ವಿಧಾನಸಭೆ ಕಡತದಿಂದ ತೆಗೆದ ಚರ್ಚೆ ಯುಟ್ಯೂಬ್ನಲ್ಲಿ ಲಭ್ಯ, ಕಾಮೆಂಟ್ಸ್ ಅಸಭ್ಯ!
ಬೆಂಗಳೂರು, ಫೆ. 19: ಅಸಾಂವಿಧಾನಿಕ ಪದಗಳನ್ನು ಶಾಸನಸಭೆಗಳಲ್ಲಿ ಬಳಸುವುದರಿಂದ ಸದನದಲ್ಲಿ ಅಲ್ಲೋಲಕಲ್ಲೋಲವೇ ಆಗಿಬಿಡುತ್ತದೆ. ಹೀಗಾಗಿಯೆ ಅಂತಹ ಪದಗಳನ್ನು, ಹೇಳಿಕೆಗಳನ್ನು ಸಭಾಧ್ಯಕ್ಷರ ಸೂಚನೆಯಂತೆ ಕಡತದಿಂದ ತೆಗೆದು ಹಾಕಲಾಗುತ್ತದೆ. ಆಮೇಲೆ ಆ ಪದಗಳನ್ನು ಅಥವಾ ಹೇಳಿಕೆಯನ್ನು ಮಾಧ್ಯಮಗಳಲ್ಲಿಯೂ ಪ್ರಸಾರ ಮಾಡುವಂತಿಲ್ಲ.
ಹೀಗೆ ಚರ್ಚೆ ನಡೆಯಿತು, ಆ ಬಳಿಕ ಇಂತಹ ಪದ ಅಥವಾ ಹೇಳಿಕೆಯನ್ನು ಕಡತದಿಂದ ತೆಗೆದು ಹಾಕಲಾಯಿತು ಎಂದೂ ಬಳಸುವಂತಿಲ್ಲ. ಯಾಕಂದರೆ ಅದು ಸಂವಿಧಾನ ಬಾಹೀರವಾಗಿದ್ದರಿದಂಲೇ ಅದನ್ನು ತೆಗೆದು ಹಾಕಲಾಗಿರುತ್ತದೆ. ಒಂದೊಮ್ಮೆ ಟಿವಿ ಮಾಧ್ಯಮಗಳಲ್ಲಿ ನೇರಪ್ರಸಾರದಲ್ಲಿ ಅದು ಬಂದು ಹೋದರೂ ಮತ್ತೆ ಅದನ್ನು ತೋರಿಸುವಂತಿಲ್ಲ.
ಮಂಗಳೂರು ಗೋಲಿಬಾರ್ ಬಗ್ಗೆ ಖಾದರ್ ಭಾಷಣ: ಕೆರಳಿದ ಬಿಜೆಪಿ ಶಾಸಕರು
ಆದರೆ ಅಸಾಂವಿಧಾನಿಕ ಪದಗಳು, ಹೇಳಿಕೆಗಳನ್ನು ಕಡತದಿಂದ ತೆಗೆದು ಹಾಕುವುದು ಇದೀಗ ಕೇವಲ ಸದನಕ್ಕೆ ಮಾತ್ರ ಸೀಮಿತವಾದಂತಿವೆ. ಯಾಕಂದರೆ ತಂತ್ರಜ್ಞಾನದ ಸದುಪಯೋಗವೋ? ದುರುಪಯೋಗವೋ ಅಂಥದ್ದೊಂದು ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ. ಸದನದಲ್ಲಿ ಅಸಾಂವಿಧಾನಿಕ ಎಂದು ಕಡತದಿಂದ ತೆಗೆದು ಹಾಕಿದ ವಿಚಾರಗಳು ಸೇರಿದಂತೆ, ಶಾಸನ ಸಭೆಯ ಸದಸ್ಯರ ಬಗ್ಗೆ ಅಸಾಂವಿಧಾನಿಕವಾಗಿ ಯಾರು ಬೇಕಾದರೂ ಸದನದ ಹೊರಗೆ ತಮ್ಮ ಪ್ರತಿಕ್ರಿಯೆ ದಾಖಲಿಸಲು ಇದೀಗ ಸಾಧ್ಯವಿದೆ.
