ಬೆಳಗಾವಿ ಹಳ್ಳಿಯಲ್ಲಿ ಮಹಿಳೆಗೆ ಅವಮಾನ ಮಾಡಿದವರಿಗೆ ಕಾದಿದೆ ಮಾರಿಹಬ್ಬ!
ಬೆಂಗಳೂರು: ಕರ್ನಾಟಕ ಗಡಿ ಜಿಲ್ಲೆ & ಕುಂದಾನಗರಿ ಎಂದೇ ಖ್ಯಾತಿ ಪಡೆದ ಬೆಳಗಾವಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಇಡೀ ಮನುಷ್ಯರ ಕುಲವೇ ತಲೆತಗ್ಗಿಸುವ ಘಟನೆ ನಡೆದಿದೆ. ಮಹಿಳೆಯ ಮೇಲೆ ದುಷ್ಕರ್ಮಿಗಳ ಗುಂಪು ದೌರ್ಜನ್ಯ ನಡೆಸಿದೆ. ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿರುವ ಸಮಯದಲ್ಲೇ ಹೈಕೋರ್ಟ್, ಈ ಕೃತ್ಯ ಎಸಗಿದವರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಹೌದು, ಬೆಳಗಾವಿ ಜಿಲ್ಲೆ ಹಳ್ಳಿಯೊಂದರಲ್ಲಿ ಮಹಿಳೆಯೊಬ್ಬರನ್ನ ವಸ್ತ್ರ ರಹಿತರಾಗಿ ಮೆರವಣಿಗೆ ಮಾಡಿದ ಘಟನೆ ಬಗ್ಗೆ ಕರ್ನಾಟಕ ಹೈಕೋರ್ಟ್ ಗರಂ ಆಗಿದೆ. ಅಲ್ಲದೆ ಈ ಪ್ರಕರಣವನ್ನೀಗ ಗಂಭೀರವಾಗಿ ಪರಿಗಣಿಸಿದೆ. ಇನ್ನು ಈ ಕೇಸ್ನ 'ಅಸಾಧಾರಣ ಪ್ರಕರಣ' ಎಂದು ಹೇಳಿರುವ ಕರ್ನಾಟಕ ಹೈಕೋರ್ಟ್, 'ಇದಕ್ಕೆ ನಮ್ಮ ಕೈಯಲ್ಲಿ ಅಸಾಧಾರಣ ಚಿಕಿತ್ಸೆಯು ದೊರೆಯಲಿದೆ' ಎಂದು ಎಚ್ಚರಿಕೆಯನ್ನು ನೀಡಿದೆ. ಈ ಮೂಲಕ ಬೆಳಗಾವಿ ಹಳ್ಳಿಯಲ್ಲಿ ಮಹಿಳೆಗೆ ಅವಮಾನ ಮಾಡಿದವರಿಗೆ ಕಠಿಣ ಶಿಕ್ಷೆ ಗ್ಯಾರಂಟಿ ಅನ್ನೋ ಮುನ್ಸೂಚನೆ ಸಿಕ್ಕಿದೆ.

ಮಗ ಓಡಿ ಹೋಗಿದ್ದಕ್ಕೆ ಅಟ್ಯಾಕ್?
ಡಿಸೆಂಬರ್ 11ರಂದು ಸಂತ್ರಸ್ತ ಮಹಿಳೆಯ ಮಗ, ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದ ಹುಡುಗಿಯ ಜೊತೆಗೆ ಹೋಗಿದ್ದ. ಇಬ್ಬರು ಪ್ರೀತಿಸುತ್ತಿದ್ದ ಕಾರಣ ಮನೆ ಬಿಟ್ಟು ಹೋಗಿದ್ದರು. ಆದ್ರೆ ಈ ಕಾರಣಕ್ಕೆ ನಂತರ ಅಮಾಯಕ ಮಹಿಳೆ ಮೇಲೆ ಹಲ್ಲೆಯನ್ನು ನಡೆಸಿ, ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದಾರೆ ಅಂತಾ ಆರೋಪಿಸಲಾಗಿತ್ತು. ಹಾಗೆ ವಿದ್ಯುತ್ ಕಂಬಕ್ಕೆ ಕೂಡ ಕಟ್ಟಿಹಾಕಿ ಹಿಂಸೆ ನೀಡಲಾಗಿತ್ತು ಎಂದು ಗಂಭೀರ ಆರೋಪ ಮಾಡಲಾಗಿತ್ತು.
ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ
ಇದೀಗ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವು ಬೆಳಗಾವಿಯ ಪೊಲೀಸ್ ಆಯುಕ್ತರಿಗೆ ಮತ್ತು ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ)ಗೆ ಖುದ್ದಾಗಿ ಡಿಸೆಂಬರ್ 18ಕ್ಕೆ ಕೋರ್ಟ್ಗೆ ಹಾಜರಾಗುವಂತೆ ಸೂಚಿಸಿ ಸಮನ್ಸ್ ನೀಡಿದೆ. ಮುಖ್ಯ ನ್ಯಾಯಮೂರ್ತಿಗಳಾದ, ಪ್ರಸನ್ನ ಬಿ. ವರಾಳೆ ಅವರು & ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಮುಂದೆ ಘಟನೆ ಕುರಿತು ಅಡ್ವೊಕೇಟ್ ಜನರಲ್ ಮಾಹಿತಿ ಮುಂದಿಟ್ಟರು. ಘಟನೆ ಕುರಿತು ಕೈಗೊಂಡ ಕ್ರಮಗಳ ಕುರಿತು ಮೆಮೊ ಮತ್ತು ದಾಖಲೆ ಸಲ್ಲಿಸಿದರು.
ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್
ಆದರೆ ವರದಿಯ ಬಗ್ಗೆ ಹೈಕೋರ್ಟ್ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿ, ವರದಿ ಪೂರ್ಣವಾಗಲಿ ಎಂದು ಸೂಚಿಸಿದೆ. ಅಲ್ಲದೆ 'ಘಟನೆಯ ನಂತರದ ಬೆಳವಣಿಗೆ ಬಗ್ಗೆ ನಾವು ತೃಪ್ತರಾಗಿಲ್ಲ. ಹೆಚ್ಚುವರಿ ವರದಿ ಸಲ್ಲಿಸಲು ಎಜಿ ಸಮಯ ಬಯಸುತ್ತಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ಹೆಚ್ಚುವರಿ ವರದಿ ದಾಖಲಿಸಲು ಅನುಮತಿ ನೀಡಲಾಗಿದೆ' ಎಂದು ಸೂಚಿಸಿದೆ ಕರ್ನಾಟಕ ಹೈಕೋರ್ಟ್. ಇದೇ ವೇಳೆ ಮತ್ತೊಂದು ಗಂಭೀರ ಪ್ರಶ್ನೆಯನ್ನೂ ಕೇಳಲಾಗಿದೆ.
17ನೇ ಶತಮಾನಕ್ಕೆ ವಾಪಸ್ ಹೋಗ್ತಿದ್ದೀವಾ?
ಘಟನೆಯ ಬಗ್ಗೆ ಬೇಸರ ಹೊರಹಾಕಿರುವ ಕರ್ನಾಟಕ ಹೈಕೋರ್ಟ್ ಹಲ್ಲೆ ಮಾಡಿದವರನ್ನ ಕೂಡಲೇ ಬಂಧಿಸಬೇಕು ಎಂದಿದೆ. ಅಲ್ಲದೆ 'ಇದು ನಮಗೆಲ್ಲರಿಗೂ ಅವಮಾನ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದೆ, ಇಂತಹ ಸಮಯದಲ್ಲೂ ಈ ರೀತಿಯಾದ ಪರಿಸ್ಥಿತಿ ನಿರೀಕ್ಷಿಸಲು ಸಾಧ್ಯವಿಲ್ಲ. ಇದು ನಮಗೆ ಪ್ರಶ್ನೆಯಾಗಿದೆ, ನಾವು 21 ನೇ ಶತಮಾನಕ್ಕೆ ಹೋಗುತ್ತಿದ್ದೀವಾ? ಅಥವಾ 17 ನೇ ಶತಮಾನಕ್ಕೆ ಹಿಂತಿರುಗುತ್ತಿದ್ದೇವಾ?' ಎಂದು ಪ್ರಶ್ನೆಯನ್ನ ಕೇಳಿದೆ ಮಾನ್ಯ ಹೈಕೋರ್ಟ್.
ಒಟ್ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಘಟನೆ ಈಗ ಮಾನವ ಸಮಾಜಕ್ಕೆ ದೊಡ್ಡ ಆಘಾತ ನೀಡಿದೆ. ಹೀಗಾಗಿ ಮಾನ್ಯ ಹೈಕೋರ್ಟ್ ಕೂಡ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿದ್ದು ಎಚ್ಚರಿಕೆ ನೀಡಿದೆ. ಜೊತೆಗೆ ಈ ಪ್ರಕರಣದಲ್ಲಿ ಸೂಕ್ತವಾದ ತನಿಖೆ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲು ಬೇಕಿರುವ ಕ್ರಮಗಳನ್ನು ಈಗ ಕೈಗೊಳ್ಳಲಾಗುತ್ತಿದೆ.












Click it and Unblock the Notifications