ಕೊಡಗಿನಲ್ಲಿ ಆಟೋ ಮುಷ್ಕರ ಅಂತ್ಯ, ಇತರ ಜಿಲ್ಲಾಸುದ್ದಿಗಳು
ಕೊಡಗು. ಏ. 28 : ಜಿಲ್ಲೆಯಲ್ಲಿ ಆಟೋಗಳಿಗೆ ಮೀಟರ್ ಅಳವಡಿಕೆಗೆ ವಿನಾಯಿತಿ ನೀಡಬೇಕೆಂದು ಕೋರಿ ಐದು ದಿನಗಳಿಂದ ಆಟೋ ಚಾಲಕರು ನಡೆಸುತ್ತಿದ್ದ ಮುಷ್ಕರ ಅಂತ್ಯಗೊಂಡಿದ್ದು, ಸೋಮವಾರದಿಂದ ಆಟೋಗಳು ಎಂದಿನಂತೆ ರಸ್ತೆಗಿಳಿದಿವೆ. ತಾತ್ಕಾಲಿಕವಾಗಿ ಮೀಟರ್ ಅಳವಡಿಕೆಯಿಂದ ಕೊಡಗು ಜಿಲ್ಲೆಯ ಆಟೋಗಳಿಗೆ ವಿನಾಯಿತಿ ನೀಡಲಾಗುತ್ತದೆ ಎಂದು ರಾಜ್ಯ ಸಾರಿಗೆ ಪ್ರಾಧಿಕಾರ ಭರವಸೆ ನೀಡಿರುವ ಹಿನ್ನಲೆಯಲ್ಲಿ ಮುಷ್ಕರ ಸ್ಥಗಿತಗೊಳಿಸಲಾಗಿದೆ.
ಶನಿವಾರ ಕೊಡಗು ಜಿಲ್ಲೆಯ ಆಟೋ ಮಾಲೀಕರ ಸಂಘದ ಪ್ರಮುಖರು ಅಧ್ಯಕ್ಷ ಮೇದಪ್ಪ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿ ಸಾರಿಗೆ ಇಲಾಖೆ ಆಯುಕ್ತರಿಗೆ ಮೀಟರ್ ಅಳವಡಿಕೆಯಲ್ಲಿ ಕೊಡಗು ಜಿಲ್ಲೆಗೆ ವಿನಾಯಿತಿ ನೀಡುವಂತೆ ಒತ್ತಾಯಿಸಿದ್ದರು. ತಾತ್ಕಾಲಿಕವಾಗಿ ಮೀಟರ್ ಅಳವಡಿಕೆಯಿಂದ ಕೊಡಗು ಜಿಲ್ಲೆಯ ಆಟೋಗಳಿಗೆ ವಿನಾಯಿತಿ ನೀಡಲಾಗುತ್ತದೆ ಎಂದು ಆಯುಕ್ತರು ಈ ಸಂದರ್ಭದಲ್ಲಿ ಭರವಸೆ ನೀಡಿದ್ದರು.[ಮಡಿಕೇರಿಯಲ್ಲಿ ಸಿಟಿ ಬಸ್ ಸೇವೆ ಆರಂಭ]
ಆದ್ದರಿಂದ ಐದು ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಆಟೋ ಚಾಲಕರು ಹಿಂಪಡೆದಿದ್ದು, ಸೋಮವಾರ ಸುಮಾರು 8 ಸಾವಿರ ಆಟೋಗಳು ರಸ್ತೆಗಿಳಿದಿವೆ. ಇದರಿಂದ ಜಿಲ್ಲೆಗೆ ಆಗಮಿಸಿದ್ದ ಪ್ರವಾಸಿಗರು ಮತ್ತು ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆಟೋ ಮಾಲೀಕರು, ಪ್ರಯಾಣಿಕರಿಗೆ ತೊಂದರೆ ಆಗದಂತೆ ಸೂಕ್ತ ಆದೇಶ ಹೊರಡಿಸುವಂತೆ ಸಾರಿಗೆ ಆಯುಕ್ತರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]

