ಮಠಗಳಿಗೆ ನಿಯಂತ್ರಣ ಬೇಕು : ನಿಡುಮಾಮಿಡಿ ಶ್ರೀ
ಬೆಂಗಳೂರು, ಜ.29 : ಮಠಗಳು ಸಂವಿಧಾನ ಮತ್ತು ಕಾನೂನಿನಿಂತ ದೊಡ್ಡವಲ್ಲ. ಆದ್ದರಿಂದ, ಸರ್ಕಾರ ಮಠಗಳ ಮೇಲೆ ನಿಯಂತ್ರಣ ಹೇರಬಹುದು ಎಂದು ನಿಡುಮಾಮಿಡಿ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲಸ್ವಾಮೀಜಿ ಹೇಳಿದ್ದಾರೆ. ಸರ್ಕಾರ ಮಠಗಳ ಮೇಲೆ ನಿಯಂತ್ರಣ ಹೇರುವ ನಿರ್ಧಾರ ಹಿಂಪಡೆಯಬಾರದು ಎಂದು ಒತ್ತಾಯಿಸಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವೀರಭದ್ರ ಚನ್ನಮಲ್ಲಸ್ವಾಮೀಜಿ, ಮಠಗಳನ್ನು ಸಹ ಕಾನೂನು ವ್ಯಾಪ್ತಿಗೆ ತರಬಹುದು. ಆದರೆ, ಧಾರ್ಮಿಕ ವಿಚಾರಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು. [ಮಠಗಳ ಮೇಲೆ ನಿಯಂತ್ರಣ : ಹೊಸ ವಿವಾದ]
ನಾವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇವೆ. ಈ ವ್ಯವಸ್ಥೆಯಲ್ಲಿ ಸಂವಿಧಾನವು ಎಲ್ಲಕ್ಕಿಂತ ಮುಖ್ಯ. ಮಠಗಳು ಸಂವಿಧಾನಕ್ಕಿಂತ ದೊಡ್ಡದಲ್ಲ ಎಂದ ಸ್ವಾಮೀಜಿ ಹೇಳಿದರು. ಮಠಗಳ ಮೇಲೆ ಸರ್ಕಾರ ನಿಯಂತ್ರಣ ಹೇರಿದರೆ ಜ್ಯಾತ್ಯಾತೀತ ಸಮಾಜ ನಿರ್ಮಾಣ ಮಾಡಬಹುದು ಎಂದು ಅವರು ಹೇಳಿದರು.
ಮಠಗಳ ಮೇಲೆ ನಿಯಂತ್ರಣ ವಿಧಿಸುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬಾರದು. ಮಠಗಳು ಸರ್ಕಾರದಿಂದ ಪಡೆಯುವ ಅನುದಾನ, ಕಾಣಿಕೆ ರೂಪದಲ್ಲಾದರೂ ಪಡೆಯವ ಹಣ ಮುಂತಾದವುಗಳಿಗೆ ಲೆಕ್ಕವಿಡುವುದು ಅಗತ್ಯ ಎಂದು ತಿಳಿಸಿದರು. ಮಠಗಳ ಕುರಿತು ಚರ್ಚಿಸಲು ಪ್ರಗತಿಪರ ಮಠಾಧೀಶರ ವೇದಿಕೆಯನ್ನು ರಚನೆ ಮಾಡಲಾಗಿದ್ದು, ಅಗತ್ಯವಾದರೆ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]

ಮಠಗಳು ಸರ್ಕಾರದ ನಿಯಂತ್ರಣಕ್ಕೆ ಬರಲಿ
ಮಠಗಳು ಸಂವಿಧಾನ ಮತ್ತು ಕಾನೂನಿನಿಂತ ದೊಡ್ಡವಲ್ಲ ಆದ್ದರಿಂದ ಸರ್ಕಾರ ಮಠಗಳ ಮೇಲೆ ನಿಯಂತ್ರಣ ಹೊಂದಬಹುದು ಎಂದು ನಿಡುಮಾಮಿಡಿ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲಸ್ವಾಮೀಜಿ ಹೇಳಿದ್ದಾರೆ. ಆದರೆ, ಸರ್ಕಾರ ಮಠಗಳ ಧಾರ್ಮಿಕ ಚಟುವಟಿಕೆಗಳ ಮೇಲೆ ಹಸ್ತಕ್ಷೇಪ ಮಾಡಬಾರದು ಎಂದು ಅವರು ಹೇಳಿದ್ದಾರೆ.

