ರಾಜೀನಾಮೆ ಕೊಡಬೇಡಿ ಪ್ಲೀಸ್: ರಾಹುಲ್ಗೆ ದಿನೇಶ್ ಗುಂಡೂರಾವ್ ಮನವಿ
ಬೆಂಗಳೂರು, ಮೇ 29: ನಿಮ್ಮ ಸೇವೆ ಭಾರತಕ್ಕೆ ಬೇಕಿದೆ ದಯವಿಟ್ಟು ರಾಜೀನಾಮೆ ಕೊಡಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಲೋಕಸಭೆ ಚುನಾವಣೆ 2019ರಲ್ಲಿ ಕಾಂಗ್ರೆಸ್ ಪಕ್ಷ ಸೋತಿದ್ದರಿಂದ ನೊಂದಿರುವ ರಾಹುಲ್ ಗಾಂಧಿ ಅವರು ಸೋಲಿನ ನೈತಿಕ ಜವಾಬ್ದಾರಿಯನ್ನು ಹೊತ್ತು ರಾಜೀನಾಮೆ ಕೊಡಲು ಮುಂದಾಗಿದ್ದಾರೆ, ಹಾಗಾಗಿ ದಿನೇಶ್ ಗುಂಡೂರಾವ್ ಅವರು ರಾಹುಲ್ ಅವರಲ್ಲಿ ಮನವಿ ಮಾಡಿದ್ದಾರೆ.
ರಾಹುಲ್ ಗಾಂಧಿ ಅವರಿಗೆ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ಅವರು, ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಿರಿ ಎಂದು ಮನವಿ ಮಾಡಿದ್ದಾರೆ.
ನೀವು ಮೋಸವಿಲ್ಲದ ಯುದ್ಧ ಮಾಡಿದಿರಿ, ಜನರ ಸಮಸ್ಯೆಗಳ ಬಗ್ಗೆ ಮಾತನಾಡಿದಿರಿ, ನಮ್ಮ ನೇತೃತ್ವವಹಿಸಿ ನಮ್ಮನ್ನು ನಡೆಸಿದ್ದೀರಿ, ಮೋದಿ ಅವರ ವಿಫಲತೆಗಳನ್ನು ಜನರಿಗೆ ತಲುಪಿಸಿದ್ದೀರಿ ಎಂದು ದಿನೇಶ್ ಗುಂಡೂರಾವ್ ರಾಹುಲ್ ಅವರಿಗೆ ಸ್ಪೂರ್ತಿ ತುಂಬುವ ಮಾತುಗಳನ್ನಾಡಿದ್ದಾರೆ.
|
ನೀವು ಭಾರತಕ್ಕೆ ಬೇಕು: ದಿನೇಶ್
ನೀವು ಸೋತಿರಬಹುದು ಆದರೆ ನಮಗೆ ನಿಮ್ಮ ಮೇಲೆ ನಂಬಿಕೆ ಇದೆ, ದಯವಿಟ್ಟು ರಾಜೀನಾಮೆ ನಿರ್ಧಾರವನ್ನು ಹಿಂಪಡೆದುಕೊಳ್ಳಿ, ಭಾರತಕ್ಕೆ ನಿಮ್ಮ ಅಗತ್ಯ ಇದೆ ಎಂದು ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.

ರಾಜೀನಾಮೆ ನಿರ್ಧಾರದ ಬಗ್ಗೆ ಅಚಲರಾಗಿರುವ ರಾಹುಲ್
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜೀನಾಮೆ ಬಗ್ಗೆ ಸ್ಪಷ್ಟ ನಿರ್ಧಾರ ತಳೆದಿದ್ದಾರೆ ಎನ್ನಲಾಗುತ್ತಿದ್ದು, ಆದರೆ ಕಾರ್ಯಕಾರಿಣಿ ಸಮಿತಿಯು ರಾಹುಲ್ ಅವರ ಮನವೊಲಿಸುವ ಯತ್ನದಲ್ಲಿ ನಿರತವಾಗಿದೆ ಎನ್ನಲಾಗುತ್ತಿದೆ.

'ಕಾಂಗ್ರೆಸ್ಗಂಟಿದ ಕೊಳೆ ಹೋಗಲಾಡಿಸಬೇಕಿದೆ'
ಚುನಾವಣೆಯ ಸೋಲಿಗೆ ಕಾಂಗ್ರೆಸ್ನ ಪ್ರಮುಖ ಮುಖಂಡರ ಪುತ್ರ ವ್ಯಾಮೋಹವೇ ಕಾರಣ ಎಂದು ರಾಹುಲ್ ಟೀಕಿಸಿದ್ದು, ಕಾಂಗ್ರೆಸ್ಗೆ ಅಂಟಿರುವ ವಂಶಪಾರಂಪರ್ಯದ ಕೊಳೆ ಅಳಿಯಬೇಕೆಂದರೆ ತಾವು ರಾಜೀನಾಮೆ ನೀಡಲೇ ಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆ ಪರ್ವ
ರಾಹುಲ್ ಗಾಂಧಿ ಸೋಲಿನ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿದಲ್ಲಿ ಕಾಂಗ್ರೆಸ್ ಪಕ್ಷ ಕೆಟ್ಟ ಪ್ರದರ್ಶನ ತೋರಿರುವ ರಾಜ್ಯಗಳಲ್ಲಿ ಕಾಂಗ್ರೆಸ್ ಮುಖಂಡರು ರಾಜೀನಾಮೆ ನೀಡಬೇಕಾಗಿ ಬರಬಹುದು. ಈಗಾಗಲೇ ಪಂಜಾಬ್ ಸೇರಿ ಕೆಲವೆಡೆ ಕಾಂಗ್ರೆಸ್ ಅಧ್ಯಕ್ಷರು ರಾಜೀನಾಮೆ ಸಲ್ಲಿಸಿದ್ದಾರೆ.












Click it and Unblock the Notifications