ಸಾಣೇಹಳ್ಳಿ ನಾಟಕೋತ್ಸವ, ಇತರ ಜಿಲ್ಲಾ ಸುದ್ದಿಗಳು
ಚಿತ್ರದುರ್ಗ, ನ.5: ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿಯಲ್ಲಿ ರಾಷ್ಟ್ರೀಯ ನಾಟಕೋತ್ಸವ ಮಂಗಳವಾರದಿಂದ ಐದು ದಿನಗಳ ಕಾಲ ನಡೆಯಲಿದೆ. ಕ್ನನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಉಮಾಶ್ರೀ ಮಂಗಳವಾರ ಸಂಜೆ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಸಾಣೇಹಳ್ಳಿ ದೇಶದ ರಂಗಭೂಮಿ ಕ್ಷೇತ್ರದಲ್ಲಿ ಪ್ರಖ್ಯಾತವಾದ ಗ್ರಾಮ. 1987ರಲ್ಲಿ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಂದ ಪ್ರಾರಂಭಗೊಂಡ ಶಿವಕುಮಾರ ಕಲಾ ಸಂಘ ಇಂದು ದೇಶಾದ್ಯಂತ ರಂಗಯಾನ ಕೈಗೊಳ್ಳುವ ಮೂಲಕ ಪ್ರಸಿದ್ಧಿಗಳಿಸಿದೆ. ಇಲ್ಲಿ ಮಂಗಳವಾರ ಸಂಜೆ 6 ಗಂಟೆಗೆ ನಾಟಕೋತ್ಸವಕ್ಕೆ ಚಾಲನೆ ದೊರೆಯಲಿದೆ.
ರಾಷ್ಟ್ರೀಯ ನಾಟಕೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಉದ್ಘಾಟಿಸಲಿದ್ದಾರೆ. ಚಿಂತಕ ಡಾ.ಜಿ.ಎಸ್. ಸಿದ್ದಲಿಂಗಯ್ಯ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಶಿವಸಂಚಾರ ನಾಟಕಗಳಿಗೆ ಚಾಲನೆ ನೀಡಲಿದ್ದಾರೆ. ಶ್ರೀ ಶಿವಕುಮಾರ ಸ್ವಾಮೀಜಿಯವರ ಸಮಾಜ ಸುಧಾರಣೆ ಕುರಿತು ಗೊ.ರು.ಚನ್ನಬಸಪ್ಪ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ನ.6ರಂದು ಬಿ. ಸುರೇಶ್ ನಿರ್ದೇಶನದ ಗಿರಿಜಾ ಕಲ್ಯಾಣ, ನ.7ರಂದು ಡಾ.ಬಿ.ಆರ್. ಮಂಜುನಾಥ್ ರಚಿಸಿ ನಿರ್ದೇಶಿಸಿದ ಬೆಳ್ಳಿ ಬಯಲು ನಾಟಕ, ನ.8ಕ್ಕೆ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ರಚಿಸಿರುವ ಶರಣ ಸತಿ ಲಿಂಗಪತಿ ನಾಟಕ, ನ.9ರಂದು ನವಲ್ ಸಾದವಿ ರಚಿಸಿದ ಸನ್ಮಾನ್ಯ ಸಚಿವರ ಸಾವು ನಾಟಕ ಪ್ರದರ್ಶನಗೊಳ್ಳಲಿದೆ. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ಮಂಗಳವಾರದಿಂದ ಸಾಣೇಹಳ್ಳಿ ನಾಟಕೋತ್ಸವ
ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿಯಲ್ಲಿ ನ.5ರ ಮಂಗಳವಾರದಿಂದ ನ.10ರ ಭಾನುವಾರದವರೆಗೆ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ. ಮಂಗಳವಾರ ಸಂಜೆ 6 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಚಿಂತಕ ಡಾ.ಜಿ.ಎಸ್. ಸಿದ್ದಲಿಂಗಯ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು.

