ಮೈಸೂರು ಸಂಚಾರಿ ವ್ಯವಸ್ಥೆ ಸುಧಾರಣೆಗೆ ಕೋಬ್ರಾಗಳು
ಮೈಸೂರು, ನ.25: ಮೈಸೂರು ನಗರದಲ್ಲಿ ಸಂಚಾರ ವ್ಯವಸ್ಥೆಯನ್ನು ನಿಯಂತ್ರಿಸಲು ಅನುಕೂಲವಾಗುವಂತೆ ಎಂಟು ಟ್ರಾಫಿಕ್ ಕೋಬ್ರಾಗಳಿಗೆ ಚಾಲನೆ ನೀಡಲಾಗಿದೆ. ನಗರ ಪೊಲೀಸ್ ಆಯುಕ್ತ ಸಲೀಂ ಕೋಬ್ರಾಗಳಿಗೆ ಚಾಲನೆ ನೀಡಿದರು. ಈ ವ್ಯವಸ್ಥೆಯಿಂದ ನಗರದ ಸಂಚಾರಿ ಸಮಸ್ಯೆಗಳು ಕಡಿಮೆಯಾಗಲಿವೆ ಎಂದು ಭರವಸೆ ವ್ಯಕ್ತಪಡಿಸಿದರು.
ಮೈಸೂರು ನಗರದಲ್ಲಿ ಹೆಚ್ಚುತ್ತಿರುವ ಸಂಚಾರಿ ಸಮಸ್ಯೆ ಮತ್ತು ಒತ್ತಡಗಳನ್ನು ಬಗೆಹರಿಸಲು ಟ್ರಾಫಿಕ್ ಕೋಬ್ರಾಗಳನ್ನು ಪರಿಚಯಿಸಲಾಗಿದೆ. ನಗರದ ಇಕ್ಕಟ್ಟಾದ ಪ್ರದೇಶಗಳಿಗೂ ಕೋಬ್ರಾಗಳು ತೆರಳುವಂತೆ ಯೋಜನೆ ರೂಪಿಸಲಾಗಿದೆ. ಕೋಬ್ರಾಗಳಲ್ಲಿ ಆಗಮಿಸುವ ಸಂಚಾರಿ ಪೊಲೀಸರು ಸಂಚಾರಿ ಸಮಸ್ಯೆ ಬಗೆಹರಿಸಲಿದ್ದಾರೆ. ಸಂಚಾರಿ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಇದನ್ನು ನಿವಾರಿಸಲು 150 ಹೋಂಗಾರ್ಡ್ ಗಳನ್ನು ನಿಯೋಜಿಸಲಾಗುವುದು ಎಂದು ಸಲೀಂ ಹೇಳಿದ್ದಾರೆ.
ಮೈಸೂರು ನಗರದಲ್ಲಿ ಈಗಾಗಲೇ ಏಳು ಕೋಬ್ರಾಗಳು ಕಾರ್ಯನಿರ್ವಹಿಸುತ್ತಿವೆ. ಸದ್ಯ ಹೆಚ್ಚುವರಿಯಾಗಿ ಎಂಟು ಕೋಬ್ರಾಗಳನ್ನು ಪರಿಚಯಿಸಲಾಗಿದ್ದು, ಒಟ್ಟು 15 ಕೋಬ್ರಾಗಳು ನಗರ ಸಂಚಾರ ದಟ್ಟಣೆಯ ಉಸ್ತುವಾರಿ ನೋಡಿಕೊಳ್ಳಲಿವೆ. ಟ್ರಾಫಿಕ್ ಜಾಮ್ ನಿವಾರಣೆ, ಅನಧಿಕೃತವಾಗಿ ವಾಹನ ನಿಲ್ಲಿಸುವವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲು ಕೋಬ್ರಾಗಳು ಸಹಾಯಕವಾಗಲಿವೆ. (ಕರ್ನಾಟಕದ ಇತರ ಜಿಲ್ಲಾಸುದ್ದಿಗಳು)

