ಕರ್ನಾಟಕದ ಜಿಲ್ಲಾ ಸುದ್ದಿಗಳ ಇಣುಕು ನೋಟ
ಮೈಸೂರು, ಅ.8 : ನಗರದ ಕೆವಿಸಿ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ಮಂಗಳವಾರ ಅಗ್ನಿ ಆಕಸ್ಮಿಕ ಸಂಭವಿಸಿದೆ. ಸ್ಥಳಕ್ಕೆ ತಕ್ಷಣ ಅಗ್ನಿಶಾಮಕ ದಳದ ವಾಹನಗಳು ಆಗಮಿಸಿ, ಬೆಂಕಿ ನಂದಿಸಿದವು. ಆದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ಮೈಸೂರಿನ ಕೃಷ್ಣ ವಿಲಾಸ ರಸ್ತೆಯಲ್ಲಿನ ಕೆವಿಸಿ ಇಂಟರ್ ನ್ಯಾಷನಲ್ ಹೊಟೇಲ್ನ 4ನೇ ಅಂತಸ್ತಿನಲ್ಲಿ ಮಂಗಳವಾರ ಬೆಳಗ್ಗೆ ಹೊಗೆ ಬರುತ್ತಿರುವುದನ್ನು ಗಮನಿಸಿದ ಸಂಚಾರಿ ಪೊಲೀಸ್ ಪೇದೆ ಸುಧಾಕರ್ ಹೊಟೇಲ್ ಮಾಲೀಕರಿಗೆ ಮತ್ತು ಅಗ್ನಿ ಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ.
ತಕ್ಷಣ ಹೋಟೆಲ್ ಮಾಲೀಕರು ಬೇರೆ-ಬೇರೆ ಮಹಡಿಗಳಲ್ಲಿದ್ದ ಪ್ರವಾಸಿಗರನ್ನು ಹೊರಗೆ ಕಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ 8 ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದವು. ಸತತ ಮೂರು ಗಂಟೆಗಳ ಕಾರ್ಯಾಚರಣೆ ನಂತರ ಬೆಂಕಿ ನಂದಿಸಲಾಯಿತು.
4ನೇ ಅಂತಸ್ತಿನಲ್ಲಿದ್ದ 1 ಹಾಲ್ ಹಾಗೂ ರೂಂ ಬೆಂಕಿಗೆ ಆಹುತಿಯಾಗಿದೆ ಎಂದು ಹೋಟೆಲ್ ಸಿಬ್ಬಂದಿ ತಿಳಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ಅಥವ ಗ್ಯಾಸ್ ಸಿಲಿಂಡರ್ ಲೀಕ್ನಿಂದ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ಮೈಸೂರಿನಲ್ಲಿ ಅಗ್ನಿ ಆಕಸ್ಮಿಕ
ಮೈಸೂರಿನ ಕೆವಿಸಿ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು 4 ನೇ ಮಹಡಿಯ 1 ಕೊಠಡಿ ಮತ್ತು ಹಾಲ್ ಬೆಂಕಿಗೆ ಆಹುತಿಯಾಗಿದೆ. ಪ್ರವಾಸಿಗರನ್ನು ಹೊರಗೆ ಕಳಿಸಿ 8 ಅಗ್ನಿ ಶಾಮಕದಳದ ವಾಹನಗಳು ಬೆಂಕಿ ನಂದಿಸಿದವು. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.

6 ಕೋಟಿ ನಷ್ಟ ಉಂಟಾಗಿದೆ
ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಾಗೂ ಉದ್ವಿಗ್ನಪರಿಸ್ಥಿತಿಯಿಂದಾಗಿ ರಾಜ್ಯ ಸಾರಿಗೆ ಸಂಸ್ಥೆಗೆ 6 ಕೋಟಿ ರೂ ನಷ್ಟ ಉಂಟಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ದಿ ರಾಯಚೂರಿನಲ್ಲಿ ಹೇಳಿದ್ದಾರೆ. ಅಖಂಡ ಆಂಧ್ರಕ್ಕಾಗಿ ನಡೆಯುತ್ತಿರುವ ಪ್ರತಿಭಟನೆ ಕಾವು ಪಡೆಯುತ್ತಿದೆ. ಇದರಿಂದ ರಾಜ್ಯದ ವಿವಿಧ ಭಾಗಗಳಿಂದ ಆಂಧ್ರಕ್ಕೆ ತೆರಳುವ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಪರಿಣಾಮ ಸಾರಿಗೆ ಸಂಸ್ಥೆಗೆ 6ಕೋಟಿ ರೂ ನಷ್ಟ ಉಂಟಾಗಿದೆ ಎಂದರು.

