ನೂತನ ಗಣಿನೀತಿ ರೂಪಿಸಲು ಸಿದ್ಧವಾಗುತ್ತಿದೆ ಸರ್ಕಾರ
ಬೆಂಗಳೂರು, ಜ.22 : ಗಣಿಗಾರಿಕೆಯ ಮೂಲ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಅದಿರು ಗಣಿಗಾರಿಕೆ ಪುನರುಜ್ಜೀವನಗೊಳಿಸಲು ಹೊಸ ಗಣಿನೀತಿ ರೂಪಿಸಿ, ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಬುಧವಾರ ಆಸ್ಸೋಚಮ್ನ ವತಿಯಿಂದ ಏರ್ಪಡಿಸಲಾಗಿದ್ದ ಕರ್ನಾಟಕದಲ್ಲಿ ಗಣಿಗಾರಿಕೆ-ಮರು ಪಡೆಯುವ ಕಾರ್ಯಾಚರಣೆ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಜಯಚಂದ್ರ ಅವರು, ಗಣಿಗಾರಿಕೆಯ ಮೂಲ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಈ ಕುರಿತು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಸಂಪುಟ ಉಪಸಮಿತಿ ರಚಿಸಲಾಗಿದೆ ಎಂದು ಹೇಳಿದರು.
ಸಂಪುಟ ಉಪ ಸಮಿತಿಯಲ್ಲಿ ಹಲವಾರು ವಿಷಯಗಳ ಕುರಿತು ಚರ್ಚೆ ನಡೆದಿದೆ. 2008ರ ಗಣಿ ನೀತಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಗಣಿಗಾರಿಕೆಗೆ ಪೂರಕವಾಗಿ ಹೊಸ ನೀತಿ ರೂಪಿಸುವ ಅಗತ್ಯವಿದ್ದು, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದಲೂ ಇದು ಅನುಕೂಲವಾಗಲಿದೆ ಎಂದು ಜಯಚಂದ್ರ ತಿಳಿಸಿದರು.
ಸರ್ಕಾರ ಹಲವಾರು ಜನಪ್ರಿಯ ಯೋಜನೆಗಳನ್ನು ಘೋಷಿಸಿದೆ. ಅದಕ್ಕೆ ಸಂಪನ್ಮೂಲ ಕ್ರೋಢೀಕರಿಸಲು ಕೈಗಾರಿಕೆಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ. ಮುಂದಿನ ಬಜೆಟ್ನಲ್ಲಿ ಹೊಸ ಯೋಜನೆಗಳು ಘೋಷಣೆಯಾಗಲಿವೆ. ಇದರ ಜತೆಗೆ ಗಣಿಗಾರಿಕೆ ಕುರಿತು ಸರ್ಕಾರ ತನ್ನ ನಿಲುವು ಪ್ರಕಟಿಸಲಿದೆ ಎಂದು ಅವರು ಹೇಳಿದರು. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]

ನೂತನ ಗಣಿಗಾರಿಕೆ ನೀತಿ ಶೀಘ್ರವೇ ಜಾರಿ
ಕರ್ನಾಟಕದಲ್ಲಿ ಅದಿರು ಗಣಿಗಾರಿಕೆ ಪುನರುಜ್ಜೀವನಗೊಳಿಸಲು ಹೊಸ ಗಣಿನೀತಿ ರೂಪಿಸಿ, ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ. ಆಸ್ಸೋಚಮ್ನ ವತಿಯಿಂದ ಏರ್ಪಡಿಸಲಾಗಿದ್ದ `ಕರ್ನಾಟಕದಲ್ಲಿ ಗಣಿಗಾರಿಕೆ-ಮರು ಪಡೆಯುವ ಕಾರ್ಯಾಚರಣೆ` ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಜಯಚಂದ್ರ ಅವರು, ಗಣಿಗಾರಿಕೆಯ ಮೂಲ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಈ ಕುರಿತು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಸಂಪುಟ ಉಪಸಮಿತಿ ರಚಿಸಲಾಗಿದೆ ಎಂದು ಹೇಳಿದರು. ಸರ್ಕಾರ ಶೀಘ್ರವೇ ಗಣಿಗಾರಿಕೆ ಕುರಿತು ತನ್ನ ನಿಲುವನ್ನು ಪ್ರಕಟಿಸಲಿದೆ ಎಂದು ತಿಳಿಸಿದರು.

