Heavy Rain: ಮಳೆ ರೌದ್ರಾವತಾರ, ರಾಜ್ಯದ ಜಲಾಶಯಗಳಿಗೆ ಹರಿದು ಬಂದ ಭಾರಿ ಪ್ರಮಾಣದ ನೀರು!
ರಾಜ್ಯದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ಇಷ್ಟುದಿನ ಬರದ ಭಯದಲ್ಲಿದ್ದ ರೈತರಿಗೆ ಮಳೆ ನೆಮ್ಮದಿ ನೀಡಿದೆ. ಹಾಗೇ ಬತ್ತಿ ಹೋಗುತ್ತಿದ್ದ ಜಲಾಶಯಗಳಿಗೂ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು, ಒಂದು ವಾರದಲ್ಲಿ ರಾಜ್ಯದ ಡ್ಯಾಂಗಳ ಚಿತ್ರಣವೇ ಬದಲಾಗಿ ಹೋಗಿದೆ. ಹಾಗಾದರೆ ಯಾವ ಯಾವ ಜಲಾಶಯದಲ್ಲಿ ಈಗ ಎಷ್ಟು ನೀರಿದೆ? ಆ ಮಾಹಿತಿ ತಿಳಿಯೋಣ ಬನ್ನಿ.
ಅಷ್ಟಕ್ಕೂ ಜೂನ್ ತಿಂಗಳಲ್ಲಿ ಕರ್ನಾಟಕದ ರೈತರು ಚಿಂತೆಯಲ್ಲಿದ್ದರು. ಬರದ ಬೇಗೆಯಲ್ಲಿ ಚಿಂತೆಯಲ್ಲಿದ್ದ ಕರ್ನಾಟಕದ ರೈತರಿಗೆ ಈಗ ಮಳೆರಾಯನ ರೌದ್ರಾವತಾರ ರಿಲೀಫ್ ನೀಡಿದೆ. ಭಾರತದ ಜೀವನಾಡಿ ಮುಂಗಾರು ಮಾರುತಗಳು ಬರುವುದು ತಡವಾಗಿತ್ತು. ಇನ್ನು ರಾಜ್ಯ ಕೂಡ ಮಳೆ ಇಲ್ಲದೆ ಬಿಸಿಲಿನಲ್ಲಿ ಬೆಂದು ಹೋಗುತ್ತಿತ್ತು. ಆದರೆ ಜೂನ್ನಲ್ಲಿ ಆವರಿಸಿದ್ದ ಬರದ ಛಾಯೆ ಜುಲೈ ತಿಂಗಳ ಮೊದಲ ವಾರವೇ ಮರೆಯಾಗಿ ಹೋಗಿದೆ. ಭರ್ಜರಿ ಮಳೆ ಸುರಿಯುತ್ತಿದ್ದು, ಜನ ಖುಷಿಯಾಗಿದ್ದಾರೆ. ರಾಜ್ಯದ ಡ್ಯಾಂಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಈಗ ಹರಿದು ಬರುತ್ತಿದ್ದು, ಕರ್ನಾಟಕದ ಡ್ಯಾಂಗಳ ಈಗಿನ ನೀರು ಸಂಗ್ರಹಣೆ ಮಾಹಿತಿ ಇಲ್ಲಿದೆ.

ಕರ್ನಾಟಕದ ಡ್ಯಾಂಗಳ ನೀರಿನ ಮಾಹಿತಿ
1) ಕೆಆರ್ಎಸ್ ಜಲಾಶಯ: ಈ ಡ್ಯಾಂನಲ್ಲಿ 49 ಟಿಎಂಸಿ ಗರಿಷ್ಠ ಸಾಮರ್ಥ್ಯವಿದ್ದು, ಈಗ ಜಲಾಶಯದಲ್ಲಿ 10.57 ಟಿಎಂಸಿ ನೀರು ಸಂಗ್ರಹವಾಗಿದೆ. ಆದರೆ ಕಳೆದ ವರ್ಷ ಈ ಸಮಯಕ್ಕೆ ಕೆಆರ್ಎಸ್ ಜಲಾಶಯದಲ್ಲಿ 39.3 ಟಿಎಂಸಿ ನೀರು ಸಂಗ್ರಹವಾಗಿತ್ತು. ನಿನ್ನೆಯಿಂದ ನೀರನ ಒಳಹರಿವು ಭಾರಿ ಹೆಚ್ಚಳವಾಗಿದ್ದು, ಕೆಆರ್ಎಸ್ ಜಲಾಶಯಕ್ಕೆ 3966 ಕ್ಯುಸೆಕ್ ನೀರು ಹರಿದು ಬರುತ್ತಿದೆ.
