ಸಣ್ಣ ಫಕ್ಕೀರಪ್ಪ ಕುಟುಂಬಕ್ಕೆ ಪೊಲೀಸ್ ನೋಟಿಸ್
ಬಳ್ಳಾರಿ, ಡಿ.19 : ರಾಯಚೂರು ಸಂಸದ ಸಣ್ಣ ಫಕ್ಕೀರಪ್ಪ ಪುತ್ರ ಮುತ್ತು ವೇಶ್ಯಾವಾಟಿಕೆ ಆರೋಪದ ಮೇಲೆ ಯುವತಿ ಹಾಗೂ ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಸಣ್ಣ ಫಕ್ಕೀರಪ್ಪ ಹಾಗೂ ಅವರ ಮೂವರು ಪುತ್ರಿಯರಿಗೆ ಬಳ್ಳಾರಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಆಗಮಿಸುವಂತೆ ಸೂಚಿಸಿದ್ದಾರೆ.
ಬುಧವಾರ ಸಂಜೆ ಸಣ್ಣ ಫಕ್ಕೀರಪ್ಪ ಪುತ್ರ ಮುತ್ತು ಆತನ ಸ್ನೇಹಿತರು ಕೌಲ್ ಬಜಾರ್ ಠಾಣೆ ವ್ಯಾಪ್ತಿ ನಿವಾಸಿಯಾದ ಭಾಗ್ಯಮ್ಮ ಅವರ ಮನೆಗೆ ನುಗ್ಗಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ, ಭಾಗ್ಯಮ್ಮ ಮಗಳು ಶ್ರೀಲಕ್ಷ್ಮೀ, ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನರ ವಿರುದ್ಧ ದೂರು ದಾಖಲಾಗಿದ್ದು, 6 ಜನರನ್ನು ಬಂಧಿಸಲಾಗಿದೆ. [ಸಂಸದನ ಪುತ್ರ ಸೇರಿ 6 ಮಂದಿ ಬಂಧನ]
ಪ್ರಕರಣಕ್ಕೆ ಸಂಬಂಧಿಸಿದಂತೆ ಸಣ್ಣ ಫಕ್ಕೀರಪ್ಪ ಪುತ್ರ ಮುತ್ತು ಉಳಿದ 6 ಜನರನ್ನು ಈಗಾಲಗೇ ಬಂಧಿಸಲಾಗಿದ್ದು, ತಲೆ ಮರಿಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಗುರುವಾರ ಪ್ರಕರಣದ ವಿಚಾರಣೆ ತೀವ್ರಗೊಳಿಸಿರುವ ಪೊಲೀಸರು, ವಿಚಾರಣೆಗೆ ಹಾಜರಾಗವಂತೆ ಫಕ್ಕೀರಪ್ಪ ಹಾಗೂ ಅವರ ಪತ್ನಿ ರುದ್ರಮ್ಮ ಮತ್ತು ಮೂವರು ಪುತ್ರಿಯರಾದ ದೀಪಾ, ಪದ್ಮ ಹಾಗೂ ಉಮಾಗೆ ನೋಟಿಸ್ ನೀಡಿದ್ದಾರೆ. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ಯೋಗೇಶ್ ಮಾಸ್ಟರ್ ಕೃತಿ ಶುಕ್ರವಾರ ಬಿಡುಗಡೆ
ಯೋಗೇಶ್ ಮಾಸ್ಟರ್ ಅವರ ಎರಡು ಹೊಸ ಕೃತಿಗಳನ್ನು ಅವಿರತ ಪ್ರಕಟಿಸಿದ್ದು, ಲೋಕಾರ್ಪಣೆ ಸಮಾರಂಭ ಡಿ.20ರ ಶುಕ್ರವಾರ ಸಂಜೆ 6.30ಕ್ಕೆ ಸಂಸ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ. 'ರಾಧೆ ಶಾಮರ ಪ್ರೇಮವಿಲಾಸ 1784 ` ಮತ್ತು `ಲೋಫರ್ ಸ್ಯಾಂನ ಪ್ರೇಮಪ್ರಸಂಗ 1947` ಕೃತಿಗಳು ಶುಕ್ರವಾರ ಲೋಕಾಪರ್ಣೆ ಗೊಳ್ಳಲಿವೆ. ಕೃತಿ ಬಿಡುಗಡೆ : ಡಾ: ಸಿ ಎಸ್. ದ್ವಾರಕಾ ನಾಥ್, ಕೃತಿ ಪರಿಚಯ: ಡಾ. ಎಂ ವಸು ಮಳಲಿ ಮತ್ತು ಪಾರ್ವತೀಶ್.

