Rain Alert: ಮಳೆ ನೀರು ಸಂಗ್ರಹ ಮಾಡಿ, ಈಗಲಾದರೂ ಬುದ್ಧಿ ಕಲಿಯಿರಿ!
ನೀರು ಇಲ್ಲ.. ಎಲ್ಲಾ ಕಡೆಯೂ ಒಣ ಭೂಮಿ ಕಾಣುತ್ತಿದೆ. ಮಳೆ ಇಲ್ಲದೆ ಭೂಮಿ ಸಂಪೂರ್ಣ ಒಣಗಿ ಹೋಗಿದ್ದು, ಜನ ಪರದಾಡುತ್ತಿದ್ದಾರೆ. ಇದೆಲ್ಲವೂ ಮನುಷ್ಯ ಮಾಡುತ್ತಿರುವ ಎಡವಟ್ಟು & ಅಹಂಕಾರದ ಫಲಿತಾಂಶ ಎನ್ನಬಹುದು. ಭೂಮಿ ಮೇಲೆ ಹೇಗೆ ಬದುಕಬೇಕು ಅಂತಾ ನಮ್ಮ ಹಿರಿಯರು ಕಲಿಸಿಕೊಟ್ಟು ಹೋಗಿದ್ದಾರೆ. ಆದರೂ ಮನುಷ್ಯ ಸಾಕಷ್ಟು ಎಡವಟ್ಟು ಮಾಡುತ್ತಾ, ಸಮಸ್ಯೆ ಸುಳಿಗೆ ಸಿಲುಕುತ್ತಿದ್ದಾನೆ. ಈಗ ಕೂಡ ಅಷ್ಟೇ, ಭರ್ಜರಿ ಮಳೆ ಬಿದ್ದಾಗ ಅದನ್ನು ಸೂಕ್ತ ರೀತಿಯಲ್ಲಿ ಸಂಗ್ರಹ ಮಾಡಿಕೊಳ್ಳದೆ ಈಗ ಪರದಾಡುತ್ತಿದ್ದಾನೆ ಮಾನವ.
ಮನುಷ್ಯನ ಬದುಕಿಗೆ ಮೂಲ ಆಧಾರವೇ ನೀರು, ನೀರು ಇಲ್ಲದೆ ಮನುಷ್ಯನ ಜೀವನ ಊಹೆಗೂ ನಿಲುಕುವುದಿಲ್ಲ. ಹೀಗಾಗಿ ಜೀವಜಲ ಅಂತಾ ಕರೆಯುವ ನೀರನ್ನು ಮನುಷ್ಯ ಸೂಕ್ತ ರೀತಿಯಲ್ಲಿ ಸಂಗ್ರಹ ಮಾಡಿಕೊಳ್ಳಬೇಕು. ಹೀಗಿದ್ದರೂ ಮನುಷ್ಯರು ಮಾತ್ರ ನೀರಿನ ಸದ್ಬಳಕೆ ಮಾಡಿಕೊಳ್ತಿಲ್ಲ. ಇದೇ ಕಾರಣಕ್ಕೆ ಮನುಷ್ಯ ಈಗ ಹನಿ ಹನಿ ನೀರಿಗೂ ಪರದಾಡುತ್ತಿದ್ದಾನೆ. ಹೀಗಿದ್ದಾಗ ತಕ್ಷಣಕ್ಕೇ ಎಚ್ಚೆತ್ತುಕೊಂಡು, ಮಳೆ ನೀರು ಸಂಗ್ರಹ ಮಾಡಿಕೊಂಡರೆ ಮುಂದಕ್ಕೆ ಇಂತಹ ಸಮಸ್ಯೆ ಬರಲ್ಲ ಎಂಬ ಮಾತು ಕೇಳಿಬರುತ್ತಿದೆ. ಯಾಕಂದ್ರೆ ಮಳೆಗಾಲ ಆರಂಭಕ್ಕೆ ಇನ್ನು ಕೇವಲ 2 ತಿಂಗಳು ಬಾಕಿ ಇದೆ. ಹಾಗಾದರೆ ಮಳೆ ನೀರು ಸಂಗ್ರಹ ಹೇಗೆ ಮಾಡುವುದು? ಬನ್ನಿ ತಿಳಿಯೋಣ.

