ಹಾಸನದಲ್ಲಿ ಬೋನಿಗೆ ಬಿದ್ದ ನರಭಕ್ಷಕ ಚಿರತೆ
ಹಾಸನ, ಫೆ.11 : ಹಾಸನ ತಾಲೂಕಿನ ನಾಗನಹಳ್ಳಿಯಲ್ಲಿ ತೇಜಸ್ ಎಂಬ ಬಾಲಕನನ್ನು ಕೊಂದುತಿಂದಿದ್ದ ನರಭಕ್ಷಕ ಚಿರತೆ ಸೆರೆಸಿಕ್ಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಲ್ಲುಗುಡಗನಹಳ್ಳಿ ಬಳಿ ಇಟ್ಟಿದ್ದ ಬೋನನಲ್ಲಿ ಸೋಮವಾರ ಸಂಜೆಯ ವೇಳೆಗೆ ಚಿರತೆ ಸೆರೆಯಾಗಿದೆ.
ಫೆ.6ರಂದು ನಾಗನಹಳ್ಳಿಯಲ್ಲಿ ತೇಜಸ್ (6)ಎಂಬ ಬಾಲಕನನ್ನು ಚಿರತೆ ಕೊಂದು ತಿಂದಿದ್ದು, ಅಂದಿನಿಂದಲೂ ಚಿರತೆಯನ್ನು ಹಿಡಿಯುವ ಕಾರ್ಯಾಚರಣೆಯನ್ನು ನಡೆಸಲಾಗುತ್ತಿತ್ತು. ಅದಕ್ಕಾಗಿ ಹಲವಾರು ಕಡೆ ಅರಣ್ಯ ಇಲಾಖೆ ಸಿಬ್ಬಂದಿ ಬೋನನ್ನು ಇಟ್ಟಿದ್ದರು.
ಕಲ್ಲುಗುಡಗನಹಳ್ಳಿ ಬಳಿ ಇಟ್ಟಿದ್ದ ಬೋನಿನಲ್ಲಿ ಸೋಮವಾರ ಸಂಜೆ 5ಕ್ಕೆ ಮರಿ ಚಿರತೆ ಸಿಕ್ಕಿಬಿದ್ದ ಸಂಗತಿಯನ್ನು ಜನರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ 7 ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿ ಚಿರತೆಯನ್ನು ವಶಕ್ಕೆ ಪಡೆದರು. [ಬಾಲಕನನ್ನು ಕೊಂದು ತಿಂದ ಚಿರತೆ]
ಮರಿ ಚಿರತೆ ಸಿಕ್ಕಿಬಿದ್ದ ಬೋನಿನ ಸುತ್ತಲೂ ತಾಯಿ ಚಿರತೆ, ಸಂಚರಿಸುವುದನ್ನು ನಾವು ನೋಡಿದ್ದೇವೆ. ಅದನ್ನು ಸೆರೆ ಹಿಡಿಯಲಾಗುವುದು ಎಂದು ಡಿಎಫ್ಒ ಅಪ್ಪುರಾವ್ ಹೇಳಿದ್ದಾರೆ. ನಾಗನಹಳ್ಳಿಯಲ್ಲಿ ಬಾಲಕನನ್ನು ತಿಂದ ಬಳಿಕ ಗ್ರಾಮದ ಸುತ್ತಲೂ ಒಂದು ಚಿರತೆ ಮತ್ತು ಎರಡು ಮರಿಗಳು ಕಾಣಿಸಿಕೊಂಡಿದ್ದವು. ಸದ್ಯ ಒಂದು ಚಿರತೆ ಸೆರೆ ಸಿಕ್ಕಿದ್ದು, ಉಳಿದ ಚಿರತೆಗಳನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಲಾಗಿದೆ. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]

