ಜಿಲ್ಲಾಧ್ಯಕ್ಷರಿಗೆ ಕೆಪಿಸಿಸಿಯಿಂದ ಬುಲೆರೋ
ಬೆಂಗಳೂರು, ಫೆ.6 : ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷ ಸಂಘಟನೆಗೆ ಆದ್ಯತೆ ನೀಡಿರುವ ಕಾಂಗ್ರೆಸ್ ಪಕ್ಷ ಜಿಲ್ಲಾಧ್ಯಕ್ಷರಿಗೆ ಬುಲೆರೋ ವಾಹನವನ್ನು ಕೊಡುಗೆಯಾಗಿ ನೀಡಿದೆ. ಬೆಂಗಳೂರು ಮಹಾನಗರದ ಅಧ್ಯಕ್ಷರಿಗೆ ಹೊರತು ಪಡಿಸಿ ಉಳಿದ ಜಿಲ್ಲಾಧ್ಯಕ್ಷರಿಗೆ ಬುಲೆರೋ ವಾಹನ ನೀಡುವ ಕಾರ್ಯ ನಡೆಯುತ್ತಿದೆ.
ಮಹೀಂದ್ರ ಕಂಪೆನಿಯ ಸುಮಾರು 6 ಲಕ್ಷ ರೂ. ವೆಚ್ಚದ ಈ ವಾಹನವನ್ನು ಜಿಲ್ಲಾಧ್ಯಕ್ಷರಿಗೆ ನೀಡುವ ಕಾರ್ಯವನ್ನು ಈಗಾಗಲೇ ಕೆಪಿಸಿಸಿ ಆರಂಭಿಸಿದೆ. ಹಾಸನ, ಬಿಜಾಪುರ, ಕೊಪ್ಪಳ, ಬೀದರ್, ರಾಮನಗರ, ಗುಲ್ಬರ್ಗ, ಉತ್ತರ ಕನ್ನಡ ಸೇರಿದಂತೆ 12 ಜಿಲ್ಲಾಧ್ಯಕ್ಷರಿಗೆ ವಾಹನಗಳನ್ನು ವಿತರಿಸಲಾಗಿದೆ.
ಉಳಿದ ಜಿಲ್ಲಾಧ್ಯಕ್ಷರಿಗೆ ವಾಹನ ನೀಡುವ ಕಾರ್ಯ ಈ ವಾರ ಪೂರ್ಣಗೊಳ್ಲಲಿದೆ. ಈಗಿರುವ ಅಧ್ಯಕ್ಷರು ಆ ಸ್ಥಾನದಿಂದ ಕೆಳಗಿಳಿದ ಬಳಿಕ ಹೊಸದಾಗಿ ಆಯ್ಕೆ ಆಗುವ ಅಧ್ಯಕ್ಷರಿಗೆ ವಾಹನ ಹಸ್ತಾಂತರವಾಗಲಿದೆ. ಪಕ್ಷ ಸಂಘಟನೆ ಕೆಲಸಗಳಿಗೆ ಮಾತ್ರ ವಾಹನಗಳನ್ನು ಬಳಸುವಂತೆ ಕೆಪಿಸಿಸಿ ಖಡಕ್ ಸೂಚನೆ ನೀಡಿದೆ.
ಬೆಂಗಳೂರು ಮಹಾನಗರ ಮತ್ತು ಬೆಂಗಳೂರು ನಗರ ಕಾಂಗ್ರೆಸ್ ಅಧ್ಯಕ್ಷರಿಗೆ ಬೇರೆ ವಾಹನಗಳನ್ನು ನೀಡಲು ಕೆಪಿಸಿಸಿ ಚಿಂತನೆ ನಡೆಸಿದೆ. ಸದ್ಯ ಎಐಸಿಸಿ ಪಕ್ಷ ಸಂಘಟನೆಯ ಸ್ವರೂಪವನ್ನು ಬದಲಾಯಿಸಿದೆ. ಪ್ರತಿ ಜಿಲ್ಲಾ ಘಟಕ ಮತ್ತು ಸಮಿತಿಗಳು ಪ್ರತಿ ತಿಂಗಳು ಕಾರ್ಯಕಾರಿಣಿ ಸಭೆ ನಡೆಸಬೇಕು ಎಂದು ಸೂಚಿಸಿದೆ. ಆದ್ದರಿಂದ ಪಕ್ಷ ಸಂಘಟನೆಗಳಿಗೆ ಸಹಕಾರವಾಗಲಿ ಎಂದು ವಾಹನ ನೀಡಲಾಗಿದೆ. [ಕರ್ನಾಟಕಟದ ಇತರ ಜಿಲ್ಲಾಸುದ್ದಿಗಳು]

