ಗೋಡೆ ಒಡೆಸಿದ ಸಚಿವ ಆಂಜನೇಯ ಕ್ಷಮೆ ಯಾಚಿಸಲಿ
ಬೆಂಗಳೂರು, ಜ.9: ಕಚೇರಿಯನ್ನು ವಿಸ್ತರಣೆ ಮಾಡಲು ರಾಜ್ಯದ ಶಕ್ತಿ ಸೌಧವಾದ ವಿಧಾನಸೌಧದ ಗೋಡೆ ಒಡೆದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ರಾಜ್ಯದ ಕ್ಷಮೆ ಯಾಚಿಸಬೇಕೆಂದು ಕೆಂಗಲ್ ಹನುಮಂತಯ್ಯ ಸ್ಮಾರಕ ಸಮಿತಿ ಒತ್ತಾಯಿಸಿದೆ. ಸಿಎಂ ಸಿದ್ದರಾಮಯ್ಯ ಆಂಜನೇಯ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಸಮಿತಿ ಆಗ್ರಹಿಸಿದೆ.
ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಕೆಂಗಲ್ ಹನುಮಂತಯ್ಯ ಸ್ಮಾರಕ ಸಮಿತಿ ರಾಜ್ಯಾಧ್ಯಕ್ಷ ಸುರೇಶ್, ಕೆಂಗಲ್ ಹನುಮಂತಯ್ಯ ಅವರ ಕನಸಿನ ಕೂಸು ಮತ್ತು ಕರ್ನಾಟಕದ ಪಾರಂಪರಿಕ ಕಟ್ಟಡವಾದ ವಿಧಾನಸೌಧವನ್ನು ಕುರೂಪಗೊಳಿಸಿದ ಸಚಿವ ಆಂಜನೇಯ ಬಹಿರಂಗವಾಗಿ ರಾಜ್ಯದ ಜನರ ಕ್ಷಮೆ ಯಾಚಿಸಬೇಕು ಎಂದು ಹೇಳಿದರು. [ಗೋಡೆ ಒಡೆಸಿದ ಸಚಿವ ಆಂಜನೇಯ]
ಹಿಂದೆ ವಿಧಾನಸೌಧದ ಗೋಡೆ ಒಡೆದಾಗ ವಿರೋಧ ವ್ಯಕ್ತವಾಗಿದ್ದು ತಿಳಿದಿದ್ದರೂ ಸಚಿವ ಆಂಜನೇಯ ಅವರು ಈ ಕೆಲಸ ಮಾಡಿಸಿದ್ದಾರೆ. ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಸಚಿವ ಆಂಜನೇಯ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಸಂಪುಟದಿಂದ ಕೈ ಬಿಡಬೇಕೆಂದು ಸುರೇಶ್ ಆಗ್ರಹಿಸಿದರು.
ಸಚಿವ ಆಂಜನೇಯ ಅವರು ರಾಜ್ಯದ ಜನರ ಕ್ಷಮೆ ಯಾಚಿಸುವ ತನಕ ಸಮಿತಿ ರಾಜ್ಯಾದ್ಯಂತ ಅವರ ವಿರುದ್ಧ ಹೋರಾಟ ನಡೆಸುತ್ತದೆ. ಸಚಿವರು ಕ್ಷಮೆ ಯಾಚಿಸದಿದ್ದರೆ, ಮುಖ್ಯಮಂತ್ರಿ ಮತ್ತು ಆಂಜನೇಯ ಅವರ ನಿವಾಸಗಳ ಮುಂದೆ ಸಮಿತಿ ಪ್ರತಿಭಟನೆ ನಡೆಸಲಿದೆ ಎಂದು ಸುರೇಶ್ ಎಚ್ಚರಿಕೆ ನೀಡಿದರು. ಕರ್ನಾಟಕದ ಇತರ ಜಿಲ್ಲಾಸುದ್ದಿಗಳು