ಕೊಡಗಿನಲ್ಲಿ ಆಟೋ ಮುಷ್ಕರ ಅಂತ್ಯ
ಕೊಡಗು ಜಿಲ್ಲೆಯಲ್ಲಿ ಆಟೋಗಳಿಗೆ ಮೀಟರ್ ಅಳವಡಿಕೆಗೆ ವಿನಾಯಿತಿ ನೀಡಬೇಕೆಂದು ಕೋರಿ ಐದು ದಿನಗಳಿಂದ ಆಟೋ ಚಾಲಕರು ನಡೆಸುತ್ತಿದ್ದ ಮುಷ್ಕರ ಅಂತ್ಯಗೊಂಡಿದ್ದು, ಸೋಮವಾರದಿಂದ ಆಟೋಗಳು ಎಂದಿನಂತೆ ರಸ್ತೆಗಿಳಿದಿವೆ. ಇದರಿಂದ ಪ್ರವಾಸಿಗರು ಮತ್ತು ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಮಂಗಳವಾರವೂ ಮೃಗಾಲಯ ಓಪನ್
ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ಇರುವುದರಿಂದ ಮಕ್ಕಳು ಮತ್ತು ಪ್ರವಾಸಿಗರಿಗೆ ಅನುಕೂಲವಾಗಲೆಂದು ರಜಾ ದಿನವಾದ ಏ.29 ರ ಮಂಗಳವಾರದಂದು ಶ್ರೀ ಚಾಮರಾಜೇಂದ್ರ ಮೃಗಾಲಯ ಮತ್ತು ಕಾರಂಜಿಕೆರೆ ಪ್ರಕೃತಿ ಉದ್ಯಾನವನ್ನು ಸಾರ್ವಜನಿಕರ ವೀಕ್ಷಣೆಗೆ ತೆರೆದಿರಲಾಗುವುದು ಎಂದು ಮೃಗಾಯಲದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ತಿಳಿಸಿದ್ದಾರೆ. [ಮೃಗಾಲಯದಲ್ಲಿ ಪೋಲೋ ಇನ್ನಿಲ್ಲ]

ಶ್ರೀರಾಮದೇವರ ಅಣೆಕಟ್ಟೆ ದುರಸ್ತಿ
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿರುವ ಶ್ರೀರಾಮದೇವರ ಅಣೆಕಟ್ಟೆಯನ್ನು ಸುಮಾರು 30 ಕೋಟಿ ರೂ ವೆಚ್ಚದಲ್ಲಿ ದುರಸ್ತಿ ಮಾಡಲು ಕಾವೇರಿ ನೀರಾವರಿ ನಿಗಮ ಸಿದ್ಧತೆ ನಡೆಸುತ್ತಿದೆ. ತಾಲೂಕಿನ ಕಟ್ಟೇಬೆಳಗುಲಿ ಸಮೀಪದಲ್ಲಿ ನಿರ್ಮಿಸಲಾಗಿರುವ ಈ ಅಣೆಕಟ್ಟೆ 144ವರ್ಷಗಳಷ್ಟು ಪುರಾತನವಾದದ್ದು. ತನ್ನೊಡಲಲ್ಲಿ ನೀರು ತುಂಬಿಕೊಂಡು, ಅವಶ್ಯಕ ಸಂದರ್ಭದಲ್ಲಿ ಅವಶ್ಯಕವಾದಷ್ಟೂ ನೀರನ್ನು ಅಗತ್ಯತೆಗೆ ತಕ್ಕಂತೆ ಹರಿಸುತ್ತಲೇ ಇರುವ ಶ್ರೀರಾಮದೇವರ ಅಣೆಕಟ್ಟೆ ಪ್ರವಾಸಿ ತಾಣವೂ ಹೌದು.

