ಐಎನ್ಎಸ್ ವಿಕ್ರಮಾದಿತ್ಯ ಕಾರವಾರ ನೌಕಾನೆಲೆಗೆ
ಬೆಂಗಳೂರು, ನ.13 : ದೇಶದ ಅತಿದೊಡ್ಡ ವಿಮಾನ ವಾಹಕ ನೌಕೆ 'ಐಎನ್ಎಸ್ ವಿಕ್ರಮಾದಿತ್ಯ' ಕಾರವಾರದ ನೌಕಾನೆಲೆಗೆ ಆಗಮಿಸುತ್ತಿದೆ. ಇದರಿಂದಾಗಿ ಅರಬೀ ಸಮುದ್ರದಲ್ಲಿ ಉಂಟಾಗುವ ಯಾವುದೇ ಬಿಕ್ಕಟ್ಟನ್ನು ನೌಕಾಪಡೆಗೆ ಶಕ್ತಿ ದೊರೆಯಲಿದೆ. ನ.16ರಂದು ರಷ್ಯಾದಲ್ಲಿ ವಿಕ್ರಮಾದಿತ್ಯ ನೌಕೆಯನ್ನು ರಷ್ಯಾ ಭಾರತಕ್ಕೆ ಹಸ್ತಾಂತರಿಸಲಿದೆ.
ರಷ್ಯಾದಲ್ಲಿ 44,570 ಟನ್ ತೂಕವನ್ನು ಹೊಂದಿರುವ ಐಎನ್ಎಸ್ ವಿಕ್ರಮಾದಿತ್ಯ ನೌಕೆಯನ್ನು ನ.16ರಂದು ಭಾರತೀಯ ನೌಕಾಪಡೆಗೆದ ಹಸ್ತಾಂತರಿಸಲಾಗುತ್ತದೆ. ರಕ್ಷಣಾ ಸಚಿವ ಎ.ಕೆ.ಆಂಟನಿ, ಸೇರಿದಂತೆ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಐಎನ್ಎಸ್ ವಿಕ್ರಮಾದಿತ್ಯ ಹಸ್ತಾಂತರ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
ಈ ನೌಕೆಯನ್ನು ರಷ್ಯಾದಲ್ಲಿ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಿದ ಒಂದು ತಿಂಗಳ ನಂತರ ಇದು ಭಾರತಕ್ಕೆ ಆಗಮಿಸಲಿದೆ. ಅದನ್ನು ಸದ್ಯ ಕಾರವಾರದ ನೌಕಾನೆಲೆಯಲ್ಲಿ ಇಡಲಾಗುತ್ತದೆ ಎಂದು ವೈಸ್ ಅಡ್ಮಿರಲ್ ಶೇಖರ್ ಸಿಂಗ್ ತಿಳಿಸಿದ್ದಾರೆ. ಕಾರವಾರದಲ್ಲಿ ಈ ನೌಕೆಯನ್ನು ಇರಿಸುವುದರಿಂದ ಅರಬೀ ಸಮುದ್ರ ವ್ಯಾಪ್ತಿಯಲ್ಲಿ ಉಂಟಾಗುವ ಯಾವುದೇ ಬಿಕ್ಕಟ್ಟನ್ನು ಎದುರಿಸಲು ನೌಕಾಪಡೆಗೆ ಸಾಧ್ಯವಾಗಲಿದೆ
ಭಾರತೀಯ ನೌಕಾಪಡೆಗೆ ಮೊದಲು ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ 'ಧ್ರುವ' ವನ್ನು ಸೇರ್ಪಡೆಗೊಳಿಸಲಾಗಿತ್ತು. ದೇಶಿಯವಾಗಿ ವಿನ್ಯಾಸಗೊಳಿಸಿದ್ದ ಅದನ್ನು ಬೆಂಗಳೂರಿನ ಹಿಂದುಸ್ತಾನ್ ಏರಾನಾಟಿಕ್ಸ್ನಲ್ಲಿ ವಿನ್ಯಾಸಗೊಳಿಸಲಾಗಿತ್ತು. ಸದ್ಯ ಐಎನ್ಎಸ್ ವಿಕ್ರಮಾದಿತ್ಯ ಸಹ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ, ಇದರಿಂದ ಪಡೆಯ ಬಲ ಮತ್ತಷ್ಟು ಹೆಚ್ಚಾಗಲಿದೆ. