ಶೃಂಗೇರಿಯಲ್ಲಿ ನಕ್ಸಲರು ಮತ್ತು ಇತರ ಜಿಲ್ಲಾ ಸುದ್ದಿ
ಚಿಕ್ಕಮಗಳೂರು, ನ.18 : ಕಳೆದ ಕೆಲವು ದಿನಗಳ ಹಿಂದೆ ಬೆಳ್ತಗಂಡಿಯಲ್ಲಿ ಕಾರಿಗೆ ಬೆಂಕಿ ಹಾಕಿ ಪರಾರಿಯಾಗಿದ್ದ ನಕ್ಸಲರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಮವಾರ ಮುಂಜಾಣನೆ ಕಾಣಿಸಿಕೊಂಡಿದ್ದಾರೆ. ಶೃಂಗೇರಿ ಸಮೀಪದ ತನಿಕೋಡು ಚೆಕ್ ಪೋಸ್ಟ್ ಗೆ ಆಗಮಿಸಿದ ನಕ್ಸಲರು, ಸಿಸಿಟಿವಿ ಧ್ವಂಸಗೊಳಿಸಿ, ಗಾಳಿಯಲ್ಲಿ ಗುಂಡು ಹಾರಿಸಿ ಸಿಬ್ಭಂದಿಗೆ ಬೆದರಿಕೆ ಹಾಕಿದ್ದಾರೆ.
ಸೋಮವಾರ ಮುಂಜಾನೆ ಶೃಂಗೇರಿ ಸಮೀಪದ ತನಿಕೋಡು ಅರಣ್ಯ ತಪಾಸಣೆ ಠಾಣೆಗೆ ಆಗಮಿಸಿದ ಶಸ್ತ್ರ ಸಜ್ಜಿತ ನಕ್ಸಲರು, ಸಿಬ್ಬಂದಿಯನ್ನು ಬೆದರಿಸಿ, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಚೆಕ್ ಪೋಸ್ಟ್ ದಾಖಲೆಗಳನ್ನು ನಾಶಪಡಿಸಿ, ಸಿಸಿಟಿವಿಯನ್ನು ಧ್ವಂಸಗೊಳಿಸಿದ್ದಾರೆ. ಕರಪತ್ರಗಳನ್ನು ಎಸೆದು, ಮಾವೋವಾದಿ ಜಿಂದಾಬಾದ್ ಎಂದು ಘೋಷಣೆ ಕೂಗಿ ತೆರಳಿದ್ದಾರೆ.
ಸುದ್ದಿ ತಿಳಿದು ನಕ್ಸಲ್ ನಿಗ್ರಹ ಪಡೆ ಸ್ಥಳಕ್ಕೆ ಆಗಮಿಸುವ ವೇಳೆಗಾಗಲೇ 10-12 ಜನರಿದ್ದ ನಕ್ಸಲರ ತಂಡ ಸ್ಥಳದಿಂದ ಪರಾರಿಯಾಗಿದ್ದಾರೆ. ಮಂಗಳವಾರ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲು ಸಿಎಂ ಸಿದ್ದರಾಮಯ್ಯ ಮತ್ತು ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದಾರೆ. ಇದಕ್ಕೆ ಒಂದು ದಿನ ಮೊದಲೇ ಈ ಕೃತ್ಯ ನಡೆದಿದೆ.
2005ರಲ್ಲಿ ನಕ್ಸಲರು ಇದೇ ತನಿಕೋಡು ಚೆಕ್ ಪೋಸ್ಟ್ ಅನ್ನು ಸ್ಫೋಟಿಸಿದ್ದರು. 2013ರ ನ.9ರಂದು ಬೆಳ್ತಂಗಡಿಯ ಸಮೀಪದ ಕುತ್ಲೂರಿನ ಗ್ರಾಮ ಪಂಚಾಯತ್ ಸದಸ್ಯ ರಾಮಚಂದ್ರ ಭಟ್ ಅವರ ಮನೆಗೆ ಆಗಮಿಸಿದ್ದ ನಕ್ಸಲರು, ಮನೆ ಬಾಗಿಲು ತೆರಯುವಂತೆ ಬೆದರಿಕೆ ಹಾಕಿತ್ತು, ಭಟ್ ಬಾಗಿಲು ತೆರಯಲು ನಿರಾಕರಿಸಿದ್ದರಿಂದ, ಅವರ ಮಾರುತಿ ಓಮ್ನಿ ಕಾರು ಮತ್ತು ಬೈಕ್ ಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿತ್ತು. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ನಕ್ಸಲರು ಪ್ರತ್ಯಕ್ಷ
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಸಮೀಪದ ತನಿಕೋಡು ಚೆಕ್ ಪೋಸ್ಟ್ ಗೆ ಸೋಮವಾರ ಮುಂಜಾನೆ ಆಗಮಿಸಿದ ನಕ್ಸಲರು, ಸಿಸಿಟಿವಿ ಧ್ವಂಸಗೊಳಿಸಿ, ದಾಖಲೆಗಳನ್ನು ನಾಶಪಡಿಸಿ ಪರಾರಿಯಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ನಕ್ಸಲ್ ನಿಗ್ರಹ ಪಡೆ ಆಗಮಿಸುವ ವೇಳೆಗಾಗಲೇ ಅವರು ಪರಾರಿಯಾಗಿದ್ದರು. ಮಂಗಳವಾರ ಸಿಎಂ ಸಿದ್ದರಾಮಯ್ಯ ಮತ್ತು ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಜಿಲ್ಲೆಗೆ ಭೇಟಿ ನೀಡುಲಿದ್ದು, ಅದಕ್ಕೂ ಮುನ್ನ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ.