2) ಕಬಿನಿ ಜಲಾಶಯ: ಕಾವೇರಿ ಕೊಳ್ಳದ ಮತ್ತೊಂದು ಪ್ರಮುಖ ಜಲಾಶಯ ಕಬಿನಿ, ಈ ಡ್ಯಾಂನಲ್ಲಿ 19.52 ಟಿಎಂಸಿ ಗರಿಷ್ಠ ನೀರು ಸಂಗ್ರಹಿಸಬಹುದು. 7.5 ಟಿಎಂಸಿ ನೀರು ಈಗ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ವೇಳೆಗೆ ಕಬಿನಿ ಜಲಾಶಯದಲ್ಲಿ 15.25 ನೀರು ಇತ್ತು. ಬರದ ಆತಂಕದ ನಡುವೆ ಈಗ ಕಬಿನಿ ಡ್ಯಾಂಗೆ 16,218 ಕ್ಯುಸೆಕ್ ನೀರು ಹರಿದು ಬರುತ್ತಿದೆ.

3) ಹೇಮಾವತಿ ಜಲಾಶಯ: ಕಾವೇರಿ ನದಿಯ ಉಪನದಿ ಹೇಮಾವತಿಗೆ ಕಟ್ಟಿರುವ ಡ್ಯಾಂ ಹೇಮಾವತಿ ಜಲಾಶಯ. 37.10 ಟಿಎಂಸಿ ಒಟ್ಟು ಸಾಮರ್ಥ್ಯದ ಹೇಮಾವತಿ ಡ್ಯಾಂ ಕಳೆದ 4-5 ವರ್ಷದಿಂದ ತುಂಬಿ ತುಳುಕಿತ್ತು. ಆದರೆ ಈ ಬಾರಿ ಮಳೆ ಕೊರತೆ ಕಾಡುತ್ತಿದೆ. ಇದೇ ಕಾರಣಕ್ಕೆ ಹೇಮಾವತಿ ಜಲಾಶಯ ಕೂಡ ಬರಿದಾಗುತ್ತಿದೆ. ಈಗ 14.14 ಟಿಎಂಸಿ ಇದ್ದು, 4444 ಕ್ಯುಸೆಕ್ ಒಳಹರಿವು ಇದೆ.
4) ತುಂಗಭದ್ರಾ ಜಲಾಶಯ: ಬಯಲು ಸೀಮೆ ಭಾಗದ ಜೀವನಾಡಿ ತುಂಗಭದ್ರಾ ಜಲಾಶಯ ಬರಿದಾಗುತ್ತಿದೆ. ಗರಿಷ್ಠ 105.79 ಟಿಎಂಸಿ ಸಾಮರ್ಥ್ಯ ಇರುವ ತುಂಗಭದ್ರಾ ಡ್ಯಾಂನಲ್ಲಿ ಈಗ ಕೇವಲ 3.08 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಬರೋಬ್ಬರಿ 58.21 ಟಿಎಂಸಿ ನೀರು ಸಂಗ್ರಹವಿತ್ತು. ತುಂಗಭದ್ರಾ ಜಲಾಶಯದ ಒಳಹರಿವು ಕೇವಲ 302 ಕ್ಯುಸೆಕ್ ಆಗಿದೆ.
5) ಆಲಮಟ್ಟಿ ಜಲಾಶಯ: ಉತ್ತರ ಕರ್ನಾಟಕದ ಪ್ರಮುಖ ಜಲಾಶಯದಲ್ಲಿ ಒಂದಾಗಿರುವ ಆಲಮಟ್ಟಿ ಕೂಡ ಮಳೆಯಿಲ್ಲದೆ ಬರಿದಾಗುತ್ತಿದೆ. ಇಲ್ಲಿಗೆ ಮಹಾರಾಷ್ಟ್ರದಿಂದಲೇ ನೀರು ಬರಬೇಕಿದೆ. ಆದ್ರೆ ಮಹಾರಾಷ್ಟ್ರ ನೀರು ಬಿಟ್ಟಿಲ್ಲ ಹೀಗಾಗಿ ಆಲಮಟ್ಟಿ ಜಲಾಶಯದ ಒಟ್ಟು ಸಾಮರ್ಥ್ಯ 123 ಟಿಎಂಸಿ ಇದ್ದರೂ ಈಗ 19.14 ಟಿಎಂಸಿ ಸಂಗ್ರಹವಾಗಿದೆ. ಆದ್ರೆ ಕಳೆದ ವರ್ಷ ಇದೇ ಸಮಯಕ್ಕೆ 57.39 ಟಿಎಂಸಿ ನೀರು ಆಲಮಟ್ಟಿ ಜಲಾಶಯದಲ್ಲಿ ಇತ್ತು. ಆಲಮಟ್ಟಿ ಒಳ ಹರಿವು 00 ಕ್ಯುಸೆಕ್ ಆಗಿದೆ.