ಸಂಚಾರ ವ್ಯವಸ್ಥೆ ಸುಧಾರಣೆಗೆ ಕೋಬ್ರಾಗಳು
ಮೈಸೂರು ನಗರದಲ್ಲಿ ಹೆಚ್ಚುತ್ತಿರುವ ಸಂಚಾರಿ ಸಮಸ್ಯೆ ಮತ್ತು ಒತ್ತಡಗಳನ್ನು ಬಗೆಹರಿಸಲು ಟ್ರಾಫಿಕ್ ಕೋಬ್ರಾಗಳನ್ನು ಪರಿಚಯಿಸಲಾಗಿದೆ. ನಗರದ ಇಕ್ಕಟ್ಟಾದ ಪ್ರದೇಶಗಳಿಗೂ ಕೋಬ್ರಾಗಳು ತೆರಳುವಂತೆ ಯೋಜನೆ ರೂಪಿಸಲಾಗಿದೆ. ಸೋಮವಾರ ಕೋಬ್ರಾಗಳಿಗೆ ನಗರ ಸಂಚಾರಿ ಆಯುಕ್ತ ಸಲೀಂ ಚಾಲನೆ ನೀಡಿದರು. ಈಗಾಗಲೇ ನಗರದಲ್ಲಿ 7 ಕೋಬ್ರಾಗಳು ಕಾರ್ಯನಿರ್ವಹಿಸುತ್ತಿದ್ದು, ಸದ್ಯ ನೂತನವಾಗಿ 8 ಕೋಬ್ರಾಗಳನ್ನು ಪರಿಚಯಿಸಲಾಗಿದೆ.

ತೋಟಗಾರಿಕೆ ವಿವಿಗೆ 700 ಎಕರೆ ಭೂಮಿ
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣೆ ಮತ್ತು ಇನ್ನಿತರ ಸಂಶೋಧನಾ ಚಟುವಟಿಕೆಗಳಿಗಾಗಿ ಹೆಚ್ಚುವರಿವಾಗಿ 700 ಎಕರೆ ಜಮೀನು ನೀಡಲು ಶೀಘ್ರ ಸಿಎಂ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಾಮನೂರ ಶಿವಶಂಕರಪ್ಪ ಹೇಳಿದ್ದಾರೆ. ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಕೇವಲ 300 ಎಕರೆ ಜಮೀನು ಹೊಂದಿದ್ದು, ಹೆಚ್ಚುವರಿ 700 ಎಕರೆ ಜಮೀನು ನೀಡುವಂತೆ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲ್ ಅವರು ಪ್ರಸ್ತಾವನೆ ನೀಡಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಅನ್ನಭಾಗ್ಯ ಅಕ್ಕಿವಶ
ಗಂಗಾವತಿ ತಾಲೂಕಿನ ದಾಸನಾಳ ಬಳಿಯ ಕೆ.ಪಿ. ರೈಸ್ ಮಿಲ್ನಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ 1200 ಕ್ವಿಂಟಲ್ ಅಕ್ಕಿಯನ್ನು ತಹಸೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿ, ವಶಪಡಿಸಿಕೊಂಡಿದೆ. 'ಅನ್ನಭಾಗ್ಯ' ಯೋಜನೆಯಡಿ ವಿತರಣೆ ಮಾಡುವ ಪಡಿತರ ಅಕ್ಕಿಯನ್ನು ರೈಸ್ ಮಿಲ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು.

ಶೀತಗಾಳಿ ಕೌದಿಗಳಿಗೆ ಹೆಚ್ಚು ಬೇಡಿಕೆ
ಗದಗ ತಾಲೂಕು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಂದು ವಾರದಿಂದ ಜೋರಾಗಿ ಬೀಸುತ್ತಿರುವ ಶೀತಗಾಳಿ ಪ್ರಭಾವಕ್ಕೆ ಜನ ನಡಗುತ್ತಿದ್ದಾರೆ. ಬಡವರ ಬ್ಲ್ಯಾಂಕೆಟ್ ಎಂದೇ ಪ್ರಸಿದ್ಧಿಯಾದ ಚಿತ್ತಾರದ ಕಲಾತ್ಮಕ ಕೌದಿಗಳಿಗೆ ಸದ್ಯ ಬೇಡಿಕೆ ಹೆಚ್ಚಾಗಿದೆ. ಕೌದಿ ಹೊಲಿಯುವ ಮಹಿಳೆಯರಿಗೆ ಕೈತುಂಬಾ ಉದ್ಯೋಗ ಲಭ್ಯವಾಗಿದೆ.