ಹೌದು ವಿಧಾನಸಭೆ ಕಲಾಪವನ್ನು ದೂರದರ್ಶನದ ಇದೀಗ ನೇರಪ್ರಸಾರ ಮಾಡುತ್ತಿದ್ದು, ನೇರಪ್ರಸಾರದ ಬಳಿಕವೂ ಕಡತದಿಂದ ತೆಗೆದುಹಾಕಲಾಗಿರುವ ದೃಶ್ಯಗಳು, ಚರ್ಚೆಗಳು ಯಾವಾಗ ಬೇಕಾದರೂ ಯುಟ್ಯೂಬ್ನಲ್ಲಿ ಲಭ್ಯವಿವೆ. ಜೊತೆಗೆ ಸದನದ ಹೊರೆಗೆ ಕಲಾಪದಲ್ಲಿನ ಚರ್ಚೆ, ಸದಸ್ಯರ ಕುರಿತು ನೆಟ್ಟಿಗರು ತಮ್ಮತಮ್ಮಲ್ಲೇ ಮಾಡಿಕೊಂಡಿರುವ ಅಸಾಂವಿಧಾನಿಕ ಚರ್ಚೆಗಳೂ ಯುಟ್ಯೂಬ್ ಕಾಮೆಂಟ್ ಬಾಕ್ಸ್ನಲ್ಲಿ ಹೇರಳವಾಗಿವೆ.
ಕಡತದಿಂದ ತೆಗೆದ ಕಲಾಪದ ದೃಶ್ಯಗಳೂ ಟ್ಯೂಬ್ನಲ್ಲಿ ಲಭ್ಯ!
ಕಳೆದ 2019 ಅಕ್ಟೋಬರ್ ತಿಂಗಳಿನಿಂದ ಖಾಸಗಿ ಚಾನಲ್ಗಳ ಕ್ಯಾಮರಾಗಳಿಗೆ ನಿರ್ಬಂಧ ಹಾಕಲಾಗಿದೆ. ಆದರೆ ದೂರದರ್ಶನ ಕೊಡುವ ನೇರಪ್ರಸಾರದ ದೃಶ್ಯಗಳನ್ನು ಖಾಸಗಿ ಚಾನಲ್ಗಳು ನೇರಪ್ರಸಾರ ಮಾಡಬಹುದು. ಜೊತೆಗೆ ಇಂಟರ್ನೆಟ್ನಲ್ಲೇ ಕಲಾಪ ವೀಕ್ಷಣೆ ಮಾಡುವವರಿಗೆ ಯುಟ್ಯೂಬ್ನಲ್ಲಿ ನೇರಪ್ರಸಾರ ಲಭ್ಯವಿದೆ. ಜೊತೆಗೆ ನೇರಪ್ರಸಾರದ ಬಳಿಕವೂ ವೀಕ್ಷಣೆ ಮಾಡುವುದು ಕೂಡ ಸಾಧ್ಯವಿದೆ. ಹೀಗಾಗಿ ಕಡತದಿಂದ ತೆಗೆದು ಹಾಕಲಾಗಿರುವ ವಿಚಾರಗಳು ದೂರದರ್ಶನ ಪ್ರಸಾರ ಮಾಡುವ ಯುಟ್ಯೂಬ್ನಲ್ಲಿ ಯಾವಾಗಲೂ ಲಭ್ಯವಿರುತ್ತವೆ. ಅಸಾಂವಿಧಾನಿಕ ಪದಗಳ ಬಳಕೆ, ಹೇಳಿಕೆಗಳು ನೆಟ್ಟಿಗರಿಗೆ ಯಾವಾಗಲೂ ಲಭ್ಯವಿವೆ. ಈ ಬಗ್ಗೆ ವಿಧಾನಸಭೆ ಸಚಿವಾಲಯ ಗಮನ ಹರಿಸಬೇಕಾಗಿದೆ. ಜೊತೆಗೆ ನೆಟ್ಟಿಗರು ಮಾಡಿರುವ ಮಾಡುತ್ತಿರುವ ಕಾಮೆಂಟ್ಗಳ ಬಗ್ಗೆಯೂ ಸಚಿವಾಲಯ ಗಮನ ಹರಿಸವುದು ಒಳ್ಳೆಯದು.