ಸಣ್ಣ ಫಕ್ಕೀರಪ್ಪಗೆ ನೋಟಿಸ್
ರಾಯಚೂರು ಸಂಸದ ಸಣ್ಣ ಫಕ್ಕೀರಪ್ಪ ಪುತ್ರ ಮುತ್ತು ವೇಶ್ಯಾವಾಟಿಕೆ ಆರೋಪದ ಮೇಲೆ ಯುವತಿ ಹಾಗೂ ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಸಣ್ಣ ಫಕ್ಕೀರಪ್ಪ ಹಾಗೂ ಅವರ ಮೂವರು ಪುತ್ರಿಯರಿಗೆ ಬಳ್ಳಾರಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಆಗಮಿಸುವಂತೆ ಸೂಚಿಸಿದ್ದಾರೆ. ಬುಧವಾರ ಸಂಜೆ ಸಣ್ಣಪಕ್ಕೀರಪ್ಪ ಪುತ್ರ ಮುತ್ತು ಆತನ ಸ್ನೇಹಿತರು ಕೌಲ್ ಬಜಾರ್ ಠಾಣೆ ವ್ಯಾಪ್ತಿ ನಿವಾಸಿಯಾದ ಭಾಗ್ಯಮ್ಮ ಅವರ ಮನೆಗೆ ನುಗ್ಗಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ, ಭಾಗ್ಯಮ್ಮ ಮಗಳು ಶ್ರೀಲಕ್ಷ್ಮೀ, ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದರು.

ರೈಲು ಪ್ರಾಯೋಗಿಕ ಸಂಚಾರ
ಹರಪನಹಳ್ಳಿ ಹಾಗೂ ಸುತ್ತಮುತ್ತಲಿನ ಜನರ ಹಲವು ವರ್ಷಗಳ ಕನಸಾದ ಕೊಟ್ಟೂರು-ಹರಿಹರ ರೈಲು ಮಾರ್ಗದಲ್ಲಿ ಪ್ರಾಯೋಗಿಕವಾಗಿ ರೈಲ್ವೆ ಎಂಜಿನ್ ಸಂಚರಿಸಿದ್ದು ಜನರಲ್ಲಿ ಹರ್ಷ ಉಂಟುಮಾಡಿದೆ. 68 ಕಿ.ಮೀಟರ್ ಉದ್ದದ ಕೊಟ್ಟೂರು-ಹರಪನಹಳ್ಳಿ-ಹರಿಹರ ರೈಲು ಮಾರ್ಗದ ಕಾಮಗಾರಿ ಅಂತಿಮ ಹಂತ ತಲುಪಿದೆ. 428 ಕೋಟಿ ರೂ. ವೆಚ್ಚದ ಈ ರೈಲು ಮಾರ್ಗಕ್ಕೆ 920 ಎಕರೆ ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಚಾಲುಕ್ಯ ಉತ್ಸವಕ್ಕೆ ಮುಹೂರ್ತ
ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಬಾಗಲಕೋಟೆಯ ಚಾಲುಕ್ಯ ಉತ್ಸವವನ್ನು ಫೆ.7ರಿಂದ 9ರವರೆಗೆ ನಡೆಸಲು ಉದ್ದೇಶಿಸಲಾಗಿದೆ. ಉತ್ಸವಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸಚಿವರು ಈ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಸಚಿವೆ ಉಮಾಶ್ರೀ, ಬಾದಾಮಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ, ಮಧೋಳ ಶಾಸಕ ಗೋವಿಂದ ಕಾರಜೋಳ ಭಾಗವಹಿಸಿದ್ದರು.