ಕೆಪಿಸಿಸಿಯಿಂದ ಜಿಲ್ಲಾಧ್ಯಕ್ಷರಿಗೆ ಬುಲೆರೋ ವಾಹನ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಎಲ್ಲಾ ಪಕ್ಷದ ಜಿಲ್ಲಾಧ್ಯಕ್ಷರಿಗೆ ಬುಲೆರೋ ವಾಹನವನ್ನು ಕೊಡುಗೆಯಾಗಿ ನೀಡಲಾಗಿದೆ. ಬೆಂಗಳೂರು ಮಹಾನಗರದ ಅಧ್ಯಕ್ಷರಿಗೆ ಹೊರತು ಪಡಿಸಿ ಉಳಿದ ಜಿಲ್ಲಾಧ್ಯಕ್ಷರಿಗೆ ಬುಲೆರೋ ವಾಹನ ನೀಡುವ ಕಾರ್ಯ ನಡೆಯುತ್ತಿದೆ. ಮಹೀಂದ್ರ ಕಂಪೆನಿಯ ಸುಮಾರು 6 ಲಕ್ಷ ರೂ. ವೆಚ್ಚದ ಈ ವಾಹನವನ್ನು ಜಿಲ್ಲಾಧ್ಯಕ್ಷರಿಗೆ ನೀಡುವ ಕಾರ್ಯವನ್ನು ಈಗಾಗಲೇ ಕೆಪಿಸಿಸಿ ಆರಂಭಿಸಿದೆ. ಈ ವಾಹನವನ್ನು ಪಕ್ಷ ಸಂಘಟನೆಗೆ ಮಾತ್ರ ಬಳಸಬೇಕು ಎಂದು ಕೆಪಿಸಿಸಿ ಖಡಕ್ ಸೂಚನೆ ನೀಡಿದೆ.