ಭೂಮಿಗೆ ಸೂಕ್ತ ದರ
ರೈತರಿಂದ ವಶಪಡಿಸಿಕೊಂಡ ಭೂಮಿಗೆ ಸೂಕ್ತ ದರ ನೀಡಬೇಕೆಂದು ಆಗ್ರಹಿಸಿ ಸೋಮವಾರ ನೂರಾರು ರೈತರು ತುಮಕೂರಿನ ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ ಮಾರ್ಗದ ರೈಲ್ವೆ ಹಳಿ ಹಾದುಹೋಗುವ ಗ್ರಾಮಗಳಾದ ವೀರಸಾಗರ, ತುಮಕೂರು ಅಮಾನಿಕೆರೆ, ದಿಬ್ಬೂರು, ಹೊನ್ನೇನಹಳ್ಳಿ, ಊರ್ಕೆರೆ, ಅಣ್ಣೇನಹಳ್ಳಿ, ಉಚ್ಚಂಗಿ, ಮೆಳೆಹಳ್ಳಿಯ ರೈತರಿಂದ ವಶಪಡಿಸಿಕೊಂಡ ಭೂಮಿಗೆ ಒಂದು ಎಕರೆಗೆ 1 ಕೋಟಿ 20 ಲಕ್ಷ ರೂ. ನೀಡುವಂತೆ ಹಿಂದಿನ ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದರು. ಅದನ್ನು ಪರಿಗಣಿಸಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದರು.

ನಗರಗಳಿಗೂ ಯಶಸ್ವಿನಿ ಯೋಜನೆ
ಗ್ರಾಮೀಣ ಪ್ರದೇಶಕ್ಕೆ ಸೀಮಿತವಾಗಿದ್ದ ಯಶಸ್ವಿನಿ ಯೋಜನೆಯನ್ನು ಪ್ರಸ್ತುತ ನಗರ ಪ್ರದೇಶಕ್ಕೂ ವಿಸ್ತರಿಸಲಾಗುತ್ತಿದೆ. ನಗರ ಪ್ರದೇಶದ ಯಶಸ್ವಿನಿ ಯೋಜನೆ ನೋಂದಣಿದಾರರಿಗೆ ಪ್ರಿಮಿಯಂ ಹಣ ಹೆಚ್ಚಿಸಲಾಗುವುದು ಎಂದು ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, 2003 ರಲ್ಲಿ ಆರಂಭವಾದ ಯಶಸ್ವಿನಿ ಯೋಜನೆಯು ಈಗ ದಶಮಾನೋತ್ಸವ ಆಚರಿಸುತ್ತಿದೆ. ಈ ಯೋಜನೆಯನ್ನು ನಗರ ಪ್ರದೇಶಕ್ಕೆ ವಿಸ್ತರಿಸಿ, ಫೆಬ್ರವರಿಯಿಂದ ಜೂನ್ವರೆಗೆ ನೋಂದಣಿ ಆರಂಭಿಸಲಾಗುವುದು. ಇದರಿಂದ ನಗರ ಪ್ರದೇಶದ 40 ಲಕ್ಷ ಸಹಕಾರ ಸಂಘಗಳ ಸದಸ್ಯರು ಪ್ರಯೋಜನ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಸಚಿವರು ಪಂಚರಾಜ್ಯಗಳ ಪ್ರವಾಸಕ್ಕೆ
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಚಿವರು ಐದು ರಾಜ್ಯಗಳ ಚುನಾವಣಾ ಪ್ರಚಾರಕ್ಕಾಗಿ ತೆರಳಲಿದ್ದಾರೆ. ಸಿಎಂ ಸಿದ್ದರಾಮಯ್ಯ ಸಂಪುಟದ ಸುಮಾರು 10 ಸಚಿವರು ಪ್ರಚಾರಕ್ಕೆ ತೆರಳಲಿದ್ದಾರೆ. ಮಂಗಳವಾರ ನವದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಯಾವ ಸಚಿವರು, ಯಾವ ರಾಜ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂಬುದನ್ನು ನಿರ್ಧರಿಸಲಿದ್ದಾರೆ. ಆರ್.ವಿ.ದೇಶಪಾಂಡೆ, ಕೃಷ್ಣಭೈರೇಗೌಡ, ಕಿಮ್ಮನೆ ರತ್ನಾಕರ್, ದಿನೇಶ್ ಗುಂಡೂರಾವ್, ವಿನಯ್ ಕುಮಾರ್ ಸೊರಕೆ ಐದು ರಾಜ್ಯಗಳ ಚುನಾವಣಾ ಪ್ರಚಾರಕ್ಕೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.