ಫೆ.1 ಮತ್ತು 2ರಂದು ಸಾಹಿತ್ಯ ಸಂಭ್ರಮ
ಮೈಸೂರಿನಲ್ಲಿ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರ ಸ್ಮರಣಾರ್ಥವಾಗಿ ಫೆ.1 ಮತ್ತು 2 ರಂದು ನಟರಾಜ ಕಾಲೇಜು ಸಭಾಂಗಣದಲ್ಲಿ ಸಾಹಿತ್ಯ ಸಂಭ್ರಮ ಮತ್ತು ಜಾನಪದೋತ್ಸವ ಸಮ್ಮೇಳನ ಆಯೋಜಿಸಲಾಗಿದೆ. ಭೂಮಿಕಾ ಬಳಗ, ಜಿಲ್ಲಾ ಕಸಾಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಈ ಉತ್ಸವವನ್ನು ಆಯೋಜಿಸಿವೆ. ಉತ್ಸವದ ಅಂಗವಾಗಿ ಫೆ.1ರ ಸಂಜೆ 4ಕ್ಕೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮತ್ತು ಡಾ.ಜಿ.ಎಸ್. ಶಿವರುದ್ರಪ್ಪ ಅವರ ಭಾವಚಿತ್ರಗಳ ಮರವಣಿಗೆ ಆಯೋಜಿಸಲಾಗಿದೆ.

ಗುಂಡಾ ಕಾಯ್ದೆ ಜಾರಿಗೆ ಸಿದ್ಧತೆ
ಬಳ್ಳಾರಿ ಜಿಲ್ಲೆಯಲ್ಲಿ ಮಟ್ಕಾ ಜೂಜಾಟ ನಡೆಸುವವರಿಗೆ ಗುಂಡಾ ಕಾಯ್ದೆ ಭೀತಿ ಎದುರಾಗಿದೆ. ಕಳೆದ ವರ್ಷ ಮಟ್ಕಾ ಆಡುವ 26 ಜನರ ಮೇಲೆ ಗಡಿಪಾರು ಶಿಕ್ಷೆ ವಿಧಿಸಿದ್ದ ಪೊಲೀಸ್ ಇಲಾಖೆ ಇದೀಗ ಜೂಜಾಟ ಹತ್ತಿಕಲು ಗುಂಡಾ ಕಾಯ್ದೆ ಪ್ರಯೋಗಿಸಲು ಸಿದ್ಧವಾಗುತ್ತಿದೆ. ಪೊಲೀಸ್ ಇಲಾಖೆ ಈಗಾಗಲೆ ಇಬ್ಬರು ಮಟ್ಕಾ ನಡೆಸುವವರ ಮೇಲೆ ಗೂಂಡಾ ಕಾಯ್ದೆಯಡಿ ಶಿಕ್ಷಿಸಲು ಜಿಲ್ಲಾ ದಂಡಾಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ. ಜಿಲ್ಲೆಯಲ್ಲಿ ಮಟ್ಕಾ ನಡೆಸುವ ಅಡ್ಡೆಗಳ ಮೇಲೆ ದಾಳಿ ಮಾಡಿದರೂ ದಂಧೆ ನಡೆಸುತ್ತಿರುವವರು ತೆರೆಮರೆಯಲ್ಲಿ ಅದನ್ನು ಮುಂದುವರಿಸಿದ್ದರಿಂದ ಪೊಲೀಸ್ ಇಲಾಖೆ ಮಟ್ಕಾ ಜೂಜಾಟ ನಡೆಸುತ್ತಿರುವವರ ಮೇಲೆ ಗೂಂಡಾ ಕಾಯ್ದೆ ಪ್ರಯೋಗಿಸಲು ಸಿದ್ಧವಾಗುತ್ತಿದೆ.