ಯುಟ್ಯೂಬ್ ಕಲಾಪ ನೇರಪ್ರಸಾರದಲ್ಲಿ ಅಸಾಂವಿಧಾನಿಕ ಪದಗಳ ಬಳಕೆ ಹೆಚ್ಚು!
ಇನ್ನು ಖಾಸಗಿ ಚಾನಲ್ಗಳಿಗೆ ನೇರಪ್ರಸಾರದ ದೃಶ್ಯಗಳನ್ನು ಒದಗಿಸುವ ದೂರದರ್ಶನ ಜೊತೆಗೆ ಯುಟ್ಯೂಬ್ನಲ್ಲಿಯೂ ನೇರ ಪ್ರಸಾರ ಮಾಡುತ್ತಿದೆ. ನೆಟ್ಟಿಗರು ಇಲ್ಲಿ ತಮಗೆ ಬೇಕಾದಂತೆ ಕಮೆಂಟ್ ಮಾಡಲು ಅವಕಾಶವಿದೆ. ಶಾಸನಸಭೆಯಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿರುವಾಗ ನೆಟ್ಟಗರು ತಮ್ಮದೆ ಚರ್ಚೆಯನ್ನು ಯುಟ್ಯೂಬ್ ಕಮೆಂಟ್ ಬಾಕ್ಸ್ನಲ್ಲಿ ನಡೆಸಿರುತ್ತಾರೆ. ಮತ್ತು ಬಹಳಷ್ಟು ನೆಟ್ಟಿಗರು ಅಸಾಂವಿಧಾನಿಕ ಪದಗಳನ್ನೇ ಕಮೆಂಟ್ ರೂಪದಲ್ಲಿ ಹರಿಬಿಡುತ್ತಾರೆ. ಯಾವುದೇ ಅಡೆತಡೆಯಿಲ್ಲದೆ ದೇಶದ ಪ್ರಧಾನಿಯಿಂದ ಹಿಡಿದು ಶಾಸನಸಭೆಯಲ್ಲಿ ಚರ್ಚೆ ಮಾಡುತ್ತಿರುವ ಸದಸ್ಯರು, ಸಚಿವರು, ವಿರೋಧ ಪಕ್ಷ ನಾಯಕರು, ಮುಖ್ಯಮಂತ್ರಿಗಳು ಮೇಲೆ ಅಸಾಂವಿಧಾನಿಕ ಪದಗಳ ಬಳಕೆ ನಡೆದೇ ಇರುತ್ತದೆ.
ಮಂಗಳೂರು ಗೋಲಿಬಾರ್: ಸರ್ಕಾರವನ್ನು ಬೆತ್ತಲು ಮಾಡಿದ ಕುಮಾರಸ್ವಾಮಿ
ಚರ್ಚೆ ಬಗ್ಗೆ ಕಮೆಂಟ್ ಮಾಡುವುದು ಸಂವಿಧಾನ ಬಾಹಿರ
ಇನ್ನು ಶಾಸನಸಭೆಯ ಚರ್ಚೆಯ ಬಗ್ಗೆ ಅಸಾಂವಿಧಾನಿಕ ಚರ್ಚೆ ಮಾಡುವುದು ಸಂವಿಧಾನ ಬಾಹಿರ. ಆದರೆ ವಿಧಾನಸಭೆ ಕಲಾಪದಲ್ಲಿ ಚರ್ಚೆ ನಡೆಯುತ್ತಿರುವಾಗ ಯುಟ್ಯೂಬ್ನಲ್ಲಿ ಜನಪ್ರತಿನಿಧಿಗಳ ಬಗ್ಗೆ ಅವಹೇಳನಕಾರಿ ಕಮೆಂಟ್ಗಳಿಗೆ ಯಾವುದೇ ಅಡೆತಡೆಯಿರುವುದಿಲ್ಲ. ಶಾಸಕರಿಂದ ಆರಂಭಿಸಿ ದೇಶದ ಪ್ರಧಾನಮಂತ್ರಿಗಳು ವೈಯಕ್ತಿಕ ಜೀವನದ ಬಗ್ಗೆಯೂ ಕಾಮೆಂಟ್ಗಳು ಬರುತ್ತಲೇ ಇರುತ್ತವೆ. ಇದೆಲ್ಲವನ್ನು ದೂರದರ್ಶನ ಹಾಗೂ ವಿಧಾನಸಭೆ ಸಚಿವಾಲಯ ಗಮನಿಸಿದೆಯೊ ಇಲ್ಲಗೊ ಗೊತ್ತಿಲ್ಲ. ಆದರೆ ಇಡೀ ಜಗತ್ತಿನಾದ್ಯಂತ ಕರ್ನಾಟಕದ ಶಾಸನಸಭೆಯ ಚರ್ಚೆಯ ಬಗ್ಗೆ, ಚರ್ಚೆಯಲ್ಲಿ ಭಾಗವಹಿಸುವ ಜನಪ್ರತಿನಿಧಿಗಳ ಬಗ್ಗೆ ಯುಟ್ಯೂಬ್ನಲ್ಲಿ ನಡೆಯುವ ಚರ್ಚೆ ಮಾತ್ರ ಗಮನಸೆಳೆಯುತ್ತಿದೆ.