ಬೇವಿನ ಮರದಲ್ಲಿ ಹಾಲು ನೋಡಲು ಜನಜಾತ್ರೆ
ಬೀದರ್ ತಾಲೂಕಿನ ಯಾಕತಪುರ ಗ್ರಾಮದ ಚಂದ್ರಶೇಖರ ಪೊಲೀಸ್ ಪಾಟೀಲ್ ಎಂಬುವವರ ಮನೆಯ ಅವರಣದಲ್ಲಿರುವ ಬೇವಿನ ಮರದಿಂದ ಕಳೆದ ಹದಿಮೂರು ದಿನಗಳಿಂದ 24 ಗಂಟೆ ನಿರಂತರ ಹಾಲು ಸುರಿಯುತ್ತಿವೆ. ಇದರಿಂದಾಗಿ ಮರಕ್ಕೆ ಕುಟುಂಬ ವರ್ಗ ಸೇರಿದಂತೆ ಅನೇಕರು ಪೂಜೆ ಸಲ್ಲಿಸುತ್ತಿದ್ದಾರೆ. ಸುತ್ತಮುತ್ತಲ ಗ್ರಾಮಗಳಿಂದ ಹಾಲು ನೋಡಲು ಜನಜಾತ್ರೆಯೇ ಸೇರಿದೆ.

ಸಾಮೂಹಿಕ ಅಂತ್ಯಕ್ರಿಯೆ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡದಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಬಿಜಾಪುರದ ಉಪ್ಪಲದಿನ್ನಿ, ಕುರೆಕನಾಳ, ಐಬಿ, ಹಾಗೂ ಮಾವಿನಗಿಡ ತಾಂಡಾಗಳ 19 ಶವಗಳನ್ನು ಬಸವಸಾಗರ ಜಲಾಶಯದ ಎಂಪಿಸಿಎಲ್ ಕಂಪನಿ ಕಾಲುವೆ ಪಕ್ಕದಲ್ಲಿ ಭಾನುವಾರ ಸಾಮೂಹಿಕ ಅಂತ್ಯಕ್ರಿಯೆ ಮಾಡಲಾಯಿತು. ಮಕ್ಕಳ 7 ಶವಗಳನ್ನು ಹೂಳಿದರೆ, ಉಳಿದ ಶವಗಳನ್ನು ಸುಡಲಾಯಿತು.

ಬರಕ್ಕೆ ತುತ್ತಾದ ಚಿಕ್ಕಬಳ್ಳಾಪುರ ಜಿಲ್ಲೆ
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಚಿಂತಾಮಣಿ ಹಾಗೂ ಶಿಡ್ಲಘಟ್ಟ ತಾಲೂಕುಗಳನ್ನು ಬರಪೀಡಿತವೆಂದು ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಈ ತಾಲೂಕುಗಳಲ್ಲಿ ಬರಪರಿಹಾರ ಕಾಮಗಾರಿಗೆ ಕೈಗೊಳ್ಳಬೇಕಾದ ಕ್ರಮ ಮತ್ತು ಅಗತ್ಯ ವಿರುವ ಅನುದಾನದ ಅಂದಾಜು ವೆಚ್ಚವನ್ನು ನ. 19 ರೊಳಗಾಗಿ ಸಲ್ಲಿಸುವಂತೆ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಕಳೆದ ಎರಡು ವರ್ಷಗಳಂತೆ ಜಿಲ್ಲೆ ಈ ಬಾರಿಯು ಬರಕ್ಕೆ ತುತ್ತಾಗಿದೆ.

ಪಿಲಿಕುಳದಲ್ಲಿ ಅರ್ಬನ್ ಇಕೋ ಪಾರ್ಕ್
ಸಸ್ಯರಾಶಿಯ ಸಂರಕ್ಷಣೆಗಾಗಿ ಮತ್ತು ಅವನತಿ ಹೊಂದುತ್ತಿರುವ ಸಸ್ಯಗಳ ಅಭಿವದ್ಧಿ ಮಂಗಳೂರಿನ ಪಿಲಿಕುಳದಲ್ಲಿ ಹೊಸ ಆಯಾಮದಲ್ಲಿ ಅರ್ಬನ್ ಇಕೋ ಪಾರ್ಕ್ ಆರಂಭಿಸಲಿದ್ದೇವೆ ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾತನಾಡಿದ ಅವರು, ಕಾಡಿನಲ್ಲಿ ವಿನಾಶದಂಚಿನಲ್ಲಿರುವ ವಿಶೇಷ ಸಸ್ಯಗಳನ್ನು ನಗರ ಪ್ರದೇಶದಲ್ಲಿ ಬೆಳೆಯುವ ನಿಟ್ಟಿನಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಈ ಪಾರ್ಕ್ ಆರಂಭಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.












Click it and Unblock the Notifications