6) ಲಿಂಗನಮಕ್ಕಿ ಜಲಾಶಯ: ಕರ್ನಾಟಕದ ದೊಡ್ಡ ಡ್ಯಾಂ ಎನಿಸಿಕೊಂಡ ಲಿಂಗನಮಕ್ಕಿಗೆ ಭರ್ಜರಿಯಾಗಿ ನೀರು ಹರಿದು ಬರುತ್ತಿದೆ. ಮಲೆನಾಡು ಭಾಗದಲ್ಲಿ ಭರ್ಜರಿ ಮಳೆಯಾಗಿದ್ದು ಜಲಾಶಯಕ್ಕೆ ಹೊಸ ಕಳೆ ನೀಡಿದೆ. ಲಿಂಗನಮಕ್ಕಿ ಡ್ಯಾಂ ಒಟ್ಟು ಸಾಮರ್ಥ್ಯ 151.75 ಟಿಎಂಸಿ ಆಗಿದ್ದು, ಈಗ 15.83 ಟಿಎಂಸಿ ನೀರು ಇದೆ. ಆದರೆ ಒಳಹರಿವು ಮಾತ್ರ 23,252 ಸಾವಿರ ಕ್ಯುಸೆಕ್ ಮೀರಿಸಿದ್ದು, ಕೆಲವೇ ದಿನದಲ್ಲಿ ಡ್ಯಾಂ ತುಂಬುವ ನಿರೀಕ್ಷೆ ಇದೆ.
7) ಭದ್ರಾ ಜಲಾಶಯ: ಭದ್ರಾ ಡ್ಯಾಂನಲ್ಲಿ 71.54 ಟಿಎಂಸಿ ಗರಿಷ್ಠ ನೀರು ಸಂಗ್ರಹಿಸಬಹುದು. ಆದರೆ ಕೇವಲ 26.15 ಟಿಎಂಸಿ ನೀರು ಈಗ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ವೇಳೆಗೆ ಭದ್ರಾ ಜಲಾಶಯದಲ್ಲಿ ಡಬಲ್ ಅಂದರೆ 46.5 ನೀರು ಸಂಗ್ರಹವಾಗಿತ್ತು. ಈಗ ಭದ್ರಾ ಡ್ಯಾಂಗೆ 7,232 ಕ್ಯುಸೆಕ್ ನೀರು ಹರಿದು ಬರುತ್ತಿದೆ.
8) ಘಟಪ್ರಭಾ ಜಲಾಶಯ: ಈ ಡ್ಯಾಂನಲ್ಲಿ 51 ಟಿಎಂಸಿ ಗರಿಷ್ಠ ಸಾಮರ್ಥ್ಯವಿದೆ, ಡ್ಯಾಂನಲ್ಲಿ ಈಗ 4.13 ಟಿಎಂಸಿ ನೀರು ಇದೆ. ಆದರೆ ಕಳೆದ ವರ್ಷ ಇದೇ ವೇಳೆ ಘಟಪ್ರಭಾ ಜಲಾಶಯದಲ್ಲಿ 7.73 ಟಿಎಂಸಿ ನೀರು ಸಂಗ್ರಹವಾಗಿತ್ತು. ಘಟಪ್ರಭಾ ಡ್ಯಾಂಗೆ 816 ಕ್ಯುಸೆಕ್ ನೀರು ಬರುತ್ತಿದೆ.
9) ಸೂಫಾ ಜಲಾಶಯ: ಮಲೆನಾಡು ಭಾಗದಲ್ಲಿ ಭರ್ಜರಿ ಮಳೆಯಾಗಿದ್ದು ಸೂಫಾ ಡ್ಯಾಂ ತುಂಬುವ ನಿರೀಕ್ಷೆ ಇದೆ. ಸೂಫಾ ಡ್ಯಾಂ ಒಟ್ಟು ಸಾಮರ್ಥ್ಯ 145 ಟಿಎಂಸಿ ಆಗಿದ್ದು, ಈಗ 30.88 ಟಿಎಂಸಿ ನೀರು ಇದೆ. ಆದರೆ ಒಳಹರಿವು 11,581 ಕ್ಯುಸೆಕ್ಗೆ ಏರಿಕೆಯಾಗಿದ್ದು ಕೆಲವೇ ದಿನದಲ್ಲಿ ಡ್ಯಾಂ ತುಂಬುವ ನಿರೀಕ್ಷೆ ಇದೆ.