ಅಕ್ರಮ ಗಣಿಗಳ ಮೇಲೆ ದಾಳಿ
ಯಲಹಂಕದಲ್ಲಿ ನಡೆಯುತ್ತಿದ್ದ 30 ಅಕ್ರಮ ಕಲ್ಲು ಗಣಿಗಾರಿಕೆ ಕೇಂದ್ರದ ಮೇಲೆ ಜಿಲ್ಲಾಧಿಕಾರಿಗಳು ದಾಳಿ ನಡೆಸಿ, ಗಣಿಗಾರಿಕೆ ಅನುಮತಿಯನ್ನು ರದ್ದುಗೊಳಿಸಿದ್ದಾರೆ. ಬೆಂಗಳೂರು ಹೊರವಲಯದ ಚಿಕ್ಕಜಾಲ ಬೆಟ್ಟಹಲಸೂರಿನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಮೇಲೆ ಮಂಗಳವಾರ ದಾಳಿ ನಡೆಸಿದರು. ಈ ಸಂದರ್ಭದಲ್ಲಿ 60 ಕೋಟಿ ರೂ ಮೌಲ್ಯದ ಜಲ್ಲಿಕಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಎರಡು ಶವ ಪತ್ತೆ
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಗಗನಚುಕ್ಕಿ ಜಲಪಾತದಲ್ಲಿ ನೀರು ಪಾಲಾಗಿದ್ದ ನಾಲ್ವರ ಪೈಕಿ ಇಬ್ಬರ ಶವ ಮಂಗಳವಾರ ಪತ್ತೆಯಾಗಿದೆ. ಭಾನುವಾರ ಗಗನಚುಕ್ಕಿ ಪ್ರವಾಸಕ್ಕೆ ಬಂದಿದ್ದ ಚಾಮರಾಜನಗರ ಜಿಲ್ಲೆ ಹೊಂಗನೂರಿನ ವಸಂತ್, ಹೇಮಂತ್, ಚಂದ್ರಕಾಂತ್ ಹಾಗೂ ಬೆಂಗಳೂರಿನ ಆಯಿಷಾ ಎಂಬುವರು ನೀರು ಪಾಲಾಗಿದ್ದರು. ಮಂಗಳವಾರ 2 ಶವಗಳು ದೊರೆತಿದ್ದು, ಮತ್ತೆರಡು ಶವಕ್ಕಾಗಿ ಹುಡುಕಾಟ ನಡೆಯುತ್ತಿದೆ.

ಅತ್ಯಾಚಾರಿಗೆ 7 ವರ್ಷ ಶಿಕ್ಷೆ
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಮೂರನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ 7 ವರ್ಷ ಜೈಲು ಹಾಗೂ 32 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಮಂಡ್ಯದ ರವಿಕುಮಾರ್ ಶಿಕ್ಷೆಗೊಳಗಾದ ಆರೋಪಿ. 2012ರ ಏಪ್ರಿಲ್ 12ರಂದು ಪಕ್ಕದ ಮನೆಯ ಬಾಲಕಿಗೆ ರವಿಕುಮಾರ್, ಜ್ಯೂಸ್ ನಲ್ಲಿ ಮತ್ತಿನ ಔಷಧಿ ಬೆರಸಿಕೊಟ್ಟು ಅತ್ಯಾಚಾರ ನಡೆಸಿದ್ದ.












Click it and Unblock the Notifications