ಹೀಗೆ ಮಾಡಿದರೆ ನೀರಿನ ಸಮಸ್ಯೆ ಇರಲ್ಲ!
ಮಳೆ ನೀರು ಸಂಗ್ರಹಕ್ಕೆ ಹಲವು ವಿಧಾನ ಇವೆ, ಅದರಲ್ಲೂ ನಗರ ಪ್ರದೇಶದಲ್ಲಿ ಮಳೆ ನೀರನ್ನ ಸಂಗ್ರಹ ಮಾಡಿಕೊಳ್ಳಲು ಹಲವು ಅವಕಾಶ ಇದೆ. ಈಗಾಗಲೇ ಜಲಮಂಡಳಿ ಕೂಡ ಬೆಂಗಳೂರು ನಗರದಲ್ಲಿ ಮಳೆ ನೀರು ಸಂಗ್ರಹ ಮಾಡುವ ವ್ಯವಸ್ಥೆಯನ್ನು ಪ್ರತಿ ಕಟ್ಟಡದಲ್ಲೂ ಅಳವಡಿಸಲಿ ಎಂದು ಆದೇಶ ನೀಡಿತ್ತು. ಹೀಗಿದ್ದರೂ ಬಹುತೇಕ ಹೊಸ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯೇ ಇಲ್ಲ. ಹಾಗಾದರೆ ಮಳೆ ನೀರು ಸಂಗ್ರಹಕ್ಕೆ ಇರುವ ದಾರಿಗಳು ಯಾವುವು? ಬನ್ನಿ ಸಂಪೂರ್ಣ ಮಾಹಿತಿ ಮುಂದೆ ಓದೋಣ.
ಕೃಷಿ ಭೂಮಿಯಲ್ಲಿ ಮಳೆ ನೀರು
ಮಳೆ ನೀರು ಸಂಗ್ರಹದಲ್ಲಿ ಪ್ರಮುಖವಾಗಿ ಕೃಷಿ ಭೂಮಿಗಳು ಹೆಚ್ಚಿನ ಪ್ರಭಾವ ಬೀರುತ್ತವೆ. ಹೇಗೆ ಅಂದ್ರೆ ಅತಿಹೆಚ್ಚು ನೀರು ಹರಿದು ಬರುವುದು ಕೃಷಿ ಜಮೀನುಗಳಿಗೆ ಹೀಗೆ ನೀರು ಹರಿದು ಬಂದ ಸಮಯದಲ್ಲಿ ಕೃಷಿ ಭೂಮಿ ಅಂದ್ರೆ ನಿಮ್ಮ ನಿಮ್ಮ ಜಮೀನಿನಲ್ಲಿ ಕೃಷಿ ಹೊಂಡ ತೆಗೆದು ನೀರು ಸಂಗ್ರಹ ಮಾಡಬಹುದು. ಜಮೀನಿನಲ್ಲಿ ಬರುವ ನೀರು, ಒಂದೇ ಕಡೆ ಸೇರುವ ರೀತಿ ಇಳಿಜಾರು ಪ್ರದೇಶದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಬಹುದು. ಇದರ ಜೊತೆಗೆ ಇಂಗು ಗುಂಡಿಯನ್ನು ನಿರ್ಮಾಣ ಮಾಡಿದರೆ ನಿಮ್ಮ ಅಂತರ್ಜಲ ಮಟ್ಟ ಏರಲಿದೆ.
ನೀರು ವ್ಯರ್ಥವಾಗುವುದನ್ನು ತಪ್ಪಿಸಿ
ಮಳೆ ನೀರು ಅತ್ಯುತ್ತಮ ಜಲಮೂಲ ಎನ್ನಬಹುದು ಯಾಕಂದ್ರೆ ಮಳೆಗಾಲದಲ್ಲಿ ಬೀಳುವ ಭಾರಿ ಮಳೆಯನ್ನ ಸಂಗ್ರಹ ಮಾಡಿಕೊಂಡರೆ ನಿಮಗೆ ಉತ್ತಮ. ಇದಕ್ಕಾಗಿ ಹಲವು ದಾರಿ ಇದೆ. ನಿಮ್ಮ ಮನೆಯ ಮೇಲೆ ಮಳೆ ನೀರು ಸಂಗ್ರಹಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಬಹುದು. ಇದರಿಂದ, ನಿಮ್ಮ ಮನೆಯು ಕೂಡ ತಂಪು ತಂಪು ಕೂಲ್ ಕೂಲ್ ಆಗಿ ಇರಲು ಸಾಧ್ಯ.
ಅಂತರ್ಜಲ ಮಟ್ಟ ಏರಿಕೆ ಮಾಡಿ
ಕರ್ನಾಟಕದಲ್ಲಿ ಎಲ್ಲೇ ಬೋರ್ ತೆಗೆದರೂ ನೀರು ಸರಿಯಾಗಿ ಸಿಗುತ್ತಿಲ್ಲ. ಇನ್ನು ನೀರು ಸಿಕ್ಕಿರುವ ಹಲವು ಬೋರ್ಗಳು ಈಗಾಗಲೇ ಬತ್ತಿ ಹೋಗಿದ್ದು, ಜನರು ಪರದಾಡುತ್ತಿದ್ದಾರೆ. ಹೀಗಾಗಿ ಇಂಗು ಗುಂಡಿ ನಿರ್ಮಾಣವನ್ನ ಮಾಡಿದರೆ ನಿಮಗೆ ನೀರಿನ ಸಮಸ್ಯೆ ಬಹುತೇಕ ಸರಿಯಾದಂತೆ. ಹೀಗಾಗಿ ಸೂಕ್ತವಾಗಿ ಅಂತರ್ಜಲ ಮರುಪೂರ್ಣ ಮಾಡಬೇಕು. ಈ ಮೂಲಕ ಬೋರ್ ನೀರಿನ ಸಮಸ್ಯೆಗು ಮುಕ್ತಿ ಸಿಗಲಿದೆ.
ಕೆರೆಗಳನ್ನು ರಕ್ಷಣೆ ಮಾಡಬೇಕು!
ಮಳೆ ನೀರು ಸಂಗ್ರಹಕ್ಕೆ ಇರುವ ಮತ್ತೊಂದು ಬಹುದೊಡ್ಡ ಮೂಲ ಎಂದರೆ ಕೆರೆಗಳು. ಹೀಗಾಗಿ ಮಳೆ ನೀರನ್ನ ಸಂಗ್ರಹ ಮಾಡಲು ಈ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಬಳಕೆ ಮಾಡಿಕೊಳ್ಳಬೇಕು ಅಂತಾರೆ ತಜ್ಞರು. ಕೆರೆ ಒತ್ತುವರಿ ತೆರವು ಮಾಡಿ, ಕೆರೆಗಳ ರಕ್ಷಣೆ ಮಾಡಿದರೆ ನೀರಿನ ಮೂಲದ ರಕ್ಷಣೆ ಸಾಧ್ಯ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಪಕ್ಕಾ.
ನದಿಗಳ ನೀರು ಕಳವು ತಪ್ಪಿಸಿ
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನದಿ ಹರಿದು ಹೋಗುವ ಭಾಗದಲ್ಲಿ ನೀರನ್ನ ಕದಿಯುವವರ ಸಂಖ್ಯೆ ಹೆಚ್ಚಾಗಿದೆ. ಕದ್ದು ಮುಚ್ಚಿ ಪಂಪ್ಸೆಟ್ ಅಳವಡಿಕೆ ಮಾಡಿ ನೀರನ್ನು ಕದಿಯುತ್ತಿದ್ದಾರೆ ಕೆಲವರು. ಇವರಿಗೆಲ್ಲಾ ಕಡಿವಾಣ ಹಾಕಿ ನೀರು ರಕ್ಷಣೆ ಮಾಡಬೇಕಿದೆ. ಈ ಮೂಲಕ ಮಳೆಯ ಸಮಯದಲ್ಲಿ ನೀರು ಸಂಗ್ರಹ ಮಾಡಿಕೊಳ್ಳಬಹುದಾಗಿದೆ.












Click it and Unblock the Notifications