10) ವರಾಹಿ ಜಲಾಶಯ: ಜಲಾಶಯದ ಗರಿಷ್ಠ ಸಾಮರ್ಥ್ಯ 31.10 ಟಿಎಂಸಿ. ಆದರೆ ಈಗ ಜಲಾಶಯದಲ್ಲಿ 3.29 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ, ವರಾಹಿ ಜಲಾಶಯದಲ್ಲಿ 5.7 ಟಿಎಂಸಿ ನೀರು ಸಂಗ್ರಹವಾಗಿತ್ತು. ವರಾಹಿ ಜಲಾಶಯಕ್ಕೆ 2,642 ಕ್ಯುಸೆಕ್ ನೀರು ಹರಿದು ಬರುತ್ತಿದೆ.
11) ಮಲಪ್ರಭಾ ಜಲಾಶಯ: ಡ್ಯಾಂನಲ್ಲಿ 37.73 ಟಿಎಂಸಿ ಗರಿಷ್ಠ ಸಾಮರ್ಥ್ಯವಿದ್ದು, ಈಗ ಜಲಾಶಯದಲ್ಲಿ 6.88 ಟಿಎಂಸಿ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಸಂದರ್ಭಕ್ಕೆ ಮಲಪ್ರಭಾ ಜಲಾಶಯದಲ್ಲಿ 12.5 ಟಿಎಂಸಿ ನೀರು ಸಂಗ್ರಹವಾಗಿತ್ತು. ಈಗ ಮಲಪ್ರಭಾ ಜಲಾಶಯಕ್ಕೆ 00 ಕ್ಯುಸೆಕ್ ನೀರು ಹರಿದು ಬರುತ್ತಿದೆ.
12) ಹಾರಂಗಿ ಜಲಾಶಯ: ಜಲಾಶಯ ಬರಿದಾಗುತ್ತಿದ್ದು, ಹಾರಂಗಿ ಗರಿಷ್ಠ 8.50 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಈಗ ಕೇವಲ 3.39 ಟಿಎಂಸಿ ನೀರು ಸಂಗ್ರಹವಾಗಿದೆ. ಆದರೆ ಕಳೆದ ವರ್ಷ ಬರೋಬ್ಬರಿ 6.85 ಟಿಎಂಸಿ ನೀರು ಇತ್ತು. ಹಾರಂಗಿ ಜಲಾಶಯದ ಒಳಹರಿವು 2,776 ಕ್ಯುಸೆಕ್ ಆಗಿದೆ.
ಅಂದಹಾಗೆ ಕರ್ನಾಟಕದಲ್ಲಿ ಮುಂಗಾರು ಮಳೆ (Monsoon) ಅಬ್ಬರ ಜೋರಾಗಿದೆ. ಈಗಾಗಲೇ ಭಾಗಶಃ ಕರ್ನಾಟಕಕ್ಕೆ ಮುಂಗಾರು ಮಾರುತ ಎಂಟ್ರಿ ಕೊಟ್ಟಿದ್ದು, ಕರ್ನಾಟಕದಲ್ಲಿ ಮಳೆಯ (Karnataka Rain) ಮಾರುತಗಳು ಅಬ್ಬರಿಸುತ್ತಿವೆ. ಹೀಗಾಗಿ ಜಲಾಶಯಕ್ಕೂ ಮರುಜೀವ ತುಂಬಿದಂತಾಗಿದೆ. ಮಲೆನಾಡು ಭಾಗದಲ್ಲಂತು ಈ ವಾರ ಧಾರಾಕಾರ ಮಳೆ ಸುರಿಯುತ್ತಿದೆ. ಅಲ್ಲದೆ ಮಂಗಳೂರು, ಉಡುಪಿ ಸೇರಿ ಕರಾವಳಿ ಭಾಗದಲ್ಲೂ ಭಾರಿ ಮಳೆ ಬೀಳುತ್ತಿದೆ. ಹೀಗೆ ಇನ್ನೂ ಕೆಲವು ದಿನಗಳ ಕಾಲ ಮಳೆ ಸುರಿದರೆ, ರಾಜ್ಯದಲ್ಲಿ ಬರದ ಛಾಯೆ ಸಂಪೂರ್ಣ ಮಾಯವಾಗುತ್ತದೆ. ರೈತರು ಕೂಡ ಖುಷಿಯಾಗುತ್ತಾರೆ.












Click it and Unblock the Notifications