ಪಾಟ್ನಾ ಸ್ಫೋಟ : ಮಂಗಳೂರಿನಲ್ಲಿ ಇಬ್ಬರ ಬಂಧನ
ಪಾಟ್ನಾ ಸರಣಿ ಸ್ಫೋಟದ ಬಂಧಿತ ಆರೋಪಿ ಮಂಗಳೂರು ಮೂಲದ ಆಯೇಷಾ ಬಾನು ನೀಡಿದ ಮಾಹಿತಿ ಆಧರಿಸಿ ಮಂಗಳೂರಿನಲ್ಲಿ ಆಸೀಫ್, ಮುಸ್ತಾಕ್ ಎಂಬುವವರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ನ.25ರಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಈ ಸಂದರ್ಭದಲ್ಲಿ ಆರೋಪಿ ಮುಸ್ತಾಕ್ ಕುಸಿದು ಬಿದ್ದ ಘಟನೆ ನಡೆದಿದ್ದು, ವೈದ್ಯಕೀಯ ತಪಾಸಣೆ ನಂತರ ನ್ಯಾಯಾಲಯದಕ್ಕೆ ಹಾಜರು ಪಡಿಸಲು ನ್ಯಾಯಮೂರ್ತಿಗಳು ಪೊಲೀಸರಿಗೆ ಆದೇಶ ನೀಡಿದ್ದಾರೆ. ಕುಸಿದು ಬಿದ್ದಿರುವ ಆರೋಪಿ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಂಗಳೂರಿನಲ್ಲಿ ಬಂಧಿಸಲಾಗಿರುವ ಇಬ್ಬರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಬಿಹಾರಕ್ಕೆ ಕರೆದೊಯ್ಯಲು ಬಿಹಾರದ ಪೊಲೀಸರು ಟ್ರಾನ್ಸೆಟ್ ವಾರೆಂಟ್ ಗಾಗಿ ಮಂಗಳೂರು ನ್ಯಾಯಾಲಕ್ಕೆ ಮನವಿ ಸಲ್ಲಿಸಿದ್ದಾರೆ.

ಹಿರೇಮಠ್ ಕಚೇರಿ ಮೇಲೆ ದಾಳಿ, ಪಾಪು ಖಂಡನೆ
ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಡಾ.ಎಸ್.ಆರ್.ಹಿರೇಮಠ ಅವರ ಧಾರವಾಡ ಕಚೇರಿ ಮೇಲೆ ನಡೆದ ದಾಳಿಯನ್ನು ನಾಡೋಜ ಪಾಟೀಲ್ ಪುಟ್ಟಪ್ಪ ಖಂಡಿಸಿದ್ದಾರೆ. ಕೃತ್ಯ ಎಸಗಿದವರನ್ನು ತಕ್ಷಣ ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ರಾಷ್ಟ್ರೀಯ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವವರ ವಿರುದ್ಧ ಬಹುದೊಡ್ಡ ಹೋರಾಟ ಕೈಗೊಂಡಿರುವ ಎಸ್.ಆರ್. ಹಿರೇಮಠ, ಯಾರಿಗೂ ಮಣಿಯದೇ ಯಾವುದಕ್ಕೂ ಅಂಜದೇ ಕೈಗೊಂಡಿರುವ ಈ ಹೋರಾಟ ಮುಂದುವರೆಸುತ್ತಿದ್ದಾರೆ. ಅಂತಹವರಿಗೆ ಬೆದರಿಕೆ ಹಾಕುವ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಪಾಪು ಒತ್ತಾಯಿಸಿದ್ದಾರೆ.












Click it and Unblock the Notifications