ನಿಂಬಾಳ ಮದ್ಯಮುಕ್ತ ಗ್ರಾಮ
ಗುಲ್ಬರ್ಗ ಜಿಲ್ಲೆಯ ನಿಂಬಾಳ ಗ್ರಾಮದ ಎಲ್ಲ ಜನಾಂಗದವರು ಒಗ್ಗೂಡಿ ಗ್ರಾಮವನ್ನು ವ್ಯಸನ ಮುಕ್ತವನ್ನಾಗಿಸುವ ಸಂಕಲ್ಪ ತೊಟ್ಟಿದ್ದಾರೆ. ವಿಜಯದಶಮಿ ದಿನದಿಂದ ಗ್ರಾಮದಲ್ಲಿ ಮದ್ಯ ಮಾರಾಟ ಹಾಗೂ ಕುಡಿತಕ್ಕೆ ಕಡಿವಾಣ ಹಾಕುವ ನಿರ್ಣಯ ಕೈಗೊಂಡಿದ್ದರಿಂದ ದೀಪಾವಳಿ ಹಬ್ಬವು ಗ್ರಾಮದ ಎಲ್ಲರ ಬಾಳಲ್ಲಿ ಬೆಳಕು ಮೂಡಿಸಿದೆ. ಗ್ರಾಮದ ಶಾಂತಲಿಂಗೇಶ್ವರ ವಿರಕ್ತ ಮಠಾಧಿಪತಿ ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಸ್ವಾಮಿಗಳು, ಮದ್ಯ ಮಾರಾಟ ಹಾಗೂ ಕುಡಿತಕ್ಕೆ ನಿಷೇಧ ಹೇರುವವರೆಗೂ ಹಾಗೂ ಗ್ರಾಮಸ್ಥರು ಒಗ್ಗೂಡಿ ಐತಿಹಾಸಿಕ ನಿರ್ಣಯ ಕೈಗೊಳ್ಳುವವರೆಗೂ ನಿಂಬಾಳಕ್ಕೆ ಬರುವುದಿಲ್ಲ ಎಂದು ಹೇಳಿದ್ದರು. ಇದರಿಂದ ಗ್ರಾಮಸ್ಥರು ಒಗ್ಗಟ್ಟಾಗಿ ಗ್ರಾಮವನ್ನು ವ್ಯಸನ ಮುಕ್ತಗೊಳಿಸಿದ್ದಾರೆ.

ಬಿಜಾಪುರದಲ್ಲಿ ಬಾಲ್ಯ ವಿವಾಹಕ್ಕೆ ತಡೆ
ಬಿಜಾಪುರ ಜಿಲ್ಲೆಯ ನಾಲತವಾಡ ಸಮೀಪದ ಅಡವಿ ಹುಲಗಬಾಳ ಗ್ರಾಮದ ಬೀರಪ್ಪನ ಬೆಟ್ಟದ ಬೀರಲಿಂಗೇಶ್ವರ ಜಾತ್ರೆಯ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದಲ್ಲಿ ನಾಲ್ಕು ಜೋಡಿ ಬಾಲ್ಯ ವಿವಾಹ ಮಾಡಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಬಾಲ್ಯ ವಿವಾಹದಿಂದ ಮಕ್ಕಳು ಪಾರಾಗಿದ್ದಾರೆ. ಜಾತ್ರೆಗೆ ಆಗಮಿಸಿದ್ದ ಮಕ್ಕಳ ಸಹಾಯವಾಣಿ, ಮುದ್ದೇಬಿಹಾಳದ ರಿಚ್ ಸಂಸ್ಥೆ, ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು ನಾಲ್ಕು ಜೋಡಿಯ ಬಾಲ್ಯ ವಿವಾಹ ನಡೆಯುತ್ತಿರುವುದನ್ನು ಗಮನಿಸಿ, ಜೋಡಿಯನ್ನು ಮದುವೆ ಮಂಟಪದಿಂದ ಹೊರಗೆ ಕಳಿಸಿದ್ದಾರೆ.

ಅವರಸರದಿಂದ ಕಾಲು ಕಳೆದುಕೊಂಡ
ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಹಳಿ ದಾಟುವಾಗ, ರೈಲಿನ ಎಂಜಿನ್ ಡಿಕ್ಕಿ ಹೊಡೆದ ಪರಿಣಾಮ ಕಾಲಿನ ಪಾದ ತುಂಡಾದ ಘಟನೆ ನಡೆದಿದೆ. ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಕಚೇರಿ ಸಿಬ್ಬಂದಿ ಗಜಾನನ ದಾಸ್ ಅವರು ಕಾಲು ಕಳೆದುಕೊಂಡ ವ್ಯಕ್ತಿ. ಬಸವೇಶ್ವರ ನಗರ ನಿವಾಸಿಯಾದ ಅವರು, ಪ್ರತಿನಿತ್ಯ ರೈಲು ಹಳಿ ದಾಟಿಕೊಂಡು ಹಾಲು ತರಲು ತೆರಳುತ್ತಿದ್ದರು. ಸೋಮವಾರವೂ ಎಂದಿನಂತೆ ಹಳಿ ದಾಟುವಾಗ ಮೈಸೂರಿಗೆ ಹೊರಡುವ ರೈಲಿಗೆ ಎಂಜಿನ್ ಜೋಡಿಸುವ ವೇಳೆ ಇಂಜಿನ್ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೂಡಿಗೆರೆಯಲ್ಲಿ ನಿಧಿಗಾಗಿ ಶೋಧ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರ ಮನೆಯ ಶ್ರೀ ಕಾಲಭೈರವೇಶ್ವರ ದೇವಾಯದ ಆವರಣದಲ್ಲಿರುವ ಬ್ರಹ್ಮ ದೇವರ ದೇವಾಲಯದಲ್ಲಿ ನಿಧಿಗಾಗಿ ಶೋಧ ನಡೆಸಿರುವ ಕಳ್ಳರು, ದೇವರ ವಿಗ್ರವನ್ನು ಕಿತ್ತೆಸೆದಿದ್ದಾರೆ. ದೇವಾಲಯದಲ್ಲಿ ಅರ್ಚಕರು ಪೂಜೆಗೆಂದು ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ದೇವಾಲಯದ ಸಮಿತಿ ಸದಸ್ಯರಿಗೆ ಮತ್ತು ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಮೂಡಿಗೆರೆ ವೃತ್ತ ನಿರೀಕ್ಷಕ ಹಿರೇಮಠ್, ತಹಸೀಲ್ದಾರ್ ರುದ್ರಪ್ಪಾಜಿ ರಾವ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಅನ್ನ, ಲಿಂಬೆಹಣ್ಣಿ, ಕುಂಬಳಕಾಯಿ ಮುಂತಾದ ವಸ್ತುಗಳು ದೊರಕಿವೆ.