ದಿ.ಕೆ.ಎನ್. ನಾಗೇಗೌಡ ಪ್ರಶಸ್ತಿ ಪ್ರದಾನ
ಮಂಡ್ಯ ಜಿಲ್ಲೆಯ ಯುವದನಿ ಸೇವಾ ಪ್ರತಿಷ್ಠಾನದ ನೀಡುವ ದಿ.ಕೆ.ಎನ್. ನಾಗೇಗೌಡ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಫೆ. 4 ರಂದು ಮಂಡ್ಯದ ಗಾಂಧಿಭವನದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ಎಚ್.ಎಸ್. ಮುದ್ದೇಗೌಡ ಹೇಳಿದ್ದಾರೆ. ಈ ಬಾರಿಯ ಪ್ರಶಸ್ತಿಯನ್ನು ಬಿಜಾಪುರ ಜಿಲ್ಲೆಯ ಆಣಚಿ ಗ್ರಾಮದ ಪಂಚಪ್ಪ ಕಲಬುರ್ಗಿ, ಪಶುಸಂಗೋಪನೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯಾ ತಾಲೂಕಿನ ತೋಡಿಕಾನದ ದೊಡ್ಡಡ್ಕದ ಪ್ರೇಮಾ ವಸಂತ್ ಅವರಿಗೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಪಿ.ಕಾಳಿಂಗರಾವ್ ಗೀತ ಗಾಯನ ಕಾರ್ಯಕ್ರಮ
ಫೆ.1ರಂದು ಸಂಜೆ 5.30ಕ್ಕೆ ಕುವೆಂಪು ಕಲಾಕ್ಷೇತ್ರದಲ್ಲಿ ಪಿ.ಕಾಳಿಂಗರಾವ್ ಹಾಡುಗಳ ಗಾಯನ ಕಾರ್ಯಕ್ರವಮನ್ನು ಆಯೋಜಿಸಲಾಗಿದೆ. ಗಾಯಕಿ ಶಿಲಾ ಎಂ.ಎಸ್.ರಾಮಸ್ವಾಮಿ, ಎಂ.ಡಿ.ಪಲ್ಲವಿ. ಶತವಧಾನಿ ಗಣೇಶ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಶುಕ್ರವಾರ ಚನ್ನಪಟ್ಟಣ ಬಂದ್
ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯಲು ಹೋದ ತಹಶೀಲ್ದಾರ್ ಅವರನ್ನು ಕೊಲ್ಲಲು ಪ್ರಯತ್ನಿಸಿದ ಘಟನೆ ಖಂಡಿಸಿ ವಿವಿಧ ಸಂಘಟನೆಗಳು ಶುಕ್ರವಾರ ಚನ್ನಪಟ್ಟಣ ಬಂದ್ ಗೆ ಕರೆ ನೀಡಿವೆ. ಜ.29ರಂದು ರಾತ್ರಿ ತಹಶೀಲ್ದಾರ್ ನಾಗರಾಜ್ ಬರಗೂರು ಹ್ಯಾಂಡ್ ಪೋಸ್ಟ್ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿರುವವರನ್ನು ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಅವರನ್ನು ಹತ್ಯೆ ಮಾಡಲು ಯತ್ನಿಸಲಾಗಿತ್ತು.

ಎಂಆರ್ಪಿಎಲ್ನ ಮೇಲ್ಭಾಗದಲ್ಲಿ ಹಾರಾಟ ನಿಷೇಧ
ಮಂಗಳೂರಿನ ಎಂಆರ್ಪಿಎಲ್ನ ಮೇಲ್ಭಾಗದಲ್ಲಿ ವಿಮಾನ ಹಾರಾಟ ನಿಷೇಧಗೊಳಿಸುವ ಬಗ್ಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿಪತ್ತು ನಿರ್ವಹಣೆ ಪ್ರಾಧಿಕಾರ ಸಭೆಯಲ್ಲಿ ಮಾತನಾಡಿದ ಅವರು. ಎಂಆರ್ಪಿಎಲ್ ಪ್ರದೇಶ ಹಾಗೂ ವಿಮಾನ ನಿಲ್ದಾಣ ತುಂಬಾ ಹತ್ತಿರವಿರುವ ಕಾರಣ ಸಂಭಾವ್ಯ ಆಪತ್ತು ಹಿನ್ನೆಲೆಯಲ್ಲಿ ಅಧಿಕೃತ ಘೋಷಣೆ ಅಗತ್ಯವಿದೆ ಎಂದು ಹೇಳಿದರು.












Click it and Unblock the Notifications