ಚುನಾವಣೆ ಎಫೆಕ್ಟ್, ರಾಜ್ಯಕ್ಕೆ 43 ತಾಲೂಕುಗಳ ಭಾಗ್ಯ
ಬೆಂಗಳೂರು, ಜ.27: ಬಿಜೆಪಿ ಸರ್ಕಾರ ಘೋಷಣೆ ಮಾಡಿದ್ದ ಹೊಸ ತಾಲೂಕುಗಳ ರಚನೆ ಸದ್ಯಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ ಸರ್ಕಾರ ಈಗ ರಾಗ ಬದಲಾಯಿಸಿದೆ. ಹೊಸದಾಗಿ 43 ತಾಲೂಕುಗಳನ್ನು ರಾಜ್ಯದ ನಕ್ಷೆಗೆ ಸೇರಿಸುತ್ತಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜನಾನುರಾಗಿ ಎನಿಸಿಕೊಳ್ಳಲು ಎಲ್ಲ ರೀತಿಯಿಂದಲೂ ಕಾಂಗ್ರೆಸ್ ಯತ್ನಿಸುತ್ತಿದೆ.
ತಾಲೂಕುಗಳನ್ನು ಘೋಷಣೆ ಮಾಡುವುದು ದೊಡ್ಡದಲ್ಲ. ಈ ತಾಲೂಕುಗಳಿಗೆ ಆರ್ಥಿಕ ನೆರವು, ವಿವಿಧ ಸೌಲಭ್ಯ ಒದಗಿಸಬೇಕಾಗುತ್ತದೆ. ಇದ್ಯಾವುದನ್ನೂ ನೋಡದೆಯೇ ಹಿಂದಿನ ಸರ್ಕಾರ 34 ತಾಲೂಕುಗಳನ್ನು ಘೋಷಿಸಿದೆ. ತಾಲೂಕುಗಳ ರಚನೆಗೂ ಕೋಟಿಗಟ್ಟಲೆ ಹಣ ರಾಜ್ಯ ಬೊಕ್ಕಸದಿಂದ ವ್ಯಯ ಮಾಡಬೇಕಾಗುತ್ತದೆ ಎಂದು ಸಚಿವ ಶ್ರೀನಿವಾಸ್ ಪ್ರಸಾದ್ ಅವರು ಈ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಒಂದು ಜಿಲ್ಲೆ ರಚನೆಗೆ ಸುಮಾರು 15 ರಿಂದ 20 ಕೋಟಿ ಖರ್ಚಾಗುತ್ತದೆ. ಚುನಾವಣೆ ದೃಷ್ಟಿಯಿಂದ ಶೆಟ್ಟರ್ ಸರ್ಕಾರ ಕಳೆದ ಬಜೆಟ್ ನಲ್ಲಿ ಸುಮಾರು 43 ಹೊಸ ತಾಲೂಕುಗಳನ್ನು ರಚನೆ ಮಾಡಲು 86 ಕೋಟಿ ರು ಘೋಷಿಸಿತ್ತು. ಈಗ ಇದೇ ತಂತ್ರ ಮುಂದುವರೆಸಿರುವ ಸಿದ್ದರಾಮಯ್ಯ ಸರ್ಕಾರ ಅಷ್ಟೇ ಸಂಖ್ಯೆಯ ತಾಲೂಕುಗಳ ಉದಯಕ್ಕೆ ನಾಂದಿ ಹಾಡುತ್ತಿದೆ. ಮುಂದಿನ ಬಜೆಟ್ ಅಧಿವೇಶನದಲ್ಲಿ ಇದಕ್ಕೆ ಅನುಮೋದನೆ ಸಿಗಲಿದೆ.

ಕರ್ನಾಟಕ ಹೊಸ ತಾಲೂಕುಗಳ ರಚನೆ
* ಬೆಳಗಾವಿ: ನಿಪ್ಪಾಣಿ, ಮೂಡಲಗಿ, ಕಾಗವಾಡ
* ಬಾಗಲಕೋಟೆ: ಗುಳೇದಗಡ್ಡ, ರಬಕವಿ, ಬನಹಟ್ಟಿ, ಇಳಕಲ್
* ಚಾಮರಾಜನಗರ : ಹನೂರು
* ದಾವಣಗೆರೆ: ನ್ಯಾಮತಿ
* ಬೀದರ್: ಚಿಗುಪ್ಪ, ಕಮಲಾನಗರ, ಹುಸೂರು
* ಬಳ್ಳಾರಿ : ಕಂಪ್ಲಿ, ಕೊಟ್ಟೂರು, ಕುರುಗೋಡು
* ಧಾರವಾಡ: ಹುಬ್ಬಳ್ಳಿ ನಗರ, ಅಣ್ಣೀಗೇರಿ, ಆಳ್ನಾವರ
* ಗದಗ: ಗಜೇಂದ್ರಗಡ, ಲಕ್ಷ್ಮೇಶ್ವರ
* ಗುಲ್ಬರ್ಗ, ಯಾದಗಿರಿ: ಕಳಗಿ, ಹುಣಸಗಿ, ಕಮಲಾಪುರ, ಯಡ್ರಾವಿ, ಶಹಬಾದ್, ವಡಗೇರಾ, ಗುರುಮಿಟ್ಕಲ್
* ಕೊಪ್ಪಳ: ಕುಕನೂರು, ಕನಕಗಿರಿ, ಕಾರಟಗಿ
* ರಾಯಚೂರು: ಮಸ್ಕಿ, ಶಿರವಾರ
* ಉಡುಪಿ: ಬ್ರಹ್ಮಾವರ, ಬೈಂದೂರು
* ದಕ್ಷಿಣ ಕನ್ನಡ: ಮೂಡಬಿದರೆ, ಕಡಬ
* ಬೆಂಗಳೂರು ನಗರ : ಯಲಹಂಕ
* ಬಿಜಾಪುರ: ಬಬಲೇಶ್ವರ, ನಿಡಗುಂಡಿ, ತಿಕೋಟಾ, ದೇವರಹಿಪ್ಪರಗಿ, ತಾಳಿಕೋಟೆ, ಚಡಚಣ, ಕೋಲ್ಹಾರ

