ಪ್ರಧಾನಿ ಮೋದಿ ಸರ್ಕಾರಕ್ಕೆ ಶಾಕ್ ಕೊಡುವಂತಿದೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆ!
ಬೆಂಗಳೂರು, ಮೇ 30: ಸತತ 10 ವರ್ಷಗಳ ಯುಪಿಎ ಸರ್ಕಾರದ ಆಡಳಿತ ಬಳಿಕ 6 ವರ್ಷಗಳ ಹಿಂದೆ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ನೇತೃತ್ವದ ಬಿಜೆಪಿ ಸರ್ಕಾರ ಎರಡನೇ ಅವಧಿಯ ಮೊದಲ ವರ್ಷ ಪೂರೈಸಿದೆ. ಎರಡನೇ ಅವಧಿಯಲ್ಲಿ ಕೊರೊನಾ ವೈರಸ್ ಎಂಬ ಮಹಾಮಾರಿ ಬಿಜೆಪಿ ಸರ್ಕಾರಕ್ಕೆ ಸವಾಲಾಗಿದೆ. ಕಣ್ಣಿಗೆ ಕಾಣದ ವೈರಿಯ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ಕೇಂದ್ರ ಬಿಜೆಪಿ ಸರ್ಕಾರದ ಎದುರಿಗಿದೆ.
ಲಾಕ್ಡೌನ್ ಮಧ್ಯೆ ಕೇಂದ್ರ ಬಿಜೆಪಿ ಸರ್ಕಾರ ತನ್ನ ಎರಡನೆ ಅವಧಿಯ ಮೊದಲ ವರ್ಷಾಚರಣೆ ಮುಗಿಸಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಬಿಜೆಪಿ ನಾಯಕರನ್ನು ಖಡಕ್ ಆಗಿ ಎದುರು ಹಾಕಿಕೊಂಡು, ರಾಜಕೀಯ ಜಿದ್ದಾಜಿದ್ದಿಯಲ್ಲಿ ಗೆದ್ದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಶಾಕ್ ಕೊಡುವಂತಹ ಮಾತನ್ನಾಡಿದ್ದಾರೆ.

ಜನವಿರೋಧಿ ಸರ್ಕಾರ
ಕಳೆದ 50 ವರ್ಷಗಳಲ್ಲಿ ನಿರ್ಮಾಣವಾಗಿದ್ದ ಹೊಸ ಭಾರತವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಆಡಳಿತಾವಧಿಯಲ್ಲಿ ಶೂನ್ಯಸ್ಥಿತಿಗೆ ಕೊಂಡೊಯ್ದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಕೇಂದ್ರ ಸರ್ಕಾರದ ಒಂದು ವರ್ಷದ ಆಡಳಿತವನ್ನು ಗಮನಿಸಿದ್ದು, 40 ವರ್ಷಗಳ ರಾಜಕೀಯ ಜೀವನದಲ್ಲಿ ಸ್ವಾತಂತ್ರ್ಯ ಬಂದ ಮೇಲೆ ಮೋದಿಯಂತಹ ಜನವಿರೋಧಿ ಸರ್ಕಾರವನ್ನು ಇದೂವರೆಗೂ ನೋಡಿಯೇ ಇರಲಿಲ್ಲ ಎಂದಿದ್ದಾರೆ.

ಶೇ.24 ರಷ್ಟು ನಿರುದ್ಯೋಗ
ನರೇಂದ್ರ ಮೋದಿ ಯುವಕರ ಸಹಕಾರದಿಂದ ಪ್ರಧಾನಿಯಾಗಿದ್ದಾರೆ. ಆದರೆ ಯುವಕರಿಗೆ ದೊಡ್ಡಮಟ್ಟದ ಹೊಡೆತ ಕೊಟ್ಟಿದ್ದಾರೆ. ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆ ಕುಸಿತ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ತೈಲದ ಬೆಲೆ ಕುಸಿದಿದೆ, ಆದರೆ ನಮ್ಮ ದೇಶದಲ್ಲಿ ಮಾತ್ರ ಬೆಲೆ ಗಗನಕ್ಕೇರಿದೆ.
ಬೇರೆ ದೇಶಗಳಲ್ಲಿ ತೆರಿಗೆ ಕಡಿಮೆಯಾದರೆ ನಮ್ಮ ದೇಶದಲ್ಲಿ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುವಂತೆ ತೆರಿಗೆ ಹೆಚ್ಚಿಸಲಾಗಿದೆ. ಜಿಡಿಪಿ ಶೇ.3.1ಕ್ಕೆ ಕುಸಿದಿದ್ದು, ದೇಶದಲ್ಲಿ ಸರಿಯಾದ ಆರ್ಥಿಕ ನೀತಿ ಇಲ್ಲ. 40 ವರ್ಷಗಳಲ್ಲಿ ಪ್ರಸ್ತುತ ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ.25ರಿಂದ ಶೇ.28ರವರೆಗೂ ತಲುಪಿದೆ. ಕೋವಿಡ್ ಸೋಂಕಿನಿಂದ ನಿರುದ್ಯೋಗ ಇನ್ನೂ ಹೆಚ್ಚಾಗಲಿದೆ ಎಂದು ಡಿಕೆಶಿ ಆರೋಪಿಸಿದ್ದಾರೆ.