ವೀರಪ್ಪನ್ ಸಹ ಚರರಿಗೆ ಜೀವಾವಧಿ ಶಿಕ್ಷೆ ಬೇಡ
ಕಾಡುಗಳ್ಳ ವೀರಪ್ಪನ್ ನ ನಾಲ್ವರು ಸಹಚರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿರುವುದಕ್ಕೆ ಸಬ್ ಇನ್ಸ್ಪೆಕ್ಟರ್ ಶಕೀಲ್ ಅಹ್ಮದ್ ಅವರ ಸಹೋದರ ಎಂ.ಜಮೀಲ್ ಅಹ್ಮದ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕೇಂದ್ರ ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. 1992ರ ಆ.14ರಂದು ವೀರಪ್ಪನ್ ಕೊಳ್ಳೇಗಾಲ ತಾಲೂಕು ಮೀಣ್ಯಂ ಬಳಿ ನಡೆಸಿದ ಹತ್ಯಾಕಾಂಡದಲ್ಲಿ ಶಕೀಲ್ ಅಹ್ಮದ್ ಸಾವನ್ನಪ್ಪಿದ್ದರು. ವೀರಪ್ಪನ್ ಸಹಚರರಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಶಕೀಲ್ ಅಹ್ಮದ್ ತಂದೆ ಮತ್ತು ಎಂ.ಜಮೀಲ್ ಅಹ್ಮದ್ ಹೋರಾಟ ನಡೆಸುತ್ತಿದ್ದಾರೆ. ಆದರೆ, ಸದ್ಯ ಸುಪ್ರೀಂಕೋರ್ಟ್ ನಾಲ್ವರ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತನೆ ಮಾಡಿರುವ ವಿರುದ್ಧ ಅವರು ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಫೆ.7ರಿಂದ ಬಸವ ಧರ್ಮ ಸಮಾವೇಶ
ಬೀದರ್ ಜಿಲ್ಲೆಯ ಹುಮುನಾಬಾದ್ ತಾಲೂಕಿನ ಮನ್ನಾಖೆಹಳ್ಳಿ ಗ್ರಾಮದ ಬಸವ ಮಹಾಮಠದಲ್ಲಿ ಫೆ. 7ರಿಂದ ಮೂರು ದಿವಸ ಬಸವ ಧರ್ಮ ಸಮಾವೇಶ ಹಾಗೂ ಜಾನಪದ ಉತ್ಸವ ನಡೆಯಲಿದೆ. ಬಿಜೆಪಿ ಯುವ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬೆಳಗಾವಿ ನಿಡಸೋಶಿಯ ಪಂಚಮ ಶಿವಲಿಂಗೇಶ್ವರ ಸ್ವಾಮಿ, ಭಾಲ್ಕಿಯ ಡಾ.ಬಸವಲಿಂಗ ಪಟ್ಟದೇವರು, ಚಿಕ್ಕೋಡಿಯ ಸಂಪಾದನಾ ಸ್ವಾಮಿ, ಹೂಲಸೂರಿನ ಶಿವಾನಂದ ಸ್ವಾಮಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಸಿಟಿ ಬಸ್ ಸಂಚಾರ ನಿಲ್ಲಿಸಲು ಆಗ್ರಹ
ಚಿಕ್ಕಮಗಳೂರು ನಗರದಲ್ಲಿ ಸಿಟಿ ಬಸ್ ಸಂಚಾರ ನಿಲ್ಲಿಸುವಂತೆ ಆಗ್ರಹಿಸಿ ನಗರದ ಆಟೋ ಚಾಲಕರು ಮತ್ತು ಮಾಲೀಕರು ಪ್ರತಿಭಟನೆ ನಡೆಸಿದರು. ಚಿಕ್ಕಮಗಳೂರು ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೆ.ಆರ್.ಅನಿಲ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ನಗರದಲ್ಲಿ ಸುಮಾರು 2,500 ಆಟೋಗಳಿವೆ. ಹೊಸದಾಗಿ ಕೆಎಸ್ ಆರ್ ಟಿಸಿ ಸಿಟಿ ಬಸ್ ಆರಂಭಿಸಿದ್ದರಿಂದ ನಮಗೆ ನಷ್ಟ ಉಂಟಾಗುತ್ತಿದೆ ಎಂದು ಆಟೋ ಚಾಲಕರು ಆರೋಪಿಸಿದರು.

ಫತ್ವಾ ವಿವಾದಕ್ಕೆ ತೆರೆ
ಪುತ್ತೂರು ಕೊಡಿಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫತ್ವಾ ಹೊರಡಿಸಿದ ಧರ್ಮಗುರುವನ್ನು ಜಿಲ್ಲಾಧಿಕಾರಿ ಆದೇಶದ ಅನ್ವಯ ಶಾಲೆಗೆ ಕರೆಸಿ ಕ್ಷೇತ್ರ ಶಿಕ್ಷಣಾಧಿಕಾರಿ, ಅಧಿಕೃತವಾಗಿ ಹೇಳಿಕೆ ಪಡೆದಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಸೌಹಾರ್ದಯುತವಾಗಿ ಪ್ರಕರಣವನ್ನು ಬಗೆಹರಿಸಲಾಗುವುದು ಎಂದು ಹೇಳಿದ್ದಾರೆ. ಶಾಲೆಯಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ನೃತ್ಯ ಮಾಡಬಾರದು ಎಂದು ಧರ್ಮಗುರು ಫತ್ವಾ ಹೊರಡಿಸಿದ್ದರು.

ನೀರಿಗಾಗಿ ರಸ್ತೆ ತಡೆ ನಡೆಸಿದ ರೈತರು
ತುಂಗಭದ್ರಾ ಎಡದಂಡೆ ಭಾಗದ ರೈತರು ನೀರಿಗಾಗಿ ಇಟ್ಟ ಬೇಡಿಕೆಯನ್ನು ಸರ್ಕಾರ ಈಡೇರಿಸಿಲ್ಲ ಎಂದು ಆರೋಪಿಸಿ ರಾಯಚೂರು ಸಮೀಪದ ಏಳು ಮೈಲ್ ಕ್ರಾಸ್ ಬಳಿ ರಾಜ್ಯ ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್ ಹಾಗೂ ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ವಿವಿಧ ಪಕ್ಷಗಳ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದರಿಂದ ಸುಮಾರು 3 ತಾಸು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.












Click it and Unblock the Notifications