ಮೌಲ್ಯಾಧಾರಿತ ಶಿಕ್ಷಣ ಅಗತ್ಯ: ಎಂ.ಆರ್. ದೊರೆಸ್ವಾಮಿ
ಬೆಂಗಳೂರು: ಮಕ್ಕಳಿಗೆ ಕೇವಲ ಪರೀಕ್ಷೆ ತಯಾರಿಯ ಶಿಕ್ಷಣ ನೀಡುವುದಕ್ಕಿಂತ ಗುಣಮಟ್ಟ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ದೊರಕಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಶಿಕ್ಷಣ ತಜ್ಞ ಡಾ. ಎಂ.ಆರ್. ದೊರೆಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ದ್ವಾರಕನಗರದ ಪಿಇಎಸ್ ವಿಶ್ವವಿದ್ಯಾನಿಲಯದಲ್ಲಿ ರತ್ನಗಿರಿ ವಿದ್ಯಾಸಂಸ್ಥೆಯು ರತ್ನಗಿರಿ ಪಬ್ಲಿಕ್ ಸ್ಕೂಲ್ ಮತ್ತು ರತ್ನಗಿರಿ ಪಿಯು ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ರತ್ನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಶಿಕ್ಷಣ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ ನಿಜ, ಆದರೆ, ಗುಣಾತ್ಮಕ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ ಎಂದರು.
ಸಾನಿಧ್ಯ ವಹಿಸಿದ್ದ ಬೆಂಗಳೂರು ಮಠದ ರಾಮಕೃಷ್ಣ ಮಠದ ಶ್ರೀ ಹರ್ಷಾನಂದ ಸ್ವಾಮೀಜಿ ಮಾತನಾಡಿ, ಭವಿಷ್ಯದಲ್ಲಿ ಭಾರತಕ್ಕೆ ಆಗ್ರಸ್ಥಾನ ದೊರೆಯಬೇಕಾದರೆ ಇನ್ನಷ್ಟು ಕ್ರಾಂತಿಕಾರಕ ಬದಲಾವಣೆಗಳು ಆಗಬೇಕು. ಈಗ ಇಡೀ ವಿಶ್ವವೇ ಭಾರತವನ್ನು ಎದುರು ನೋಡುತ್ತಿದೆ. ಅದರತ್ತ ನಮ್ಮ ಚಿತ್ತ ಹರಿಸಬೇಕಾಗಿದೆ. ಪ್ರಪಂಚಕ್ಕೆ ಭಾರತ ಏನ್ನೆಂದು ತೋರ್ಪಡಿಸಿದ ದಾರ್ಶನಿಕ ಸ್ವಾಮಿ ವಿವೇಕಾನಂದರ ಹಾದಿಯಲ್ಲಿ ನಾವಿಂದು ಸಾಗಬೇಕಾಗಿದೆ ಎಂದು ಹೇಳಿದರು.
****

ಚಿತ್ರದುರ್ಗ- ಶಿವಮೊಗ್ಗ ಹೆದ್ದಾರಿ ಪೂರ್ಣ?
ಸುಮಾರು 463.51 ಕೋಟಿ ವೆಚ್ಚದಲ್ಲಿ ಚಿತ್ರದುರ್ಗದಿಂದ ಶಿವಮೊಗ್ಗದವರೆಗಿನ 106.30 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ 13ರ ಜೋಡಿ ಮಾರ್ಗ ಮುಂದಿನ 2 ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ಹೇಳಿದರು.

ಹಾವೇರಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಅಗತ್ಯ
ಹಾವೇರಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಅಗತ್ಯವಿದ್ದು, 2014-15ನೇ ಸಾಲಿನಲ್ಲಿ ಪ್ರಾರಂಭಿಸಲಾಗುವುದು ಎಂದು ಸಕ್ಕರೆ, ಮುಜರಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ತಿಳಿಸಿದರು.
16 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಹಾವೇರಿ ಜಿಲ್ಲೆ ಈಗ ಎಲ್ಲ ಸಂಪನ್ಮೂಲ ಹೊಂದಿ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ. ಜಿಲ್ಲೆ ಕೃಷಿ ಪ್ರಧಾನವಾಗಿರುವಂತೆ ಉದ್ಯಮ ರಂಗದಲ್ಲೂ ಗುರುತಿಸುವ ಕಾರ್ಯ ನಡೆದಿದೆ. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಕಾಮಗಾರಿಗಳು ಪೂರ್ಣಗೊಂಡಿದ್ದು, ಕಾಗಿನೆಲೆ ಹಾಗೂ ಬಾಡ ಪ್ರವಾಸಿ ತಾಣವಾಗಿ ಹೊರಹೊಮ್ಮಿವೆ ಎಂದು ಹೇಳಿದರು.











Click it and Unblock the Notifications