ಸುರೇಶ್ ಬಾಬುಗೆ ಜಾಮೀನು, ಹೆಬ್ಬಾರ್ ಗೆ ನಿರಾಸೆ
ಬೆಂಗಳೂರು, ಏ. 30: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಜೈಲು ಸೇರಿರುವ ಕಂಪ್ಲಿ ಕ್ಷೇತ್ರದ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಶಾಸಕ ಸುರೇಶ್ ಬಾಬು ಅವರಿಗೆ ಸಿಬಿಐ ವಿಶೇಷ ನ್ಯಾಯಾಲು ಷರತ್ತು ಬದ್ಧ ಜಾಮೀನು ನೀಡಿದೆ. ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ನೋಡಿಕೊಳ್ಳಲು ಹತ್ತು ದಿನಗಳ ಜಾಮೀನು ಮಂಜೂರು ಮಾಡಲಾಗಿದೆ.
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪ್ಲಿ ಶಾಸಕ ಸುರೇಶ್ ಬಾಬು, ಕೂಡ್ಲಿಗಿ ಶಾಸಕ ನಾಗೇಂದ್ರ, ವಿಜಯನಗರ ಶಾಸಕ ಆನಂದ್ಸಿಂಗ್, ಕಾರವಾರ ಶಾಸಕ ಸತೀಶ್ ಸೈಲ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದು, ಎಲ್ಲರೂ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ತಾಯಿಯು ಅನಾರೋಗ್ಯದಿಂದ ಬಳಲುತ್ತಿದ್ದು ಅವರನ್ನು ನೋಡಿಕೊಳ್ಳಲು 10 ದಿನಗಳ ಜಾಮೀನು ನೀಡಬೇಕೆಂದು ಸುರೇಶ್ ಬಾಬು ಪರ ವಕೀಲರು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಹತ್ತು ದಿನಗಳ ಷರತ್ತುಬದ್ಧ ಜಾಮೀನು ನೀಡಿದೆ.
ಹೆಬ್ಬಾರ್ ಗೆ ನಿರಾಸೆ : ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಬಂಧಿತರಾಗಿರುವ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಅವರ ಜಾಮೀನು ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಡಿಸೆಂಬರ್ 23 2013ರಂದು ವಿವೇಕ್ ಹೆಬ್ಬಾರ್ ಅವರನ್ನು ಸಿಬಿಐ ಬಂಧಿಸಿತ್ತು. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]

ಸುರೇಶ್ ಬಾಬುಗೆ ಜಾಮೀನು
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಬಂಧಿತರಾಗಿರುವ ಕಂಪ್ಲಿ ಕ್ಷೇತ್ರದ ಶಾಸಕ ಸುರೇಶ್ ಬಾಬು ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ. ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಕುಡಿಯುವ ನೀರಿಗಾಗಿ ಪ್ರತಿಭಟನೆ
ಚಿತ್ರದುರ್ಗ ತಾಲೂಕಿನ ಸೊಲ್ಲಾಪುರ ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ಒತ್ತಾಯಿಸಿ ಖಾಲಿಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು. ಬೇಸಿಗೆಯಲ್ಲಿ ಕುಡಿವ ನೀರು ಒದಗಿಸಲು ಗ್ರಾಮ ಪಂಚಾಯಿತಿ ವಿಫಲವಾಗಿದೆ ಎಂದು ದೂರಿದರು. ಗ್ರಾಮದಲ್ಲಿ ಪಂಪ್ಸೆಟ್ ಹಾಳಾಗಿ ಮೂರು ತಿಂಗಳು ಕಳೆದಿದೆ. ಅದನ್ನು ದುರಸ್ಥಿ ಮಾಡಿಸದೆ ಪಿಡಿಓ ಕಾಲಹರಣ ಮಾಡುತ್ತಿದ್ದಾರೆ. ಪ್ರತಿ ದಿನ 4 ಕಿ.ಮೀ.ವರೆಗೆ ಸಾಗಿ ನೀರು ತರಬೇಕಾಗಿದೆ ಎಂದು ಅಳಲು ತೋಡಿಕೊಂಡರು. ತಕ್ಷಣ ಸಮಸ್ಯೆ ಬಗೆಹರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನೀಲಗಿರಿಯನ್ನು ಸಂಪೂರ್ಣ ನಿಷೇಧಿಸಿ
ಕೋಲಾರ ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಅಪಾಯಕಾರಿ ಮಟ್ಟಕ್ಕೆ ಕುಸಿದಿರುವುದರಿಂದ ನೀರಿನ ಅಂಶವನ್ನು ಹೀರಿಕೊಳ್ಳುವ ನೀಲಗಿರಿಯನ್ನು ಸಂಪೂರ್ಣ ನಿಷೇಧಿಸಲು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಡಿ.ಕೆ.ರವಿ ಮನವಿ ಮಾಡಿದ್ದಾರೆ. ನೀಲಗಿರಿ ಮರಗಳ ನಿಷೇಧಕ್ಕೆ ಕಾನೂನಿನಡಿ ಅವಕಾವಿದೆ. ಆದರೆ, ಜಿಲ್ಲೆಯ ಜನಪ್ರತಿನಿಧಿಗಳು ಸಹಕಾರ ನೀಡುವ ಜನರಿಗೆ ಈ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ನೆಲಕ್ಕುರುಳಿದ ದೇವಾಲಯದ ಗರುಡಗಂಬ
ಅರಸೀಕೆರೆ ತಾಲೂಕಿನ ಪುರಾಣ ಪ್ರಸಿದ್ದ ಮಾಲೇಕಲ್ ತಿರುಪತಿಯ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗರುಡ ಕಂಬ ಬಿರುಗಾಳಿಗೆ ಸಿಕ್ಕಿ ಬುಡಸಮೇತ ನೆಲಕ್ಕುರುಳಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ. ದಾನಿಗಳೊಬ್ಬರು 8 ವರ್ಷದ ಹಿಂದೆ 30 ಅಡಿ ಉದ್ದದ ಸಂಪಿಗೆ ಮರವನ್ನು ಗರುಗಂಬಕ್ಕಾಗಿ ನೀಡಿದ್ದರು. ಮರದ ಕಂಬಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಹಿತಾಳೆ ಕವಚ ಅಳವಡಿಸಿ ಪ್ರತಿಷ್ಠಾಪಿಸಿತ್ತು. ಅಂದಿನಿಂದ ಪ್ರತಿದಿನ ಸಂಜೆ ಮತ್ತು ಬೆಳಗ್ಗೆ ಕಂಬಕ್ಕೆ ಪೂಜೆ ಸಲ್ಲಿಸಲಾಗುತ್ತಿತ್ತು. ಸದ್ಯ ಗರುಡಗಂಬ ಧರೆಗೆ ಉರುಳಿದೆ. ಇದರಿಂದ ಗ್ರಾಮಕ್ಕೆ ಕೆಡುಕಾಗಬಹುದು ಎಂದು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಜುಲೈ 9ರಂದು ದೇವಾಲಯದಲ್ಲಿ ರಥೋತ್ಸವದ ನಡೆಯಲಿದೆ.