500ರೂ ಬಂತು, 10,000 ಹೋಯ್ತು
ಎಟಿಎಂಗಳಲ್ಲಿ ಎಡವಟ್ಟುಗಳಾಗಿ ಜನರು ಕಂಗಾಲಾಗುವುದು ಸಾಮಾನ್ಯ. ಶಿವಮೊಗ್ಗ ನಗರದಲ್ಲಿಯೂ ನಾಗರಾಜ ಎಂಬುವವರು ಎಟಿಎಂನಲ್ಲಿ 500 ರೂ. ಡ್ರಾ ಮಾಡಿದ 56 ಸೆಕೆಂಡ್ ಗಳಲ್ಲೇ 10 ಸಾವಿರ ರೂಪಾಯಿ ಖಾತೆಯಿಂದ ಕಾಣೆಯಾಗಿದೆ. ಕರ್ನಾಟಕ ಬ್ಯಾಂಕ್ ಎಟಿಎಂ ಕಾರ್ಡ್ ಮೂಲದ ಎಸ್ ಬಿಐ ಎಟಿಎಂ ಸೆಂಟರ್ ನಾಗರಾಜು 500 ರೂ. ಹಣ ಪಡೆದಿದ್ದಾರೆ. ತಕ್ಷಣ ಅವ ಮೊಬೈಲ್ ಗೆ 10 ಸಾವಿರ ರೂ. ಡ್ರಾ ಆಗಿರುವ ಬಗ್ಗೆ ಮಾಹಿತಿ ಬಂದಿದೆ. ತಕ್ಷಣ ಬ್ಯಾಂಕ್ ಗೆ ಹೋಗಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಬ್ಯಾಂಕ್ ನವರು ಹಣ ಡ್ರಾ ಆಗಿರುವ ಬಗ್ಗೆ ಖಚಿತ ಪಡಿಸಿದ್ದಾರೆ. ನಾಗರಾಜ್ ಈ ಕುರಿತು ಪೊಲೀಸರಿಗೂ ದೂರು ನೀಡಿದ್ದಾರೆ.

ನೇತ್ರವತಿನದಿಯಲ್ಲಿ ಪ್ರತಿಭಟನೆ
ನೇತ್ರಾವತಿ ನದಿ ತಿರುವು (ಎತ್ತಿನ ಹೊಳೆ) ಯೋಜನೆ ವಿರುದ್ಧ ನೇತ್ರಾವತಿ ನದಿಗಿಳಿದು ಪ್ರತಿಭಟನೆಗೆ ನಡೆಸಲು ನದಿ ತಿರುವು ಯೋಜನೆಯ ವಿರೋಧಿ ಹೋರಾಟ ಸಮಿತಿ ತೀರ್ಮಾನಿಸಿದೆ. ಜ.24ರಂದು ಬೆಳಗ್ಗೆ 9ಕ್ಕೆ ಉಪ್ಪಿನಂಗಡಿ ನೇತ್ರಾವತಿ ಕುಮಾರಧಾರ ಸಂಗಮ ನದಿ ತಟದಲ್ಲಿ ನೀರಿಗಿಳಿದು ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೋರಾಟ ಸಮಿತಿ ಸಂಚಾಲಕ ಡಾ.ನಿರಂಜನ್ ರೈ ತಿಳಿಸಿದ್ದಾರೆ. ಜ.31ರಂದು ಎತ್ತಿನಹೊಳೆ ಯೋಜನೆಗೆ ಶಿಲಾನ್ಯಾಸ ಮಾಡುವ ಕಾರ್ಯಕ್ರಮವಿದ್ದು, ಅಂದು ಕರಾಳ ದಿನ ಆಚರಿಸಲಾಗುವುದು ಎಂದು ರೈ ಹೇಳಿದ್ದಾರೆ. ಎತ್ತಿನಹೊಳೆ ಯೋಜನೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಯಾವುದೇ ಹಾನಿಯಿಲ್ಲ ಎಂದು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ, ಪ್ರತಿಭಟನೆಗಳು ನಿಂತಿಲ್ಲ.