ಸೆರೆಸಿಕ್ಕ ಮರಿ ಚಿರತೆ
ಹಾಸನ ತಾಲೂಕಿನ ನಾಗನಹಳ್ಳಿಯಲ್ಲಿ ತೇಜಸ್ (6) ಎಂಬ ಬಾಲಕನನ್ನು ಕೊಂದು ತಿಂದಿದ್ದ ನರಭಕ್ಷಕ ಚಿರತೆ ಸೆರೆಸಿಕ್ಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಲ್ಲುಗುಡಗನಹಳ್ಳಿ ಬಳಿ ಇಟ್ಟಿದ್ದ ಬೋನನಲ್ಲಿ ಸೋಮವಾರ ಸಂಜೆಯ ವೇಳೆಗೆ ಚಿರತೆಯ ಮರಿ ಸೆರೆಯಾಗಿದೆ. ಫೆ.6ರಂದು ನಾಗನಹಳ್ಳಿಯಲ್ಲಿ ತೇಜಸ್ ಎಂಬ ಬಾಲಕನನ್ನು ಚಿರತೆ ಕೊಂದು ತಿಂದಿದ್ದು, ಅಂದಿನಿಂದಲೂ ಚಿರತೆಯನ್ನು ಹಿಡಿಯುವ ಕಾರ್ಯಾಚರಣೆಯನ್ನು ನಡೆಸಲಾಗುತ್ತಿತ್ತು.

ಸಿದ್ದಾರ್ಥ ವಿರುದ್ಧ ಮತ್ತಷ್ಟು ಆರೋಪ
ಮಾಜಿ ಸಿಎಂ ಎಸ್.ಎಂ. ಕೃಷ್ಣ ಅಳಿಯ ಸಿದ್ದಾರ್ಥ ಚಿಕ್ಕಮಗಳೂರಿನ ಕೊಪ್ಪ ರೇಂಜ್ನಲ್ಲಿ 2002ರಲ್ಲಿ 64 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಆದರೆ, ಅರಣ್ಯ ಇಲಾಖೆಯಿಂದ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್.ಹಿರೇಮಠ ಆರೋಪಿಸಿದ್ದಾರೆ. ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ಕುಮಾರ್ ಮತ್ತು ಮಾಜಿ ಸಚಿವ ಅನಿಲ್ ಲಾಡ್ ಅವರಂತೆ ಸಿದ್ದಾರ್ಥ ಅವರಿಗೂ ಅರಣ್ಯ ಒತ್ತುವರಿ ವಿಚಾರವಾಗಿ ನೋಟಿಸ್ ನೀಡದೆ ಅರಣ್ಯ ಇಲಾಖೆ ತಾರತಮ್ಯ ಮಾಡುತ್ತಿದೆ ಎಂದು ಅವರು ದೂರಿದ್ದಾರೆ.

ಫೆ.17 ಮತ್ತು 18ರಂದು ಅಬ್ಬಕ್ಕ ಉತ್ಸವ
ಬಂಟ್ವಾಳ ತಾಲೂಕಿನ ಮುಡಿಪು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಣಿ ಅಬ್ಬಕ್ಕ ವೇದಿಕೆಯಲ್ಲಿ `ವೀರರಾಣಿ ಅಬ್ಬಕ್ಕ ಉತ್ಸವ` ಫೆ.17ಮತ್ತು 18ರಂದು ನಡೆಯಲಿದೆ. ಫೆ.17 ರಂದು ಸಂಜೆ 5 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಉತ್ಸವ ಉದ್ಘಾಟಿಸಲಿದ್ದಾರೆ. 18 ರಂದು ಸಂಜೆ 5.30ಕ್ಕೆ ಸಮಾರೋಪ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ.