ಸಿಇಟಿ ಪರೀಕ್ಷೆಗೆ ಬಿಜಾಪುರದಲ್ಲಿ ಸಿದ್ಧತೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಸೀಟುಗಳಿಗಾಗಿ ಮೇ 1 ಮತ್ತು 2ರಂದು ಬಿಜಾಪುರ ನಗರದ 9 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಯಲಿದೆ. ನಗರದ ಬಾಲಕರ ಸರ್ಕಾರಿ ಪಿಯು ಕಾಲೇಜ್, ಪಿಡಿಜೆ ಪಿಯು ಕಾಲೇಜ್, ಎಸ್.ಬಿ.ಆರ್ಟ್ಸ್ ಮತ್ತು ಕೆಸಿಪಿ ವಿಜ್ಞಾನ ಕಾಲೇಜ್, ಬಿಡಿಇ ಪಿಯು ಕಾಲೇಜ್, ಬಾಲಕಿಯರ ಪಿಯು ಕಾಲೇಜ್, ಎಸ್.ಎಸ್.ಪಿಯು ಕಾಲೇಜ್, ಶಾಂತಿನಿಕೇತನ ಪಿಯು ಕಾಲೇಜ್, ಸಿಕ್ಯಾಬ್ ಮಹಿಳಾ ಪಿಯು ಕಾಲೇಜ್ ಗಳಲ್ಲಿ ಸಿಇಟಿ ಪರೀಕ್ಷೆ ನಡೆಯಲಿದೆ. [ಗುರುವಾರದಿಂದ ಸಿಇಟಿ ಪರೀಕ್ಷೆ]

ಪಾಲಿಕೆಗೆ ಜನರ ಎಚ್ಚರಿಕೆ
ಶಿವಮಪಗ್ಗ ಮಹಾನಗರ ಪಾಲಿಕೆ ವಿರುದ್ಧ ನಗರದ ವಿವಿಧ ಬಡಾವಣೆ ಸಂಘಟನೆಗಳು ಅಸಮಾಧಾನಗೊಂಡಿವೆ. 2013ರ ಏ.1 ರಿಂದ ಅನ್ವಯವಾಗುವಂತೆ ಹೆಚ್ಚುವರಿ ತೆರಿಗೆ ವಸೂಲಾತಿಗೆ ಇಳಿದಿರುವ ಪಾಲಿಕೆಯು ತನ್ನ ನಿರ್ಧಾರದಿಂದ ಹಿಂದೆ ಸರಿಯಲೇ ಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿವೆ.

ಫಾರೂಕ್ ಅಬ್ದುಲ್ಲ ವಿರುದ್ಧ ಉಳ್ಳಾಲ ಠಾಣೆಯಲ್ಲಿ ದೂರು
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಜಮ್ಮು ಕಾಶ್ಮೀರದ ಮಾಜಿ ಸಿಎಂ, ಫಾರೂಕ್ ಅಬ್ದುಲ್ಲ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಮಂಗಳೂರು ಕ್ಷೇತ್ರದ ಬಿಜೆಪಿ ಘಟಕದ ಕಾರ್ಯದರ್ಶಿ ಮಾಜಿ ಕೌನ್ಸಿಲರ್ ದಯಾನಂದ್ ತೊಕ್ಕೊಟ್ಟು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ. ಫಾರೂಕ್ ಅಬ್ದುಲ್ಲ ಇತ್ತಿಚೆಗೆ "ಮೋದಿಗೆ ಮತ ಹಾಕಿದವರನ್ನು ಸಮುದ್ರಕ್ಕೆಎಸೆಯಬೇಕು" ಎಂದು ಹೇಳಿದ್ದರು.












Click it and Unblock the Notifications