ತುಮಕೂರಿನಲ್ಲಿ ಆನೆಗಳ ಉಪಟಳ
ತುಮಕೂರು ಜಿಲ್ಲೆಯ ಗುಬ್ಬಿ, ಹಡಗೂರು, ಎಂ.ಎಚ್.ಪಟ್ಟಣ, ಚೇಲೂರು, ಕಲ್ಕರೆ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಆನೆಳ ಹಿಂಡು ಬೀಡು ಬಿಟ್ಟಿದ್ದು ಬೆಳೆಗಳನ್ನು ಕಳೆದುಕೊಂಡಿರುವ ರೈತರು ಕಂಗಾಲಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿಗೆ ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಸುಮಾರು 7 ಆನೆಗಳು ರಾತ್ರಿ ವೇಳೆಗೆ ಗ್ರಾಮಕ್ಕೆ ಮತ್ತೆ ಆಗಮಿಸುತ್ತಿವೆ.

ಮೈಸೂರಿನಲ್ಲಿ ಮಿನಿ ವಿಧಾನಸೌಧ ಉದ್ಘಾಟನೆ
ಮೈಸೂರಿನ ನಿಜರ್ ಬಾದ್ ಸರ್ಕಾರಿ ಅತಿಥಿ ಗೃಹದ ಬಳಿಕ ನೂತನವಾಗಿ ನಿರ್ಮಿಸಿರುವ ನೂತನ ಮಿನಿ ವಿಧಾನಸೌಧವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಮಧ್ಯಾಹ್ನ 2 ಗಂಟೆಗೆ ಉದ್ಘಾಟಿಸಲಿದ್ದಾರೆ. ಮಾಹಾರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ನೀಡಲಿದ್ದಾರೆ.

ಹಾಸನಾಂಬೆ ದರ್ಶನಕ್ಕೆ ತೆರೆ
ಕಳೆದ ಒಂಭತ್ತು ದಿನಗಳಿಂದ ತೆರಯಲಾಗಿದ್ದ ಹಾಸನಾಂಬೆ ದೇವಾಲಯದವ ಬಾಗಿಲನ್ನು ಮಂಗಳವಾರ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಪೂಜೆ ಸಲ್ಲಿಸಿ ಮುಚ್ಚಲಾಗಿದೆ. ಇದರೊಂದಿಗೆ ವರ್ಷಕ್ಕೆ ಒಮ್ಮೆ ಮಾತ್ರ ತೆರೆಯವು ಹಾಸನಾಂಬೆ ದೇವಾಲಯದ ಈ ಬಾರಿಯ ದರ್ಶನ ಮುಕ್ತಾಯವಾಗಿದೆ. ಇಂದು ಹಚ್ಚಿರುವ ದೀಪ ಮುಂದಿನ ವರ್ಷ ದೇವಾಲಯದ ಬಾಗಿಲು ತೆರೆಯುವ ತನಕ ಉರಿಯುತ್ತಿರುತ್ತದೆ ಎನ್ನುವ ನಂಬಿಕೆ ಇದೆ.

ಮಂಡ್ಯ ಬಳಿ ಕೆಎಸ್ಆರ್ ಟಿಸಿ ಐರಾವತಕ್ಕೆ ಬೆಂಕಿ
ಬೆಂಗಳೂರಿನಿಂದ ಮೈಸೂರಿಗೆ ಸಾಗುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಚಾಲಕನ ಸಮಯ ಪ್ರಜ್ಞೆಯಿಂದಾಗಿ ಪ್ರಯಾಣಿಕರು ಯಾವುದೇ ಅಪಾಯವಾಗದಂತೆ ಪಾರಾಗಿದ್ದಾರೆ. ಮುಂಜಾನೆ 6 ಗಂಟೆ ವೇಳೆಗೆ ಕಲ್ಲಳ್ಳಿ ಬಳಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಬಸ್ ನಿಲ್ಲಿಸಿದ ಚಾಲಕ ಪ್ರಯಾಣಿಕರಿಗೆ ಕೆಳಗಿಳಿಯುವಂತೆ ಸೂಚನೆ ನೀಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು.












Click it and Unblock the Notifications