ಸಿದ್ದಗಂಗಾ ಪ್ರಶಸ್ತಿಗೆ ಆಯ್ಕೆ
ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಪುತ್ರ ಜಯದೇವ್ ಮತ್ತು ಗಮಕ ಹಾಗೂ ಗಾಯನ ಕ್ಷೇತ್ರಕ್ಕೆ ಅಪಾರವಾದ ಸೇವೆ ಸಲ್ಲಿಸಿರುವ ಜಯ ರಾಜಶೇಖರ್ ಅವರನ್ನು ಸಿದ್ದಗಂಗಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. `ಸಿದ್ದಗಂಗಾ ಶಿವಕುಮಾರ ಪ್ರಶಸ್ತಿ` 10 ಸಾವಿರ ನಗದು, ಸ್ಮರಣಿಕೆಯನ್ನು ಒಳಗೊಂಡಿದೆ. ಡಿ.22ರಂದು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಡಿ.22ರಂದು ಡಾ.ಶಿವಕುಮಾರ ಸ್ವಾಮೀಜಿ ಪ್ರಶಸ್ತಿ ನೀಡಲಿದ್ದಾರೆ.

ಲಾಲ್ ಬಾಗ್ ನಲ್ಲಿ ಗಂಧದ ಮರ ಕಳುವು
ಬೆಂಗಳೂರಿನ ಲಾಲ್ ಬಾಗ್ ನಲ್ಲಿ ನ. 30ರಂದು ಕಳ್ಳರು ಗಂಧದ ಮರದ ಎರಡು ಕೊಂಬೆಗಳನ್ನ ಕತ್ತರಿಸಿಕೊಂಡು ಹೋಗಿದ್ದರು. ಆದರೆ, ಬುಧವಾರ ರಾತ್ರಿ ಮರವನ್ನು ಬುಡ ಸಮೇತ ಕತ್ತರಿಸಿಕೊಂಡು ಹೋಗಿದ್ದಾರೆ. ಲಾಲ್ ಬಾಗ್ ಭದ್ರತಾ ಸಿಬ್ಬಂದಿಗೆ ಚಳ್ಳೆಹಣ್ಣು ತಿನಿಸಿ, ಸುಮಾರು 1 ಸಾವಿರ ಕೆ.ಜಿ ಗಂಧದ ಮರವನ್ನು ಕಳ್ಳರು ಕದ್ದಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಸಂಸಾರದಲ್ಲಿ ಸನಿದಪ ನಾಟಕ ಪ್ರದರ್ಶನ
ರಂಗವಲ್ಲಿ ತಂಡದಿಂದ ಡಿ.21ರ ಶನಿವಾರ ಸಂಜೆ 7 ಗಂಟೆಗೆ ಮೈಸೂರಿನ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ಜಿ.ಪಿ.ಐ.ಆರ್.ಮೈಸೂರು ನಿರ್ಮಾಣದ ಕೆ.ವಿ.ಅಕ್ಷರ ರಚಿಸಿರುವ `ಸಂಸಾರದಲ್ಲಿ ಸನಿದಪ` ಹಾಸ್ಯ ನಾಟಕದ ಪ್ರದರ್ಶನವಿದೆ. ಇದು ಖ್ಯಾತ ನಾಟಕಕಾರ ದಾರಿಯೋ ಘೋ ರಚನೆಯ 'ದಿ ವರ್ಚುವಸ್ ಬರ್ಗಲರ್' ನಾಟಕ ಆಧಾರಿತವಾಗಿದೆ. ರಂಗಕರ್ಮಿ ಮೈಮ್ ರಮೇಶ್ ನಾಟಕವನ್ನು ನಿರ್ದೇಶಿಸಿದ್ದಾರೆ. ಹೆಚ್ಚಿನ ವಿವಿರ ಮತ್ತು ಟಿಕೆಟ್ ಗಳಿಗಾಗಿ 9916212451/ 9964656482 ಕರೆ ಮಾಡಬಹುದಾಗಿದೆ.