ಗೋಡೆ ಒಡೆದ ಸಚಿವರು ಕ್ಷಮೆ ಕೇಳಬೇಕು
ಕಚೇರಿ ವಿಸ್ತರಣೆಗಾಗಿ ವಿಧಾನಸೌಧದ ಗೋಡೆ ಒಡೆದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ರಾಜ್ಯದ ಜನರ ಕ್ಷಮೆ ಯಾಚಿಸಬೇಕು ಎಂದು ಕೆಂಗಲ್ ಹನುಮಂತಯ್ಯ ಸ್ಮಾರಕ ಸಮಿತಿ ಅಧ್ಯಕ್ಷ ಸುರೇಶ್ ಒತ್ತಾಯಿಸಿದ್ದಾರೆ. ವಿಧಾನಸೌಧ ವಿರೂಪಗೊಳಿಸಿದ ಅವರು ಕ್ಷಮೆ ಕೇಳಬೇಕು ಇಲ್ಲದಿದ್ದರೆ, ಅವರ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಸಮಿತಿ ಎಚ್ಚರಿಕೆ ನೀಡಿದೆ.

ಕನ್ನಡ ವಿರೋಧಿ ನೀತಿ ಮುಖಕ್ಕೆ ಮಸಿ
ಕನ್ನಡ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್ ಟಿಆರ್ ಐ) ನಿರ್ದೇಶಕ ರಾಮಚಂದ್ರ ಶೇಖರನ್ ಮುಖಕ್ಕೆ ಕರವೇ ಕಾರ್ಯಕರ್ತರು ಗುರುವಾರ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಣಿ ಬಹೂದ್ದೂರ್ ಸಭಾಂಗಣದಲ್ಲಿ ಇಂದು ಸಿಎಫ್ ಟಿಆರ್ ಐ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರಿಗೆ ಕಾರ್ಯಕರ್ತರು ಮಸಿ ಬಳಿದಿದ್ದಾರೆ.

ರಾಮನಗರದಲ್ಲಿ ಮತ್ತೆ ಕಾಲುಬಾಯಿ ರೋಗ
2013ರಲ್ಲಿ ಜಿಲ್ಲೆಯ ರೈತರಲ್ಲಿ ಆತಂಕ ಮೂಡಿಸಿದ್ದ ಜಾನುವಾರುಗಳ ಕಾಲುಬಾಯಿ ರೋಗ ಜಿಲ್ಲೆಯಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದೆ. ಕಳೆದ ಒಂದು ವಾರದಲ್ಲಿ 10ಕ್ಕೂ ಹೆಚ್ಚು ರಾಸುಗಳಿಗೆ ರೋಗ ತಗುಲಿರುವುದು ದೃಢಪಟ್ಟಿದೆ. ಮತ್ತೊಮ್ಮೆ ರೋಗ ವ್ಯಾಪಕವಾಗಿ ಹರಡಿ ರಾಸುಗಳ ಸಾವನ್ನಪ್ಪಿದ್ದರೆ ಎಂಬ ಆತಂಕ ರೈತರಿಗೆ ಎದುರಾಗಿದೆ. ಕಳೆದ ವರ್ಷದ ಜುಲೈ-ನವೆಂಬರ್ ಅವಧಿಯಲ್ಲಿ ಕಾಲುಬಾಯಿ ರೋಗ ಜಿಲ್ಲೆಯಲ್ಲಿ ಕಾಣಿಸಿಕೊಂಡಿತ್ತು.ಇದರಿಂದ ಸಾವಿರಾರು ರಾಸುಗಳು ಮೃತಪಟ್ಟಿದ್ದವು.