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ಕಾರವಾರಕ್ಕೆ ಐಎನ್ಎಸ್ ವಿಕ್ರಮಾದಿತ್ಯ
ದೇಶದ ಅತಿದೊಡ್ಡ ವಿಮಾನ ವಾಹಕ ನೌಕೆ 'ಐಎನ್ಎಸ್ ವಿಕ್ರಮಾದಿತ್ಯ' ಕಾರವಾರದ ನೌಕಾನೆಲೆಗೆ ಆಗಮಿಸುತ್ತಿದೆ. ರಷ್ಯಾ ನ.17 ರಂದು ಭಾರತೀಯ ನೌಕಾಪಡೆಗೆ ವಿಕ್ರಮಾದಿತ್ಯ ನೌಕೆಯನ್ನು ಹಸ್ತಾಂತರಿಸಲಿದೆ. ಒಂದು ತಿಂಗಳ ಬಳಿಕ ಇದು ಕಾರವಾರಕ್ಕೆ ಆಗಮಿಸಲಿದೆ. ಇದರಿಂದಾಗಿ ಅರಬೀ ಸಮುದ್ರದಲ್ಲಿ ಉಂಟಾಗುವ ಯಾವುದೇ ಬಿಕ್ಕಟ್ಟನ್ನು ಎದುರಿಸಲು ನೌಕಾಪಡೆಗೆ ಶಕ್ತಿ ದೊರೆಯಲಿದೆ.

ಕೆಜೆಪಿ ಕಾರ್ಯಕರ್ತರ ಉರುಳು ಸೇವೆ
ಎಲ್ಲ ಸಮುದಾಯದ ಬಡ ಹೆಣ್ಣು ಮಕ್ಕಳಿಗೆ ಶಾದಿಭಾಗ್ಯ ಯೋಜನೆ ವಿಸ್ತರಿಸಲು ಒತ್ತಾಯಿಸಿ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಬೆಂಗಳೂರಿನಲ್ಲಿ ನಡೆಸುತ್ತಿರುವ ಧರಣಿ ಬೆಂಬಲಿಸಿ ತುಮಕೂರಿನಲ್ಲಿ ಕೆಜೆಪಿ ಕಾರ್ಯಕರ್ತರು ಉರುಳು ಸೇವೆ ನಡೆಸಿದರು. ಸಿದ್ಧಗಂಗಾ ಮಠದ ಬೆಟ್ಟದ ಮೇಲಿನ ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಬೆಟ್ಟದ ಮೇಲಿಂದ ಮೆಟ್ಟಿಲುಗಳ ಮೇಲೆ ಉರುಳುಸೇವೆ ನಡೆಸಿ ಯಡಿಯೂರಪ್ಪ ಅವರಿಗೆ ಬೆಂಬಲ ಸೂಚಿಸಿದರು. ಜಿಲ್ಲಾ ಕೆಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್, ಮುಖಂಡರಾದ ಧನಿಯಾಕುಮಾರ್, ರವೀಶಯ್ಯ, ಟಿ.ಆರ್.ಸದಾಶಿವಯ್ಯ, ಪಿ.ಗಂಗರಾಜು, ನಗರಸಭಾ ಸದಸ್ಯ ಕರುಣಾರಾಧ್ಯ ಮತ್ತಿತರರು ಭಾಗವಹಿಸಿದ್ದರು.