ತೆಂಗು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ನೀಡಿ
ತೆಂಗು ಬೆಳೆಯಿಂದ ನಷ್ಟ ಅನುಭವಿಸಿರುವ ರೈತರಿಗೆ ರಾಜ್ಯ ಸರ್ಕಾರ ಕೂಡಲೇ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕೆಂದು ಶಾಸಕ ಸಿ.ಟಿ.ರವಿ ಒತ್ತಾಯಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ತುಮಕೂರು, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಮಂಡ್ಯ, ರಾಮನಗರ ಜಿಲ್ಲೆ ಸೇರಿದಂತೆ ಇತರೆಡೆ ತೆಂಗು ವಾಣಿಜ್ಯ ಬೆಳೆಯಾಗಿದೆ. ಬರಗಾಲ, ವಿವಿಧ ರೋಗಗಳಿಂದ ಶೇ.40ರಷ್ಟು ಬೆಳೆ ಹಾಳಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರದ ತಂಡ ಇದರ ಬಗ್ಗೆ ಅಧ್ಯಯನ ನಡೆಸಿದೆ. ಆದರೆ, ಯಾವುದೇ ಪ್ಯಾಕೇಜ್ ನೀಡಿಲ್ಲ. ರಾಜ್ಯ ಸರ್ಕಾರ ಪ್ಯಾಕೇಜ್ ನೀಡಿ ರೈತರ ಹಿತ ಕಾಪಾಡಬೇಕು ಎಂದು ಅವರು ಒತ್ತಾಯಿಸಿದರು.

ಚಿರತೆ ಪ್ರತ್ಯಕ್ಷ
ಮೈಸೂರಿನ ಕೆ.ಆರ್.ಪೇಟೆ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಚಂದ್ರಹಾಸ ಗೌಡ ಅವರ ತೋಟದ ಮನೆಯ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿ ಸಾಕು ನಾಯಿಯನ್ನು ಕಚ್ಚಿಕೊಂಡು ಪರಾರಿಯಾಗಿದೆ. ಲಕ್ಷ್ಮೀಪುರ ಸಮೀಪದ ಬೆಳ್ಳಿಬೆಟ್ಟ ಅರಣ್ಯ ಪ್ರದೇಶದಿಂದ ಬಂದಿರುವ ಚಿರತೆಯು ನಾಯಿಯನ್ನು ಕಚ್ಚಿಕೊಂಡು ಪರಾರಿಯಾಗಿದೆ. ಇದರಿಂದ ಲಕ್ಷ್ಮೀಪುರ ಗ್ರಾಮದಲ್ಲಿ ಆತಂಕದ ಸ್ಥಿತಿ ನಿರ್ಮಾನವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಆರೋಗ್ಯ ಇಲಾಖೆ ಅಧೀಕ್ಷಕ ಲೋಕಾಯುಕ್ತ ಬಲೆಗೆ
ಆನುಕಂಪ ಆಧಾರದ ಮೇಲೆ ಉದ್ಯೋಗ ಕೊಡಿಸಲು 30 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಅಧೀಕ್ಷಕ ನಾರಾಯಣಗೌಡ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬುಧವಾರ ಸಂಜೆ ಕಚೇರಿ ಸಮೀಪದ ವಾಹನ ನಿಲುಗಡೆ ಪ್ರದೇಶದಲ್ಲಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಬಿ.ವಿಜಯ್ಕುಮಾರ್ ಎಂಬುವವರ ಹಿರಿಯ ಭಾಮೈದುನ ಅವರು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗ ಮೃತರಾಗಿದ್ದರು. ಅವರಿನ್ನು ಮದುವೆಯಾಗದ ಕಾರಣ ಅವರ ಕಿರಿಯ ಸಹೋದರ ಎಸ್.ಕಿರಣ್ಕುಮಾರ್ ಅವರಿಗೆ ಅನುಕಂಪ ಆಧಾರದ ಮೇಲೆ ಸರ್ಕಾರಿ ಕೆಲಸ ಕೊಡಿಸಲು ನಾರಾಯಣಗೌಡ ಲಂಚ ಸ್ವೀಕರಿಸುತ್ತಿದ್ದರು.











Click it and Unblock the Notifications