ಸೇವೆ ಖಾಯಂಗೊಳಿಸುವಂತೆ ಧರಣಿ
ರಾಯಚೂರು ಜಿಲ್ಲೆಯಲ್ಲಿ ಸರ್ಕಾರದ ವಿವಿಧ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರ ಸೇವೆಯನ್ನು ಕಾಯಂಗೊಳಿಸಬೇಕು ಮತ್ತು ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ದಿನಗೂಲಿ ನೌಕರರ ಸಂಘ ಧರಣಿ ನಡೆಸಿತು. 1984 ರ ನಂತರ ರಾಜ್ಯದಲ್ಲಿ 17 ಸಾವಿರ ಜನ ದಿನಗೂಲಿ ನೌಕರರಾಗಿ ನೇಮಕಗೊಂಡಿದ್ದಾರೆ. ರಾಯಚೂರು ಜಿಲ್ಲೆಯಲ್ಲಿಯೂ ನೂರಾರು ನೌಕರರಿದ್ದು, ಅವರ ಸೇವೆಯನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಸಿಇಓಗೆ ಮನವಿ ಪತ್ರ ಸಲ್ಲಿಸಿದರು.

ಜ.12ರಂದು ಅಹಿಂದ ಸಮಾವೇಶ
ಹಿಂದುಳಿದ ಜಾತಿಗಳ ಒಕ್ಕೂಟಕದ ದಶಮಾನೋತ್ಸವ ಮತ್ತು ಜಾಗೃತಿ ಸಮಾವೇಶ ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಮೈದಾನದಲ್ಲಿ ಜ.12ರಂದು ನಡೆಯಲಿದೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಸುಮಾರು 5 ಲಕ್ಷಕ್ಕೂ ಅಧಿಕ ಜನರು ಇದರಲ್ಲಿ ಭಾಗವಹಿಸಲಿದ್ದು, ಸ್ಪೀಕರ್ ಕಾಗೋಡು ತಿಮ್ಮಪ್ಪ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮುಂತಾದವರು ಭಾಗವಹಿಸಲಿದ್ದಾರೆ.

ಅನುದಾನವಿದೆ ಕಾಲೇಜು ಕಟ್ಟಲು ಜಾಗವಿಲ್ಲ
ಕೊಪ್ಪಳ ನಗರದಲ್ಲಿರುವ ಸರ್ಕಾರಿ ಆಸ್ತಿಗಳಿಗೆ ಕಂಡವರು ಬೇಲಿ ಸುತ್ತಿಕೊಂಡಿದ್ದಾರೆ ಎಂಬುದು ಜಿಲ್ಲಾಡಳಿತದ ಗಮನಕ್ಕೆ ಈಗ ಬಂದಿದೆ. ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಕಾಲೇಜಿನ ಹೊಸ ಕಟ್ಟಡ ನಿರ್ಮಿಸಲು ಅನುದಾನ ಬಿಡುಗಡೆ ಆಗಿದೆ. ಆದರೆ, ಅದಕ್ಕೆ ಸ್ಥಳವಕಾಶದ ಕೊರತೆ ಎದುರಾಗಿದೆ. ನೂತನ ಕಟ್ಟಡ ಮತ್ತು ನಿವೇಶನಕ್ಕಾಗಿ ಸರ್ಕಾರ 2 ಕೋಟಿ ಯೋಜನೆಗೆ ಅನುಮೋದನೆ ನೀಡಲು ಸಿದ್ಧತೆ ನಡೆಸಿದೆ. ಆದರೆ ಸ್ಥಳಾವಕಾಶ ಗುರುತಿಸಲು ಜಿಲ್ಲಾಡಳಿತ ವಿಫಲವಾಗಿದೆ. ಸದ್ಯ ಸರ್ಕಾರಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದು, ಭೂಮಿಗಾಗಿ ಹುಡುಕಾಟ ಆರಂಭಿಸಲಾಗಿದೆ.

ಪಿಎಸ್ಐ ಸ್ಥಿತಿ ಗಂಭೀರ
ಗುಲ್ಬರ್ಗದಲ್ಲಿ ಬುಧವಾರ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಸ್ಟೇಷನ್ ಬಜಾರ್ ಠಾಣೆಯ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರ ಸ್ಥಿತಿ ಗಂಭೀರವಾಗಿದೆ. ಗುರುವಾರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಯಶೋಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಪಾರಿ ಕಿಲ್ಲರ್ ಮುನ್ನಾನನ್ನು ಪಿಡಿಯಲು ಹೋದಾಗ ಆತ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದ, ಪೊಲೀಸರು ಹಾರಿಸಿದ ಗುಂಡಿಗೆ ಮುನ್ನಾ ಸಾವನ್ನಪಿದ್ದಾನೆ.