ಜಿಲ್ಲಾಧಿಕಾರಿ, ಸಚಿವರ ನಡುವೆ ಮಾತಿನ ಮಲ್ಲಯುದ್ಧ
ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್ ಮತ್ತು ಜಿಲ್ಲಾಧಿಕಾರಿ ನಡುವೆ ಮಾತಿನ ಮಲ್ಲಯುದ್ಧ ನಡೆಯುತ್ತಿದೆ. ಕೆಲಸ ಮಾಡಲು ಎಲ್ಲಿಯಾದರೇನು? ಬಾಗಲಕೋಟೆಯಾದರೂ ಸರಿ, ರಾಮನಗರವಾದರೂ ರೆಡಿ ಎಂದು ಜಿಲ್ಲಾಧಿಕಾರಿ ಮನೋಜ ಜೈನ್ ಸಚಿವರಿಗೆ ತಿರುಗೇಟು ನೀಡಿದ್ದಾರೆ. ಶನಿವಾರ ಕುಡಿಯುವ ನೀರಿನ ಸಮಸ್ಯೆ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಸಚಿವ ಎಸ್.ಆರ್. ಪಾಟೀಲ್ ಅವರು, ಜಿಲ್ಲಾಧಿಕಾರಿಯೇನು ಪಾಳೇಗಾರರೇ? ಮೇಲಿನಿಂದ ಉದುರಿ ಬಿದ್ದಿದ್ದಾರೆಯೇ? ನಮ್ಮಂತೆ ಅವರೂ ಜನ ಸೇವಕರು. ಕುಡಿವ ನೀರು ಪೂರೈಕೆಯಲ್ಲಿ ಲೋಪಗಳಾದರೆ ತಲೆದಂಡ ಖಚಿತ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಜಿಲ್ಲಾಧಿಕಾರಿ ಕುಡಿಯುವ ನೀರು ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿಲ್ಲ. ಸಚಿವರು ಹಾಗೂ ಶಾಸಕರಿಗೆ ಯಾರೋ ಸುಳ್ಳು ಮಾಹಿತಿ ನೀಡಿದ್ದಾರೆ, ಕೆಲಸ ಮಾಡಲು ನಾನು ಬಂದಿದ್ದೇನೆ ಯಾವ ಜಿಲ್ಲೆಯಾದರೇನು ಎಂದು ಹೇಳಿದ್ದಾರೆ.

ಶಿಕ್ಷಕ ಹುದ್ದೆಯ ಆಕಾಂಕ್ಷಿಗಳ ಸಭೆ
ಟಿಇಟಿ ಪರೀಕ್ಷೆಯ ಸಾಧಕ-ಬಾಧಕ ಕುರಿತು ಚರ್ಚಿಸಲು ಶಿಕ್ಷಕ ಹುದ್ದೆಯ ಆಕಾಂಕ್ಷಿಗಳ ಸಭೆಯನ್ನು ಏ.28ರಂದು ಬೆಳಗ್ಗೆ 11ಕ್ಕೆ ಬಿಜಾಪುರದ ಗಗನ್ಮಹಲ್ ಉದ್ಯಾನವನದಲ್ಲಿ ಕರೆಯಲಾಗಿದೆ. ಪ್ರಸಕ್ತ ವರ್ಷದಿಂದ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ)ಯನ್ನು ನಡೆಸಬೇಕೆನ್ನುವ ರಾಜ್ಯ ಸರಕಾರದ ದಿಢೀರ್ ನಿರ್ಧಾರದಿಂದಾಗಿ ಲಕ್ಷಾಂತರ ಡಿಎಡ್ ಮತ್ತು ಬಿಎಡ್ ತರಬೇತಿ ಪಡೆದವರಲ್ಲಿ ತೀವ್ರ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆಂದೇ ಈ ಸಭೆ ಆಯೋಜಿಸಲಾಗಿದೆ.












Click it and Unblock the Notifications