ನಿಯಂತ್ರಣಕ್ಕೆ ಮುಂದಾಗುತ್ತದೆಯಾ ಸಚಿವಾಲಯ?
ಪ್ರಜಾಪ್ರಭುತ್ವದಲ್ಲಿ ಶಾಸನಸಭೆಗಳನ್ನು ಶಾಸಕರಾಗಿ, ಸಂಸದರಾಗಿ ಶಾಸನಸಭೆಗಳನ್ನು ಪ್ರವೇಶ ಮಾಡುವುದು ರಾಜಕಾರಣಿಗಳಿಗೆ ಹೆಮ್ಮೆಯ ವಿಚಾರ. ಶಾಸನಸಭೆಗಳಲ್ಲಿ ತಮ್ಮನ್ನು ಪ್ರತಿನಿಧಿಸುವ ಶಾಸಕರು, ಸಂಸದರ ಬಗ್ಗೆ ಪ್ರಜೆಗಳಲ್ಲಿ ಇರುವ ಹೆಮ್ಮೆ, ಗೌರವ ಕೂಡ ಕಡಿಮೆ ಏನಲ್ಲ. ಹೀಗಿರುವಾಗ ಶಾಸನಸಭೆಗಳಲ್ಲಿ ಚರ್ಚೆ ಎಷ್ಟೇ ಜೋರಾಗಿದ್ದರೂ, ಅಸಾಂವಿಧಾನಿಕ ಪದಗಳನ್ನು ಉಪಯೋಗ ಮಾಡುವಂತಿಲ್ಲ.
ಆದರೆ ಈ ಇಂಟರ್ನೆಟ್ ಯುಗದಲ್ಲಿ ಏಕಮುಖ ಸಂವಹನವೀಗ ದ್ವಿಮುಖ ಸಂಹನವಾಗಿದೆ. ಹೀಗಾಗಿಯೇ ಯುಟ್ಯೂಬ್ನಲ್ಲಿ ಶಾಸನಸಭೆಯ ಚರ್ಚೆಯನ್ನೇ ಪ್ರಶ್ನೆ ಮಾಡುವ ಕಾಮೆಂಟ್ಗಳನ್ನು ಹಾಕಲಾಗುತ್ತಿದೆ. ಯಾವುದೇ ರೀತಿ ನಿಯಮಾವಳಿಗಳು ಅಂತಹ ಕಮೆಂಟ್ ಹಾಕುವವರನ್ನು ನಿಯಂತ್ರಿಸುತ್ತಿಲ್ಲ. ದೇಶದ ಸಾರ್ವಭೌಮತೆ, ಏಕತೆಗೆ ಅಪಾಯವಾಗುವ ಕಮೆಂಟ್ಗಳು ಈಗಲೂ ಯುಟ್ಯೂಬ್ನಲ್ಲಿವೆ. ಹೀಗಾಗಿ ಸರ್ಕಾರ ಹಾಗೂ ವಿಧಾನಸಭೆ ಸಚಿವಾಲಯ ಇಂತಹ ಕಮೆಂಟ್ಗಳು ಹಾಗೂ ಕಡತದಿಂದ ತೆಗೆದು ಹಾಕಿರುವ ವಿಚಾರಗಳ ಬಗ್ಗೆ ಗಮನಹರಿಸಬೇಕಿದೆ.