ಆಟೋ ರೀಕ್ಷಾಗಳಿಗೆ ಪ್ರೀಪೇಡ್ ಸೇವೆ ಆರಂಭಿಸಿ
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಂಚರಿಸುವ ಆಟೋ ರೀಕ್ಷಾಗಳಿಗೆ ಪ್ರಿಪೇಡ್ ಸೇವೆ ಕಡ್ಡಾಯಗೊಳಿಸಬೇಕೆಂದು ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್ ಒತ್ತಾಯಿಸಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಟ್ರಸ್ಟ್ ಮನವಿ ಸಲ್ಲಿಸಿದೆ. ಬೆಂಗಳೂರು ನಗರದ ಮಾದರಿಲ್ಲಿಯೇ ಅವಳಿ ನಗರಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮೀಟರ್ ಸೇವೆಯನ್ನು ಕಡ್ಡಾಯಗೊಳಿಸಬೇಕು ಎಂದು ಟ್ರಸ್ಟ್ ಮನವಿ ಮಾಡಿದೆ. ಆಟೋ ಚಾಲಕರು ಮೀಟರ್ ಹಾಕರೆ ಬೇಕಾಬಿಟ್ಟಿ ದರ ವಸೂಲಿ ಮಾಡುತ್ತಿದ್ದಾರೆ ಎಂದು ಟ್ರಸ್ಟ್ ಆರೋಪಿಸಿದೆ.

ಮಂಡ್ಯ ಜನರಿಂದ ದೂರಾದ ಕಲ್ಪವೃಕ್ಷ
ಮಂಡ್ಯ ಜಿಲ್ಲೆಯಲ್ಲಿ ತೆಂಗಿನ ಕಾಯಿ ಮತ್ತು ಎಳನೀರಿನ ಬೆಲೆ ಸಮನಾಗುವ ಹಂತ ತಲುಪಿದೆ. ಒಂದು ಎಳನೀರಿಗೆ 20 ರೂ. ಒಂದು ತೆಂಗಿನ ಕಾಯಿಗೂ 18 - 20 ರೂ.. ಚಳಿಗಾಲದಲ್ಲಿ ತೆಂಗಿನ ಕಾಯಿ, ಎಳನೀರು ಸೇರಿದಂತೆ ತೆಂಗು ಉತ್ಪನ್ನಗಳ ಬೆಲೆ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಜಿಲ್ಲೆಯ ತೆಂಗು ಬೆಳೆ ಪ್ರದೇಶಗಳಾದ ನಾಗಮಂಗಲ, ಕದಬಹಳ್ಳಿ, ಕೆ.ಆರ್. ಪೇಟೆ, ಪಾಂಡವಪುರ, ನಿಡಘಟ್ಟ, ಕೊಪ್ಪ, ಮದ್ದೂರು, ಹಲಗೂರು ಸೇರಿದಂತೆ ಇತರ ಕಡೆ ಒಂದು ತೆಂಗಿನ ಕಾಯಿ ಬೆಲೆ 15- 20 ತನಕ ಮಾರಾಟವಾಗುತ್ತಿದೆ. ತೆಂಗಿನ ಫಸಲು ಕಡಿಮೆ ಆಗಿದ್ದು ಬೆಲೆ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದ್ದು, ಜನರ ಪಾಲಿಗೆ ಮಾತ್ರ ಕಲ್ಪವೃಕ್ಷ ಜೇಬಿಗೆ ಕತ್ತರಿ ಹಾಕುವ ವಸ್ತುವಾಗಿದೆ.












Click it and Unblock the Notifications