ದೇವರೆ ಕಾಪಾಡಬೇಕು!
ಕೊರೊನಾ ವೈರಸ್ ಎದುರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ. ರಾಜ್ಯ ಸರ್ಕಾರಕ್ಕೆ ಕೋವಿಡ್ ನಿರ್ವಹಣೆ ವಿಷಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಎಲ್ಲ ಸಹಕಾರ ನೀಡಲಾಗಿತ್ತು. ಆದರೆ ಉಪಯೋಗವಾಗಲಿಲ್ಲ. ಕನಿಷ್ಠ ಕೋವಿಡ್ ಸೋಂಕಿನ ಸಂಕಷ್ಟದ ಕುರಿತು ಚರ್ಚಿಸಲು ಸರ್ಕಾರ ಹೆಜ್ಜೆ ಇಟ್ಟಿರಲಿಲ್ಲ. ಸರ್ವಪಕ್ಷ ಸಭೆಯನ್ನು ಕರೆಯುವಂತೆ ಸಾಕಷ್ಟು ಬಾರಿ ಒತ್ತಾಯಿಸಿದ ಮೇಲೆ ಸರ್ಕಾರ ಸಭೆ ಕರೆಯಿತು.
ರಾಜ್ಯ ಬಿಜೆಪಿ ಸರ್ಕಾರಕ್ಕೆ ವ್ಯಾವಹಾರಿಕ ಜ್ಞಾನ ಇಲ್ಲ, ಅಧಿಕಾರಿಗಳಿಗೆ ಬೆಲೆ ಇಲ್ಲ. ಪ್ರತಿ ದಿನ ಕೊರೊನಾವೈರಸ್ ನಿಯಂತ್ರಣದ ವರದಿಯನ್ನು ಬಿಡುಗಡೆ ಮಾಡಬೇಕು. ಆದರೆ ಅದಾಗುತ್ತಿಲ್ಲ. ಹೀಗಾಗಿ ನಮ್ಮ ರಾಜ್ಯವನ್ನು ದೇವರೇ ಕಾಪಾಡಬೇಕು ಎಂದರು.

ಪ್ರಧಾನಿ ಮೋದಿ ಕಾರಣ
ಕೊರೋನಾ ಪರಿಸ್ಥಿತಿ ನಿಭಾಯಿಸಲು ಪೂರ್ವ ತಯಾರಿ ನಡೆಸಲಿಲ್ಲ. ಕಾರ್ಮಿಕರು, ರೈತರಿಗೆ ನೆರವಾಗುವುದನ್ನು ಬಿಟ್ಟು. ಚಪ್ಪಾಳೆ ಹೊಡೆಸಿ, ಗಂಟೆ ಬಾರಿಸಿ, ದೀಪ ಹಚ್ಚಲು ಹೇಳಿದರು. ಈ ವಿಚಾರದಲ್ಲಿ ತಜ್ಞರನ್ನಾಗಲಿ, ಪ್ರತಿಪಕ್ಷಗಳನ್ನಾಗಲಿ ಸಂಪರ್ಕಿಸಿ ಸಲಹೆ ತೆಗೆದುಕೊಳ್ಳಲಿಲ್ಲ. ಸಲಹೆ ತೆಗೆದುಕೊಳ್ಳುವುದು ಪ್ರಧಾನಿಗೆ ಪ್ರತಿಷ್ಠೆಯ ವಿಚಾರವಾಗಿದೆ.
ಹೀಗಾಗಿ ರೈತ, ಶ್ರಮಿಕ ವರ್ಗಕ್ಕೆ ನ್ಯಾಯ ಕೊಡುವಲ್ಲಿ ಸರ್ಕಾರ ಸೋತಿದೆ. ಲಾಕ್ಡೌನ್ ಸಂದರ್ಭದಲ್ಲಿ ಸಣ್ಣ ಉದ್ಯಮಿಗಳಿಗೆ ಯಾವುದೇ ಸಹಾಯ ಮಾಡಲಿಲ್ಲ. ಒಟ್ಟಾರೆ ಇಡೀ ದೇಶದಲ್ಲಿ ಅಭಿವೃದ್ಧಿಗೆ ಒಂದೇ ಒಂದು ಕಾರ್ಯಕ್ರಮ ರೂಪಿಸಲಿಲ್ಲ. ಹಸಿವಿನಿಂದ ಇವತ್ತು ಸಾವಿರಾರು ಜನ ಸತ್ತಿದ್ದಾರೆ. ಇವರಿಗೆ ಅಧಿಕಾರ ನಡೆಸುವುದು ಗೊತ್ತಿಲ್ಲ. ರೈತರಿಗೆ, ಕಾರ್ಮಿಕರಿಗೆ ಮಾರಕವಾದ ವರ್ಷವಿದು. ಪ್ರತಿಯೊಬ್ಬರ ಬದುಕು ಶೂನ್ಯವಾಗುವುದಕ್ಕೆ ಬಿಜೆಪಿ ನಾಯಕರೇ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪ ಮಾಡಿದರು.












Click it and Unblock the Notifications