ಬಳ್ಳಾರಿ ನಗರದಲ್ಲಿ ಬೀದಿನಾಯಿಗಳ ಕಾಟ
ಬಳ್ಳಾರಿ ನಗರದಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗಿದೆ. ಮಂಗಳವಾರ 6 ವರ್ಷದ ಬಾಲಕನ ಮೇಲೆ ದಾಳಿ ನಡೆಸಿರುವ ನಾಯಿಗಳು ಅವನನ್ನು ಕಚ್ಚಿಗಾಯಗೊಳಿಸಿವೆ. ನಾಯಿ ದಾಳಿಗೆ ಒಳಗಾದ ಬಳ್ಳಾರಿಯ ಶ್ರೀನಗರ ಕಾಲೋನಿಯ ಗೋಪಿಗೆ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ದಿನಗಳ ಹಿಂದೆ ಸಹ ಇದೇ ಬಡಾವಣೆಯಲ್ಲಿ ನಾಯಿಗಳು ಇಬ್ಬರ ಮೇಲೆ ದಾಳಿ ಮಾಡಿ ಅವರನ್ನು ಗಾಯಗೊಳಿಸಿದ್ದವು. ಮಹಾನಗರ ಪಾಲಿಕೆ ಈ ಕುರಿತು ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತಾಲೂಕು ಕಚೇರಿ ಮುಂದೆ ಹಸು, ಎಮ್ಮೆಗಳೊಂದಿಗೆ ಧರಣಿ
ಹಾಸನ ಜಿಲ್ಲೆಯ ಹಳೆಬೀಡು ಮತ್ತು ಮಾದೀಹಳ್ಳಿ ಹೋಬಳಿ ಏತ ನೀರಾವರಿಯ ಯೋಜನೆಯ ಕಾಮಗಾರಿಯಲ್ಲಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ನಡೆಸುತ್ತಿರುವ ಆಹೋರಾತ್ರಿ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದೆ. ತಾಲೂಕು ರೈತ ಸಂಘದ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ಧರಣಿ ನಡೆಯುತ್ತಿದ್ದು, ಮಂಗಳವಾರ ದನ, ಎಮ್ಮೆಯನ್ನು ತಂದು ತಾಲೂಕು ಕಚೇರಿ ಬಾಗಿಲು ಮುಂಭಾಗದಲ್ಲಿ ಕಟ್ಟಿ ರೈತರು ಪ್ರತಿಭಟನೆ ನಡೆಸಿದರು. ಸರ್ಕಾರ ರೈತರಿಗೆ ಕಾಮವಾರಿ ಮುಕ್ತಾಯವಾಗುವ ಅಂತಿಮ ಗಡುವು ನೀಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.

ನೀರಿನ ಕೊರತೆ ಬಗೆಹರಿಸಲು ಅನುದಾನಕ್ಕೆ ಮನವಿ
ಕಡೂರು ತಾಲೂಕಿನಲ್ಲಿ 160 ಗ್ರಾಮಗಳ ನೀರಿನ ಕೊರತೆ ನೀಗಿಸಲು 2.66 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಶಾಸಕ ವೈಎಸ್ವಿ ದತ್ತ ಹೇಳಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪಿಡಿಒಗಳು ಹಾಗೂ ಎಂಜಿನಿಯರ್ ಗಳ ಸಭೆಯನ್ನು ದತ್ತಾ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು 59 ಗ್ರಾಮ ಪಂಚಾಯ್ತಿ ಪೈಕಿ 160 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಈ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಕ್ರಿಯಾಶೀಲ ಯೋಜನೆ ರೂಪಿಸಲಾಗಿದೆ. 6 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು 2.66ಕೋಟಿ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಬೆಳಗಾವಿಯಲ್ಲಿ ಉದ್ಯೋಗ ಮೇಳ
ಜಿಲ್ಲಾ ಪಂಚಾಯಿತಿ ಬೆಳಗಾವಿ, ವಾಣಿಜ್ಯ ಕೈಗಾರಿಕೆ ಇಲಾಖೆ ಮುಂತಾದ ಸಂಸ್ಥೆಗಳು ಒಂಟಿಯಾಗಿ ಉದ್ಯೋಗ ಮೇಳ ಹಾಗೂ ಉದ್ಯಮ ಶೀಲತಾ ಅಭಿವೃದ್ಧಿ ಕಾರ್ಯಕ್ರಮವನ್ನು ಜ.31ರಂದು ಬೆಳಗಾವಿಯಲ್ಲಿ ಹಮ್ಮಿಕೊಂಡಿವೆ. ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸಮೀಪ ಬೆಳಗ್ಗೆ 11 ಗಂಟೆಗೆ ಮೇಳದ ಉದ್ಘಾಟನೆ ನಡೆಯಲಿದೆ.












Click it and Unblock the Notifications