1 ಸಾವಿರ ಶುದ್ಧ ಕುಡಿವ ನೀರಿನ ಘಟಕ
ರಾಜ್ಯದಲ್ಲಿ ಶೀಘ್ರವೇ 1 ಸಾವಿರ ಶುದ್ಧ ಕುಡಿವ ನೀರಿನ ಘಟಕಗಳನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಇಲಾಖೆ ವತಿಯಿಂದ ಆರಂಭಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ. ಈ ಕುರಿತು ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪವಾಗಿದ್ದು, ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 1 ಸಾವಿರ ಘಟಕಗಳನ್ನು ಮಾರ್ಚ್ ಅಂತ್ಯದೊಳಗೆ ಆರಂಭಿಸಲು ಯೋಜನೆ ರೂಪಿಸಲಾಗಿದೆ ಎಂದು ಪಾಟೀಲ್ ಹೇಳಿದ್ದಾರೆ.

ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿಸಿ
ಕಡಲೆ ಬೆಲೆ ತೀವ್ರ ಕುಸಿತ ಕಂಡಿದ್ದು ರೈತರು ಆತಂಕಕ್ಕೀಡಾಗಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ಕಡಲೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಬೇಕು ಎಂದು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈಗಾಗಲೇ ಕಡಲೆ ಕೊಯ್ಲು ಆರಂಭವಾಗಿದೆ. ಸದ್ಯ ಬೆಲೆ ಪ್ರತಿ ಕ್ವಿಂಟಲ್ಗೆ 4 ರಿಂದ 4.5 ಸಾವಿರ ಇದೆ. ಈಗ ಏಕಾಏಕಿ 2 ರಿಂದ 2.6 ಸಾವಿರ ರೂ.ಗಳಿಗೆ ಇಳಿದಿದೆ. ಇದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ ಎಂದು ಮನವಿ ಮಾಡಲಾಗಿದೆ.

ಬಸವ ಭವನದಲ್ಲಿ ಶೈಕ್ಷಣಿಕ ಹಬ್ಬ
ದೊಡ್ಡಬಳ್ಳಾಪುರ ಪಟ್ಟಣದ ಬಸವ ಭವನದಲ್ಲಿ ಫೆ. 13 ಮತ್ತು 14 ರಂದು ಶೈಕ್ಷಣಿಕ ಹಬ್ಬ ಆಯೋಜಿಸಲಾಗಿದೆ. ಭಾರತ ಜ್ಞಾನ ವಿಜ್ಞಾನ ಸಮಿತಿ ಹೊರ ತರುತ್ತಿರುವ 'ಟೀಚರ್' ಮಾಸಪತ್ರಿಕೆಯ ಹೆಸರಿನಲ್ಲಿ ಪ್ರತಿ ವರ್ಷವೂ ಶೈಕ್ಷಣಿಕ ಹಬ್ಬವನ್ನು ಆಚರಿಸಲಾಗುತ್ತಿದ್ದು, 12 ನೇ ಶೈಕ್ಷಣಿಕ ಹಬ್ಬವನ್ನು ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾಗಿದೆ. ಶೈಕ್ಷಣಿಕ ಹಬ್ಬ ಕಾರ್ಯಕ್ರಮವನ್ನು ವಿಧಾನಸಭೆಯ ಉಪ ಸಭಾಪತಿ ಶಿವಶಂಕರ ರೆಡ್ಡಿ ಉದ್ಘಾಟಿಸಲಿದ್ದಾರೆ. ವಕೀಲ ಸಿ. ಎಚ್. ಹನುಮಂತರಾಯ, ವಿಧಾನ ಪರಿಷತ್ ಮಾಜಿ ಸದಸ್ಯ ಎಲ್. ಹನುಮಂತಯ್ಯ, ಅಖಿಲ ಭಾರತ ಜನವಿಜ್ಞಾನ ಜಾಲದ ಪ್ರಧಾನ ಕಾರ್ಯದರ್ಶಿ ಟಿ. ಗಂಗಾಧರನ್, ಶಾಸಕ ಟಿ.ವೆಂಕಟರಮಣಯ್ಯ ಮುಂತಾದವರು ಭಾಗವಹಿಸುವರು.












Click it and Unblock the Notifications