ಕಂದಾಯ ಅಧಿಕಾರಿ ಲೋಕಾಯುಕ್ತ ಬಲೆಗೆ
ದಾವಣಗೆರೆಯಲ್ಲಿ ಜಮೀನಿನ ಖಾತೆ ಬದಲಾವಣೆಗೆ ರೈತನಿಂದ ಲಂಚ ಪಡೆಯುತ್ತಿದ್ದ ಸಂತೆಬೆನ್ನೂರು ಗ್ರಾಮದ ಕಂದಾಯ ಅಧಿಕಾರಿ ರವಿಕುಮಾರ್ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿದ್ದಾರೆ. ರೈತ ಲೋಕೇಶ್ ಖಾತೆ ಬದಲಾವಣೆಗಾಗಿ 20 ಸಾವಿರ ರೂ. ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 13 ಸಾವಿರ ಕೊಡುವಂತೆ ತಿಳಿಸಿದ್ದು, ಅದರಂತೆ ಲೋಕೇಶ್ ಅವರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಇನ್ಸ್ಪೆಕ್ಟರ್ ದಾಳಿ ನಡೆಸಿ ರವಿಕುಮಾರ್ ಅವರನ್ನು ಬಂಧಿಸಿದ್ದಾರೆ.

15 ಲಕ್ಷ ಮೌಲ್ಯದ ಆಭರಣ ಕಳ್ಳತನ
ದೇವಾಲಯದ ಬೀಗ ಮುರಿದು ವಜ್ರ ಖಚಿತ ದೇವರ ನಾಮ ಸೇರಿದಂತೆ 15 ಲಕ್ಷ ರೂ. ಬೆಲೆಯ ಚಿನ್ನಾಭರಣ, ಬೆಳ್ಳಿ ಕಿರೀಟಗಳನ್ನು ಕಳವು ಮಾಡಿರುವ ಘಟನೆ ರಾಯಚೂರು ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಆಶಾಪುರ ರಸ್ತೆಯಲ್ಲಿನ ರಾಜಮಾತಾ ದೇವಾಲಯ ಆವರಣದಲ್ಲಿರುವ ವೆಂಕಟೇಶ್ವರ ದೇವಾಲಯದಲ್ಲಿ ಮಂಗಳವಾರ ಮುಂಜಾನೆ ಆಭರಣ ಕಳುವಾಗಿದೆ.
ಕಳುವಾಗಿರುವ ಚಿನ್ನ, ವಜ್ರ, ಬೆಳ್ಳಿ ಆಭರಣಗಳ ಮೌಲ್ಯ ಸುಮಾರು 15 ಲಕ್ಷ ಎಂದು ಅಂದಾಜಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಅಪಘಾತದಲ್ಲಿ ಶಾಸಕರಿಗೆ ಗಾಯ
ಕೆಎಸ್ಆರ್ ಟಿಸಿ ವೋಲ್ವೊ ಬಸ್ಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಿಜೆಪಿಯ ವಿಧಾನಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ್ ಗಾಯಗೊಂಡಿರುವ ಘಟನೆ ಬುಧವಾರ ಬೆಳಗ್ಗೆ ಅರಿಶಿನಕುಂಟೆ ಚೆಕ್ ಪೋಸ್ಟ್ ಬಳಿ ನಡೆದಿದೆ. ಮಂಗಳವಾರ ರಾತ್ರಿ ಬೆಳಗಾವಿಯಿಂದ ತಮ್ಮ ಆಪ್ತ ಸಹಾಯಕರೊಂಗಿಗೆ ಬೇವಿನಮರದ್ ವೋಲ್ವೊ ಬಸ್ನಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದರು. ಲಾರಿಯೊಂದನ್ನು ಹಿಂದಿಕ್ಕಲು ಹೋದ ವೋಲ್ವೊ ಬಸ್ ಎದುರಿನ ಲಾರಿಗೆ ಡಿಕ್ಕಿ ಹೊಡೆದಿದೆ, ಈ ಸಂದರ್ಭದಲ್ಲಿ ಹಿಂದಿನಿಂದ ಮತ್ತೊಂದು ಲಾರಿಯೊಂದು ವೋಲ್ವೊ ಬಸ್ಗೆ ಡಿಕ್ಕಿ ಹೊಡೆದಿದೆ. ಬಸ್ಸಿನ ಹಿಂಬದಿ ಕೂತಿದ್ದ ಬೇವಿನಮರದ್ ಅವರ ಬೆನ್ನು ಮೂಳೆಗೆ ಅಪಘಾತದಿಂದ ಗಾಯಗಳಾಗಿದ್ದು, ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications