Karnataka Rain: ಮಳೆಗೆ ಬಲಿಯಾದವರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸರ್ಕಾರ!
ಕರ್ನಾಟಕದಲ್ಲಿ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಭಾರಿ ಮಳೆಯಿಂದಾಗಿ ಜನರು ಕೂಡ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ ಭಾರಿ ಮಳೆಗೆ 21 ಜನ ಬಲಿಯಾಗಿದ್ದು 40ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ. ಈ ಕಾರಣಕ್ಕೆ ಮಳೆಯಿಂದ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದು ಖುದ್ದು ಸಚಿವರೇ ಮಾಹಿತಿ ನೀಡಿದ್ದಾರೆ. ಹಾಗಾದರೆ ಪರಿಹಾರದ ಮೊತ್ತ ಎಷ್ಟು ಲಕ್ಷ? ತಿಳಿಯೋಣ ಬನ್ನಿ.
ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಸೈಲೆಂಟ್ ಆಗಿದ್ದ ಮಳೆರಾಯ ಜುಲೈ ಆರಂಭದಲ್ಲೇ ತನ್ನ ರೌದ್ರಾವತಾರ ತೋರಿಸುತ್ತಿದ್ದಾನೆ. ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈಗಾಗಲೇ ರಾಜ್ಯದ ವಿವಿಧ ಭಾಗದಲ್ಲಿ 21 ಜನರು ಮಳೆಯ ಕಾರಣಕ್ಕೆ ಮೃತಪಟ್ಟಿದ್ದಾರೆ. ಮಳೆಯಿಂದ ಉಂಟಾದ ಪ್ರವಾಹದಲ್ಲಿ ಕೊಚ್ಚಿ ಹೋದವರೇ ಈ ಪೈಕಿ ಹೆಚ್ಚು. ಹೀಗಾಗಿ ರಾಜ್ಯ ಸರ್ಕಾರವು ಮಳೆಗೆ ಬಲಿಯಾದವರ ಕುಟುಂಬಕ್ಕೆ ನೆರವನ್ನು ನೀಡಿದ್ದು, ಸ್ವತಃ ಸಚಿವ ಕೃಷ್ಣ ಬೈರೇಗೌಡ ಮೃತರ ಮನೆಗೆ ತೆರಳಿ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಪರಿಹಾರವನ್ನೂ ಘೋಷಿಸಿದ್ದಾರೆ.

ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ
ಅಂದಹಾಗೆ ಕುಮಟಾ ತಾಲೂಕು ಪೋಸ್ಟ್ ಬೆಟ್ಟುಳಿಯಲ್ಲಿ ಎರಡು ದಿನಗಳ ಹಿಂದೆ ಭಾರಿ ಮಳೆ ಕಾರಣ ಘೋರ ದುರಂತ ನಡೆದಿತ್ತು. ಗದ್ದೆಯಲ್ಲಿ ತುಂಬಿದ್ದ ನೀರಲ್ಲಿ ಮುಳುಗಿ ಮೃತಪಟ್ಟಿದ್ದ ಸತೀಶ ನಾಯ್ಕ ಮತ್ತು ಉಲ್ಲಾಸ ಗಾವಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವರು, ತಲಾ 5 ಲಕ್ಷ ರೂಪಾಯಿ ಮೊತ್ತದ ಪರಿಹಾರ ಧನದ ಚೆಕ್ ನೀಡಿದ್ದಾರೆ. ಬೆಟ್ಕುಳಿ ಗ್ರಾಮದಲ್ಲಿ ಮಳೆಯ ಪರಿಣಾಮ ಭಾರಿ ಅನಾಹುತವಾಗಿದ್ದು, ಈ ಬಗ್ಗೆ ಅಧಿಕಾರಿಗಳು ಮತ್ತು ಸಂತ್ರಸ್ತರಿಂದಲೇ ಸಚಿವ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ಪಡೆದರು. ಅಲ್ಲದೆ ಕರ್ನಾಟಕ ಮಳೆ ಬಗ್ಗೆ & ಮೋಡ ಬಿತ್ತನೆ ಬಗ್ಗೆ ಮಹತ್ವದ ಮಾಹಿತಿ ತಿಳಿಸಿದ್ದಾರೆ ಸಚಿವರು, ಮಾಹಿತಿಗೆ ಮುಂದೆ ಇದೆ ಓದಿ.
ಮೃತಪಟ್ಟ ಇತರರ ಕುಟುಂಬಕ್ಕೂ 5 ಲಕ್ಷ ಪರಿಹಾರ
ಕರಾವಳಿ ಕರ್ನಾಟಕ ಭಾಗದ ಮಳೆ ಪೀಡಿತ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿಗೆ ಬೇಗ ಸ್ಪಂದಿಸಲು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು. ಈಗ ಜಿಲ್ಲೆಯ ಸೂಕ್ಷ್ಮ ಪ್ರದೇಶದಲ್ಲಿ ವಿಪತ್ತು ನಿರ್ವಹಣಾ ಪಡೆ ಸ್ಥಳದಲ್ಲಿ ನಿಯೋಜಿಸಲಾಗಿದೆ. ಎಂತಹ ವಿಕೋಪ ಉಂಟಾದರೂ ವಿಪತ್ತು ನಿರ್ವಹಣಾ ಪಡೆ ಸಂಪರ್ಕಿಸಿ ಸಹಾಯ ಪಡೆಯಬೇಕೆಂದು ಸಚಿವರು ಸೂಚಿಸಿದ್ದಾರೆ. ನಂತರ ಕಂದಾಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ನೆರೆಯಿಂದ ಮೃತಪಟ್ಟವರ ಕುಟುಂಬಕ್ಕೆ ಶೀಘ್ರದಲ್ಲಿ 5 ಲಕ್ಷ ಪರಿಹಾರ ನೀಡಬೇಕು, ಜನರ ಸಮಸ್ಯೆಗಳಿಗೆ ತುರ್ತು ಸ್ಪಂದಿಸಬೇಕು ಹಾಗೂ ನೆರೆ ಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು.

ಮಳೆ ಪರಿಸ್ಥಿತಿ ನಿಭಾಯಿಸಲು ಸನ್ನದ್ಧ
ಮಳೆ ಅನಾಹುತದ ಬಗ್ಗೆ ಮಾಹಿತಿ ನೀಡಿದ ಸಚಿವ ಕೃಷ್ಣಬೈರೇಗೌಡ 'ಮಳೆಯಿಂದ ರಾಜ್ಯದಲ್ಲಿ 21 ಜನ ಜೀವ ಕಳೆದುಕೊಂಡಿದ್ದು, ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಲಾಗಿದೆ. ಅವಶ್ಯಕತೆ ಇರುವೆಡೆ ಕಾಳಜಿ ಕೇಂದ್ರ ತೆರೆಯಲಾಗುತ್ತಿದೆ. ರಾಜ್ಯ ಸರ್ಕಾರವು ಸಂತ್ರಸ್ತರಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡುತ್ತಿದೆ. ಕೇಂದ್ರದ 4 ಎನ್ಡಿಆರ್ಎಫ್, ರಾಜ್ಯದ 5 ಎಸ್ಡಿಆರ್ಎಫ್ ತುಕಡಿ ಪ್ರಕೃತಿ ವಿಕೋಪ ಪರಿಹಾರ ಕಾರ್ಯಕ್ಕೆ ಸನ್ನದ್ಧವಾಗಿದೆ' ಎಂದು ಮಾಹಿತಿ ನೀಡಿದರು.
ಮೋಡ ಬಿತ್ತನೆ ಇದೆಯಾ? ಇಲ್ವಾ?
ಹೌದು, ರಾಜ್ಯದಾದ್ಯಂತ ಪ್ರ ಸ್ತುತ ಉತ್ತಮವಾಗಿ ಮಳೆಯಾಗುತ್ತಿದ್ದು, ಸದ್ಯಕ್ಕೆ ಮೋಡ ಭಿತ್ತನೆ ಆಲೋಚನೆ ಇಲ್ಲ ಎಂದು ಸಚಿವ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ. ಜುಲೈನಲ್ಲಿ ಉತ್ತಮವಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈ ಹಿಂದೆಯೇ ವರದಿ ನೀಡಿತ್ತು. ಅದರಂತೆ ಸರಾಸರಿಗಿಂತಲೂ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಮೋಡ ಬಿತ್ತನೆಯ ಚಿಂತನೆ ಸದ್ಯಕ್ಕಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಹೀಗಾಗಿ ಮಳೆಗೆ ಕಾಯುತ್ತಿರುವ ಜನರು ಕೂಡ ನಿಟ್ಟುಸಿರು ಬಿಟ್ಟಿದ್ದು, ಆದರೆ ಮಳೆ ಅವಾಂತರದಿಂದ ಬೆಚ್ಚಿಬಿದ್ದಿದ್ದಾರೆ.
ನೆಮ್ಮದಿ ಜೊತೆಗೆ ಮಳೆ ಕಿರಿಕಿರಿ!
ಅಷ್ಟಕ್ಕೂ ಜೂನ್ ತಿಂಗಳಲ್ಲಿ ಕರ್ನಾಟಕದ ರೈತರು ಚಿಂತೆಯಲ್ಲಿದ್ದರು. ಬರದ ಬೇಗೆಯಲ್ಲಿ ಚಿಂತೆಯಲ್ಲಿದ್ದ ಕರ್ನಾಟಕದ ರೈತರಿಗೆ ಈಗ ಮಳೆರಾಯನ ರೌದ್ರಾವತಾರ ರಿಲೀಫ್ ನೀಡಿದೆ. ಭಾರತದ ಜೀವನಾಡಿ ಮುಂಗಾರು ಮಾರುತಗಳು ಬರುವುದು ತಡವಾಗಿತ್ತು. ಇನ್ನು ರಾಜ್ಯ ಕೂಡ ಮಳೆ ಇಲ್ಲದೆ ಬಿಸಿಲಿನಲ್ಲಿ ಬೆಂದು ಹೋಗುತ್ತಿತ್ತು. ಆದರೆ ಜೂನ್ನಲ್ಲಿ ಆವರಿಸಿದ್ದ ಬರದ ಛಾಯೆ ಜುಲೈ ತಿಂಗಳ ಮೊದಲ ವಾರವೇ ಮರೆಯಾಗಿ ಹೋಗಿದೆ. ಭರ್ಜರಿ ಮಳೆ ಸುರಿಯುತ್ತಿದ್ದು, ಜನ ಖುಷಿಯಾಗಿದ್ದಾರೆ. ಹಾಗೇ ಭಾರಿ ಮಳೆಯಿಂದ ಕೆಲವು ಭಾಗಗಳಲ್ಲಿ ಕಿರಿಕಿರಿ ಕೂಡ ಶುರುವಾಗಿದೆ.
ಒಟ್ನಲ್ಲಿ ಕರ್ನಾಟಕದಲ್ಲಿ ಮುಂಗಾರು ಮಳೆ (Monsoon) ಅಬ್ಬರವು ಜೋರಾಗಿದೆ. ಈಗಾಗಲೇ ಕರ್ನಾಟಕದಲ್ಲಿ ಮಳೆ (Karnataka Rain) ಮಾರುತಗಳು ಅಬ್ಬರಿಸ್ತಿವೆ. ಹೀಗಾಗಿ ಡ್ಯಾಂಗೆ ಮರುಜೀವ ತುಂಬಿದಂತಾಗಿದೆ. ಮಲೆನಾಡು ಭಾಗದಲ್ಲಂತು ಈ ವಾರ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಅಲ್ಲದೆ ಕರಾವಳಿ ಭಾಗ ಮಂಗಳೂರು, ಉಡುಪಿ ಸೇರಿ ಕರಾವಳಿ ಭಾಗದಲ್ಲೂ ಭಾರಿ ಮಳೆ ಬೀಳುತ್ತಿದೆ. ಇನ್ನೂ ಕೆಲವು ದಿನಗಳ ಕಾಲ ಮಳೆ ಸುರಿದರೆ, ರಾಜ್ಯದಲ್ಲಿ ಬರದ ಛಾಯೆ ಸಂಪೂರ್ಣ ಮಾಯವಾಗುತ್ತದೆ. ರೈತರು ಕೂಡ ಖುಷಿಯಾಗುತ್ತಾರೆ. ಮತ್ತೊಂದ್ಕಡೆ ಮಳೆ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ಕೂಡ ಸನ್ನದ್ಧವಾಗಿದೆ.











Click it and Unblock the Notifications