ ಅನೇಕ ಭಾಗಗಳು ಸಿಎಂಸಿಗೆ ಸೇರಿದ್ದವು. ದಳ- ಬಿಜೆಪಿಯವರು ಸೇರಿ 110 ಹಳ್ಳಿಗಳನ್ನು ಸೇರಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಡಿದರು. ಈ ಭಾಗಗಳಿಗೆ ಇತ್ತೀಚೆಗೆ ನಾನು ಕಾವೇರಿ 5 ನೇ ಹಂತದ ಮೂಲಕ ಕುಡಿಯುವ ನೀರು ಕೊಟ್ಟಿದ್ದೇನೆ ಎಂದರು.












Click it and Unblock the Notifications